Thursday, July 28, 2011

ತಾವೇ ತೋಡಿಕೊಂಡ ಗುಂಡಿಯಲ್ಲಿ ಅಸಹಾಯಕ ಯಡಿಯೂರಪ್ಪ..!

                               "ನಿಮ್ಮ ಫೈಲ್ ನೋಡಿದೆ, ಸೈನ್ ಮಾಡಿಟ್ಟಿರ್ತೀನಿ, ತಗೊಂಡ್ಹೋಗಿ" ಅಂದರು. ನನಗೆ ಒಂದು ಕ್ಷಣ ಏನೂ ಅರ್ಥ ಆಗಲಿಲ್ಲ. "ಯಾವ್ ಫೈಲು ಸಾರ್" ಅಂದೆ. "ಅದೇ, ಕೆ.ಆರ್ ಮಾರ್ಕೆಟ್ ಶಿಫ್ಟ್ ಮಾಡೋದು, ಗುಡ್ ಪ್ರಾಜೆಕ್ಟ್, ಸೈನ್ ಮಾಡಿಟ್ಟಿರ್ತೀನಿ ತಗೊಂಡ್ಹೋಗಿ" ಮತ್ತೆ ಅದೇ ಮಾತು. ನನಗೆ ಮತ್ತೆ ಕನ್ ಫ್ಯೂಷನ್ನು.  ಏನೊಂದೂ ತಿಳಿಯದೇ ಅವರ ಮುಖಾನೇ ನೋಡಿದೆ. ಅಷ್ಟರಲ್ಲಿ ಪಕ್ಕದಲ್ಲಿ ನಿಂತಿದ್ದ ಆಫೀಸರ್ ಒಬ್ರು ಅವರ ಕಿವೀಲಿ ಅದೇನೋ ಹೇಳಿದರು. ಕಿವಿ ಗಮನಿಸಿದೆ, ಮಷಿನ್ ಇಲ್ಲ. ಅದಿಲ್ಲದಿದ್ದರೆ ಆ ವಯ್ಯನಿಗೆ ಕೇಳಿಸೋದಿಲ್ಲ, ಕೂಗಿ ಹೇಳಬೇಕು. ಕೂಗಿ ಹೇಳೋದಕ್ಕೆ ಆ ಅಧಿಕಾರಿಗೆ ಮಜುಗರ, ಎರಡು ಮಾರು ದೂರದಲ್ಲಿ ಕುಳಿತಿದ್ದ ನನಗೆ ಕೇಳುವಷ್ಟು ಗಟ್ಟಿಯಾಗಿ ಪಿಸುಗುಟ್ಟಿದರು. ಅದನ್ನ ಕೇಳಿಸಿಕೊಂಡ ಆತ, "ಓಹೋ ಮಾರುಕಟ್ಟೆ ಸಚಿವ ಶಿವರಾಜ್ ತಂಗಡಗಿ ನೀವಲ್ಲವಾ..?" ಅಂದುಬಿಟ್ಟ. "ಅಲ್ಲ ಸಾರ್ ನಾನು ನರೇಂದ್ರಸ್ವಾಮಿ ಅಂತ, ಮಳವಳ್ಳಿ ಎಂ.ಎಲ್.ಎ, ಸೋಷಿಯಲ್ ವೆಲ್ಫೇರ್ ಮಿನಿಸ್ಟ್ರು" ಅಂತ ಹೇಳಿದವನೇ ಫೈಲ್ ಎತ್ತುಕೊಂಡು ಎದ್ದುಬಂದುಬಿಟ್ಟೆ ಸಾರ್, ನಂಗೆ ತುಂಬ ಅವಮಾನ ಆಗಿತ್ತು ಅಂದವರೇ ಎದುರಿಗಿದ್ದ ಗ್ಲಾಸ್ ಕೈಗೆತ್ತಿಕೊಂಡು ಒಂದು ಗುಟುಕು ಕುಡಿದರು. ಅವರ ಕಣ್ಣಲ್ಲಿ ನೀರಿದ್ದದ್ದು ಸ್ಪಷ್ಟವಾಗಿ ಕಾಣಿಸಿತ್ತು.
ನರೇಂದ್ರ ಸ್ವಾಮಿ

                 ಹಾಗೆ ಬಿಡದಿ ಸಮೀಪದ ಈಗಲ್ಟನ್ ರೆಸಾರ್ಟ್ ಹಿತ್ತಲಲ್ಲಿ ಲಾನ್ ಮೇಲೆ ಹಾಕಲಾಗಿದ್ದ ಟೇಬಲ್ ಎದುರು ಕುಳಿತು ಮಾತಾಡ್ತಿದ್ದವರು ಸಮಾಜಕಲ್ಯಾಣ ಸಚಿವ ನರೇಂದ್ರಸ್ವಾಮಿ. ಅಷ್ಟೊತ್ತಿಗಾಗಲೇ ಅವರ ಮಂತ್ರಿಗಿರಿ ಹೊರಟುಹೋಗಿ ಶಾಸಕ ಸ್ಥಾನ ಕೂಡ ಅಪಾಯದಲ್ಲಿತ್ತು. ಬಂಡಾಯ ಎದ್ದು ಗೋವಾಕ್ಕೆ ಹೋಗಿದ್ದ ಹದಿನೆಂಟು ಜನರ ಪೈಕಿ ಅವರೂ ಒಬ್ಬರು. ಸರ್ಕಾರ ಕೆಡವಬೇಕು ಅನ್ನೋ ಹಟಕ್ಕೆ ಬಿದ್ದಿದ್ದ ಅವರನ್ನ ಎಚ್.ಡಿ ಕುಮಾರಸ್ವಾಮಿ ಕರಕೊಂಡು ಬಂದಿದ್ದರು. ಅವರದೊಂದು ಇಂಟರ್ವ್ಯೂ ಮಾಡಬೇಕು ಅಂತ ಹಮೀದ್ ಪಾಳ್ಯ ಮತ್ತು ನಾನು ಆವತ್ತು ಸಂಜೆ ಹೋಗಿದ್ವಿ. ಇಂಟರ್ವ್ಯೂ ಮುಗಿಸಿ ಸುಮ್ಮನೆ ಲೋಕಾಭಿರಾಮವಾಗಿ ಮಾತಾಡ್ತಾ ಕುಳಿತಿದ್ದಾಗ, "ನಿಮಗೇನ್ ಕಡಿಮೆ ಆಗಿತ್ತು ಸಾರ್, ಮೊದಲ ಸಲ ಎಂ.ಎಲ್.ಎ ಆದಾಗಲೇ ಕ್ಯಾಬಿನೆಟ್ ಮಂತ್ರಿಗಿರಿ ಸಿಕ್ಕಿತ್ತು, ಗೂಟದ ಕಾರು, ಎಸ್ಕಾರ್ಟ್ ಗೆ ಪೊಲೀಸರು, ಸರಕಾರಿ ಬಂಗಲೆ, ಇಷ್ಟೆಲ್ಲಾ ಇದ್ರೂ ಯಾಕೆ ಬಂಡಾಯ ಎದ್ರಿ..?" ಅಂತ ಕೇಳಿದಾಗ ಅದೊಂದು ಇನ್ಸಿಡೆಂಟ್ ಹೇಳಿದರು ನರೇಂದ್ರಸ್ವಾಮಿ. ಸಂಪುಟ ರಚಿಸಿ ಒಂದೂವರೆ ವರ್ಷವಾಗಿದ್ದರೂ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮಾರುಕಟ್ಟೆ ಸಚಿವ ಶಿವರಾಜ್ ತಂಗಡಗಿ ಯಾರು - ಸಮಾಜ ಕಲ್ಯಾಣ ಸಚಿವ ನರೇಂದ್ರಸ್ವಾಮಿ ಯಾರು ಅನ್ನೋ ಕನ್ಫ್ಯೂಷನ್ನಿತ್ತು.
ಶಿವರಾಜ್ ತಂಗಡಗ

                of course, ಇದೊಂದೇ ಕಾರಣಕ್ಕೆ ಬಂಡಾಯವಾಗಿರಲಿಲ್ಲ. ಆವತ್ತು ಮೂರು ತಾಸು ಮಾತಾಡ್ತಾ ಕುಳಿತಿದ್ದ ನರೇಂದ್ರಸ್ವಾಮಿ ತುಂಬ ವಿಷಯ ಹೇಳಿದರು. ಕ್ಷೇತ್ರದ ಸಣ್ಣಪುಟ್ಟ ಕೆಲಸ ಮಾಡಿಸಿಕೊಳ್ಳೋದಕ್ಕೂ ಆಗ್ತಿದ್ದ ಕಷ್ಟಗಳು, ಸಿ.ಎಂ ಆಪ್ತ ಸಚಿವರ ಕಿರಿಕಿರಿಗಳು, ಟೆಂಡರ್ ವಿಷಯಗಳಲ್ಲಿ ಯಡಿಯೂರಪ್ಪನವರ ಕುಟುಂಬದವರ ಹಸ್ತಕ್ಷೇಪಗಳು, ಸಂಪುಟ ಸಭೆ ಕರೆದರೆ ಅಲ್ಲಿ ಪಕ್ಷೇತರರನ್ನ ನಡೆಸಿಕೊಳ್ತಿದ್ದ ರೀತಿ, ಆವಾಗಾವಾಗ ಆಗ್ತಿದ್ದ ಅವಮಾನಗಳು, ಹೀಗೆ. ಒಂದು ಸಲ ಅದ್ಯಾಕೋ ಅಟಲ್ ಬಿಹಾರಿ ವಾಜಪೇಯಿ ನೆನಪಾದರು. ಹದಿಮೂರು ಪಕ್ಷ ಕಟ್ಟಿಕೊಂಡು ಹೆಣಗಿದ ಆ ತಾತಯ್ಯ ಅದೆಷ್ಟು ಯಶಸ್ವಿಯಾಗಿ ಸರಕಾರ ತೂಗಿಸಿಕೊಂಡು ಹೋದರಲ್ಲ, ಆರು ಜನ ಪಕ್ಷೇತರ ಶಾಸಕರನ್ನ ಸಂಭಾಳಿಸೋದಕ್ಕಾಗಲಿಲ್ಲವಾ ಯಡಿಯೂರಪ್ಪನಿಗೆ ಅಂತ.
                Human resource management ಅನ್ನೋದು ಬರಿ corporate sectorಗೆ ಮಾತ್ರ ಅಂದವರಾರು..? ಅದು ರಾಜಕೀಯಕ್ಕೂ apply ಆಗತ್ತೆ, ಆಗಬೇಕು. ಅದೊಂದು ಯಡಿಯೂರಪ್ಪನವರಿಗೆ ಸರಿಯಾಗಿ ಬಂದುಬಿಟ್ಟಿದ್ದರೆ, ಮೂರು ವರ್ಷಗಳಲ್ಲಿ ಬಂದ ಮುಕ್ಕಾಲು ಭಾಗ ಸಮಸ್ಯೆಗಳು ಬರ್ತಾನೇ ಇರಲಿಲ್ಲ. (ರಣ ಹಸಿವು ಮತ್ತು ಮಕ್ಕಳ ಬಗೆಗಿನ ಧೃತರಾಷ್ಟ್ರ ಪ್ರೇಮ ಇರದೇ ಹೋಗಿದ್ದರೆ ಉಳಿದ ಕಾಲು ಭಾಗ ಸಮಸ್ಯೆಗಳೂ ಇರ್ತಿರಲಿಲ್ಲ..!) ಇದೆಲ್ಲ ನಮಗೆ - ನಿಮಗೆ ಸಿಲ್ಲಿ ವಿಷಯ ಅನ್ನಿಸಬಹುದು. ಆದ್ರೆ, ಒಬ್ಬ ಶಾಸಕನಿಗೆ, ಅದರಲ್ಲೂ ಕ್ಯಾಬಿನೆಟ್ ದರ್ಜೆ ಮಂತ್ರಿಗಲ್ಲ. ಅವರು ತಮ್ಮ ತಮ್ಮ ಕ್ಷೇತ್ರಗಳಿಗೆ ಹೋದರೆ ಮತದಾರರು ಹೆಗಲ ಮೇಲೆ ಹೊತ್ತುಕೊಂಡು ಕುಣೀತಾರೆ. ಅದೇ ಬೆಂಗಳೂರಿಗೆ ಬಂದು ಯಡಿಯೂರಪ್ಪನವರ ಎದುರಿಗೆ ನಿಂತರೆ "ನಿಮ್ಮ ಹೆಸರೇನು..?" ಅಂದುಬಿಡೋರು.
                ರಾಜಕಾರಣಿ ಬೇಸಿಕಲಿ ಒಬ್ಬ egoistic ಮನುಷ್ಯ. ಹೆಜ್ಜೆ - ಹೆಜ್ಜೆಗೂ, ಘಳಿಗೆ ಘಳಿಗೆಗೂ ಆತನ ego satisfy ಆಗ್ತಿರಬೇಕು. ಆತ ಎಲೆಕ್ಷನ್ ಗೆಲ್ಲೋದು ಕೂಡ ಆ ego satisfactionನ ಒಂದು ಭಾಗವೇ. ತಾನು ಆಡಳಿತ ಪಕ್ಷದವನು, ತನ್ನೊಬ್ಬನ ಬೆಂಬಲ ಕೂಡ ಈ ಸರಕಾರ ಭದ್ರವಾಗಿರೋದಕ್ಕೆ ಕಾರಣ ಅನ್ನೋ ಯೋಚನೆ ಕೂಡ ಅವನ ego ತಣ್ಣಗಾಗಿಸತ್ತೆ. ಅದು ಯಡಿಯೂರಪ್ಪನವರಿಗೆ ಗೊತ್ತೇ ಇರಲಿಲ್ಲ ಅಂತ ಅನ್ನಿಸೋದು ಭಿನ್ನಮತೀಯ ಶಾಸಕರನ್ನ ಮಾತಾಡಿಸಿದಾಗ. "ಸಹಿ ಮಾಡಿ ಅಂತ ಯಾವ್ದೋ ಫೈಲ್ ತಗೊಂಡು ಹೋದ್ರೆ ಪ್ಲಾಸ್ಟಿಕ್ ಚೇರ್ ಎತ್ತಿ ಹೊಡೆಯೋದಕ್ಕೆ ಬಂದುಬಿಟ್ರು" ಅಂತ ಇನ್ನೊಬ್ಬ ಶಾಸಕರು ಹೇಳಿದರು. "ಮನಸಿಗೆ ತುಂಬ ಬೇಜಾರಾಗಿ ಎಸ್ಕಾರ್ಟ್ ಜೀಪು, ಬೆಂಗಾವಲಿನ ಪೊಲೀಸರನ್ನ ಬಿಟ್ಟು ಒಬ್ಬನೇ ಹೋಗಿ ನನ್ನ ಮನೆದೇವರ ದೇವಸ್ಥಾನದ ಗರ್ಭ ಗುಡಿಯಲ್ಲಿ ಬಾಗಿಲು ಹಾಕಿಕೊಂಡು ಕುಂತು ಸಾಕು ಸಾಕಾಗೋ ತನಕ ಅತ್ತುಬಿಟ್ಟೆ" ಅಂತ ಹೇಳಿದವರು ಒಬ್ಬ ಸಚಿವ. ಅಂಥವರೆಲ್ಲ ಸೇರಿಕೊಂಡು ಯಡಿಯೂರಪ್ಪನಿಗೆ ಮರೆಯಲಾಗದ ಪಾಠ ಕಲಿಸ್ತೀವಿ ಅಂತ ಹೊರಟಾಗ ನಡೆದದ್ದೇ ಗೋವಾ ಬಂಡಾಯ.
                ಪರಿಸ್ಥಿತಿ ಎಲ್ಲಿಗೆ ಬಂದಿತ್ತೆಂದರೆ, ವಿರೋಧ ಪಕ್ಷದಲ್ಲಿ ಒತ್ತಟ್ಟಿಗಿರಲಿ, ಆಡಳಿತ ಪಕ್ಷದಲ್ಲೇ ಯಡಿಯೂರಪ್ಪನವರ ಸಿಟ್ಟಿನ ಬಗ್ಗೆ ಕಥೆಗಳು ಹುಟ್ಟಿಕೊಂಡುಬಿಟ್ಟಿದ್ದವು. ಯಾರೇ ಹೋದರೂ "ಸಾಹೇಬರ ಮೂಡ್ ಹೆಂಗಿದೆ" ಅಂತ ಮೊದಲೇ ಕೇಳೋರು. ಅದೊಂದು ಸಲ "ಇನ್ನು ಮುಂದೆ ನಾನು ಬದಲಾಗ್ತೀನಿ" ಅಂತ ಅಷ್ಟೂ ಚಾನೆಲ್ಲುಗಳ ಎದುರು ಮಾತಾಡಿದರಲ್ಲ, ಆವತ್ತೇ ಮನೆಗೆ ಹೋಗಿ ಗನ್ ಮ್ಯಾನ್ ಒಬ್ಬನ ಮೇಲೆ ಪೇಪರ್ ವೇಟ್ ಎಸೆದರಂತೆ. ಇದು ಯಡಿಯೂರಪ್ಪನವರ ಪತನಕ್ಕೆ ಕಾರಣವಾದ ಹಲವು ವಿಷಯಗಳಲ್ಲಿ ಒಂದು ಮಾತ್ರ. ಹೇಳ್ತಾ ಹೋದ್ರೆ ದೊಡ್ಡ ಪಟ್ಟಿ ಆಗತ್ತೆ. ಅದೊಂದು ಸಲ, ಇದೆಲ್ಲವನ್ನೂ ಸೇರಿಸಿ ಒಂದು ಪುಸ್ತಕ ಯಾಕೆ ಮಾಡಬಾರದು ಅಂತ ಯೋಚಿಸಿದ್ದೂ ಆಗಿತ್ತು. ಆದರೆ, ಆ ಯೋಚನೆಗೆ ದಿನ ತುಂಬೋ ಮೊದಲೇ ಗರ್ಭಪಾತವಾಗಿದ್ದು ಬೇರೆ ಮಾತು.
               ಇವತ್ತು, ಅವರ ರಾಜೀನಾಮೆ ಪ್ರಹಸನದ ಪ್ರತಿ ಬೆಳವಣಿಗೆಯನ್ನೂ ನೋಡ್ತಿದ್ದವನಿಗೆ ಇದೆಲ್ಲ ನೆನಪಾಯಿತು. ದಕ್ಷಿಣ ಭಾರತದಲ್ಲಿ ಮೊಟ್ಟಮೊದಲ ಸಲ ಬಿ.ಜೆ.ಪಿಯನ್ನ ಅಧಿಕಾರಕ್ಕೆ ತಂದ ಯಡಿಯೂರಪ್ಪನವರು ಹೇಗೆ ಮೂರು ವರ್ಷಗಳ ಕಾಲ ತಮ್ಮ ಗುಂಡಿಯನ್ನ ತಾವೇ ತೋಡಿಕೊಂಡರಲ್ಲ ಅಂತ ಯೋಚಿಸಿದರೆ ಆಶ್ಚರ್ಯ ಆಗತ್ತೆ. ಇವತ್ತು ಆ ಗುಂಡಿಯಲ್ಲಿ ಅವರೇ ಬಿದ್ದಿದಾರೆ. ಉಳಿದವರು ಮೇಲಿನಿಂದ ಮಣ್ಣು ಸುರಿಯದಿದ್ದರೆ ಅದು ಯಡಿಯೂರಪ್ಪನವರ ಪೂರ್ವ ಜನ್ಮದ ಪೂಜಾ ಫಲ

1 comment:

  1. ಸಾರ್ ನಮಸ್ತೆ.
    ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯ ಮಾಜಿ ಸಚಿವ ನರೇಂದ್ರಸ್ವಾಮಿಯವರ ಅನುಭವ ಓದಿ ಅಯ್ಯೋ ಅನಿಸ್ತು.ಇದಕ್ಕೆ ಸಿಎಂ ಯಡಿಯೂರಪ್ಪಗೆ ತಕ್ಕಶಾಸ್ತಿ ಆಗಲೇಬೇಕು,ಉಪ್ಪು ತಿಂದವರು ನೀರು ಕುಡಿಯಲೇ ಬೇಕು.ಕಷ್ಟಕ್ಕೆ ನೆರವಾದವರನ್ನು, ಸಿಎಂ ಗದ್ದುಗೆ ಏರಲು ಪ್ರಮುಖ ಕಾರಣವಾದವರನ್ನು ನಿಕೃಷ್ಟವಾಗಿ ಕಂಡಿದ್ದಕ್ಕೆ ಅವರಿಗೆ ಸರಿಯಾದ ಶಾಸ್ತಿಯಾಗಿದೆ.

    ReplyDelete