Wednesday, April 2, 2014

ಸೋನಿಯಾ ಕೋಟೆ ಯಾಕೆ ಭದ್ರವಾಗಿದೆ ಅಂದರೆ....

                    ಲಖ್ನೋದ ನೆತ್ತಿಯ ಮೇಲೆ ಸೂರ್ಯ ಬಿಸಿಲು ಚಿಮುಕಿಸತೊಡಗಿದ್ದ. ಅಲಹಾಬಾದ್ ಹೈವೇ ಸೇರಿಕೊಂಡಿತ್ತು ನಾವು ಪ್ರಯಾಣಿಸುತ್ತಿದ್ದ ಕಾರು. ರಾಯಬರೇಲಿ 83 ಕಿ.ಮೀ ಅನ್ನೋ ಬೋರ್ಡು. "ರಾಯಬರೇಲಿ" - ಅದೊಂದು ಹೆಸರೇ ಸಾಕು, ಮೆದುಳಿನ ಸುಕ್ಕುಗಳಲ್ಲಿ ಕಳೆದುಹೋಗಿದ್ದ ಆ ಕಥೆ ಮತ್ತೆ ಎದ್ದು ಬಂದು ಚಿತ್ರಗಳಾಗಿ ಕದಲುವಂತಾಗಲು...
                    1930ರ ಒಂದು ಮಟಮಟ ಮಧ್ಯಾಹ್ನ ಇಲ್ಲಿಂದ ದೂರದ ಮುಂಬೈನ ಈವಿಂಗ್ ಕ್ರಿಶ್ಚಿಯನ್ ಕಾಲೇಜಿನ ಎದುರಿಗೆ ಯುವ ಕಾಂಗ್ರೆಸ್ನವರು ಬ್ರಿಟಿಷರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಅದರ ಮುಂಚೂಣಿಯಲ್ಲಿದ್ದ ಹೆಣ್ಣುಮಗಳೊಬ್ಬಳು ಬಿಸಿಲು ತಾಳೋದಕ್ಕಾಗದೇ ಬಿದ್ದುಬಿಟ್ಟರು. ಪಕ್ಕದಲ್ಲಿ ನಿಂತು ನೋಡುತ್ತಿದ್ದ ಹದಿನೆಂಟರ ವಯಸ್ಸಿನ ಫಾರ್ಸಿ ಹುಡುಗನೊಬ್ಬ ಓಡಿಬಂದು ತಲೆಗೆ ನೀರುತಟ್ಟಿ ಉಪಚರಿಸಿದ. ಹಾಗೆ ಬಿದ್ದವರು ಪಂಡಿತ್ ಜವಾಹರಲಾಲ್ ನೆಹರೂರ ಧರ್ಮಪತ್ನಿ ಕಮಲಾ ನೆಹರೂ ಆಗಿರದಿದ್ದರೆ - ಓಡಿಬಂದು ಉಪಚರಿಸಿದವನು ಫಿರೋಜ್ ಜಹಾಂಗೀರ್ ಖಾನ್ ಆಗಿರದಿದ್ದರೆ, ರಾಯಬರೇಲಿ ಲೋಕಸಭಾ ಕ್ಷೇತ್ರಕ್ಕೆ ಬಹುಶಃ ಇಂಥದ್ದೊಂದು ಆಕರ್ಷಣೆ ಇರುತ್ತಿರಲಿಲ್ಲ. ನಾವು ಬೆಂಗಳೂರಿನಿಂದ ಇದನ್ನ ಹುಡುಕಿಕೊಂಡು ಇಲ್ಲೀ ತನಕ ಬರುತ್ತಿರಲಿಲ್ಲ..!
ಫಿರೋಜ್ ಜಹಾಂಗೀರ್ ಖಾನ್ - ಕಮಲಾ ನೆಹರೂ

                   ಮಾರನೇ ದಿನ ಕಾಲೇಜು ತೊರೆದ ಫಿರೋಜ್ ಜಹಾಂಗೀರ್ ಖಾನ್ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ. ಕಮಲಾ ನೆಹರೂರ ಆತ್ಮೀಯತೆಯಿಂದ ಆಕೆಯ ಊರು, ಉತ್ತರ ಪ್ರದೇಶದ ಅಲಹಾಬಾದಿಗೆ ಬಂದ. ಅಂತಿಮವಾಗಿ ಶ್ರೀಮತಿ ಕಮಲಾ ನೆಹರೂ ಟಿ.ಬಿಯಿಂದ ಚೇತರಿಸಿಕೊಳ್ಳಲಾಗದೇ ಸ್ವಿಡ್ಜರ್ಲೆಂಡಿನಲ್ಲಿ ಪ್ರಾಣ ಬಿಟ್ಟಾಗ ಫಿರೋಜ್ ಜಹಾಂಗೀರ್ ಖಾನ್ ಶವದ ತಲೆಯ ಬಳಿ ಕುಳಿತು ಬಿಕ್ಕಳಿಸುತ್ತಿದ್ದ. ನಂತರ ಆತನಿಗೂ - ನೆಹರೂ ಪುತ್ರಿ ಇಂದಿರಾ ಪ್ರಿಯದರ್ಶಿನಿಗೂ ಅನುರಕ್ತಿ ಆಯಿತು. ಫಿರೋಜ್ ಜಹಾಂಗೀರ್ ಖಾನ್, ತನ್ನ ಸರ್ ನೇಮ್ಅನ್ನು ಗಾಂಧಿ ಅಂತ ಬದಲಿಸಿಕೊಂಡರು. ಇಂದಿರಾ ಪ್ರಿಯದರ್ಶಿನಿ ನೆಹರೂ, ಫಿರೋಜ್ ಗಾಂಧಿಯ ಕೈ ಹಿಡಿದು ಇಂದಿರಾ ಗಾಂಧಿ ಆದರು. ಉಕ್ಕಿನ ಮಹಿಳೆಗೆ ಗಾಂಧಿ ಅನ್ನೋ ಸರ್ನೇಮು ಕೊಟ್ಟ ಮನುಷ್ಯ ಆತ. ರಾಜೀವ್ ಗಾಂಧಿಗೆ ಅಂಥದ್ದೊಂದು ಸ್ಫುರದ್ರೂಪ - ಸಂಜಯ್ ಗಾಂಧಿಗೆ ಅಷ್ಟೊಂದು ಜೀವನ ಪ್ರೀತಿ ಬಂದದ್ದು ಕೂಡ ತಂದೆಯ ರಕ್ತದಿಂದಲೇ ಏನೋ. ಅಂಥ ಫಿರೋಜ್ ಗಾಂಧಿ ಮೊದಲ ಚುನಾವಣೆಯಲ್ಲಿ ನಿಂತು ಗೆದ್ದ ಕ್ಷೇತ್ರ ಇದು - ರಾಯಬರೇಲಿ..!
ಫಿರೋಜ್ ಗಾಂಧಿ ವೆಡ್ಸ್ ಇಂದಿರಾ ಪ್ರಿಯದರ್ಶಿನಿ
 ಇಂದಿರಾರನ್ನ ಮದುವೆಯಾದ ನಂತರ ಫಿರೋಜ್ ಅಲಹಾಬಾದಿಗೆ ಬಂದು ಮಾವ ನಡೆಸುತ್ತಿದ್ದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಜವಾಬ್ದಾರಿ ವಹಿಸಿಕೊಂಡರು. ಸ್ವಾತಂತ್ರ್ಯ ದೊರೆತು 1951ರಲ್ಲಿ ಮೊದಲ ಚುನಾವಣೆ ನಡೆದಾಗ ರಾಯಬರೇಲಿಯಿಂದ ನಾಮಪತ್ರ ಸಲ್ಲಿಸಿದರು. ಪಂಡಿತಜಿ ಅಳಿಯ ಅಂತ ಜನ ಬೆನ್ನತ್ತಿಕೊಂಡು ಬಂದು ಓಟು ಕೊಟ್ಟರು. ಗೆದ್ದು ಸಂಸತ್ತಿಗೆ ಹೋದ ಫಿರೋಜ್ ಗಾಂಧಿ, ಸಂಸತ್ತಿನ ಅಧಿವೇಶನದಲ್ಲಿ ಮಾವ ಪಂಡಿತ್ ಜವಾಹರಲಾಲ್ ನೆಹರೂ ವಿರುದ್ಧ ಧ್ವನಿ ಎತ್ತಿದ ಮೊಟ್ಟಮೊದಲ ಗಂಡು. ಬಹುಶಃ ಈ ದೇಶದ ಮೊದಲ ಹಗರಣ "ಎಲ್.ಐ.ಸಿ ಷಡ್ಯಂತ್ರ" ಹೊರಹಾಕಿ ಹೆಣ್ಣುಕೊಟ್ಟ ಮಾವನನ್ನೇ ದೊಡ್ಡ ಇರುಸು ಮುರುಸಿಗೆ ಈಡು ಮಾಡಿದ ವ್ಯಕ್ತಿ. ಆ ಮನುಷ್ಯನ ರಾಜಕಾರಣದ ರೀತಿಯೇ ಬೇರೆ ಇತ್ತು - ಅದಕ್ಕೊಂದು ತೂಕ ಇತ್ತು. ಅಂಥ ಫಿರೋಜ್ ಗಾಂಧಿ ತಮ್ಮ ನಲವತ್ತೆಂಟನೇ ವಯಸ್ಸಿನಲ್ಲಿ ಕಣ್ಣುಮುಚ್ಚಿಕೊಂಡರು. ಮುಂದೆ ಇದೇ ರಾಯಬರೇಲಿಯಿಂದ ಇಂದಿರಾ ಗಾಂಧಿ ಗೆಲುವನ್ನು ಅಸಿಂಧುಗೊಳಿಸಿತ್ತು ಅಲಹಾಬಾದ್ ಹೈಕೋರ್ಟ್. ಅದಕ್ಕೇ ಸಿಟ್ಟಿಗೆದ್ದ ಇಂದಿರಮ್ಮ ತುರ್ತು ಪರಿಸ್ಥಿತಿ ಹೇರಿದ್ದು. ನಂತರ ನಡೆದ ಚುನಾವಣೆಯಲ್ಲಿ ಇದೇ ರಾಯಬರೇಲಿ ಜನ ಇಂದಿರಾಗಾಂಧಿಯವರನ್ನ ಹೀನಾಯವಾಗಿ ಸೋಲಿಸಿದ್ದರು..! ಸಧ್ಯಕ್ಕೆ ಇಂದಿರಾ ಸೊಸೆ ಸೋನಿಯಾ ಗಾಂಧಿಯವರ ಭದ್ರ ಕೋಟೆ. ನಾಲ್ಕು ಸಲ ಭಾರಿ ಬಹುಮತದಿಂದ ಗೆದ್ದಿದ್ದಾರೆ - ಐದನೇ ಸಲ ನಿಂತಿದ್ದಾರೆ.
                   ದಾರಿಯುದ್ದಕ್ಕೂ ಸಮೃದ್ಧ ಗೋಧಿ ಬೆಳೆ. ಕಟಾವಿಗೆ ಬಂದಿದೆ. ಇಲ್ಲಿ ಮಣ್ಣು ಬಿಳಿ. ಬೂದಿಯಷ್ಟು ಬಿಳಿ. ಅಷ್ಟೇ ನುಣುಪು. ಬಹುಶಃ ನಮ್ಮ ಕಡೆಯ ರೈತರು ಇದಕ್ಕೆ ಫಲವತ್ತತೆ ಇದೆ ಅಂತ ಒಪ್ಪೋದೇ ಇಲ್ಲವೇನೋ. ಅಲ್ಲಲ್ಲಿ ಮಿಲ್ಗಳು - ಕಾರ್ಖಾನೆಗಳು. ಇಲ್ಲಿನ ಇಟ್ಟಿಗೆ ಭಟ್ಟಿಗಳು ನಮ್ಮ ಕಡೆಯಂತಿಲ್ಲ. ಹೊಗೆ ಹೋಗಲು ಮುಗಿಲೆತ್ತರದ ಚಿಮಣಿಗಳಿವೆ ಈ ಕಡೆ. ರಾಯಬರೇಲಿ ಹತ್ತಿರಕ್ಕೆ ಬರ್ತಿದ್ದಂತೆ ಶಾಲೆ - ಕಾಲೇಜುಗಳ ಸಂಖ್ಯೆ ಹೆಚ್ಚಾಗ್ತಾ ಹೋಗ್ತವೆ. ಇನ್ನೂ ಹತ್ತಿರ ಬರ್ತಿದ್ದಂತೆ ವಾಹನಗಳ ಶೋ ರೂಮುಗಳು. ರಾಯಬರೇಲಿ ಒಂದು ಜಿಲ್ಲಾ ಕೇಂದ್ರ. ಮೂರು ವರ್ಷಗಳ ಹಿಂದಿನ ಜನಗಣತಿಯಲ್ಲಿ ಮೂವತ್ತನಾಲ್ಕು ಲಕ್ಷ ಜನಸಂಖ್ಯೆ ಇತ್ತು.
                   ನಗರಕ್ಕೆ ಹತ್ತಿರದಲ್ಲೇ ರಸ್ತೆ ಪಕ್ಕದಲ್ಲಿ ಒಂದು ರೈತ ಕುಟುಂಬ ಟೊಮ್ಯಾಟೋ ಬೆಳೆಯಲ್ಲಿ ಕಳೆ ತೆಗೆಯುತ್ತಿತ್ತು. ಮಾತಾಡಿಸಿದರಾಯಿತು ಅಂತ ಹೋದೆವು. ಕಾರಿಳಿದು - ಕೈಯಲ್ಲಿ ಕ್ಯಾಮರಾ ಹಿಡಕೊಂಡು ಬಂದ ನಮ್ಮನ್ನ ನೋಡಿ ಅವರೆಲ್ಲ ಗಾಬರಿಯಾಗಿದ್ದರು. ಮಳೆ - ಬೆಳೆ, ಬೆಲೆಗಳ ಬಗ್ಗೆ ಲೋಕಾಭಿರಾಮವಾಗಿ ಮಾತನಾಡಿ ನಂತರ ರಾಜಕೀಯದ ಸುದ್ದಿ ಎತ್ತಿದ್ದು. "ಯಾರಿಗೆ ಈ ಸಲ ಓಟು..?" ಅಂದೆ. "ನಾವು ಬಿ.ಎಸ್.ಪಿಗೆ" ಅಂದ ಅವರ ಪೈಕಿ ಚಿಕ್ಕವಯಸ್ಸಿನ ಒಬ್ಬ. ಅದು ಅನಿರೀಕ್ಷಿತ ಉತ್ತರ. ಇಲ್ಲಿ ಕಾಲಿಡ್ತಿದ್ದಂತೆಯೇ ಸೋನಿಯಾ ಗಾಂಧಿ ಜೈಕಾರ ಕೇಳತ್ತೆ ಅಂದುಕೊಂಡಿದ್ದರೆ, ಈ ರೈತ ಮಾಯಾವತಿ ಜಿಂದಾಬಾದ್ ಅನ್ನುತ್ತಿದ್ದಾನೆ. ಹೆಸರೇನಾದರೂ ಕನ್ಫ್ಯೂಸ್ ಮಾಡಿಕೊಂಡಿದಾನಾ ಅಂದುಕೊಂಡು "ಬಿ.ಎಸ್.ಪಿಯ ಚುನಾವಣಾ ಚಿನ್ಹೆ ಏನು" ಅಂತ ಕೇಳಿದೆ. "ಆನೆ" ಅಂದ. ಸರಿಯಾದ ಉತ್ತರ..! "ನಿಮ್ಮ ಸಂಸದರ್ಯಾರು..?" ನನ್ನ ಪ್ರಶ್ನೆ. ಆತ ತಲೆಕೆರೆದುಕೊಂಡು ನೆನಪು ಮಾಡಿಕೊಳ್ಳಲು ಪ್ರಯತ್ನಿಸಿದ. "ಸೋನಿಯಾ ಗಾಂಧಿ ಅನ್ನೋ ಹೆಸರು ಕೇಳಿದ್ದೀಯಾ..?" ನನ್ನ ಮತ್ತೊಂದು ಪ್ರಶ್ನೆ. "ಹ್ಞಾಂ... ಹ್ಞಾಂ... ಅವರೇ... ಅವರೇ ನಮ್ಮ ಸಂಸದೆ" ಅಂದ ಆತ. ಈ ಸಲ ನಾನು ತಲೆಕೆರೆದುಕೊಂಡೆ. ಒಂದು ಅನುಭವದ ಆಧಾರದ ಮೇಲೆ ಇಡೀ ಲೋಕಸಭಾ ಕ್ಷೇತ್ರದ ಬಗ್ಗೆ ನಿರ್ಧಾರಕ್ಕೆ ಬಂದುಬಿಡಬಾರದು.
                   ರಾಯಬರೇಲಿ ಹೃದಯ ಭಾಗಕ್ಕೆ ಬರುತ್ತಿದ್ದಂತೆ ಫಿರೋಜ್ ಗಾಂಧಿ ಕಾಲೇಜ್ ಅನ್ನೋ ದೊಡ್ಡ ಬೋರ್ಡು. ಅದರೆದುರಿಗೆ ನಿಂತು ಜನರನ್ನ ಮಾತನಾಡಿಸೋದಕ್ಕೆ ಶುರುಮಾಡಿದ್ವಿ. ಮೂರು ಜನ ವಕೀಲರು ನಿಂತುಕೊಂಡಿದ್ದರು. ಅವರ ಪೈಕಿ ಸುರೇಶ್ಚಂದ್ರ ಶ್ರೀವಾಸ್ತವ್ "ರಾಯಬರೇಲಿಯ ಅಂತಃಕರಣದಲ್ಲಿ ಸೋನಿಯಾ ಗಾಂಧಿ ಇದಾರೆ ಸಾರ್" ಅಂತಲೇ ಮಾತು ಶುರು ಮಾಡಿದರು. ಸುರೇಶ್ಚಂದ್ರರ ಲಾಜಿಕ್ಕುಗಳೇ ಬೇರೆ ಇದ್ದವು. ಅವರ ಸ್ಟೇಟ್ಮೆಂಟ್ನ ಕೆಲ ಸ್ಯಾಂಪಲ್ಗಳು ಇಲ್ಲಿವೆ "ಕೇಂದ್ರದಲ್ಲಿ ನರೇಂದ್ರ ಮೋದಿ ಗೆಲ್ಲಬೇಕು - ರಾಯಬರೇಲಿಯಲ್ಲಿ ಸೋನಿಯಾ ಗಾಂಧಿ ಗೆಲ್ಲಬೇಕು..!" "ಸೋನಿಯಾ ಹೊರತು ಪಡಿಸಿ ಬೇರೆ ಯಾರಾದರೂ ಗೆದ್ದರೆ ಸಾವಿರಾರು ಕೋಟಿಯ ದೊಡ್ಡ ದೊಡ್ಡ ಯೋಜನೆಗಳು ಇಲ್ಲಿಗೆ ಬರೋದಿಲ್ಲ..!" "ರಾಯಬರೇಲಿಯಲ್ಲಿ ಸೋನಿಯಾ ಗಾಂಧಿ ಹೊರತುಪಡಿಸಿ ಬೇರೆ ಇನ್ಯಾರಾದರೂ ಕಾಂಗ್ರೆಸ್ನಿಂದ ಚುನಾವಣೆಗೆ ನಿಂತರೆ ಕುಡಿಯೋದಕ್ಕೆ ನೀರು ಕೂಡ ಸಿಗಲ್ಲ - ಠೇವಣಿ ಕಳೆದುಕೊಂಡು ಮನೆಗೆ ಹೋಗ್ತಾರೆ..!" ಅವರವರ ಭಾವಕ್ಕೆ - ಅವರವರ ಭಕ್ತಿಗೆ. ಇಲ್ಲಿನ ವಕೀಲರು ಸಂಸದರ ನಿಧಿಯಲ್ಲಿ ಬಾರ್ ಅಸೋಸಿಯೇಷನ್ಗೆ ಒಂದು ಸಭಾಂಗಣ - ಅದಕ್ಕೆ ಎ.ಸಿ ಸಿಕ್ಕಿದೆ ಅಂತ ಖುಷಿಯಾಗಿದಾರೆ. ಸೋನಿಯಾ ಗಾಂಧಿ ದೆಹಲಿಯಿಂದ ರಾಯಬರೇಲಿಗೆ ಅಂತ ಕೋಟಿ ಕೋಟಿ ಫಂಡ್ ಕಳಿಸ್ತಾರೆ, ಅದನ್ನ ಇಲ್ಲಿ ಸಮಾಜವಾದಿ ಪಕ್ಷದ ರಾಜ್ಯ ಸರಕಾರ ನುಂಗಿ ನೀರು ಕುಡಿಯತ್ತೆ ಅನ್ನೋದು ಈ ವಕೀಲರ ವಾದ. ಇದನ್ನ ಹೊರತುಪಡಿಸಿದರೆ ರಾಯಬರೇಲಿ ನಗರದಲ್ಲಿ ಮತ್ತೆ ಮತ್ತೆ ಕೇಳಿಬಂದಿದ್ದು ಸೋನಿಯಾ ಗಾಂಧಿ ಏಮ್ಸ್ (ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್) ಕೊಟ್ಟಿದಾರೆ - ರೇಲ್ವೆ ಕೋಚ್ ಫ್ಯಾಕ್ಟರಿ ಕೊಟ್ಟಿದಾರೆ ಅನ್ನೋ ಮಾತು. ಅದರಿಂದ ಸ್ಥಳೀಯರಿಗೆ ನಯಾಪೈಸೆ ಪ್ರಯೋಜನ ಆಗಿಲ್ಲ, ಎಲ್ಲಾ ಹೊರಗಿನವರೇ ತುಂಬಿಕೊಂಡಿದಾರೆ ಅಂತ ಇಬ್ಬರು ಮೂವರು ಯುವಕರು ಜೋರಾಗಿ ಕೂಗಾಡಿದರು. ಅವರು ಬಿ.ಜೆ.ಪಿ ಕಾರ್ಯಕರ್ತರು.
                  ಇಲ್ಲಿನ ಮುನ್ಶೀಗಂಜ್ನಲ್ಲಿ ಮೊದಲು ಒಂದು ಸಕ್ಕರೆ ಕಾರ್ಖಾನೆ ಇತ್ತು. ಅದು ಬಾಗಿಲು ಹಾಕಿಕೊಂಡ ಮೇಲೆ ಅದನ್ನ ಕೆಡವಿ, ಸುತ್ತಲಿನ ರೈತರಿಂದ ಒಂದಷ್ಟು ಜಮೀನು ಪಡೆದು ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ಸ್ ಕಟ್ತಿದಾರೆ. ಕಳೆದ ವರ್ಷ ಅಕ್ಟೋಬರ್ನಲ್ಲಿ ಸೋನಿಯಾ - ಪ್ರಿಯಾಂಕಾ ಭೂಮಿ ಪೂಜೆ ಮಾಡಿರುವ ಯೋಜನೆ ಇದು. ಕಾಮಗಾರಿ ಜೋರಾಗಿ ನಡೀತಿದೆ. ಅದನ್ನ ನೋಡಿಕೊಂಡು ಹಂಗೇ ಮುಂದೆ ಹೋದರೆ ಬೇಲಾ ಖಾರಾ ಅನ್ನೋ ಹಳ್ಳಿ ಸಿಕ್ಕಿತು. ಅಲ್ಲಿ ಬಗೆಹರಿಯಿತು ಸೋನಿಯಾ ಗಾಂಧಿಯವರ ಭಾರೀ ಬಹುಮತದ ಗೆಲುವಿನ ರಹಸ್ಯ..!
ಸೋನಿಯಾ ಗಾಂಧಿ

                  ನಮ್ಮೊಂದಿಗೆ ಮಾತನಾಡೋದಕ್ಕೆ ಸೇರಿದ ಜನಜಂಗುಳಿಯಲ್ಲಿ ಕುಡಿಮೀಸೆಯ ಹುಡುಗರಿದ್ದರು - ಮುಪ್ಪಾನು ಮುದುಕರಿದ್ದರು, ಮಹಿಳೆಯರು - ಮಧ್ಯವಯಸ್ಕರು, ಪದವೀಧರರು - ಒಂದಕ್ಷರ ಕಲಿಯದವರು, ಎಲ್ಲರೂ ಇದ್ದರು. ಹಸ್ತ ಮತ್ತು ಸೋನಿಯಾ ಗಾಂಧಿ ಬಿಟ್ಟು ಇನ್ನೇನೂ ಹೇಳಲಿಲ್ಲ ಅವರು. "ಧಮ್ ಇದ್ದರೆ ನರೇಂದ್ರ ಮೋದಿಗೆ ಇಲ್ಲಿ ಬಂದು ಎಲೆಕ್ಷನ್ಗೆ ನಿಲ್ಲೋದಕ್ಕೆ ಹೇಳಿ" ಅಂದ ಒಬ್ಬ. ಕೆಟ್ಟ ರಸ್ತೆಗಳು - ಕಚ್ಚಾ ಮನೆಗಳ ಬಗ್ಗೆ ಮಾತನಾಡಿದರೆ ಇಲ್ಲಿ ಕೂಡ ಅದೇ ಉತ್ತರ. ದೆಹಲಿಯಿಂದ ಸೋನಿಯಾ ಗಾಂಧಿ ನಮಗೋಸ್ಕರ ಏನೇನೆಲ್ಲಾ ಕಳಿಸ್ತಾರೆ ಗೊತ್ತಾ ಸಾರ್, ಮಧ್ಯದಲ್ಲಿ ಈ ಹರಾಮಖೋರರು ಎಲ್ಲವನ್ನೂ ತಿಂದು ಹಾಕ್ತಾರೆ ಅಂತ. ಒಬ್ಬ ಮುದುಕನ ಪಕ್ಕದಲ್ಲಿ ಕುಳಿತು "ಅಜ್ಜಾ, ನೀನು ಜೀವನದಲ್ಲಿ ಯಾವತ್ತಾದರೂ ಹಸ್ತಕ್ಕೆ ಬಿಟ್ಟು ಇನ್ಯಾವುದಕ್ಕಾದರೂ ಓಟ್ ಹಾಕಿದೀಯಾ..?" ಅಂತ ಕೇಳಿದೆ. ಕೇಳಬಾರದ್ದೇನನ್ನೋ ಕೇಳಿಬಿಟ್ಟೆನೇನೋ ಅನ್ನೋಹಾಗೆ ಸಿಟ್ಟಿಗೆದ್ದ ಆತ "ಎಂಥಾ ಮಾತು ಅಂತ ಆಡ್ತೀಯಾ ಮಗಾ... ಪಕ್ಷಾಂತರ ಅನ್ನೋದು ಆ ಆಸೆಬುರುಕ ನೇತಾಗಳ ಕೆಲಸ. ಮನುಷ್ಯನಿಗೆ ನಿಷ್ಠೆ ಅನ್ನೋದಿರಬೇಕು. ನಾನು ಯಾವತ್ತೂ ಪಕ್ಷಾಂತರ ಮಾಡಿಲ್ಲ" ಅಂದುಬಿಟ್ಟ. ಪಕ್ಷಾಂತರ ಅನ್ನೋ ಶಬ್ದಕ್ಕೆ ತಾತ ಕೊಟ್ಟ ಡೆಫಿನಿಷನ್ನು ತಲೆ ತಿರುಗಿಸಿತ್ತು. ಪಕ್ಕದಲ್ಲಿದ್ದ ಮಧ್ಯವಯಸ್ಕಳೊಬ್ಬಳಿಗೆ "ನಿನ್ನ ಓಟು ಯಾರಿಗೆ ತಾಯಿ ಈ ಸಲ" ಅಂತ ಕೇಳಿದೆ. "ಮಾಯಾವತಿಗೆ" ಅಂದಳು ಆಕೆ. ನಾನೇ ತಪ್ಪಾಗಿ ಕೇಳಿಸಿಕೊಂಡೆನಾ..? ಯಾರಿಗೆ ಹಾಕ್ತೀರಿ..? ಮತ್ತೆ ಕೇಳಿದೆ. ಮಾಯಾವತಿಗೆ - ಮತ್ತಷ್ಟು ಖಡಕ್ಕಾಗಿ ಉತ್ತರಿಸಿದಳು. ಇನ್ನೊಂದು ಸಲ ಕನ್ಫರ್ಮ್ ಮಾಡಿಕೊಳ್ಳೋಣ ಅಂದುಕೊಂಡು "ಮಾಯಾವತಿಯವರ ಪಕ್ಷದ ಚಿನ್ಹೆ ಯಾವುದು" ಅಂದೆ. ಥಟ್ಟಂತ ಉತ್ತರ ಬಂತು - "ಹಸ್ತ..!"
                   ಬೇಲಾ ಖಾರಾದಿಂದ ವಾಪಸ್ ಹೊರಟಾಗ ಇಳಿ ಸಂಜೆ. ಬಿಸಿಲಿನಲ್ಲಿ ಮನೆ ಸೇರಿದ್ದ ರೈತರು ಮತ್ತೆ ಜಮೀನುಗಳಿಗೆ ವಾಪಸಾಗಿ ಕೆಲಸದಲ್ಲಿ ತೊಡಗಿದ್ದರು. ಒಂದು ಕಡೆ ಹೆಣ್ಣುಮಕ್ಕಳು ಗೋಧಿ ಕೊಯ್ಲು ಮಾಡುತ್ತಿದ್ದರೆ ಪಕ್ಕದಲ್ಲಿ ನವಿಲಿಗಿಂತ ದೊಡ್ಡದಾದ - ಆಸ್ಟ್ರೀಚ್ಗಿಂತ ಚಿಕ್ಕದಾದ ಬಿಳಿ ಬಣ್ಣದ ಐದಾರು ಸುಂದರ ಪಕ್ಷಿಗಳು ಅಡ್ಡಾಡುತ್ತಿದ್ದವು. ಮನಮೋಹಕ ದೃಶ್ಯ ಅದು. ಆ ಪಕ್ಷಿಯ ಒಂದಷ್ಟು ಫೋಟೊ ತೆಗೆದು, ಅವುಗಳ ಹೆಸರೇನು ನೋಡಬೇಕು ಅಂದುಕೊಂಡು ಗೂಗಲ್ ಇಮೇಜ್ನಲ್ಲಿ "ರಾಯಬರೇಲಿ ಪಕ್ಷಿಗಳು" ಅಂತ ಸಚರ್್ ಕೊಟ್ಟೆ. ಸಾಲುಸಾಲಾಗಿ ಪ್ರಿಯಾಂಕಾ ಗಾಂಧಿ ಫೋಟೊಗಳು ಬಂದವು. ಥತ್..!
                  ಈ ದೊಡ್ಡವರ ಕ್ಷೇತ್ರಗಳ ಬಗ್ಗೆ ವರದಿ ಮಾಡುವಾಗ, ಅವರು ಗೆದ್ದು ದೆಹಲಿ ಕಡೆ ಹೋದ ನಂತರ ಕ್ಷೇತ್ರದ ಜೊತೆ ಹೇಗೆ ಸಂಪರ್ಕ ಇಟ್ಟುಕೊಂಡಿದ್ದಾರೆ ಅನ್ನೋದನ್ನ ನೋಡಬೇಕು. ಅದನ್ನನೋಡೋದಕ್ಕೆ ಅಂತಲೇ ರಾಯಬರೇಲಿ ಜಿಲ್ಲಾ ಕಾಂಗ್ರೆಸ್ ಕಚೇರಿ ತಿಲಕ್ ಭವನಕ್ಕೆ ಹೋಗಿದ್ದು. ದುರಸ್ತಿ ಕೆಲಸ ನಡೆಯುತ್ತಿದ್ದ ಆ ಕಚೇರಿಯ ಒಂದು ಭಾಗದ ಒಂದು ಚೇಂಬರ್ನಲ್ಲಿ ಕೆ.ಎಲ್ ಶರ್ಮಾ ಅಂತ ಒಬ್ಬರು ಮಧ್ಯವಯಸ್ಕ ತುಂಬು ತೋಳಿನ ಸಫಾರಿ ಧರಿಸಿಕೊಂಡು ಕುಳಿತಿದ್ದರು. ಅವರು ರಾಯಬರೇಲಿಯಲ್ಲಿ ಸೋನಿಯಾ ಪ್ರತಿನಿಧಿ. "ತಿಂಗಳಿಗೆ ಕನಿಷ್ಠ ಹತ್ತು ದಿನ ನಾನು ಇಲ್ಲಿರ್ತೀನಿ. ಉಳಿದಂತೆ ನನಗೆ ದೆಹಲಿಯಲ್ಲಿ ಸಂಸತ್ ಭವನದ ಬಳಿ ಒಂದು ಆಫೀಸ್ ಇದೆ. ಕ್ಷೇತ್ರಕ್ಕೆ ಸಂಬಂಧಿಸಿದ ಕುಂದುಕೊರತೆಗಳ ಅರ್ಜಿಗಳನ್ನ ಇಲ್ಲೇ ತೆಗೆದುಕೊಂಡು ಸಂಬಂಧಪಟ್ಟ ಇಲಾಖೆಗಳಿಗೆ ಕಳಿಸ್ತೀವಿ. ಆರೋಗ್ಯ ಸಮಸ್ಯೆಗಳಿಗೆ ಸ್ಥಳೀಯ ಆಸ್ಪತ್ರೆಗಳಿವೆ. ದೊಡ್ಡ ಮಟ್ಟದ ಚಿಕಿತ್ಸೆ ಬೇಕು ಅಂತ ಇಲ್ಲಿನ ವೈದ್ಯರು ಶಿಫಾರಸು ಮಾಡಿದರೆ ದೆಹಲಿಗೆ ಕರೆದುಕೊಂಡು ಹೋಗಿ ಸಂಬಂಧಪಟ್ಟ ಸ್ಪೆಷಲಿಸ್ಟ್ಗಳ ಹತ್ತಿರ ಚಿಕಿತ್ಸೆ ಕೊಡಿಸ್ತೀವಿ. ಇಲ್ಲೀ ತನಕ ಸುಮಾರು ಒಂದೂವರೆ ಸಾವಿರ ಜನರಿಗೆ ಹಂಗೆ ಚಿಕಿತ್ಸೆ ಸಿಕ್ಕಿದೆ. ಒಂದು ಸಲ ಏಮ್ಸ್ ಉದ್ಘಾಟನೆ ಆಗಿಬಿಟ್ಟರೆ ನಂತರ ಸಮಸ್ಯೆ ಇರಲ್ಲ ಬಿಡಿ. ಈ ಕಚೇರಿಯಿಂದ ಸರಕಾರಿ ನೌಕರಿಗಳಿಗೆ ಶಿಫಾರಸು ಮಾಡೋದಿಲ್ಲ. ಆದರೆ, ಬೇರೆ - ಬೇರೆ ಸ್ವಯಂ ಸೇವಾ ಸಂಸ್ಥೆಗಳ ಜೊತೆ ಸೇರಿಕೊಂಡು ಯುವಕರಿಗೆ ತರಬೇತಿ ಕೊಡೋ ವ್ಯವಸ್ಥೆ ಮಾಡಿದೀವಿ. ನೀವು ನೋಡಿರಬಹುದಲ್ಲ - ಕೋಚ್ ಫ್ಯಾಕ್ಟರಿ ಹೆಂಗಿದೆ ಅಂತ..?" ಅಂತೆಲ್ಲ ತುಂಬ ಕಾನ್ಫಿಡೆನ್ಸ್ನಿಂದ ಮಾತನಾಡುತ್ತಾ ಹೋದರು ಶಮರ್ಾ. "ಕೋಚ್ ಫ್ಯಾಕ್ಟರಿಯಲ್ಲಿ ಸ್ಥಳೀಯರಿಗೆ ಎಷ್ಟು ನೌಕರಿ ಸಿಕ್ಕಿವೆ..?" ಕೇಳಿದೆ. "ಒಂದು ಸಾವಿರದ ನಾಲ್ಕುನೂರ ನಲವತ್ತೇಳು. ಜಮೀನು ಕಳೆದುಕೊಂಡ ಕುಟುಂಬಕ್ಕೊಬ್ಬರಂತೆ ನೌಕರಿ ಕೊಟ್ಟಿದೀವಿ" ಅಂದರು. "ಅವರವರ ವಿದ್ಯಾರ್ಹತೆಗೆ ತಕ್ಕ ಕೆಲಸ ಸಿಕ್ಕಿದೆಯಾ..?" ಮರುಪ್ರಶ್ನೆ ಹಾಕಿದೆ. "ನಿಮಗೆ ಗೊತ್ತಿರಬೇಕಲ್ಲ, ಜಮೀನು ಕಳೆದುಕೊಂಡ ಮನೆಯವರೊಬ್ಬರಿಗೆ ಡಿ ಗ್ರೂಪ್ ಕೆಲಸ ಸಿಗತ್ತೆ. ಅವರು ಡಾಕ್ಟರೇಟ್ ಓದಿದ್ದರೂ ಡಿ ಗ್ರೂಪ್ ನೌಕರಿಯೇ" ಅಂದರು. "ನಿಮಗೂ - ಸೋನಿಯಾ ಗಾಂಧಿಯವರಿಗೂ ಸಂಪರ್ಕ ಹೇಗೆ..?" ಮತ್ತೆ ಕೇಳಿದೆ. "ಎನಿ ಟೈಮ್... ಫೋನ್ ಮಾಡ್ತೀನಿ. ಅವರು ಬಿಜಿ ಇದ್ದರೆ ಮೆಸೇಜ್ ಹಾಕಿರ್ತೀನಿ - ಫ್ರೀ ಆದ ತಕ್ಷಣ ಫೋನ್ ಮಾಡ್ತಾರೆ" ಅಂದರು ಶರ್ಮಾ. ನಂಬೋದಕ್ಕಾಗಲಿಲ್ಲ. ಇಲ್ಲಿ ಕೆಟ್ಟ ರಸ್ತೆಗಳು - ಕಚ್ಚಾ ಮನೆಗಳು - ಕೈಕೊಡುವ ಕರೆಂಟುಗಳ ಬಗ್ಗೆ ಕೇಳಿದರೆ ಇವರದೂ ಅದೇ ಉತ್ತರ "ರಾಜ್ಯ ಸರಕಾರ ಸಾರ್... ಹೊಟ್ಟೆಕಿಚ್ಚು ಈ ಕ್ಷೇತ್ರದ ಮೇಲೆ" ಅಂತ.
                  ಅಲ್ಲಿಂದ ಹೊರಟು ರಾತ್ರಿ ವಸತಿಗೆ ಅಂತ ಸರಸ್ ಹೊಟೇಲ್ಗೆ ಬಂದರೆ ಸ್ವಲ್ಪ ಹೊತ್ತಿನಲ್ಲಿ ಮೂರು ಅಚ್ಚಬಿಳಿ ಟಾಟಾ ಸಫಾರಿಗಳು ಧೂಳೆಬ್ಬಿಸಿಕೊಂಡು ಬಂದವು. ಮೂರಕ್ಕೂ ಒಂದೇ ನಂಬರ್. 5500..! ಮೂರರ ಮೇಲೂ ಬಿ.ಜೆ.ಪಿಯ ಧ್ವಜ. ಮೊದಲ ಸಫಾರಿಯಿಂದ ನಲವತ್ತರ ಆಸುಪಾಸಿನ ವ್ಯಕ್ತಿಯೊಬ್ಬರು ಇಳಿದರು. ಹಿಂದಿನ ಸಫಾರಿಗಳಿಂದ ಧಡಧಡನೆ ಇಳಿದು ಬಂದ ಹುಡುಗರು ತಲೆಗೆ ಬಿ.ಜೆ.ಪಿ ಧ್ವಜ ಸುತ್ತಿಕೊಂಡಿದ್ದರು. ಕಣ್ಣಿಗೆ ರೇಬಾನ್ ಗ್ಲಾಸು. ವಿಚಾರಿಸಿ ನೋಡಿದಾಗ ಆ ಒಡ್ಡೋಲಗದ ನಾಯಕ ಪುಷ್ಪೇಂದ್ರ ಸಿಂಗ್, ಸೋನಿಯಾ ಗಾಂಧಿ ವಿರುದ್ಧ ಬಿ.ಜೆ.ಪಿ ಟಿಕೆಟ್ ಕೇಳಿರೋ ವ್ಯಕ್ತಿ ಅನ್ನೋದು ಗೊತ್ತಾಯಿತು. ಹೊಟೇಲ್ನ ಲಾಬಿಯಲ್ಲಿ ಕುಳಿತು ಮಾತನಾಡಿದರು ಪುಷ್ಪೇಂದ್ರ ಸಿಂಗ್. ಮುಂದಕ್ಕೆ ಬಾಗಿ, ಮುಖದೆದುರಿಗೆ ಮುಖ ತಂದು, ಊರಗಲ ಕಣ್ಣು ಬಿಟ್ಟು ಪ್ರಶ್ನೆ ಕೇಳಿಸಿಕೊಳ್ಳುತ್ತಿದ್ದರು. ನಂತರ ಕುರ್ಚಿಗೆ ಒರಗಿ ಕಣ್ಣು ಮುಚ್ಚಿಕೊಂಡು ಗಾಢ ನಿದ್ದೆಯಲ್ಲಿ ಕನವರಿಸುವವರಂತೆ ಇಡೀ ಉತ್ತರ ಹೇಳಿ ಮುಗಿಸೋರು. ಮಧ್ಯದಲ್ಲಿ ಯಾರೂ ಮಾತನಾಡುವಂತಿಲ್ಲ..! "ನನಗೆ ಟಿಕೆಟ್ ಒಂದು ಕೊಟ್ಟು ನೋಡಲಿ ಸಾರ್... ಒಂದು ಲಕ್ಷ ಓಟಿನಿಂದ ಸೋನಿಯಾ ಗಾಂಧೀನ ಸೋಲಿಸದಿದ್ದರೆ ಹೆಸರು ಬದಲಿಸಿಕೊಂಡು ಬಿಡ್ತೀನಿ, ಹೆಸರು. ಕ್ಯಾ ಸಮಝೇ ಹೋ ಆಪ್ ಮುಝೆ..? ರಾಯಬರೇಲಿಯ ಹಳ್ಳಿಹಳ್ಳಿಯಲ್ಲಿ ನನ್ನ ಜನ ಇದಾರೆ" ಅಂದರು ಆತ. ಅಂಥ ಒಂದು ಹಳ್ಳಿಯನ್ನ ನಾನು ಈಗಷ್ಟೇ ನೋಡಿಕೊಂಡು ಬಂದಿದ್ದೆ. ರಾಯಬರೇಲಿಯಲ್ಲಿ ಸೋನಿಯಾ ಗಾಂಧಿಯವರನ್ನ ಸೋಲಿಸೋದು ಯಾಕೆ ಅಸಾಧ್ಯ ಅನ್ನೋದು ಅಲ್ಲಿ ಅರ್ಥ ಆಗಿತ್ತು - ಬಿ.ಜೆ.ಪಿ ಚಿಗಿತುಕೊಳ್ಳೋದು ಯಾಕೆ ಅಸಾಧ್ಯ ಅನ್ನೋದು ಇಲ್ಲಿ ಅರ್ಥ ಆಯಿತು..!

ಕುರುಕ್ಷೇತ್ರ ನಡೆದ ಭೂಮಿಯಲ್ಲಿ ಮಹಾಯುದ್ಧ..!

                         ಹೊರಗೆ ಬಂದೊಡನೆ ಗಾಳಿ... ಬಿಸಿ ಅಂದರೆ ಬಿಸಿ. ಅಷ್ಟು ದೂರದಲ್ಲಿ ಮೊಳಕಾಲ ತನಕ ಪ್ಯಾಂಟ್ ಏರಿಸಿಕೊಂಡು ಆಟೋದಲ್ಲಿ ಕುಳಿತಿದ್ದವನು "ಕಿಧರ್ ಜಾನಾ ಹೈ..?" ಅಂತ ಕೇಳಿದ. ಉತ್ತರಿಸಬೇಕು ಅನ್ನುವಷ್ಟರಲ್ಲಿ ಇನ್ನೊಂದು ಆಟೋ ಯಮವೇಗದಲ್ಲಿ ಬಂದು ಎದುರಿಗೆ ನಿಂತಿತು. "ಆ ಜಾವೋ ಸಾಬ್" ಅಂದ ಅವನು. ಅದು ಅರ್ಧ ಮನವಿಯಂತೆಯೂ ಇನ್ನರ್ಧ ಆಜ್ಞೆಯಂತೆಯೂ ಇತ್ತು. ಅಷ್ಟರಲ್ಲಿ ಅದೆಲ್ಲಿಂದಲೋ ಬಂದ ಭಿಕ್ಷೆಯ ಹುಡುಗಿ ಅಂಗಿ ಹಿಡಿದು ಎಳೆಯೋದಕ್ಕೆ ಶುರು ಮಾಡಿದಳು. ನಾನು ಹೊರಗೆ ಬಂದದ್ದು ವಿಮಾನ ನಿಲ್ದಾಣದಿಂದಲಾ - ರೇಲ್ವೆ ಸ್ಟೇಷನ್ನಿಂದಲಾ..? ಹಿಂದಿರುಗಿ ನೋಡಿದೆ. ವಿಮಾನ ನಿಲ್ದಾಣವೇ..! ಒಂದು ಲಡಕಾಸಿ ಸುಝುಕಿ ಬೈಕ್ನಲ್ಲಿ ಬಂದು ನಿಂತವನೊಬ್ಬ ಇಬ್ಬರೂ ಆಟೋದವರಿಗೆ ಹಿಂದಿಯ ಹೋಲಿಕೆಯಿದ್ದ ಭಾಷೆಯಲ್ಲಿ ಅದೇನೋ ಬೈಯ್ಯತೊಡಗಿದ. ಅವನು ಕೈ ಎತ್ತಿದಾಗ ಶರ್ಟು ಮೇಲಕ್ಕೇರಿತು. ಬೆಲ್ಟಿನಲ್ಲಿ ಪಿಸ್ತೂಲು..! ಈಗ ಖಚಿತವಾಯ್ತು, ನಾವು ಬಂದಿರುವುದು ಉತ್ತರ ಪ್ರದೇಶಕ್ಕೇ... ಇದು ರಾಜಧಾನಿ ಲಖ್ನೋ..!
                        "ಆಜ್ ಕಲ್ ತೋ ಮೋದಿ ಕಾ ನಾಮ್ ಬಹುತ್ ಚಲ್ ರಹಾ ಹೈ" (ಇತ್ತೀಚೆಗೆ ಮೋದಿ ಬಗ್ಗೆ ತುಂಬಾ ಚಚರ್ೆ ಆಗ್ತಿದೆ) ಅಂದ ಆಟೋ ಡ್ರೈವರ್ ಕಲೀಂ. ನಾವು ಚುನಾವಣೆ ವರದಿಗೆ ಬೆಂಗಳೂರಿನಿಂದ ಬಂದಿರೋ ಪತ್ರಕರ್ತರು ಅನ್ನೋದು ಗೊತ್ತಾದ ನಂತರ ಅವನಲ್ಲಿ ಮಾತನಾಡುವ ಉತ್ಸಾಹ ಗರಿಗೆದರಿತ್ತು. ಉತ್ತರ ಪ್ರದೇಶದ ರಾಜಕೀಯವನ್ನು ವಣರ್ಿಸೋದಕ್ಕೆ ಕಲೀಂ ಬಳಸುತ್ತಿದ್ದ ಭಾಷೆ ಬಹಳ ಆಕರ್ಷಕವಾಗಿತ್ತು. "ನೋಡಿ ಸಾಬ್ ಇಲ್ಲಿ ಪ್ರತಿ ಮೂರು ಜನರಲ್ಲಿ ಒಬ್ಬ ಬಡವ ಆಗಿರ್ತಾನೆ. ಇನ್ನೊಬ್ಬ ಗೂಂಡಾ. ಮೂರನೆಯವನು ನೇತಾ..!" ಒಂದೇ ವಾಕ್ಯದಲ್ಲಿ ಇಡೀ ಉತ್ತರ ಪ್ರದೇಶವನ್ನು ವರ್ಣಿಸಿಬಿಟ್ಟ ಪುಣ್ಯಾತ್ಮ. "ಮಾಯಾವತಿ ಇದ್ದಾಗ ಹಿಂಗಿರಲಿಲ್ಲ ಸಾಬ್... ಅಖಿಲೇಶ್ ಯಾದವ್ ಮುಖ್ಯಮಂತ್ರಿಯಾದಾಗಿನಿಂದ ಪರಿಸ್ಥಿತಿ ಹದಗೆಟ್ಟು ಹೋಗಿದೆ. ಎರಡು ಗುಟುಕು ಕುಡಿದುಬಿಟ್ಟರೆ ಎಲ್ಲರೂ ಗೂಂಡಾಗಳೇ. ಯಾವನು ಯಾವಾಗ ಬಂದೂಕು ತೆಗೀತಾನೋ ಗೊತ್ತೇ ಆಗಲ್ಲ" ಅಂದ. "ಆದರೂ ಮುಸ್ಲಿಮರ ಓಟು ಅಖಿಲೇಶ್ ಯಾದವ್ರ ಸಮಾಜವಾದಿ ಪಕ್ಷಕ್ಕೇ ಅಲ್ಲವಾ..?" ಅಂತ ಸುಮ್ಮನೇ ಕಿಚಾಯಿಸಿದೆ. ಕಲೀಂನ ಮುಖ ಏಕಾಏಕಿ ಗಂಭೀರವಾಯಿತು. "ಯಾವನು ಹೇಳಿದ ನಿಮಗೆ..? ಮುಜಫರ್ನಗರದಲ್ಲಿ ಇದೇ ಅಖಿಲೇಶ್ ಯಾದವ್ *********** ಮುಸ್ಲಿಮರದು" ಅಂತ ಕೆಟ್ಟ ಶಬ್ದವೊಂದನ್ನ ಬಳಸಿದ. "ರಾಯಚೂರಿಗೆ ಬಂದಂಗೆ ಅನ್ನಿಸ್ತಿದೆ ಸಾರ್" ಅಂತ ಕ್ಯಾಮರಾಮ್ಯಾನ್ ಕಿರಣ್ ಹೇಳುವದರೊಂದಿಗೆ ಆಟೋ ಪ್ರಯಾಣ ಮುಕ್ತಾಯಗೊಂಡಿತ್ತು. ನಾವು ಲಖ್ನೋದ ಹೃದಯ ಭಾಗ ಚಾರ್ ಬಾಗಿಗೆ ಬಂದು ತಲುಪಿದ್ವಿ.
ಗೋಮತಿ ಪಾರ್ಕ್ ನಲ್ಲಿರುವ ಮಾಯಾವತಿ ಮೂರ್ತಿ

                         ಇದಷ್ಟನ್ನೂ ಓದಿ ಉತ್ತರ ಪ್ರದೇಶ ಅಂದರೆ ಒಂದು ಅತಿ ಹಿಂದುಳಿದ ಪ್ರದೇಶ ಅನ್ನೋ ನಿರ್ಧಾರಕ್ಕೆ ಬಂದುಬಿಡಬೇಡಿ. ಅಲ್ಲಿನ ವಿಧಾನ ಭವನದ ಸುತ್ತ ಅಡ್ಡಾಡಿದರೆ ಇದೊಂದು ಶ್ರೀಮಂತ ಊರು ಅನ್ನೋದು ಗೊತ್ತಾಗತ್ತೆ. ಇಲ್ಲಿನ ಮಂತ್ರಿ ಮಹೋದಯರ ಬಂಗಲೆಗಳ ಎದುರು ನಮ್ಮವರ ಬಂಗಲೆಗಳು ಏನೇನೂ ಅಲ್ಲ. ಮಾಯಾವತಿ ಮನೆಯ ಹಿತ್ತಾಳೆಯ ಗೇಟು ಕಡಿಮೆ ಅಂದರೂ ಒಂದು ಅಡಿ ದಪ್ಪ ಇದೆ. ಅದ್ಹೇಗೆ ತೆಗೆದು - ಹಾಕಿ ಮಾಡ್ತಾರೋ ಯಾವನಿಗೆ ಗೊತ್ತು..? ಗೋಮತಿನಗರದ ಡಾ. ಬಿ. ಆರ್ ಅಂಬೇಡ್ಕರ್ ಸಾಮಾಜಿಕ್ ಪರಿವರ್ತನ್ ಸ್ಥಳಕ್ಕೆ ಗ್ರಾನೈಟ್ ಅಲ್ಲ - ದುಡ್ಡಿನ ಕಂತೆ ಹೊದಿಸಿದ್ದಾರೇನೋ ಅನ್ನಿಸತ್ತೆ. ಆದರೆ ಅಷ್ಟೆತ್ತರದ ಮಾಯಾವತಿಯ ಪುತ್ಥಳಿ ಮತ್ತು ಸಾಲುಸಾಲಾದ ಆನೆಯ ಮೂರ್ತಿ (ಆನೆ, ಬಿ.ಎಸ್.ಪಿಯ ಚುನಾವಣಾ ಚಿನ್ಹೆ) ಗಳನ್ನು ನೋಡಿದಾಗ ಮಾತ್ರ ವಾಕರಿಕೆ ಬರತ್ತೆ. ಸಾರ್ವಜನಿಕರ ದುಡ್ಡಿನಲ್ಲಿ ಇದನ್ನೆಲ್ಲ ಮಾಡುವ ವಿಕೃತಿ ಅದ್ಯಾಕಾದರೂ ಬರತ್ತೋ ನಾಯಕರಿಗೆ. ಇಂಥ ಇನ್ನೂ ಏಳು ಪಾಕರ್್ಗಳಿವೆ ಲಖ್ನೋದಲ್ಲಿ..! ಆಳುವವರು ಮತ್ತು ಆಳಿಸಿಕೊಳ್ಳುವವರ ಮಧ್ಯದ ಕಂದಕ ಇಲ್ಲಿ ಕಂಡಷ್ಟು ಸ್ಪಷ್ಟವಾಗಿ ಮತ್ತು ವಿಸ್ತಾರವಾಗಿ ಇನ್ನೆಲ್ಲೂ ಕಂಡಿರಲಿಲ್ಲ. ಬಿಡಿ, ವಿಷಯಕ್ಕೆ ಬರೋಣ...
                  ಎಂಭತ್ತು ಲೋಕಸಭಾ ಕ್ಷೇತ್ರಗಳಿರೋ ರಾಜ್ಯ ಇದು. ದೆಹಲಿ ಸಿಂಹಾಸನದ ದಾರಿ ಉತ್ತರ ಪ್ರದೇಶದ ಮೂಲಕವೇ ಹಾದು ಹೋಗತ್ತೆ ಅನ್ನೋ ಮಾತು ಸವಕಲಾಗಿರಬಹುದು. ಆದರೆ, ಸುಳ್ಳಾಗಿಲ್ಲ. ಪಿ.ವಿ ನರಸಿಂಹರಾವ್ ಒಬ್ಬ ಅಪವಾದ ಅನ್ನೋದು ಬಿಟ್ಟರೆ, ಉತ್ತರ ಪ್ರದೇಶವವನ್ನು ಒಲಿಸಿಕೊಳ್ಳದೇ ಬಂದವರನ್ನ ದೆಹಲಿ ಒಳಗೆ ಬಿಟ್ಟುಕೊಂಡಿಲ್ಲ. ಅವರಿಗೆ ಕಿರೀಟ ದಕ್ಕಿಲ್ಲ. ರಾಷ್ಟ್ರ ರಾಜಕಾರಣದಲ್ಲಿ ತನಗೆ ಇರುವ ಪ್ರಾಮುಖ್ಯತೆಯನ್ನು ಸರಿಯಾಗಿ ಬಳಸಿಕೊಂಡಿದ್ದರೆ ಈ ರಾಜ್ಯ ಹೀಗಿರುತ್ತಿರಲಿಲ್ಲ. "ಇಲ್ಲಿ ಜನ ಚುನಾವಣೆಯ ಹಿಂದಿನ ದಿನದ ತನಕ ಅಭಿವೃದ್ಧಿಯ ಬಗ್ಗೆ ಮಾತಾಡ್ತಾರೆ. ಓಟು ಹಾಕೋದು ಮಾತ್ರ ಜಾತಿಯನ್ನ ನೋಡಿಯೇ" ಅಂತ ಮಾರ್ಮಿಕವಾಗಿ ನಕ್ಕವರು ಪ್ರತ್ಯುಷ್ ಮಣಿ ತ್ರಿಪಾಠಿ. ಅವರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ನ ಸದಸ್ಯ. ಉತ್ತರ ಪ್ರದೇಶದ ರಾಜಕಾರಣವನ್ನು ಆಳವಾಗಿ ಅಧ್ಯಯನ ಮಾಡಿದ ಮನುಷ್ಯ. "ಬಿ.ಜೆ.ಪಿ ದೊಡ್ಡ ಮಟ್ಟದಲ್ಲಿ ಗೆಲ್ಲುವ ಸಾಧ್ಯತೆ ಇದೆ. ಅದಕ್ಕೆ ಮೋದಿ ಅಲೆ ಒಂದೇ ಕಾರಣ ಅಲ್ಲ. ಇಲ್ಲಿ ಕಾಂಗ್ರೆಸ್ ಸ್ಥಿತಿ ದಯನೀಯವಾಗಿದೆ. ಅಧಿಕಾರಕ್ಕೆ ಬಂದ ಎರಡೇ ವರ್ಷಗಳಲ್ಲಿ ಅಖಿಲೇಷ್ ಯಾದವ್ ದೊಡ್ಡ ಮಟ್ಟದಲ್ಲಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದಾರೆ. ಅಮಿತ್ ಶಾ ಬಂದ ನಂತರ ಮೇಲ್ವರ್ಗದ ಹಿಂದೂ ಮತಗಳ ಮೇಲೆ ಬಿ.ಜೆ.ಪಿ ಹಿಡಿತ ಹೆಚ್ಚಾಗಿದೆ. ಬ್ರಾಹ್ಮಣ - ದಲಿತ ಮತಬ್ಯಾಂಕ್ ಇಟ್ಟುಕೊಂಡು ಗೆಲ್ಲುತ್ತಿದ್ದ ಮಾಯಾವತಿ ಈ ಸಲ ಬ್ರಾಹ್ಮಣರ ಮತಗಳನ್ನ ಮರೆಯಬೇಕು. ಬಿ.ಜೆ.ಪಿ ಗೆಲ್ಲೋದಕ್ಕೆ ಏನೇನು ಬೇಕೋ ಎಲ್ಲಾ ಇಲ್ಲಿದೆ" ಅನ್ನೋದು ತ್ರಿಪಾಠಿಯವರ ವಾದ. ಹೆಚ್ಚೂ ಕಡಿಮೆ ಎಲ್ಲಾ ಚುನಾವಣೆ ಪೂರ್ವ ಸಮೀಕ್ಷೆಗಳು ಉತ್ತರ ಪ್ರದೇಶದಲ್ಲಿ ಬಿ.ಜೆ.ಪಿಯ ದೊಡ್ಡ ಗೆಲುವಿನ ಭವಿಷ್ಯ ನುಡಿಯುತ್ತಿವೆ. 30 ರಿಂದ 47 ಸ್ಥಾನಗಳಂತೆ. ಸಧ್ಯಕ್ಕೆ ಹತ್ತೇ ಜನ ಬಿ.ಜೆ.ಪಿ ಸಂಸದರಿರೋದು ಇಲ್ಲಿ. ಕನಿಷ್ಠ ಮೂವತ್ತು ಸ್ಥಾನಗಳಲ್ಲಿ ಗೆದ್ದರೂ, ಕಳೆದ ಚುನಾವಣೆಯ ಮೂರು ಪಟ್ಟು ಹೆಚ್ಚು..! ಅದೇನು ಕಡಿಮೆ ಸಾಧನೆ ಅಲ್ಲ.
ಅಮಿತ್ ಶಾ

                  ತುಂಬ ಕುತೂಹಲ ಇದ್ದದ್ದು ಈ ಸಂಭವನೀಯ ಗೆಲುವಿನಲ್ಲಿ ಅಮಿತ್ ಶಾ ಪಾತ್ರ ಏನು ಅನ್ನೋದರ ಬಗ್ಗೆ. ಹತ್ತು ತಿಂಗಳ ಹಿಂದೆ ಏಕಾಏಕಿ ಉತ್ತರ ಪ್ರದೇಶದ ಬಿ.ಜೆ.ಪಿ ಉಸ್ತುವಾರಿ ವಹಿಸಿಕೊಂಡು ಗುಜರಾತದಿಂದ ಬಂದಿಳಿದರು ಅಮಿತ್ ಶಾ. ಸ್ಥಳೀಯ ಮುಖಂಡರ ಮೊದಲ ಸಭೆಯಲ್ಲಿ ಶಾ ಮಾಡಿದ ಘೋಷಣೆ "ಬೂತ್ ಜೀತೊ - ಚುನಾವ್ ಜೀತೊ" (ಬೂತ್ ಗೆಲ್ಲಿ - ಚುನಾವಣೆ ಗೆಲ್ಲಿ). ಅಮಿತ್ ಶಾ ಪಾಲಿಗೆ ಉತ್ತರ ಪ್ರದೇಶದಲ್ಲಿ ಸ್ಥಧರ್ೆ ಇರೋದು ಎಂಭತ್ತು ಲೋಕಸಭಾ ಕ್ಷೇತ್ರಗಳಲ್ಲಲ್ಲ. ಒಂದು ಲಕ್ಷ ಅರವತ್ತೇಳು ಸಾವಿರದ ಚಿಲ್ಲರೆ ಪೋಲಿಂಗ್ ಬೂತ್ಗಳಲ್ಲಿ..! ಇದು ಅವರಿಗೆ ಸೂತ್ರ ಸಂಬಂಧ ಇಲ್ಲದ ರಾಜ್ಯ. ಏಳೆಂಟು ಬಣಗಳಾಗಿ ಒಡೆದು ಹೋಗಿದ್ದ ಬಿ.ಜೆ.ಪಿ ಯಾವ ಬಣದ ಯಾವ ಮುಖಂಡನ ಜೊತೆಗೂ ಅಮಿತ್ ಶಾಗೆ ಗಾಢ ಸಂಬಂಧಗಳಿರಲಿಲ್ಲ. ಇದು ಉತ್ತರ ಪ್ರದೇಶದಲ್ಲಿ ಇವರಿಗೆ ದೊಡ್ಡ ಪ್ಲಸ್ ಪಾಯಿಂಟ್. ಯಾವುದೇ ಭಿಡೆ ಇಲ್ಲದೇ ತಪ್ಪುಗಳನ್ನ ಸರಿ ಮಾಡೋದಕ್ಕೆ ನಿಂತರು. ಹಿರಿಯ ನಾಗರಿಕರ ಸಾಲಿಗೆ ಸೇರಿದ್ದ ಮುಖಂಡರಿಗೆ ಸಲಹಾ ಸಮಿತಿಯ ಕೆಲಸ ಕೊಟ್ಟು ಯುವ ನಾಯಕರನ್ನ ಕೆಲಸಕ್ಕೆ ಹಚ್ಚಿದರು. ಪಕ್ಷಕ್ಕೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳಲ್ಲಿ ವರುಣ್ ಗಾಂಧಿಯಂಥವರ ಮಾತು ನಡೆಯೋದಕ್ಕೆ ಶುರುವಾಯಿತು. ಎಲ್ಲಕ್ಕಿಂತ ಮುಖ್ಯವಾಗಿ ಅಮಿತ್ ಶಾ ಆರ್.ಎಸ್.ಎಸ್ ಮೂಲದಿಂದ ಬಿ.ಜೆ.ಪಿಗೆ ಬಂದು ನಂತರದ ಬೆಳವಣಿಗೆಗಳಿಂದ ದೂರವಾಗಿದ್ದವರನ್ನ ವಾಪಸ್ ಕರೆದುಕೊಂಡು ಬಂದರು. ಗೆಲುವಿನ ಸಾಧ್ಯತೆ ಬಿಟ್ಟರೆ ಇನ್ನೊಂದೇ ಒಂದು ಅಂಶವನ್ನು ಗಣನೆಗೆ ತೆಗೆದುಕೊಳ್ಳದೇ ಅಭ್ಯರ್ಥಿಗಳ ಆಯ್ಕೆ ಮಾಡಿದರು. (ಎಂಭತ್ತು ಕ್ಷೇತ್ರಗಳ ಪೈಕಿ ಇಪ್ಪತ್ತೈದು ಕ್ಷೇತ್ರಗಳಲ್ಲಿ ಬೇರೆ ಪಕ್ಷಗಳಿಂದ ಬಂದವರಿಗೆ ಟಿಕೆಟ್ ಕೊಡಲಾಗಿದೆ. ಅದು ಸ್ಥಳೀಯ ಬಿ.ಜೆ.ಪಿ ಮುಖಂಡರಿಗೆ ಸರಿ ಬಂದಿಲ್ಲ. ಎಲ್ಲೇನಾದರೂ ಹೆಚ್ಚೂ ಕಡಿಮೆಯಾದರೆ ಅಮಿತ್ ಶಾ ತಲೆಗೆ ಬರತ್ತೆ..!) ಆತ ಎಲ್ಲೂ ಕೋಮುವಾದಿ ಮಾತುಗಳನ್ನ ಆಡಲಿಲ್ಲ. ಅಯೋಧ್ಯೆಯ ರಾಮಮಂದಿರದ ದರ್ಶನ ಮಾಡಿಕೊಂಡು ಬಂದು ತಲುಪಿಸಬೇಕಾದ ಸಂದೇಶವನ್ನು ತಲುಪಿಸಬೇಕಾದಲ್ಲಿ ತಲುಪಿಸಿದರು. ಜಡ್ಡುಗಟ್ಟಿಹೋಗಿದ್ದ ಬಿ.ಜೆ.ಪಿ ಕೇಡರ್ಗಳಲ್ಲಿ ಮಿಂಚಿನ ಸಂಚಾರ ಉಂಟಾಗಿದ್ದೇ ಈ ಮನುಷ್ಯ ಬಂದ ಮೇಲೆ. ಕೋಮುವಾದಿ ಅಜೆಂಡಾ, ಅವರ ಮೈಮೇಲಿನ ಕೇಸುಗಳು, ಗುಜರಾತ್ ಅಭಿವೃದ್ಧಿಯ ವೈಭವೀಕರಣ ಇವೆಲ್ಲಾ ಚರ್ಚೆಗಳು ನಡೆಯುತ್ತಿರುತ್ತವೆ. ಆದರೆ, ಅಮಿತ್ ಶಾರ ಸಂಘಟನಾ ಶಕ್ತಿಯನ್ನ ಒರೆಗೆ ಹಚ್ಚಿದ್ದು ಉತ್ತರ ಪ್ರದೇಶ. ನರೇಂದ್ರ ಮೋದಿ ಅದೆಂಥಾ ಸಶಕ್ತ ದಂಡನಾಯಕನೊಬ್ಬನನ್ನ ತಯಾರು ಮಾಡಿಟ್ಟುಕೊಂಡಿದ್ದಾರೆ ಅನ್ನೋದು ಕರೆಕ್ಟಾಗಿ ಅರ್ಥ ಆಗಬೇಕು ಅಂದರೆ ಇಲ್ಲಿಗೆ ಬಂದ ಹತ್ತು ತಿಂಗಳಲ್ಲಿ ಅಮಿತ್ ಶಾ ಮಾಡಿದ ಕೆಲಸವನ್ನ ನೋಡಬೇಕು.
                 ನಾವು ಕರ್ನಾಟಕದಲ್ಲಿ ಜಾತಿ ರಾಜಕೀಯ ಜಾಸ್ತಿ ಅಂತ ಮಾತಾಡಿಕೊಳ್ತೀವಿ. ಉತ್ತರ ಪ್ರದೇಶಕ್ಕೆ ಹೋಲಿಸಿದರೆ ನಮ್ಮದು ಏನೇನೂ ಅಲ್ಲ. ಸ್ವಾತಂತ್ರ್ಯಾ ನಂತರ ಎಲ್ಲಾ ಕಡೆ ಇದ್ದಂತೆ ಇಲ್ಲಿ ಕೂಡ ಕಾಂಗ್ರೆಸ್ ಬಲಿಷ್ಠವಾಗಿತ್ತು. ದಲಿತರು - ಹಿಂದುಳಿದವರು - ಮುಸ್ಲಿಮರು. ಕಾಂಗ್ರೆಸ್ಗೆ ಇನ್ನೇನು ಬೇಕು..? "ಅಜಗರ್" ಅಂದರೆ "ಆಹಿರ್, ಜಾಟ್, ಗೂಜರ್, ರಾಜಪೂತ್" ಅವರು ಯಾವ ಕಡೆಗಿರ್ತಾರೋ ಗೆಲುವು ಆ ಕಡೆ ಅನ್ನೋದು ಪ್ರಚಲಿತವಿತ್ತು. ಅಂಥದ್ದರಲ್ಲಿ, ಇತರ ಹಿಂದುಳಿದ ವರ್ಗಗಳ ಮತಗಳನ್ನ ಕಾಂಗ್ರೆಸ್ನಿಂದ ಸೆಳೆದುಕೊಂಡು ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಚಿಗಿತುಕೊಂಡರು. ಅದರಿಂದ ಕಾಂಗ್ರೆಸ್ಗೆ ಸುಧಾರಿಸಿಕೊಳ್ಳಬೇಕು ಅನ್ನುವಷ್ಟರಲ್ಲಿ ರಾಮ ಜನ್ಮಭೂಮಿ ಹೋರಾಟ ಮೇಲ್ವರ್ಗದ ಹಿಂದೂಗಳನ್ನ ಕಾಂಗ್ರೆಸ್ನಿಂದ ದೂರ ಮಾಡಿ ಬಿ.ಜೆ.ಪಿಯನ್ನು ಬೆಳೆಸಿತು. ಇದರಿಂದ ಕೊನೆಪಕ್ಷ ಮುಸ್ಲಿಂ ಮತಗಳಾದರೂ ಕಾಂಗ್ರೆ ಗಟ್ಟಿಯಾದವಾ ಅಂದರೆ ಅದೂ ಇಲ್ಲ. ಕಾಂಗ್ರೆಸ್ ಬಾಬರಿ ಮಸೀದಿ ವಿಷಯದಲ್ಲಿ ತಮ್ಮ ಬೆನ್ನಿಗೆ ಚೂರಿ ಇರಿಯಿತು ಅಂದುಕೊಂಡ ಅನೇಕ ಮುಸ್ಲಿಂ ಮುಖಂಡರು ಮುಲಾಯಂ ಸಿಂಗ್ ಯಾದವ್ ಜೊತೆ ಗುರುತಿಸಿಕೊಂಡರು.
ಕಾನ್ಶೀರಾಮ್
 ಅದೇ ಹೊತ್ತಿಗೆ ಕಾನ್ಶಿರಾಮ್ ದಲಿತ ಚಳವಳಿ ಶುರುಮಾಡಿ ಬಹುಜನ ಸಮಾಜ ಪಾರ್ಟಿ ಮೂಲಕ ಕಾಂಗ್ರೆಸ್ ಓಟ್ ಬ್ಯಾಂಕಿಗೆ ಕನ್ನ ಕೊರೆದುಬಿಟ್ಟರು. ಬ್ರಾಹ್ಮಣ ಮತ್ತು ಮೇಲ್ವರ್ಗದ ಹಿಂದೂ ವಿರೋಧಿ ಘೋಷಣೆಗಳಿಂದ ಗುರುತಿಸಲ್ಪಟ್ಟ ಚಳವಳಿ ಅದು. "ಭೂರಾಬಾಲ್ ಸಾಫ್ ಕರೋ" (ಭೂಮಿಹಾರ್, ರಾಜಪೂತ್, ಬ್ರಾಹ್ಮಣ, ಲಾಲಾರನ್ನು ಬಡಿದುಹಾಕಿ) ಅಂತ ಬಿಹಾರದಿಂದ ಹೊರಟ ಘೋಷಣೆ ಉತ್ತರ ಪ್ರದೇಶದ ದಲಿತರನ್ನ ರೋಮಾಂಚನಕ್ಕೀಡು ಮಾಡಿತ್ತು. "ತಿಲಕ್, ತರಾಜೂ, ತಲವಾರ್... ಇನ್ ಕೋ ಮಾರೋ ಜೂತೆ ಚಾರ್" ಅನ್ನೋ ಘೋಷಣೆ ಉತ್ತರ ಪ್ರದೇಶದ ಮೂಲೆಮೂಲೆಯಲ್ಲಿ ಮೊಳಗಿತು. ತಿಲಕ ಅಂದರೆ ಬ್ರಾಹ್ಮಣ. ತರಾಜೂ ಅಂದರೆ ತಕ್ಕಡಿ. ಅದು ವೈಶ್ಯರ ಪ್ರತೀಕ. ಇನ್ನು ತಲವಾರ್ ಅಂದರೆ ಖಡ್ಗ. ಅದು ಕ್ಷತ್ರಿಯರ ಗುರುತು. ಇವಕ್ಕೆ ಚಪ್ಪಲಿಯಲ್ಲಿ ಹೊಡೆಯಿರಿ ಅನ್ನೋ ಘೋಷಣೆ ಕೂಗಿತು ಬಹುಜನ ಸಮಾಜ ಪಕ್ಷ. ಕಾಂಗ್ರೆಸ್ ಪಾಳೆಯದಿಂದ ದಲಿತ ಮತಗಳು ಒಕ್ಕಲೆದ್ದು ಬಿ.ಎಸ್.ಪಿ ತೆಕ್ಕೆಗೆ ಬಂದವು. ತುತರ್ು ಪರಿಸ್ಥಿತಿ ನಂತರ ಅಡ್ರೆಸ್ಸಿಗಿಲ್ಲದಂತೆ ಆಗಿದ್ದ ಕಾಂಗ್ರೆಸ್ ನಿಧಾನವಾಗಿ ಚಿಗಿತುಕೊಳ್ಳಬೇಕು ಅನ್ನುವಷ್ಟರಲ್ಲಿ ಮೇಲಿಂದ ಮೇಲೆ ಹೊಡೆತ ಬಿದ್ದವು ಅದಕ್ಕೆ. ಬರೀ ದಲಿತ ಪರ ಹೋರಾಟದಿಂದ ಅಧಿಕಾರದ ಗದ್ದುಗೆ ಏರಲು ಸಾಧ್ಯವಿಲ್ಲ ಅನ್ನೋದನ್ನ ಅರ್ಥ ಮಾಡಿಕೊಂಡ ಮಾಯಾವತಿ "ಸೋಷಿಯಲ್ ಎಂಜನಿಯರಿಂಗ್" ಅನ್ನೋ ಪರಿಕಲ್ಪನೆ ತಂದರು. ಬ್ರಾಹ್ಮಣ ದಲಿತರು ಒಂದಾಗಿ ಸಿಂಹಾಸನ ಏರುವ ಕಾನ್ಸೆಪ್ಟ್ ಅದು. "ತಿಲಕ್, ತರಾಜೂ, ತಲವಾರ್... ಇನ್ಕೋ ಮಾರೋ ಜೂತೆ ಚಾರ್" ಅಂದಿದ್ದ ಇದೇ ಮಾಯಾವತಿ "ಪಂಡಿತ್ - ಬ್ರಾಹ್ಮಣ ಶಂಖ್ ಬಜಾಯೇಗಾ... ಹಾಥಿ ಬಢತಾ ಜಾಯೇಗಾ..." (ಪಂಡಿತ ಬ್ರಾಹ್ಮಣರು ಶಂಖ ಬಾರಿಸುತ್ತಿದ್ದರೆ - ಆನೆ ಮುನ್ನಡೆಯುತ್ತದೆ..!) ಅಂದುಬಿಟ್ಟರು..!  "ಹಾಥಿ ನಹೀ ಹೈ ಯೇ ಗಣೇಶ್ ಹೈ... ಬ್ರಹ್ಮ, ವಿಷ್ಣು, ಮಹೇಶ್ ಹೈ" ಅನ್ನೋದು ತಮ್ಮ ಚುನಾವಣಾ ಗುರುತಿನ ಚಿನ್ಹೆ ಆನೆಯ ಜೊತೆ ಬ್ರಾಹ್ಮಣ ಸಮುದಾಯವನ್ನು ಗುರುತಿಸಲು ಮಾಯಾವತಿ ಮಾಡಿದ ಇನ್ನೊಂದು ಘೋಷಣೆ. ಅದು ವಕರ್್ಔಟ್ ಆಯಿತು. ನಂತರ ಮುಸ್ಲಿಂ - ಯಾದವ್ ಫ್ಯಾಕ್ಟರ್ ಇಟ್ಟುಕೊಂಡು ಸಮಾಜವಾದಿ ಪಕ್ಷ ಚುನಾವಣೆ ಗೆದ್ದು ಅಖಿಲೇಶ್ ಯಾದವ್ ಮುಖ್ಯಮಂತ್ರಿ ಆದರು. ಲಖ್ನೋದ ಪುರಾತನ ಕಾಫಿ ಹೌಸ್ನಲ್ಲಿ ಕುಳಿತು ಪಾಲಿಟಿಕಲ್ ಸೈನ್ಸ್ನ ನಿವೃತ್ತ ಪ್ರಾಧ್ಯಾಪಕ ರಮೇಶ್ ದೀಕ್ಷಿತ್ ಇವೆಲ್ಲವನ್ನೂ ವಿವರಿಸುತ್ತಿದ್ದರೆ, ಜಾತಿ ಸಮೀಕರಣಗಳ ಅಧ್ಯಯನಕ್ಕೆ ಉತ್ತರ ಪ್ರದೇಶಕ್ಕಿಂತ ಸೂಕ್ತ ರಾಜ್ಯ ಇನ್ನೊಂದಿಲ್ಲ ಅನ್ನಿಸುತ್ತಿತ್ತು.
                   ಆದರೆ, ಈ ಸಲ ಬಿ.ಜೆ.ಪಿಯ ಸಂಭವನೀಯ ಗೆಲುವಿನಲ್ಲಿ ಜಾತಿ ಹೇಗೆ ಕೆಲಸ ಮಾಡುತ್ತೆ ಅನ್ನೋ ಕುತೂಹಲ ಸಹಜ. ಮೇಲ್ವರ್ಗದ ಹಿಂದೂಗಳೂ ಮತ್ತು ಇತರ ಹಿಂದುಳಿದ ವರ್ಗಗಳ ಮತಗಳು ನಮ್ಮ ಪಾಲಿಗೆ ಇವೆ ಅನ್ನೋ ಉತ್ಸಾಹದಲ್ಲಿ ಕಮಲ ಪಕ್ಷ ಇದೆ. ಇನ್ನು ಈ ಸಲ ಮುಸ್ಲಿಂ ಮತಗಳು ಸಾರಾಸಗಟಾಗಿ ಒಂದು ಪಕ್ಷಕ್ಕೆ ಹೋಗುವುದಿಲ್ಲ. ಬಾಬರಿ ಮಸೀದಿ ವಿಷಯದಲ್ಲಿ ಕಾಂಗ್ರೆಸ್ ಮತ್ತು ಮುಜಫರ್ನಗರ ದಂಗೆ ವಿಷಯದಲ್ಲಿ ಸಮಾಜವಾದಿ ಪಕ್ಷಗಳು ತಮ್ಮ ಬೆನ್ನಿಗೆ ಇರಿದಿವೆ ಅನ್ನೋ ನಂಬಿಕೆ ಮುಸ್ಲಿಮರದು. ಅವರ ಪೈಕಿ ಕೆಲವರು ಬಿ.ಎಸ್.ಪಿ ಕಡೆ ವಾಲಬಹುದಾದರೂ ಬಹುತೇಕರು ತಮ್ಮ - ತಮ್ಮ ಕ್ಷೇತ್ರಗಳಲ್ಲಿ ಬಿ.ಜೆ.ಪಿ ವಿರುದ್ಧ ತೊಡೆ ತಟ್ಟಬಹುದಾದ ಅಭ್ಯರ್ಥಿಯನ್ನು ಬೆಂಬಲಿಸ್ತಾರೆ. ವಾರಾಣಾಸಿಯಲ್ಲಿ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಜೊತೆ ದೊಡ್ಡ ಮಟ್ಟದಲ್ಲಿ ಸ್ಥಳೀಯ ಮುಸ್ಲಿಮರು ಕಾಣಿಸಿಕೊಂಡಿದ್ದು ಇದಕ್ಕೆ ಸಣ್ಣ ಉದಾಹರಣೆ ಅಷ್ಟೇ. ಇನ್ನು ಶಿಯಾ ಸಮುದಾಯದ ಕೆಲವರು ಅಟಲ್ ಬಿಹಾರಿ ವಾಜಪೇಯಿ ಕಾಲದಿಂದಲೂ ಬಿ.ಜೆ.ಪಿ ಬೆಂಬಲಕ್ಕಿದ್ದಾರೆ. ಅದು ಅಪವಾದವೇ ಹೊರತು ನಿಯಮವಲ್ಲ..!
                   ಹಿಂಗಿದೆ ಉತ್ತರ ಪ್ರದೇಶದ ಸಧ್ಯದ ಪರಿಸ್ಥಿತಿ. ಇನ್ನೂ ಸರಳವಾಗಿ ಹೇಳಬೇಕು ಅಂದರೆ, ಇಲ್ಲಿ ಮೇಲ್ವರ್ಗದ ಹಿಂದೂ, ಇತರ ಹಿಂದುಳಿದ ವರ್ಗ, ದಲಿತ ಮತ್ತು ಮುಸ್ಲಿಂ ಅನ್ನೋ ನಾಲ್ಕು ಪ್ರಮುಖ ವರ್ಗಗಳಿವೆ. ಇವುಗಳ ಪೈಕಿ ಎರಡು ವರ್ಗಗಳ ಸಾಲಿಡ್ ಬೆಂಬಲ ಪಡೆದು ಮೂರನೇ ವರ್ಗದ ಮತಬ್ಯಾಂಕ್ನೊಳಕ್ಕೆ ಕೈ ಹಾಕಬಲ್ಲವನಿಗೆ ಗದ್ದುಗೆ ಒಲಿಯುತ್ತದೆ.