Saturday, December 25, 2010

ರಾಜಬೀದಿಯಲ್ಲಿ ಪಟ್ಟದ ಆನೆ ಬಂದಂತೆ..!


ಆಗಷ್ಟೇ ಬಿ.ಎ ಅಡ್ಮಿಷನ್ ಮಾಡಿಸಿದ್ದೆ. ನಮ್ಮಮ್ಮನಿಗೆ ನನಗೊಂದು ಬೈಕ್ ಕೊಡಿಸುವ ಹುರುಪು. ಬೈಕು ಅಂದ ತಕ್ಷಣ ನನ್ನ ಕಣ್ಣ ಮುಂದೆ ಚಿತ್ರವಾಗಿ ಕದಲುತ್ತಿದ್ದವನು ನನ್ನ ಸೋದರ ಮಾವ. ಧಾರವಾಡ ತಾಲೂಕಿನ ಮೂಲೆಯಲ್ಲಿ ಇವತ್ತಿಗೂ ಕುಗ್ರಾಮವಾಗೇ ಇರುವ ಲೋಕೂರು ನಮ್ಮಮ್ಮನ ತವರು. ಆ ಊರಿನಲ್ಲಿ ನನ್ನ ಸೋದರಮಾವ ಯಜಮಾನನಂತಿರುವ ಮನುಷ್ಯ. ಊರವರ ಪಾಲಿಗೆ ಚಂದ್ರಪ್ಪ ಸಾಹುಕಾರ, ನಮ್ಮ ಪಾಲಿಗೆ ಚಂದ್ರೂ ಮಾವ. ಅಚ್ಚ ಬಿಳಿ ಧೋತರ, ನೀಲಿ ಹಾಕಿದ ನೆಹರೂ ಶರ್ಟು, ಎಣ್ಣೆ ಹಾಕಿ ನೀಟಾಗಿ ಕ್ರಾಪು ತೆಗೆದ ಕೂದಲು, ತಿದ್ದಿ ತೀಡಿ ಹುರಿಗೊಳಿಸಿದ ಮೀಸೆ, ಕುರುಚಲು ಗಡ್ಡ. ಕಣ್ಣಿಗೆ ಕಡುಗಪ್ಪು ರೇಬಾನ್ ಗ್ಲಾಸು. ಸಂತೆ ಚೀಲ ಹಿಡಿದ ಆಳು ಮನುಷ್ಯನೊಬ್ಬನನ್ನ ಹಿಂದಿನ ಸೀಟಿನಲ್ಲಿ ಕೂಡಿಸಿಕೊಂಡು, ಇಷ್ಟಗಲದ ಬುಲೆಟ್ ಮೇಲೆ ನಗಾರಿ ಬಾರಿಸಿದಂಥ ಶಬ್ದ ಮಾಡಿಕೊಂಡು ಕಚ್ಚಾ ರಸ್ತೆಯಲ್ಲಿ ಧೂಳೆಬ್ಬಿಸಿಕೊಂಡು ಅವನು ಬರುತ್ತಿದ್ದರೆ, ರಾಜಬೀದಿಯಲ್ಲಿ ಗಜಗಾಂಭೀರ್ಯದಿಂದ ಪಟ್ಟದ ಆನೆ ನಡೆದು ಬಂದಂತೆ ಅನ್ನಿಸ್ತಿತ್ತು. ಚಂದ್ರಪ್ಪ ಸಾಹುಕಾರ್ರು ಬಂದ್ರು ಅಂತ ಇಡೀ ಊರಿಗೆ ಗೊತ್ತಾಗ್ತಿತ್ತು. ಓಣಿಯಲ್ಲಿನ ಹೆಣ್ಣುಮಕ್ಕಳೆಲ್ಲ ತಲೆ ಮೇಲೆ ಸೆರಗು ಹಾಕಿಕೊಳ್ಳೋರು. ಅಂಗಳದಲ್ಯಾರಾದರೂ ಮನೆಯ ಹೆಣ್ಣುಮಕ್ಕಳಿದ್ದರೆ ಬುಲೆಟ್ ಸೌಂಡ್ ಕೇಳಿಯೇ ಒಳಗೆ ಹೋಗಬೇಕು. ಅಲ್ಲೇ ಪಕ್ಕದ ಖಾಲಿ ಜಾಗದಲ್ಲಿ ಆಲೂಗಡ್ಡೆಯ ಮೊಳಕೆ ಬಿಡಿಸುವುದಕ್ಕೋ, ಈರುಳ್ಳಿಯ ಪಾಚಿ ತೆಗೆಯುವುದಕ್ಕೋ ಬಂದಿರ್ತಿದ್ದ ಹೆಣ್ಣಾಳುಗಳು ನಿಟಾರಾಗಿ ಕುಂತು ಜನ್ಮದಲ್ಯಾವತ್ತೂ ಕೆಲಸ ಬಿಟ್ಟು ಮತ್ತೇನೂ ಮಾಡೇ ಇಲ್ಲವೇನೋ ಅನ್ನೋ ಹಾಗೆ ನಾಟಕ ಮಾಡೋರು. ಅಷ್ಟು ಹೊತ್ತಿನ ತನಕ ಕಿರ ಕಿರ ಕಿರುಚಾಡ್ತಿದ್ದ ಮಕ್ಕಳು ಸ್ಥಬ್ಧ. ಮಾವ, ಬುಲೆಟ್ನ ಅಂಗಳದಲ್ಲಿ ನಿಲ್ಲಸಿ ಕೆಳಗಿಳಿದರೆ, ಹಿಂದಿನ ಸೀಟಿನಿಂದ ಇಳಿದು ನಿಂತಿರುತ್ತಿದ್ದ ಆಳುಮಗ ಅದನ್ನ ನಿಧಾನವಾಗಿ ತಳ್ಳಿಕೊಂಡು ಹೋಗಿ ಶೆಡ್ಗೆ ಹಾಕಬೇಕು. ಆತ ಸ್ಟ್ಯಾಂಡ್ ಹಾಕಿ ನಿಲ್ಲಿಸೋತನಕ ಮಾವ ಸುಮ್ಮನೆ ನಿಂತು ನೋಡ್ತಿರ್ತಿದ್ದ. ಬೀಜಕ್ಕೆ ಬಿಟ್ಟ ಕೋಣದಂತಿದ್ದ ಆ ಬೈಕನ್ನ ಜೋಲಿ ಹೋಗದಂತೆ ಶೆಡ್ಡಿನತನಕ ಎಳೆದೊಯ್ದು ಸರಿಯಾಗಿ ಸ್ಟ್ಯಾಂಡ್ ಹಾಕೋವರೆಗೆ ಆತನ ಎದೆತುಂಬ ನಗಾರಿ. ಅದನ್ನ ನಿಲ್ಲಿಸಿ, ಅಲ್ಲಾಡಿಸಿ ನೋಡಿ, ಮಕ್ಕಳು ಆಟ ಆಡೋವಾಗ ಒಂದು ಕಡೆ ಹತ್ತಿನಿಂತರೂ ಬೀಳುವುದಿಲ್ಲ ಅಂತ ಖಚಿತ ಪಡಿಸಿಕೊಂಡ ಮೇಲೆ "ಹೆಂಗೆ?" ಅನ್ನುವವರಂತೆ ಮಾವನ ಕಡೆ ನೋಡುತ್ತಿದ್ದ. ಚಂದ್ರಪ್ಪ ಮಾವನ ಮುಖದಲ್ಲಿ ಆಗ ಮೆಚ್ಚುಗೆ ಇರ್ತಿತ್ತೋ, ತನ್ನ ಬೈಕನ್ನ ಬೀಳಿಸದಂತೆ ಒಯ್ದು ನಿಲ್ಲಿಸಿ, ಬೈಯ್ಯುವ ಮತ್ತೊಂದು ಅವಕಾಶ ತಪ್ಪಿಸಿದ ಆತನ ಬಗ್ಗೆ ಅಸಹನೆ ಇರ್ತಿತ್ತೋ ಈಗ ಸರಿಯಾಗಿ ನೆನಪಿಲ್ಲ. ಒಟ್ಟಿನಲ್ಲಿ ಆ ಕಡೆ ಬುಲೆಟ್ ಶೆಡ್ನೊಳಕ್ಕೆ ಸೇರ್ತಿದ್ದಂತೆಯೇ ಈ ಕಡೆ ಅತ್ತೆ ತಾಮ್ರದ ತಂಬಿಗೆಯಲ್ಲಿ ನೀರು ಹಿಡಿದು ನಿಂತಿರ್ತಿದ್ದಳು.

                                    ಪಕ್ಕದಲ್ಲೇ ಇರೋ ಗರಗದ ದಿಂಡಲಕೊಪ್ಪ ಸಾಹುಕಾರ ಮನೆ ಮಗಳು ಆಕೆ. ಆಕೆಗಿಂತ ಕೆಂಪಗಿರೋ ಇನ್ನೊಬ್ಬ ಹೆಣ್ಣುಮಗಳನ್ನ ನೋಡಿದ ನೆನಪು ನನಗಿಲ್ಲ. ತನಗಿಂತ ಕೆಂಪಗಿನ ಕುಂಕುಮವನ್ನ ಕಾಸಗಲ ಹಚ್ಚಿಕೊಂಡಿರ್ತಿದ್ದಳು. ಜನ್ಮದಲ್ಯಾವತ್ತಾದರೂ ಮಾವನ ಮುಖವನ್ನ ತಲೆಯೆತ್ತಿ ನೋಡಿದ್ದಳೋ ಇಲ್ಲವೋ. ಆಕೆಯ ಕೈಯಿಂದ ಒಂದೇ ಒಂದು ಮಾತಾಡದೇ ತಂಬಿಗೆ ಇಸಿದುಕೊಂಡು ಕಾಲಿಗೆ ನೀರು ಚೆಲ್ಲಿಕೊಳ್ತಿದ್ದ ಮಾವ, ಹಂಗೇ ಹೆಣ್ಣಾಳುಗಳು ಎಷ್ಟು ಕೆಲಸ ಮಾಡಿದ್ದಾರೆ ಅಂತ ಕಣ್ಣಲ್ಲೇ ಒಂದು ಅಂದಾಜು ಮಾಡ್ತಿದ್ದ. ಕಾಲು ತೊಳೆದುಕೊಂಡ ಆತ ಧೋತರ ಚಿಮ್ಮಿಕೊಂಡು ಮೊಳಕಾಲೆತ್ತರದ ಹೊಸ್ತಿಲು ದಾಟಿಕೊಂಡು ಮನೆಯೊಳಕ್ಕೆ ಹೋಗ್ತಿದ್ರೆ, ಖಾಲಿ ತಂಬಿಗೆ ಹೊಡಿದುಕೊಂಡ ಅತ್ತೆ ತಲೆ ತಗ್ಗಿಸಿಕೊಂಡು ಹಿಂಬಾಲಿಸ್ತಿದ್ದಳು. ನಂತರ, ಕೆಲಸ ಮಾಡ್ತಿದ್ದ ಹೆಣ್ಣುಮಕ್ಕಳು ಪಿಸು ಪಿಸು ಮಾತಾಡೋದರಿಂದ ಶುರುವಾಗಿ, ಮಕ್ಕಳು ಮತ್ತೆ ಕಳ್ಳ ಹೆಜ್ಜೆ ಇಟ್ಟುಕೊಂಡು ಅಂಗಳಕ್ಕೆ ಬರೋದರ ಮೂಲಕ ವಾತಾವರಣ ಯಥಾಸ್ಥಿತಿಗೆ ಬರುತ್ತಿತ್ತು.
                   ಪ್ರತಿ ವರ್ಷ ಮಹಾನವಮಿ ಜಾತ್ರೆಗೆ ಅಂತ ಹತ್ತು ಹನ್ನೆರಡು ದಿನ ಲೋಕೂರಿಗೆ ಊರಿಗೆ ಹೋಗ್ತಿದ್ದ ನಾನು, ಚಂದ್ರಪ್ಪ ಮಾವನ ಈ ಪುರ ಪ್ರವೇಶದ ವೈಭವವನ್ನ ಕಣ್ಣರಳಿಸಿಕೊಂಡು ನೋಡ್ತಿದ್ದೆ. ನನ್ನ ಸೋದರಮಾವನ ಮಕ್ಕಳಿಗೂ, ಅತ್ತೆಯ ತವರು ಮನೆಯಿಂದ ಜಾತ್ರೆಗೆ ಬಂದಿರ್ತಿದ್ದ ಇತರ ಮಕ್ಕಳಿಗೂ ನನ್ನ ಬಗ್ಗೆ ಭಯ ಮತ್ತು ಗೌರವ ಬಂದದ್ದೇ ಆ ಕಾರಣಕ್ಕೆ..! ಮಾವನ ಬುಲೆಟ್ ಶಬ್ದ ಕಿವಿಗೆ ಬೀಳ್ತಿದ್ದಂತೆಯೇ ಅವರೆಲ್ಲ ಆಡ್ತಿದ್ದ ಆಟಗಳನ್ನೆಲ್ಲ ಅಷ್ಟಷ್ಟಕ್ಕೇ ಬಿಟ್ಟು ಪೇರಿ ಕೀಳೋರು. ಅದಕ್ಕೆ ನಿರ್ದಿಷ್ಟ ಕಾರಣ ಏನು ಅನ್ನೋದು ನನಗೆ ಇವತ್ತಿಗೂ ಗೊತ್ತಿಲ್ಲ. ಬಹುಶಃ ಅವರು ಮನೆಯ ಹೆಣ್ಣುಮಕ್ಕಳು ಮಾವನ ಆಗಮನಕ್ಕೆ ಪ್ರತಿಕ್ರಿಯಿಸುತ್ತಿದ್ದ ರೀತಿಯನ್ನ ಅನುಕರಣೆ ಮಾಡ್ತಿದ್ದರೋ ಏನೋ. ಒಟ್ಟಿನಲ್ಲಿ ಅಂಗಳದಲ್ಲಿ ಬುಲೆಟ್ ಬಂದು ನಿಂತಾಗ ಮಕ್ಕಳ್ಯಾರೂ ಇರ್ತಿರಲಿಲ್ಲ. ನಾನು ಮಾತ್ರ ಛಾವಣಿಯ ಕಂಭಕ್ಕೆ ಒಂದು ಕಾಲು ಸುತ್ತಿಕೊಂಡು ನಿಂತು ನೋಡ್ತಿದ್ದೆ. ನನ್ನನ್ನ ನೋಡಿಯೂ ನೋಡದವನಂತೆ ಒಳಗೆ ಹೋಗಿ ಕಂಬಳಿಯ ಮೇಲೆ ಕೂಡ್ತಿದ್ದಂತೆಯೇ ಆತನ ಹಿಂದೆಯೇ ಹೋಗಿ ನಾನೂ ಕೂಡ್ತಿದ್ದೆ. ಉಳಿದ ಮಕ್ಕಳ್ಯಾರಾದ್ರೂ ಕಾಡಿಸಿದರಾ ಅನ್ನೋ ಅರ್ಥದ ಪ್ರಶ್ನೆ ಕೇಳ್ತಿದ್ದ ಮಾವ. ಊಹ್ಞೂಂ, ನನ್ನನ್ನ ಕಾಡಿಸುವ ಧೈರ್ಯ ಆ ಮನೆಯ ಯಾವ ಹುಡುಗನಿಗೂ ಇರಲಿಲ್ಲ. ಯಾಕಂದ್ರೆ, ನಾನು ಮಾವ ಬಂದಾಗ ಹೆದರಿ ಓಡಿ ಹೋಗ್ತಿರಲಿಲ್ಲ. ಆತನ ಜೊತೆಗೆ ಆತ ಕುಳಿತ ಕಂಬಳಿಯ ಮೇಲೇ ಕುಳಿತುಕೊಳ್ತಿದ್ದೆ. ಮಾವ ಪರಾತದಂಥ ತಟ್ಟೆಯಿಟ್ಟುಕೊಂಡು ಊಟಕ್ಕೆ ಕುಳಿತಾಗ ನನ್ನನ್ನೂ ಜೊತೆಗೆ ಕೂಡಿಸಿಕೊಂಡು ಅದೇ ತಟ್ಟೆಯಲ್ಲಿ ಊಟ ಮಾಡಿಸ್ತಿದ್ದ.
                   ಎಷ್ಟು ಪ್ರೀತಿ ಚಂದ್ರೂ ಮಾವನಿಗೆ ನನ್ನ ಮೇಲೆ..? ಬಹುಶಃ ಅದಕ್ಕೆ ಕಾರಣ ಅಮ್ಮ. ಆ ಮನೆತನದಲ್ಲಿ ಯಶಸ್ವಿಯಾಗಿ ಪ್ರೈಮರಿ ಸ್ಕೂಲು ಮುಗಿಸಿದ ಮೊಟ್ಟಮೊದಲ ಹೆಣ್ಣುಮಗಳು ಆಕೆ. ನಂತರ ಹೈಸ್ಕೂಲಿಗೆ ಹೋದಳು. ಎಸೆಸೆಲ್ಸಿ ಪಾಸು ಮಾಡುವ ಮೂಲಕ ಮಾವನ ದಾಖಲೆ ಮುರಿದುಬಿಟ್ಟಳು. ಆಮೇಲೆ ಧಾರವಾಡದ ಕೆ.ಸಿ.ಡಿ ಕಾಲೇಜಿನ ಹಾಸ್ಟೆಲ್ನಲ್ಲಿದ್ದುಕೊಂಡು ಪಿ.ಯು.ಸಿ ಮುಗಿಸಿದ್ಲು. ಅದಕ್ಕಿಂತ ಹೆಚ್ಚಿಗೆ ಓದಿಸುವುದು ಬೇಡ ಅಂತ ಆ ಮನೆಯಲ್ಲಿ ಯಾರಿಗೆ ಅನ್ನಿಸಿತೋ ಏನೋ, ನಮ್ಮಪ್ಪನಿಗೆ ಗಂಟು ಹಾಕಿಬಿಟ್ಟರು. ಆ ಮನೆಯಲ್ಲಿ ಕಾಲೇಜು ಮೆಟ್ಟಿಲು ಹತ್ತಿದ ಕೀರ್ತಿ ಮಾತ್ರ ಅಮ್ಮನ ಹೆಸರಿನಲ್ಲೇ ಉಳಿದಿತ್ತು. ಬಹುಶಃ ಆ ಕಾರಣಕ್ಕಾಗಿ ತವರಿನಲ್ಲಿ ಎಲ್ಲರಿಗೂ ಅಮ್ಮ ಅಂದರೆ ಎಲ್ಲಿಲ್ಲದ ಪ್ರೀತಿ. ಚಂದ್ರಪ್ಪ ಮಾವ ಮನಸು ಬಿಚ್ಚಿ ನಕ್ಕ ನೆನಪು ನನಗಂತೂ ಇಲ್ಲ. ಮನೆಯ ಹೆಣ್ಣುಮಕ್ಕಳು ತನ್ನೆದುರಿಗೆ ನಿಂತು ಮುಖಕ್ಕೆ ಮುಖ ಕೊಟ್ಟು ಮಾತಾಡೋದೇ ಮಹಾಪರಾಧ ಅನ್ನೋಹಂಗಾಡ್ತಿದ್ದ. ಅಮ್ಮನ ಮಾತು ಮಾತ್ರ ಮೀರುತ್ತಿರಲಿಲ್ಲ. ಅಜ್ಜನ್ನ ಬಿಟ್ರೆ, ಆ ಮನೆಯಲ್ಲಿ ಆತನ ಮೇಲೆ ಸಿಟ್ಟು ಮಾಡಿಕೊಳ್ಳುವ, ಬೈಯ್ಯುವ ಅಧಿಕಾರ ಮತ್ತು ಧೈರ್ಯ ಇದ್ದದ್ದು ಅಮ್ಮನಿಗಷ್ಟೇ. ಅಂಥ ಪ್ರೀತಿಯ ತಂಗಿಯ ಮಗ ನಾನು ಅನ್ನೋ ಕಾರಣಕ್ಕೋ, ಧಾರವಾಡದ ಶಾಲೆಯಲ್ಲಿ ಫಸ್ಟ್ ಬರ್ತೀನಿ ಅನ್ನೋ ಕಾರಣಕ್ಕೋ, ಉಳಿದ ಮಕ್ಕಳಂತೆ ಹಳ್ಳದಲ್ಲಿ ಈಜೋದು, ಮರ ಹತ್ತೋದೆಲ್ಲ ಮಾಡೋದಿಲ್ಲ ಅನ್ನೋ ಕಾರಣಕ್ಕೋ ಏನೋ, ಮಾವನಿಗೆ ನನ್ನ ಮೇಲೆ ವಿಪರೀತ ಪ್ರೀತಿ. ಅದರ ದುರುಪಯೋಗ ಪಡಿಸಿಕೊಂಡ ನಾನು ಆತನಿಗೆ ಆದಷ್ಟೂ ಹತ್ತಿರ ಇರುವ ಮೂಲಕ, ನನ್ನನ್ನ ಮರಕೋತಿ ಆಟಕ್ಕೆ ಸೇರಿಸಿಕೊಳ್ಳದ ಓರಗೆಯ ಹುಡುಗರ ಮೇಲೆ ಸೇಡು ತೀರಿಸಿಕೊಂಡ ಸಮಾಧಾನ ಪಡ್ತಿದ್ದೆ. ಅವರೆಲ್ಲ ಬುಲೆಟ್ ಹತ್ತಿರ ಸುಳಿದಾಡಿದರೂ ರೇಗ್ತಿದ್ದ ಚಂದ್ರಪ್ಪಮಾವ, ನಾನು ಅದರ ಫೂಟ್ ರೆಸ್ಟ್ ಮೇಲೆ ಹತ್ತಿನಿಂತರೂ ಸುಮ್ಮನಿರ್ತಿದ್ದ. ಆತ ನೋಡ್ತಿಲ್ಲ ಅನ್ನೋದನ್ನ ಖಚಿತ ಪಡಿಸಿಕೊಂಡ ಮೇಲೆ, ಒಂದೊಂದು ಸಲ ಅದರ ಕಿಕ್ ಪೆಡಲ್ ಮೇಲೆ ಎರಡೂ ಕಾಲಿಟ್ಟು ನಿಲ್ತಿದ್ದೆ. ಮಾವನ ಬಲಗಾಲಿನ ಒಂದೇ ಒದೆತಕ್ಕೆ, ಭಡಭಡನೆ ಶುರುವಾಗ್ತಿತ್ತು ಮಗಂದು. ನಾನು ಹತ್ತಿ ನಿಂತು ಪೂರ್ತಿ ಭಾರ ಹಾಕಿದರೂ, ಕಿಕ್ ಪೆಡಲು ಕೆಳಗೆ ಕೂಡ ಇಳೀತಿರಲಿಲ್ಲ. ಮುಂದಿನ ಮಡ್ ಗಾರ್ಡ್ ಮೇಲಿನ ಎತ್ತಿನ ಆಕೃತಿ, ಇಷ್ಟಗಲ ಬಂಪರ್ರು, ಹ್ಯಾಂಡಲ್ಲಿನ ಎರಡೂ ಕಡೆ ಜೋತು ಬಿದ್ದ ರಿಬ್ಬನ್ನು, ಲಾರಿಗಳಿಗೆ ಹಾಕ್ತಿದ್ದಂಥ ಹಾರ್ನು, ಸೂಟ್ಕೇಸ್ ಸೈಜಿನ ಸೈಡ್ ಬಾಕ್ಸು, ಹಿಂದೆ ಮ್ಯಾಟ್ ಮೇಲಿದ್ದ ಹುಲಿ ಮುಖದ ಚಿತ್ರ, ಒಟ್ಟಿನಲ್ಲಿ ಚಂದ್ರೂ ಮಾವನ ಆ ಬೈಕಿನ ಚಿತ್ರ ಮನಸಿನಲ್ಲಿ ಹಂಗ್ಹಂಗೇ ಉಳಿದುಬಿಟ್ಟಿತ್ತು. ಆವತ್ತಿನಿಂದಲೂ ಯಾಕೋ ಬುಲೆಟ್ಟು ಅಂದ್ರೆ ಕಣ್ಣು ಇಷ್ಟಗಲ ಆಗ್ತಿದ್ವು.
                   ಅಲ್ಲಿಂದ ನಮ್ಮೂರಿಗೆ ವಾಪಸ್ ಬಂದ್ರೆ, ಇಲ್ಲಿ ಶಂಕರಗೌಡ ಪಾಟೀಲರದೂ ಒಂದು ಬುಲೆಟ್ ಇತ್ತು. ಅದರದೂ ಥೇಟ್ ಮಾವನ ಬುಲೆಟ್ನಂಥದ್ದೇ ಬಣ್ಣ, ಅದೇ ನಗಾರಿ ಶಬ್ದ. ಆದರೆ, ಶಂಕರಗೌಡರಿಗೆ ನಮ್ಮ ಮಾವನಂಥ ಖದರು ಇರಲಿಲ್ಲ. ಆತ ಬುಲೆಟ್ ಹತ್ತಿಕೊಂಡು ಬಂದರೆ ನನಗೆ ಚಂದ್ರೂ ಮಾವನ ನೆನಪಾಗ್ತಿತ್ತೇ ಹೊರತು ಮತ್ತೇನೂ ಅಲ್ಲ.
                   ಅಂಥದ್ದರಲ್ಲಿ, ಕಾಲೇಜಿಗೆ ಹೊರಟುನಿಂತ ನನಗೊಂದು ಬೈಕ್ ತೆಗೆಸಿಕೊಡಬೇಕು ಅಂತ ಅಮ್ಮ ಯೋಚಿಸಿದಾಗ, ತಲೆ ತುಂಬ ಫಡ ಫಡ ಶಬ್ದ. ಆವತ್ತು ನಾನು - ಅಪ್ಪ ಒಟ್ಟೊಟ್ಟಿಗೇ ಊಟಕ್ಕೆ ಕುಳಿತಿದ್ವಿ. ಅಮ್ಮ ಬಡಿಸ್ತಿದ್ದಳು. "ಬುಲೆಟ್ ತಗೋತೀನಿ" ಅಂತ ಒಂದ್ ಮಾತು ಅಂದೆ. ಅಮ್ಮ ಕಣ್ಣಲ್ಲಿ ಸಾವಿರ ನಕ್ಷತ್ರ. ತನ್ನ ಅಣ್ಣ ಆ ದೈತ್ಯ ಬೈಕ್ ಹತ್ತಿಕೊಂಡು ಓಡಾಡ್ತಿದ್ದದ್ದನ್ನ ನನಗಿಂತ ಜಾಸ್ತಿ ನೋಡಿದ್ದವಳು ಆಕೆ. ಈಗ ಮಗನೂ ಅದೇ ಗಾಡಿ ಬೇಕು ಅಂದಾಗ, ಅದು ತನ್ನ ತವರಿಗೆ ಸಂದ ಗೌರವ ಅಂದುಕೊಂಡು ಆನಂದ ತುಂದಿಲಳಾದಳು. ಆಕೆಗೆ ಮೈಲೇಜು, ಮೇಂಟೇನೆನ್ಸು ಎಲ್ಲ ಅರ್ಥ ಆಗೋದಿಲ್ಲ. ಆದರೆ ಪಕ್ಕದಲ್ಲಿ ಕುಂತಿದ್ದ ಅಪ್ಪ ಮಾತ್ರ, "ತಲೀ ಕೆಟ್ಟೈತೇನು" ಅಂದು ಊಟ ಮುಗಿಸಿ ಮೇಲೆದ್ದ. ನನ್ನ ಸೋದರ ಮಾವನ ಬಗ್ಗೆ ಹೇಳಿದೆನಲ್ಲ ಇಷ್ಟು ಹೊತ್ತು..? ಆ ಪಾತ್ರಕ್ಕೆ ತದ್ವಿರುದ್ಧವಾದ ಕ್ಯಾರೆಕ್ಟರು ನಮ್ಮಪ್ಪಂದು. ದೊಡ್ಡ ನಗು, ಮಕ್ಕಳ ಮೇಲೆ ಮುದ್ದು ಬಂದರೆ ಹೆಗಲ ಮೇಲೆ ಹಾಕಿಕೊಂಡು ಕಚಕುಳಿ ಇಡುವ ಮೋಜು, ಸ್ವಲ್ಪ ದೊಡ್ಡವರಾದರೆ ಹೆಗಲ ಮೇಲೆ ಕೈ ಹಾಕಿಕೊಂಡೇ ಮಾತು. ಸೀರಿಯಸ್ನೆಸ್ಸು ಅನ್ನೋ ಶಬ್ದ ಅಕ್ಕ-ಪಕ್ಕ ಸಹಿತ ಸುಳಿದಾಡಿಲ್ಲ. ಸ್ವಭಾವತಃ ಪುಣ್ಯಕೋಟಿ, ಹಟಕ್ಕೆ ಬಿದ್ದರೆ ವಿಶ್ವಾಮಿತ್ರ. ಅಂಥ ಅಪ್ಪ, ನಾನು ಬುಲೆಟ್ ತಗೋತೀನಿ ಅಂದಾಗ ಸಿಟ್ಟಿಗೆದ್ದುಬಿಟ್ಟ. "ತಗೊಳ್ಳೋದಾದ್ರೆ ಹೀರೊ ಹೊಂಡಾ ಸಿ.ಡಿ ಹಂಡ್ರೆಡ್ ತಗೋ, ಬುಲೆಟ್ ಎಲ್ಲಾ ಬ್ಯಾಡ" ಅನ್ನೋದು ಫರ್ಮಾನು. ಹಿರಿ ತಂಗಿಯ ಬೆಂಬಲ ನನ್ನ ಕಡೆಗೇ ಇತ್ತಾದರೂ, ಅದರಿಂದ ಹೆಚ್ಚಿನ ಪ್ರಯೋಜನ ಆಗುವ ಲಕ್ಷಣಗಳಿರಲಿಲ್ಲ. ಇನ್ನು ಚಿಕ್ಕವಳು. ಆಕೆಯ ಮಾತನ್ನ ಅಪ್ಪ ಕೇಳ್ತಿದ್ದ. ಆದರೆ, ಆಕೆಗೆ ನಾನು ಟ್ರೆಂಡಿಯಾಗಿರೋ ಹೊಸದ್ಯಾವುದಾದರೂ ಬೈಕು ಹತ್ತಬೇಕು ಅನ್ನೋ ಆಸೆ. ಅಪ್ಪ ಬುಲೆಟ್ ಬೇಡ ಅಂದಾಗಲೆಲ್ಲ ಎದುರುತ್ತರ ಕೊಡದ ನಾನು, ಅಮ್ಮನ ಕಡೆ ಕಣ್ಣೀರು ತುಂಬಿಕೊಂಡು ನೋಡ್ತಿದ್ದೆ. "ಎಲ್ಯಾದ್ರೂ ಇದ್ರ ಹುಡುಕು, ನಿಮ್ಮಪ್ಪಂಗ್ ನಾನು ಹೇಳ್ತೇನಿ" ಅಂತ ಅಮ್ಮ ಗುಟ್ಟಾಗಿ ಮಾತು ಕೊಟ್ಟಳು. ಅಷ್ಟೊತ್ತಿಗಾಗಲೇ ನಾನು ಒಂದು ಬುಲೆಟ್ನ ನೋಡಿ ರೇಟ್ ಕೂಡ ಫಿಕ್ಸ್ ಮಾಡಿ, ನೂರೊಂದು ರುಪಾಯಿ ಅಡ್ವಾನ್ಸ್ ಕೂಡ ಕೊಟ್ಟು ಬಂದಿದ್ದೆ ಅನ್ನೋದು ಆಕೆಗಾದ್ರೂ ಎಲ್ಲಿ ಗೊತ್ತಿತ್ತು..?
                    ಧಾರವಾಡ ದಾಟಿ ಬೆಳಗಾವಿ ಕಡೆ ಹೈವೇದಲ್ಲಿ ಒಂದಿಪ್ಪತ್ ಕಿಲೋಮೀಟರ್ ಹೋದ್ರೆ ಕೋಟೂರು ಅಂತ ಊರು ಸಿಗತ್ತೆ. ಅಲ್ಲಿ ಮುಲ್ಲಾ ಢಾಬಾ ಅಂತ ಕರೆಸಿಕೊಳ್ಳೋ ಒಂದು ಢಾಬಾ. ಐದು ರುಪಾಯಿಗೆ ಮೊರದಗಲ ತಂದೂರಿ ರೋಟಿ, ಹತ್ತು ರೂಪಾಯಿಗೆ ಹೆಸರುಬೇಳೆಯ ದಾಲ್ ಸಿಗ್ತಿದ್ದ ಆ ಢಾಬಾ, ಲಾರಿ ಡ್ರೈವರ್ಗಳ ಪಾಲಿಗೆ ಅಗ್ಗದ ಅನ್ನಪೂರ್ಣೆ. ಅದರ ಮಾಲೀಕ ತುಂಬ ಪ್ರೀತಿಯಿಂದ ಒಂದು ಬುಲೆಟ್ ಇಟ್ಟುಕೊಂಡಿದ್ದ. 1973 ಮಾಡೆಲ್ಲಿನ ಹಳೇ ಗಾಡಿ ಅದು. MEW 2030. ಅದಕ್ಕೆ  Army green ಬಣ್ಣ ಹೊಡೆಸಿ ಮಿರ ಮಿರ ಮಿಂಚೋಹಂಗೆ ತಯಾರು ಮಾಡಿದ್ದ ಮುಲ್ಲಾ ಢಾಬಾದ ಮಾಲೀಕ. ಅದೇ ಟೈಮಿಗೆ ಏನೋ ಹಣದ ಅಡಚಣೆ ಬಂದು ಆತ ಬುಲೆಟ್ ಮಾರುವ ನಿರ್ಧಾರಕ್ಕೆ ಬಂದಿದ್ದ. ಆ ಸುದ್ದಿ ನನಗೆ ತಲುಪಿ, ಹೋಗಿ ನೋಡಿದಾಗ ಢಾಬಾದ ಅಂಗಳದಲ್ಲಿ ಸೈಡ್ ಸ್ಟ್ಯಾಂಡ್ ಹಾಕಿದ್ದ ಬುಲೆಟ್ ಸ್ವಲ್ಪ ಎಡಗಡೆ ಒರಗಿ ಬಲಗಡೆ ಮುಖ ತಿರುಗಿಸಿಕೊಂಡು ನಿಂತಿತ್ತು. ಹಾ... ಅದು Love at first sight . ಆಗತಾನೇ ಸವಾರಿ ಮಾಡಿ ತಂದಿದ್ದ ಕಾಥೇವಾಡದ ಕುದುರೆಯನ್ನ ಅಂಗಳದಲ್ಲಿ ಕಟ್ಟಿ ಮನೆಯ ಯಜಮಾನ ಒಳಗೆ ಹೋಗಿದ್ದಾನೇನೋ ಅನ್ನೋಹಂಗಿತ್ತು...
                  ಆಗಿನ್ನೂ ನಿಧಾನಕ್ಕೆ ಮುಖದ ಮೇಲೆ ಮೀಸೆ ಮೊಳಕೆಯೊಡೀತಿದ್ದ ಹುಡುಗ ನಾನು. ಇವನೇನು ಬುಲೆಟ್ ತಗೋತಾನೆ ಅನ್ನೋ ಹಂಗೆ ನನ್ನ ನೋಡಿದ ಅದರ ಮಾಲೀಕ. ನಾನು, ಚಂದ್ರಪ್ಪ ಮಾವನ ಪರಿಚಯ ಹೇಳಿ ಅವರ ಸ್ವಂತ ಸೋದರಳಿಯ ಅಂದೆ. ಆಗ ಅವನಿಗೆ ನಂಬಿಕೆ ಬಂತು. ಆದರೆ, ಪುಣ್ಯಾತ್ಮ ಏನು ಮಾಡಿದರೂ ರೇಟು ಹೇಳ್ತಿಲ್ಲ. ಕೊನೆಗೆ ನಾನೇ, "ಹದಿನೆಂಟು ಸಾವಿರ ಕೊಡ್ತೀನಿ" ಅಂದೆ. "ಆಯ್ತು, ಸರಿಯಾಗಿ ನೋಡ್ಕೊಳ್ಳೂಹಂಗಿದ್ರೆ ತಗೊಂಡ್ಹೋಗ್ರಿ" ಅಂದ. ಮನೆಗೆ ಬಂದ ನಂತರ ಅಮ್ಮನೇ ಅಷ್ಟೂ ದುಡ್ಡು ಎಣೆಸಿಕೊಟ್ಟಳು. ಅದನ್ನ ತಗೊಂಡ್ಹೋಗಿ ಆತನಿಗೆ ಕೊಟ್ಟೆ. ಜಾತಿಯಿಂದ ಮುಸ್ಲಿಮನಾದ ಆತ, ಬುಲೆಟ್ನ ಸ್ವಚ್ಛವಾಗಿ ತೊಳೆದು ಅಪ್ಪಟ ಹಿಂದೂಗಳಂತೆ ಪೂಜೆ ಮಾಡಿದ. ನನ್ನ ಕೈಗೆ ಕೀ ಕೊಟ್ಟವನ ಕಣ್ಣುಗಳಲ್ಲಿ ನೀರಿದ್ದವು. ಢಾಬಾದ ಕೆಲಸದವರೆಲ್ಲ ಬಂದು ಬಾಗಿಲಿಗೆ ಬಂದು ನಿಂತಿದ್ದರು. ನಾನು ಫಡ ಫಢಾ ಅಂತ ಸ್ಟಾರ್ಟ್ ಮಾಡಿಕೊಂಡು ಹೊರಟರೆ, ಹೈವೇದಲ್ಲಿ ಮರೆಯಾಗುವ ತನಕ ಅವರೆಲ್ಲ ಅಲ್ಲೇ ನಿಂತು ನೋಡ್ತಿದ್ರು.
                 ಈ ಕಡೆ ನಿಟಾರಾಗಿ ಕುಳಿತುಕೊಂಡು ವಿನಾಕಾರಣ ಆಕ್ಸಿಲರೇಟರ್ ಕೊಡ್ತಾ ನಾನು ಗತ್ತಿನಿಂದ ಊರೋಳಕ್ಕೆ ಬುಲೆಟ್ ಹತ್ತಿಕೊಂಡು ಬರ್ತಿದ್ರೆ, ಯಾವ ಹೆಣ್ಣುಮಕ್ಕಳೂ ತಲೆ ಮೇಲೆ ಸೆರಗು ಹಾಕಿಕೊಳ್ಳಲಿಲ್ಲ, ಮಕ್ಕಳು ಆಟ ಆಡೋದು ಬಿಟ್ಟು ಓಡಿಹೋಗಲಿಲ್ಲ. ಶಂಕರಗೌಡ್ರು ಬಂದ್ರು ಅಂತ ತಿರುಗಿ ನೋಡಿದವರಿಗೆ, ಬಂದವನು ನಾನು ಅನ್ನೋದು ಗೊತ್ತಾಗಿ ಆಶ್ಚರ್ಯ. ಮನೆ ತಲುಪುವಷ್ಟರಲ್ಲಿ ಐದಾರು stop ಗಳಾದವು. ಶಂಕರಗೌಡರಿಗೆ ಆಗದವರಂತೂ ನಾನೇನೋ ಮಹಾನ್ ಸಾಧನೆ ಮಾಡಿದ್ದೀನೇನೋ ಅನ್ನೋ ಹಾಗೆ ಬಂದು ಬೆನ್ನು ತಟ್ಟಿದರು. ಅವರಲ್ಲಿ ಎಂಟ್ಹತ್ತು ಜನ ಮನೆತನಕ ನಡೆದು ಬಂದರು. ಅಲ್ಲಿ ಅಮ್ಮ, ತಂಗಿಯರಿಬ್ಬರೂ ಪೂಜೆಗೆ ತಯಾರಾಗಿದ್ರು. ನನಗೂ ಬೈಕಿಗೂ ಒಟ್ಟೊಟ್ಟಿಗೇ ದೃಷ್ಟಿತೆಗೆದು, ಬಂದವರಿಗೆಲ್ಲ ಪ್ರಸಾದ ಕೊಡ್ತಿದ್ರೆ ಅಪ್ಪ ಗಾಡಿ ಹೆಂಗಿದೆ ಅಂತ ನೋಡೋದಕ್ಕೂ ಎದ್ದು ಬರಲಿಲ್ಲ.
                ಮುಂದೆ ಏನೇನೋ ಆಯಿತು. ಅಲ್ಲೀತನಕ ನನ್ನೊಂದಿಗೆ ಸಹಜವಾಗೇ ಮಾತಾಡ್ತಿದ್ದ ಶಂಕರಗೌಡರು ನಾನು ಬುಲೆಟ್ ತಗೊಂಡ ಮೇಲೆ ಮಾತು ಬಿಟ್ಟರು. ನಂತರ, "ಚಡ್ಡಿ ಹಾಕ್ಕೋಳೋದಕ್ಕೆ ಬರದವರೆಲ್ಲ ಬುಲೆಟ್ ಹತ್ತೋಹಂಗಾದ್ರೆ, ಅದರ ಕಿಮ್ಮತ್ತೇನು" ಅಂತ ತಮ್ಮ ಬುಲೆಟ್ ಮಾರಿದ್ರು. ನಾನು ಮಾತ್ರ, debate compitition ಗಳಲ್ಲಿ ಗೆದ್ದ ದುಡ್ಡಿನಲ್ಲಿ ಪೆಟ್ರೋಲ್ ತುಂಬಿಸಿ, ಆ ಕುದುರೆಯಂಥಾ ಬೈಕಿನ ಬೆನ್ನ ಮೇಲೆ ಕುಂತು ಕಾಡು ಮೇಡು, ಗವಿ ಗಂವ್ಹರ ಎಲ್ಲ ಅಲೆದೆ. ಬೆಂಗಳೂರಿನಲ್ಲಿ ಕೆಲಸ ಅಂತ ಸಿಕ್ಕ ಮೇಲೆ ಅದನ್ನ ರೈಲಿಗೆ ತುಂಬಿಕೊಂಡು ಇಲ್ಲಿಗೆ ತಂದೆ. ಮತ್ತೆ ಬಣ್ಣ ಬಳಿಸಿ, ಸಿಂಗಾರ ಮಾಡಿದೆ.
                 ಆ ಕಡೆ ಸೋದರ ಮಾವ. ಆತನ ಬಗ್ಗೆ ಬರೆಯೋದಕ್ಕೆ ನಿಜಕ್ಕೂ ಬೇಜಾರಾಗತ್ತೆ. ಕಾರಣವಲ್ಲದ ಕಾರಣಕ್ಕೆ ಒಂದು ಕೊಲೆ ಮಾಡಿದ. ಅದೇ ಬುಲೆಟ್ ಹತ್ತಿಕೊಂಡು, ಹಿಂದಿನ ಸೀಟಿನಲ್ಲಿ ಅದೇ ಆಳುಮಗನನ್ನ ಕೂಡಿಸಿಕೊಂಡು ಗರಗ ಪೊಲೀಸ್ ಸ್ಟೇಷನ್ಗೆ ಹೋದ. ಅಲ್ಲಿಂದ, ಮತ್ತೆ  ಅದರ ಮೇಲೇ ಕುಂತು ಆತ ಹೊರಟರೆ ಹಿಂದೆ - ಹಿಂದೆ ಪೊಲೀಸ್ ಜೀಪು. ಮೊದಲು ನ್ಯಾಯಾಧೀಶರ ಮನೆ, ನಂತರ ಧಾರವಾಡದ ಜೈಲು. ಜೈಲಿನ ಬಾಗಿಲ ಹತ್ರ ಮಾವ ಬುಲೆಟ್ ನಿಲ್ಲಿಸ್ತಿದ್ದಂತೆಯೇ ಹಿಂದೆ ಕುಳಿತಿದ್ದ ಆಳು ಅದನ್ನ ತಳ್ಳಿಕೊಂಡು ಹೋಗಿ ಪಕ್ಕಕ್ಕೆ ನಿಲ್ಲಿಸಿದನಂತೆ. ಅದು ಸರಿಯಾಗಿ ನಿಂತಿದೆ ಅನ್ನೋದನ್ನ ಖಚಿತಪಡಿಸಿಕೊಂಡ ಮೇಲೆ ಮಾವ ನಡುಬಗ್ಗಿಸಿಕೊಂಡು ಜೈಲಿನ ಮೋಟುಬಾಗಿಲಿನೊಳಕ್ಕೆ ನಡೆದುಹೋದನಂತೆ. ಅಲ್ಲಿ ಆತನಿಗೆ ಕಾಲು ತೊಳೆದುಕೊಳ್ಳೋದಕ್ಕೆ ನೀರಿನ ತಂಬಿಗೆ ಹಿಡಿದು ಯಾರೂ ನಿಂತಿರಲಿಲ್ಲ. ಇಲ್ಲಿ ಬೆಂಗಳೂರಿನಲ್ಲಿ, "ಹಾಯ್ ಬೆಂಗಳೂರು" ಆಫೀಸಿನಲ್ಲಿ ಕುಂತು ಆ ವರದಿಯನ್ನ ನಾನು ಬರೆಯಬೇಕಾಗಿ ಬಂತು. ತಲೆ ತಗ್ಗಿಸಿಕೊಂಡು ಕುಳಿತು ಬರೆದೆ. ಆತ ಕೊಂದದ್ಯಾರನ್ನ ಅನ್ನೋದು ತಿಳಿದ ಮೇಲೆ ಚಂದ್ರಪ್ಪ ಮಾವನ್ನ ನಾನು ಕ್ಷಮಿಸಿಲ್ಲ. ಮೊನ್ನೆ ನಿರಪರಾಧಿ ಅಂತ ಬಿಡುಗಡೆಯಾದನಂತೆ. ನಾನು ಆತನ ಜೊತೆ ಮಾತಾಡಿ ನಾಲ್ಕು ವರ್ಷಗಳಾದವು. ಬುಲೆಟ್ ನನ್ನ ಕೈಗೆ ಬಂದು ಎಂಟು ವರ್ಷ. ಇವತ್ತಿನ ತನಕ ಅಪ್ಪ ಅದರ ಮೇಲೆ ಕುಂತಿಲ್ಲ.

Monday, September 13, 2010

ಅಣ್ಣೀಗೇರಿಯಲ್ಲೊಂದು ಪೀಪ್ಲಿ ಲೈವ್..!

                        ಅಣ್ಣೀಗೇರಿಯಲ್ಲಿ ತಲೆಬುರುಡೆ ಸಿಕ್ಕವಂತೆ. ಇನ್ನೂರರಿಂದ ಮುನ್ನೂರರಷ್ಟಿವೆಯಂತೆ. ರಾಜರ ಕಾಲದಲ್ಲಿ ಶಿರಚ್ಛೇದನ ಮಾಡಿ ಹೂತಿದ್ರಂತೆ. ಈ ಸುದ್ದಿಗಳು ಒಂದರ ನಂತರ ಒಂದರ ಬರುತ್ತಿದ್ದರೆ ನಾನು ಕೂತಲ್ಲಿ ಕೂರಲಾಗದೇ ನಿಂತಲ್ಲಿ ನಿಲ್ಲಲಾಗದೇ ಚಡಪಡಿಸುತ್ತಿದ್ದೆ. ಅದೇ ಟೈಮಿಗೆ, ಅಲ್ಲಿಗೆ ಹೋಗಿ ಬುರುಡೆ ಪತ್ತೆ ಪ್ರಕರಣದ ಬಗ್ಗೆ ಒಂದು ವರದಿ ಮಾಡುವಂತೆ ದೊಡ್ಡವರಿಂದ ಆದೇಶ ಬಂತು. ರೋಗಿ ಬಯಸಿದ್ದೂ ಹಾಲು ಅನ್ನ - ವೈದ್ಯ ಹೇಳಿದ್ದೂ ಹಾಲೂ ಅನ್ನ..! ಎರಡೇ ತಾಸಿನೊಳಗೆ ಬ್ಯಾಗು ತುಂಬಿಕೊಂಡು ಬಸ್ ಹತ್ತಿದ್ದೆ. ಮಾರನೇ ದಿನ ಮಧ್ಯಾಹ್ನದ ಹೊತ್ತಿಗೆ ಬುರುಡೆಗಳ ಸಮ್ಮುಖದಲ್ಲಿ ನಾನು. ನೋಡೋಹಂಗಿತ್ತು ಅಲ್ಲಿನ ಸೀನು...                      
                          ಊರ ಹೊರಗಿನ ಕಚ್ಚಾ ರಸ್ತೆ ಅದು. ಅದರ ಇಕ್ಕೆಲಗಳಲ್ಲಿ ಚರಂಡಿ ಕಾಮಗಾರಿ ಶುರುವಾಗಿತ್ತು. ಅಲ್ಲಿ ಇದ್ದೂ ಇಲ್ಲದಂತಿದ್ದ ಕಾಲುವೆಯ ಮಣ್ಣು ಬಗೆದು ಅಗಲ ಮಾಡೋದಕ್ಕೆ ಬಂದದ್ದು ಬುಲ್ಡೋಜರು. ಕೆಲಸ ನಡೀತಿದ್ದಾಗ ಮೊದಲು ಏಳೆಂಟು ಬುರುಡೆ ಕಂಡಿವೆ. ಅವುಗಳ ಪೈಕಿ ಹೆಚ್ಚಿನವು ಆ ದೈತ್ಯ ಯಂತ್ರದ ಸೊಂಡಿಲಿಗೆ ಸಿಕ್ಕಿ ಪುಡಿಗುಟ್ಟಿ ಹೋಗಿದ್ದವು. ಆಗ ಯಾರೋ ಪುಣ್ಯಾತ್ಮರು ಅವನ್ನ ನೋಡಿ ಲೋಕಲ್ ಪೇಪರ್ನವರಿಗೆ ಸುದ್ದಿ ಮುಟ್ಟಿಸಿದ್ದಾರೆ. ಅದರಲ್ಲಿ ಬಂದ ಚೋಟುದ್ದ ವರದಿ ನ್ಯೂಸ್ ಚಾನೆಲ್ಲಿನವರ ಕಣ್ಣಿಗೆ ಬಿದ್ದದ್ದೇ ಅವಾಂತರವಾಗಿ ಹೋಯಿತು. ಎಲ್ಲಿ ನೋಡಿದರೂ, ಅಣ್ಣೀಗೇರಿ ಬುರುಡೆ ಪತ್ತೆ ಪ್ರಕರಣದ್ದೇ ಸುದ್ದಿ. ನೋಡ ನೋಡ್ತಿದ್ದಂತೆ ನ್ಯಾಷನಲ್ ಚಾನೆಲ್ಲುಗಳವರೂ ಅದರ ಮಾಹಿತಿ ಕೇಳಿಕೊಂಡು ಫೋನ್ ಮಾಡೋದಕ್ಕೆ ಶುರುಮಾಡಿದ್ದರು. ನಾನು ಹೋಗೋವಷ್ಟರಲ್ಲಿ ಸಿಕ್ಕ ಬುರುಡೆಗಳ ಸುತ್ತ ವರ್ಣರಂಜಿತ ಕಥೆಗಳು ಹುಟ್ಟಿಕೊಂಡುಬಿಟ್ಟಿದ್ದವು.

                          ಅವನ್ನ ನೋಡಿ ಒಂದು ಸಲ ಭ್ರಮನಿರಸನವಾಯಿತು. ಇನ್ನೂರೂ ಇಲ್ಲ - ಮುನ್ನೂರು ಇಲ್ಲ. ಒಂದು ಕಡೆಯಿಂದ ಎಣಸ್ತಾ ಬಂದರೆ ಅಲ್ಲಿ ಎಂಭತ್ತಕ್ಕಿಂತ ಜಾಸ್ತಿ ಬುರುಡೆಗಳಿಲ್ಲ. ಎಡಗಡೆ ಕಾಲುವೆಯಾಚೆ ಸಾಲಾಗಿ ದುಂಡನೆಯ ಬೆಣಚುಗಲ್ಲು ಜೋಡಿಸಿದಂತೆ ಬುರುಡೆಗಳು. ಕಾಲುವೆ ಈಚೆ ರಸ್ತೆಯ ಅಂಚಿಗೆ ಅವುಗಳ ಹತ್ತಿರ ಯಾರೂ ಹೋಗದಂತೆ ಪೊಲೀಸರ ಬ್ಯಾರೀಕೇಡು. ಅದರ ಮೇಲೆ ಗದ್ದ ಊರಿಕೊಂಡು ನಡೀತಿದ್ದ ದೊಂಬರಾಟವನ್ನ ಆಶ್ಚರ್ಯದಿಂದ ನೋಡ್ತಾ ನಿಂತಿದ್ದ ಹಳ್ಳೀ ಜನ. ಅವರಿಂದ ಎರಡು ಮಾರು ದೂರದಲ್ಲಿ ನ್ಯೂಸ್ ಚಾನೆಲ್ಲಿನವರ ಲೈವ್ ಗಾಡಿ. ಅದರಿಂದ, ಅಲ್ಲಿ ನಡೆದದ್ದು ಹಂಗ್ ಹಂಗೇ ಟೀವೀಲಿ ಬರತ್ತಂತೆ ಅನ್ನೋ ಸುದ್ದಿ ಹತ್ತಿ, ಬುರುಡೆ ನೋಡೋದಕ್ಕಿಂತಲೂ ಜಾಸ್ತಿ ಕುತೂಹಲದಿಂದ ಆ ವ್ಯಾನ್ ನೋಡೋದಕ್ಕೆ ಬಂದಿದದ್ದ ಜನ. ಅದರೆದುರಿಗೆ ಮೈಕು ಹಿಡಿದು ನಿಂತಿದ್ದ ರಿಪೋರ್ಟರ್ಗೆ ಲೈವ್ ಕೊಡೋ ಧಾವಂತ.

                          ಹಾಗೆ ಸೇರಿದ್ದ ಜನಜಂಗುಳಿಯ ನಡುವೆ ಊರ ಹಿರಿಯರ ಪೈಕಿ ಕೆಲವರು ಈ ಸಲವಾದರೂ ಟಿ.ವಿ ರಿಪೋರ್ಟರು ತಮ್ಮ ಇಂಟರ್ವ್ಯೂ ಮಾಡಬಹುದು ಅನ್ನೋ ಆಶಾಭಾವನೆಯಿಂದ ಕ್ರಾಪು ತೀಡಿಕೊಂಡು ಬಂದಿದ್ದರು. ಅವರ ಬಾಯ್ತುಂಬ ಹೈದರಾಬಾದ್ ನಿಜಾಮರಿಂದ ಹಿಡಿದು - ಬಹಮನಿ ಸುಲ್ತಾನರ ತನಕ ಜೋರು ಮಾತು. ತಾವು ಮಾತಾಡ್ತಿದ್ದದ್ದು ರಿಪೋರ್ಟರನ ಕಿವಿಗೆ ಬಿದ್ದು, ಅವನು ತಮ್ಮ ಇಂಟರ್ವ್ಯೂ ಮಾಡಿಯಾನು ಅನ್ನೋ ನಿರೀಕ್ಷೆ. ಅಂಥ, ಲೈವ್ ವ್ಯಾನಿನಿಂದ ಅನತಿ ದೂರದಲ್ಲಿ ನಿಂತಿದ್ದು ಬಂದೋಬಸ್ತಿಗೆ ಬಂದಿದ್ದ ಪೊಲೀಸರ ಗಾಡಿ. ಅದರಲ್ಲಿ ಪೇದೆಗಳು ಶೂ ಬಿಚ್ಚಿಟ್ಟು - ಪ್ಯಾಂಟು ಸಡಿಲ ಮಾಡಿಕೊಂಡು ಕಾಲು ಚಾಚಿ ಮಲಗಿದ್ದರು. ಹುಬ್ಬಳ್ಳಿ, ಬೆಂಗಳೂರುಗಳಿಂದ ಯಾರಾದರೂ ವಿ.ಐ.ಪಿ(!)ಗಳು ಬಂದರೆ ಹಂಗೇ  ಇಳಿದು ಹೋಗಿ ಜನರನ್ನ ದೂರ ಸರಿಸಿ, ಬಂದವರಿಗೆ ಬುರುಡೆ ಪರೀಕ್ಷಿಸೋದಕ್ಕೆ ಅನುವು ಮಾಡಿಕೊಟ್ಟು ಮತ್ತೆ ವ್ಯಾನ್ನೊಳಕ್ಕೆ ತೂರಿಕೊಳ್ಳುತ್ತಿದ್ದರು. ಅಲ್ಲೇ ಹತ್ತಿರದಲ್ಲಿದ್ದ ಚಹಾದಂಗಡಿಯವನಿಗೆ ಬುರುಡೆ ಸಿಕ್ಕಾಗಿನಿಂದ ವ್ಯಾಪಾರ ಜೋರಾಗಿದೆ ಅನ್ನೋ ಸಂಭ್ರಮ. ಇನ್ನು ಸ್ಕೂಲ್ ಮಕ್ಕಳು - ಕಾಲೇಜು ಹುಡುಗ ಹುಡುಗಿಯರು ಶೈಕ್ಷಣಿಕ ಪ್ರವಾಸಕ್ಕೆ ಬಂದವರಂತೆ ಸಾಲಾಗಿ ಬಂದು ಬುರುಡೆ ನೋಡೋರು. ಅವರ ಹಿಸ್ಟ್ರಿ ಮೇಸ್ಟ್ರಿಗೆ ಮಕ್ಕಳಿಗೆ ಹೊಸದೇನನ್ನೋ ಕಲಿಸೋ ಹುರುಪು.

                           ಎಲ್ಲಕ್ಕಿಂತ ತಮಾಷೆ ಅನ್ನಿಸಿದ್ದು, ನ್ಯೂಸ್ ಚಾನೆಲ್ಲಿನ ವರದಿಗಾರನ ಧಾವಂತ. ತಾಸಿಗೊಮ್ಮೆ ವಾರ್ತೆಗಳಲ್ಲಿ ಆತನ ಲೈವ್ ಇರತ್ತೆ. ತಾಸಿಗೊಮ್ಮೆ ಬುರುಡೆ ಪತ್ತೆ ಪ್ರಕರಣಕ್ಕೆ ಆತ ಹೊಸಾ angle ಕೊಡಬೇಕು. ಒಂದು ಸಲ ಜನರ ರುಂಡ ಕತ್ತರಿಸಿ ಹೂತು ಹಾಕಿದ ಆರೋಪ ಹೈದರಾಬಾದ್ ನಿಜಾಮರ ಮೇಲೆ. ಇನ್ನೊಂದು ಸಲ ವಿಜಯನಗರ ಸಾಮ್ರಾಜ್ಯ ಗೆದ್ದು ರಣೋತ್ಸಾಹದಲ್ಲಿ ಈ ದಿಕ್ಕಿಗೆ ಬಂದಿತ್ತೆನ್ನಲಾದ ಬಿಜಾಪುರದ ಬಹಮನಿ ಸುಲ್ತಾನರ ಸೈನ್ಯದ ಮೇಲೆ. ಮತ್ತೊಂದು ಸಲ ಸವಣೂರು ನವಾಬರು, ಮಗದೊಮ್ಮೆ ನರಗುಂದ ಬಾಬಾ ಸಾಹೇಬನ ಮೇಲೆ. ಏಕಾಏಕಿ ಪ್ಲೇಗು - ಕಾಲರಾದಂಥ ಮಹಾಮಾರಿಗಳ ಮೇಲೆ ನರಮೇಧದ ಆರೋಪ. ಎಲ್ಲಾ ಮುಗಿದವು ಅನ್ನಿಸಿದಾಗ, ಬುರುಡೆ ಸಿಕ್ಕ ಜಾಗ ದೇಸಾಯರಿಗೆ ಸೇರಿದ್ದು, ಅವರೇ ತಮ್ಮ ದೇಸಗತ್ತಿಯ ವಿರುದ್ಧ ಮಾತಾಡಿದ ಜೀತದಾಳುಗಳ ರುಂಡ ಕತ್ತರಿಸಿ ಹೂತು ಹಾಕಿದ್ದಾರಾ ಅನ್ನೋ ಹೊಚ್ಚ ಹೊಸಾ angle..! ಪಾಪ, ಅದನ್ನ ಕೇಳಿಸಿಕೊಂಡು ದೇಸಾಯರ ಮನೆಯ ಹಣ್ಣು ಹಣ್ಣು ಮುದುಕಿಯೊಬ್ಬಳು ಎಲ್ಲಿ ಕೊಲೆ ಆರೋಪ ತಮ್ಮ ಮೇಲೆ ಬರತ್ತೆ ಅಂತ ಹೆದರಿದಳೋ ಏನೋ. ತುಂಬ ಕಷ್ಟಪಟ್ಟುಕೊಂಡು ಅಲ್ಲೀತನಕ ಬಂದು, "ಈ ಜಮೀನು ನಮಗ ರಾಜರಿಂದ ಇನಾಮು ಬಂದಿದ್ದು. ಅವರೇ ಕೊಂದು ಹೂತಿರಬೇಕು ರುಂಡಾನ. ಸುಮ್ಸುಮ್ನ ನಮ್ ಮ್ಯಾಲೆ ಆರೋಪ ಮಾಡಬ್ಯಾಡ್ರಿ" ಅಂತ ಕೂಗಾಡಿ ಹೋಯಿತು. ಅದನ್ನ ಕೇಳಿಸಿಕೊಂಡ ಮೇಲೆ, ದೇಸಾಯರ ಮನೆತನ ತಡವಿಕೊಳ್ಳೋದಕ್ಕಿಂತ ನವಾಬರು, ಸುಲ್ತಾನರು, ನಿಜಾಮರ ಮೇಲೆ ಆರೋಪ ಮಾಡೋದೇ ಸೇಫು, ಅವರ ವಂಶಸ್ತರಾರೂ ಇರಲಿಕ್ಕಿಲ್ಲ, ಇದ್ದರೂ ಜಗಳಕ್ಕೆ ಬರಲಿಕ್ಕಿಲ್ಲ, ಬಂದರೂ ಈ ಮುದುಕಿಯಷ್ಟು ಘಾಟಿಯಾಗಿರಲಿಕ್ಕಿಲ್ಲ ಅನ್ನಿಸ್ತೋ ಏನೋ ರಿಪೋರ್ಟರ್ಗೆ. ಮತ್ತೆ ಓತಪ್ರೋತ ಲೈವ್ ಶುರು ಮಾಡಿದ. ಅದು ಸಾಕು ಅನ್ನಿಸಿದಾಗ ಇಲ್ಲಿ ಸಿಕ್ಕ ಬುರುಡೆಗಳ ರಕ್ಷಣೆಗೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ತಿಲ್ಲ, ಬುರುಡೆ ಸಿಕ್ಕು ಎರಡು ದಿನಗಳಾದರೂ ಇತಿಹಾಸ ಮತ್ತು ಪ್ರಚ್ಯಶಾಸ್ತ್ರ ಇಲಾಖೆಯವರು ಬಂದಿಲ್ಲ, ಬುರುಡೆ ನೋಡೋದಕ್ಕೆ ಬೇರೆ ಬೇರೆ ಊರುಗಳಿಂದ ಜನ ಬರುತ್ತಿದ್ದು ಈಗ ಇದು ಪ್ರೇಕ್ಷಣೀಯ ಸ್ಥಳವಾಗಿದೆ ಅನ್ನೋ ಆಫ್ ಬೀಟ್ ಸ್ಟೋರಿಗಳು.

                         ಅವೆಲ್ಲದರ ಮಧ್ಯೆ ನಿಜವಾದ ಕಿರಿಕಿರಿಯಾದದ್ದು ಅಲ್ಲಿನ ಬಡವರಿಗೆ. ಬಯಲು ಕಡೆ ಹೋಗೋದಕ್ಕೆ ಇದ್ದದ್ದು ಅದೊಂದೇ ಜಾಗ. ಬೆಳಿಗ್ಗೆದ್ದು ಗಂಡಸರು, ಹೊತ್ತು ಮುಳುಗಿದ ಮೇಲೆ ಹೆಂಗಸರು, ಹೊತ್ತು ಗೊತ್ತಿಲ್ಲದೇ ಮಕ್ಕಳು ಚೊಂಬು ಹಿಡಿದು ಬರುತ್ತಿದ್ದುದೇ ಆ ರಸ್ತೆಗೆ. ಅರ್ಧ ಊರಿನ ಭಾರವೆಲ್ಲ ಅಲ್ಲೇ ಇಳಿಯಬೇಕು. ಅಂಥಲ್ಲಿ ಬುರುಡೆಗಳು ಸಿಕ್ಕಿವೆ. ಇತಿಹಾಸ ತಜ್ಞರ ಸಂಶೋಧನೆಗಳಿಗೆ, ಪ್ರಾಚ್ಯವಸ್ತು ಇಲಾಖೆಯವರ ಸಂಭ್ರಮಕ್ಕೆ, ಪತ್ರಕರ್ತರ ಥಾನುಗಟ್ಟಲೆ ಬರಹಕ್ಕೆ - ಗಂಟೆಗೊಂದರ ಲೈವ್ಗೆ ಆಹಾರ ಸಿಗ್ತಿರೋದೇ ಅಲ್ಲಿ. ಅದನ್ನ ಕಟ್ಟಿಕೊಂಡು ಪಾಪ, ಆ ಬಡವರಿಗೇನಾಗಬೇಕು..? ಅವರದು genuine problem..! ಭಾರ ಇಳಿಸಿಕೊಳ್ಳೋದೆಲ್ಲಿ..? ಸಿಗಬಾರದ ಜಾಗದಲ್ಲಿ ಸಿಕ್ಕ ಆ ನಿಷ್ಪಾಪಿ ಬುರುಡೆಗಳನ್ನ ಅದೆಷ್ಟು ಶಪಿಸಿಕೊಂಡು, ಹೊಸ ಜಾಗದ ಹುಡುಕಾಟದಲ್ಲಿ ಹೋದರೋ ಯಾರಿಗೆ ಗೊತ್ತು..?

                             ಈ ಮಧ್ಯೆ ಹೊಸದೊಂದು ತಲೆ ನೋವು ಶುರುವಾಗಿತ್ತು. ಬುರುಡೆ ಸಿಕ್ಕ ಜಾಗದ ಸುತ್ತ ಒಂದು ಎಕರೆ ಜಮೀನನ್ನ ಸಂರಕ್ಷಿತ ಪ್ರದೇಶ ಅಂತ ಘೋಷಿಸಿಬಿಟ್ಟರು ಜಿಲ್ಲಾಧಿಕಾರಿ. ಅಧೆಂಗ್ ಎದ್ದಿತೋ ಗೊತ್ತಿಲ್ಲ, ಅಷ್ಟು ಜಾಗದಲ್ಲಿರೋ ಎಲ್ಲಾ ಮನೆ ಕೆಡವ್ತಾರಂತೆ ಅನ್ನೋ ಸುದ್ದಿ ಎದ್ದು ಬಿಟ್ಟಿತು. ಅಕ್ಕಪಕ್ಕದ ಮನೆಗಳವರು ಗುಂಪು ಗುಂಪಾಗಿ ನಿಂತು, "ಮನೀ ಕೆಡವ್ತಾರಂತ ಹೌದಾ" ಅಂತ ಮಾತಾಡಿಕೊಳ್ಳೋದಕ್ಕೆ ಶುರು ಮಾಡಿದರು. ಅಲ್ಲಿ ಏಕಾಏಕಿ ಕಾಣಿಸಿಕೊಂಡ ಯುವ ವಕೀಲನೊಬ್ಬ "ಪರಿಹಾರದ ಚೆಕ್ಕು ಕೈಗೆ ಸಿಗೂ ತನಕ ಮನೀಗೆ ಕೈ ಹಚ್ಚೂಹಂಗಿಲ್ಲ, ಕೇಸ್ ಹಾಕ್ತೀನಿ ಕೇಸು" ಅಂತ ಆರ್ಭಟಿಸೋದಕ್ಕೆ ಶುರು ಮಾಡಿದ್ದ. ಹುಬ್ಬಳ್ಳಿ ಕೋರ್ಟ್ನಲ್ಲಿ ಸೈಕಲ್ ಹೊಡೆದರೂ ಸಿಗದ ಕೇಸು ಇಲ್ಲಾದ್ರೂ ಸಿಕ್ಕಾವಾ ಅನ್ನೋ ನಿರೀಕ್ಷೆ ಅವಂದು. ಅದೇ ಹೊತ್ತಿಗೆ ಅಲ್ಲೊಬ್ಬ ಕಿತ್ತು ಹೋದ ಇಂಡಿಕಾ ಕಾರಿನಲ್ಲಿ ಬಂದ. ಗರಿ ಗರಿ ಖಾದಿ ಬಟ್ಟೆ, ನಾಲ್ಕು ಬೆರಳಿಗೆ ಉಂಗುರ, ಕೊರಳಲ್ಲಿ ಹೆಬ್ಬರಳ ಗಾತ್ರದ ಚೈನು ಹಾಕಿಕೊಂಡಿದ್ದ ಅವನು, "ಅಧೆಂಗ್ ಮನೀ ಕೆಡವ್ತಾರ, ನಾವು ಹೋರಾಟ ಮಾಡೂಣು, ಹೈವೇ ಬಂದ್ ಮಾಡೂಣು" ಅಂತ ಓಡಾಡೋದಕ್ಕೆ ಶುರು ಮಾಡಿದ್ದ. ತಾಲೂಕ್ ಪಂಚಾಯ್ತಿ ಇಲೆಕ್ಷನ್ ಬಂದಿರದಿದ್ರ ಈ ಸೂಳೇಮಗ ( ನೆನಪಿರಲಿ, ಆ ಕಡೆ ಇದು ಬೈಗುಳವಲ್ಲ ) ಎಲ್ಲಿ ಬರ್ತಿದ್ದ ಅಂತ ಆತನಿಗೆ ಕೇಳಿಸದಂತೆ ಮಾತಾಡಿಕೊಳ್ತಿದ್ರು ಮೂರ್ನಾಲ್ಕು ಹುಡುಗರು. ಬುರುಡೆ ಸಿಕ್ಕ ಜಾಗದ ಸುತ್ತಲಿನ ಬಡವರು ಮಾತ್ರ ನೀವು ನ್ಯಾಯ ಕೊಡಿಸಿದ್ರ ನಿಮ್ ಕಡೆ, ಅವರು ನ್ಯಾಯ ಕೊಡಿಸಿದರೆ ಅವರ ಕಡೆ ಅನ್ನೋ ಹಂಗೆ ವಕೀಲನ ಹಿಂದೆ - ರಾಜಕಾರಣಿಯ ಹಿಂದೆ ಓಡಾಡ್ತಿದ್ರು.

                             ಅದೇ ಟೈಮಿಗೆ ಅಲ್ಲಿಗೆ ಬಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಫಾರೆನ್ಸಿಕ್ ಮೆಡಿಸಿನ್ ವಿಭಾಗದ ತಜ್ಞರು ನಿಧಾನವಾಗಿ ಕಾಲುವೆ ಇಳಿದು, ಬುರುಡೆಗಳ ಸಮೀಪ ಹೋದರು. ಅವುಗಳ ಪೈಕಿ ಒಂದನ್ನ ಕಿತ್ತುಕೊಳ್ಳೋದಕ್ಕೆ ಅಂತ ಕೈ ಹಾಕಿದರೋ ಇಲ್ಲವೋ, ಆ ಕಡೆಯಿಂದ ಮತ್ತೊಂದು ಧ್ವನಿ. ಅವು ನಮ್ಮ ಐತಿಹಾಸಿಕ ಆಸ್ತಿ, ಸಾಂಸ್ಕೃತಿಕ ಸಂಪತ್ತು. ಅವನ್ನ ಮುಟ್ಟಬ್ಯಾಡ್ರಿ ಅಂತ ಧಾರವಾಡ ಯೂನಿವರ್ಸಿಟಿಯ ದೀಡುಪಂಡಿತನೊಬ್ಬ ಕೂಗಾಡ್ತಿದ್ದ. ನಿಮ್ಮ ಸಾಂಸ್ಕೃತಿಕ ಸಂಪತ್ತಿನ ಇತಿಹಾಸ ತಿಳಿದುಕೊಳ್ಳೋದಕ್ಕೆ ತಮ್ಮ ತನಿಖೆ ಎಷ್ಟು ಮುಖ್ಯ ಅನ್ನೋದರ ಬಗ್ಗೆ ಡಾ. ಗಜಾನನ್ ನಾಯಕ್ ತಿಳಿಸಿ ಹೇಳಿದ ಮೇಲೆ ಎರಡೇ ಎರಡು ತಗೊಳ್ಳಿ ಅಂದಿದ್ದ ಆ ದೀಡು ಪಂಡಿತ. ಅಷ್ಟು ಹೊತ್ತಿನ ತನಕ ನಾನು ದೂರದಲ್ಲಿ ನಿಂತು ಅದ್ಯಾವುದಕ್ಕೂ ಸಂಬಂಧವಿಲ್ಲದವನ ಹಾಗೆ ಎಲ್ಲವನ್ನೂ ನೋಡ್ತಿದ್ದೆ.

                           ಎರಡು ಬುರುಡೆ ಎತ್ತಿಕೊಂಡು ಬಂದ, ಗಜಾನನ್ ನಾಯಕ್ ತಮ್ಮ ಕಾರಿನ ಕಡೆ ಹೊರಟಿದ್ದರು. ಅವರನ್ನ ಬೆನ್ನತ್ತಿಕೊಂಡು ಹೋಗಿ, "ಇವನ್ನ ನೋಡಿದರ ಏನನ್ನಿಸತ್ತೆ ಸಾರ್" ಅಂತ ಕೇಳಿದೆ. "ಯಾವ ಬುರುಡೆಗೂ ಮ್ಯಾಂಡಿಬಲ್ (ಕೆಳದವಡೆ) ಇಲ್ಲ. ಸುತ್ತಲಿನ ಮಣ್ಣಿನಲ್ಲಿ ಕೂದಲು ಸಿಗಬೇಕಿತ್ತು, ಸಿಕ್ಕಿಲ್ಲ. ತಲೆಬುರುಡೆ ಮತ್ತು ಮೆದುಳಿನ ಮಧ್ಯೆ ಕನೆಕ್ಟೀವ್ ಟಿಶ್ಯೂನ ಒಂದು ತೆಳುವಾದ ಪದರ ಅಂಟಿಕೊಂಡಿರತ್ತೆ ಅದೂ ಇಲ್ಲ" ಅಂದರು. "ಏನಿದರರ್ಥ", ನನ್ನ ಮುಂದಿನ ಪ್ರಶ್ನೆ. "ಅಂದರೆ, ದೇ ಆರ್ ಆಲ್ ಯೂಸ್ಡ್ ಸ್ಕಲ್ಸ್. ಯಾರೋ ಅವನ್ನ ಸಮಾಧಿಯಿಂದ ಹೊರಗೆ ತೆಗೆದಿದಾರೆ. ಆಗ ಕೆಳದವಡೆ ಕಳಚಿಕೊಂಡಿವೆ. ಕೂದಲು ಅಲ್ಲೇ ಉಳಿದುಕೊಂಡಿವೆ. ನಂತರ ಡಿಟರ್ಜಂಟ್ ಹಾಕಿ ಬ್ರಷ್ನಿಂದ ಉಜ್ಜಿ ತೊಳೆದಿದಾರೆ. ಆಗ ಕನೆಕ್ಟೀವ್ ಟಿಶ್ಯೂನ ತೆಳುವಾದ ಪದರ ಹೊರಟುಹೋಗಿದೆ. ನಂತರ ತಂದು ಇಲ್ಲಿ ಹೂತಿದಾರೆ" ಅಂದವರೇ ಇನ್ನೊಂದೇ ಒಂದು ಮಾತು ಹೇಳೋದಿಲ್ಲ ಅನ್ನೋ ಹಾಗೆ ಕಾರು ಹತ್ತಿ ಹೊರಟುಬಿಟ್ಟರು. ಹಾಗಾದರೆ, ಯಾರು ಮಾಡೋದಕ್ಕೆ ಸಾಧ್ಯ ಆ ಕೆಲಸ..? ಥಟ್ಟಂತ ತಲೆಗೆ ಹೊಳೆದಿತ್ತು. ಆ ಭಾಗದಲ್ಲಿ ಸ್ಮಶಾನದಿಂದ ಮನುಷ್ಯರ ಮೂಳೆ ಮತ್ತು ತಲೆಬುರುಡೆ ತೆಗೆದು ಖಾಸಗಿ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಗೆ ಮಾರುವ ಮಾಫಿಯಾ ಇದೆ. ಅದರ ಕಿಂಗ್ ಪಿನ್ ಇಲಿಯಾಸ್ ಖಾಜಿ ಅನ್ನೋನ ಮನೆ ಮೇಲೆ ಎರಡು ವರ್ಷಗಳ ಹಿಂದೆ ರೇಡ್ ಮಾಡಿದ್ದ ಗದಗ್ ಗ್ರಾಮೀಣ ಠಾಣೆ ಪೊಲೀಸರಿಗೆ ನಾಲ್ಕು ಮೂಟೆ ತುಂಬಿ ಉಳಿಯುವಷ್ಟು ಮನುಷ್ಯರ ಮೂಳೆಗಳು ಸಿಕ್ಕಿದ್ದವು. ಆವತ್ತು ತಲೆತಪ್ಪಿಸಿಕೊಂಡಿರುವ ಇಲಿಯಾಸ್ ಖಾಜಿ, ಇವತ್ತಿನ ತನಕ ಪತ್ತೆ ಇಲ್ಲ. ಅದೂ ಅಲ್ಲದೇ ಈಗ ಬುರುಡೆ ಸಿಕ್ಕಿರುವ ಜಾಗದಿಂದ ಐದಾರು ಕಿಲೋಮೀಟರ್ ದೂರದಲ್ಲಿ ಒಂದು ಬಾಡಿಗೆ ಮನೆ ಮಾಡಿಕೊಂಡಿದ್ದ ಆತ ವರ್ಷಗಟ್ಟಲೆ ಅಲ್ಲಿದ್ದ. ಅದು ನೆನಪಾಗುತ್ತಿದ್ದಂತೆಯೇ, ಇಲಿಯಾಸ್ ಖಾಜಿಯ ಬಗ್ಗೆ ಹೆಚ್ಚಿನ ಮಾಹಿತಿ ತಗೊಂಡರಾಯಿತು ಅಂತ ಗದಗ್ ರೂರಲ್ ಪೊಲೀಸ್ ಸ್ಟೇಷನ್ ಕಡೆ ಹೊರಟೆ.

                           ಈ ಕಡೆ ಹಿಂದೂ ಪರ ಸಂಘಟನೆಯವರು ಒಂದು ಪ್ರೆಸ್ ಮಾಡಿ, "ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳೋದಕ್ಕೆ ಒಪ್ಪದ ಹಿಂದೂಗಳ ರುಂಡಗಳನ್ನ ಕತ್ತರಿಸಿ ಮುಸ್ಲಿಂ ದೊರೆಗಳು ಹೂತಿದಾರೆ. ಅಣ್ಣೀಗೇರಿಯಲ್ಲಿ ಸಿಕ್ಕಿರುವ ಬುರುಡೆಗಳು ಮುಸ್ಲಿಂ ರಾಜರ ದಬ್ಬಾಳಿಕೆ ಮತ್ತು ಕ್ರೌರ್ಯಕ್ಕೆ ಸಾಕ್ಷಿ" ಅಂತ ಹೇಳಿಕೆ ಕೊಟ್ಟಿದ್ದರು. ನನಗ್ಯಾಕೋ ಇತ್ತೀಚೆಗೆ ನೋಡಿದದ ಪೀಪ್ಲಿ ಲೈವ್ ಸಿನೆಮಾ ತುಂಬ ನೆನಪಾಗುತ್ತಿತ್ತು.

Wednesday, September 8, 2010

ಕ್ರೈಂ ರಿಪೋರ್ಟರನ ಹಳವಂಡಗಳು...

                                       ಆಫೀಸಿನಲ್ಲೇ ಇದ್ದೆ. ಇಳಿಸಂಜೆ ಹೊತ್ತು. ಲ್ಯಾಂಡ್ ಲೈನ್ ಒಂದೇ ಸಮನೆ ಹೊಡೆದುಕೊಳ್ತಿತ್ತು. ಕೈಯಳತೆಯಲ್ಲೇ ಅದರ ರಿಸೀವರ್ ಇತ್ತು. ಆದರೂ ಅದನ್ನೆತ್ತಿಕೊಳ್ಳೋದೊಂದು ಹಿಂಸೆ. ಯಾರ್ಯಾರದೋ ಫೋನುಗಳು. ನಮ್ಮನೇಲಿ ಹಾವು ಬಂದಿದೆ, ಹಿಡಿಯೋದಕ್ಯಾರನ್ನಾದ್ರೂ ಕಳಿಸಿ, ಗರ್ಭಿಣಿಯರಿಗೆ ಯೋಗ ಕಲಿಸೋ ಪ್ರೋಗ್ರಾಂ ಬಂದಿತ್ತಲ್ಲ ಅದರ ಅಡ್ರೆಸ್ ಕೊಡಿ, ಚಿದಂಬರ ರಹಸ್ಯದಲ್ಲಿ ಒಂದು ದೇವಸ್ಥಾನ ತೋರ್ಸಿದ್ರಲ್ಲ, ಅದಕ್ಕೆ ಯಾವ ರೂಟ್ನಲ್ ಹೋದ್ರೆ ಹತ್ರ..? ಬರೀ ಇಂಥವೇ.
                                            ಫೊನ್ ಎತ್ತುವ ಪುಣ್ಯಾತ್ಮರಾರಾದರೂ ಹತ್ತಿರದಲ್ಲಿ ಇದಾರಾ ಅನ್ನೋಹಂಗೆ ತಲೆ ಎತ್ತಿ ನೋಡಿದೆ. ನನ್ನದೇ ಬ್ಯೂರೋದ ರಿಪೋರ್ಟರ್ ಒಬ್ಬ ಎದ್ದು ಬಂದ. ಇನ್ಯಾವುದೋ ಬೀಟ್ನಲ್ಲಿದ್ದ ಆತ ಕ್ರೈಂ ಬ್ಯೂರೊಗೆ ಬಂದು ಹದಿನೈದು ದಿನಗಳಷ್ಟೇ ಆಗಿದ್ವು. ಅಂಥವರಿಗಿನ್ನೂ ಆ ಲ್ಯಾಂಡ್ ಲೈನ್  ಕಾಲುಗಳನ್ನ ತುಂಬ ಸೀರಿಯಸ್ ಆಗಿ ಅಟೆಂಡ್ ಮಾಡುವ ಸಹನೆ ಇರತ್ತೆ. ಫೋನ್ ಎತ್ತಿಕೊಂಡ ಆತನಿಗೆ ಹತ್ತೇ ಸೆಕೆಂಡುಗಳಲ್ಲಿ ಮೈತುಂಬ ರೋಮಾಂಚನವಾಗಿತ್ತು. "ಹೌದಾ... ಎಲ್ಲಿ" ಅಂದ. ಮುಂದೆ ಆ ಕಡೆಯಿಂದ ಮಾತಾಡ್ತಿದ್ದವರು ಹೇಳುತ್ತಿದ್ದುದನ್ನ ಕೇಳಿಸಿಕೊಳ್ಳುವ ಸಹನೆ ಇರಲಿಲ್ಲ ಆತನಿಗೆ. "ಸರಿ... ಸರಿ... ನಾವೀಗ್ಲೇ ಇಲ್ಲಿಂದ ಹೊರಡ್ತೀವಿ, ಆನೇಕಲ್ ತನಕ ಬರೋದಕ್ಕೆ ಸ್ವಲ್ಪ ಲೇಟಾಗತ್ತೆ, ನಾವು ಬರೋ ತನಕ ಎತ್ತಬೇಡಿ" ಅಂದ. ಯಾವುದೋ ನವವಿವಾಹಿತೆ ನೇಣಿಗೆ ಬಿದ್ದಿರಬೇಕು ಅಂತ ನಾನು ಮನಸಿನಲ್ಲೇ ಅಂದುಕೊಳ್ಳುವುದಕ್ಕೂ, ಪಕ್ಕದಲ್ಲಿದ್ದ ಹಾಳೆಯೊಂದರಲ್ಲಿ ಫೋನ್ ಮಾಡಿದವರ ಮೊಬೈಲ್ ನಂಬರ್ ಗೀಚಿಕೊಂಡ ಆತ, ರಿಸೀವರನ್ನ ಕುಕ್ಕಿದಂತೆ ಕೆಳಗಿಡೋದಕ್ಕೂ ಸರಿ ಹೋಯಿತು. ಚಿದಂಬರ ರಹಸ್ಯವೊಂದನ್ನ ಹೇಳಬೇಕೇನೋ ಅನ್ನೋ ಹಾಗೆ ನನ್ನ ಮುಖದ ಹತ್ತಿರಕ್ಕೆ ಮುಖ ತಂದು ಆನೇಕಲ್ ಹತ್ರ ಒಂದು ಹಾಳು ಬಾವೀಲಿ ಮಗು ಮತ್ತು ಹಸು ಒಟ್ಟೊಟ್ಟಿಗೇ ಬಿದ್ದಿವೆಯಂತೆ, ಡಿ.ಎಸ್.ಎನ್.ಜಿ ( ಅದೇ ಛತ್ರಿ ಇರೋ ಲೈವ್ ಗಾಡಿ ) ಹಾಕಿದರೆ ಬೆಳತನಕ ಓಡಿಸಬಹುದು ಅಂದ. ಮಾತು ಮುಗಿಸುವಷ್ಟರಲ್ಲಿ ಕಾಲು ನೆಲದ ಮೇಲೆ ನಿಲ್ಲೋದೇ ಇಲ್ಲವೇನೋ ಅನ್ನೋವಷ್ಟು ರೋಮಾಂಚನ ಆತನಿಗೆ. ಗಾಬರಿಬಿದ್ದ ನಾನು, ಏನ್ ಎತ್ತಬೇಡಿ ಅಂದೆ ನೀನು ಅಂತ ಕೇಳಿದೆ. ಅದೇ ಮಗು ಮತ್ತು ಹಸೂನ್ನ. ನಾವು ಹೋಗೋವಷ್ಟರಲ್ಲಿ ಎತ್ತಿಬಿಟ್ರೆ ವಿಶ್ಯುವಲ್ ಮಿಸ್ ಆಗತ್ತೆ ಅಂದ. ಒಂದ್ ಸಲ ವಾಕರಿಕೆ ಬಂದು ಹೋಯಿತು. ಹಾಳೆಯಲ್ಲಿದ್ದ ಮೊಬೈಲ್ ನಂಬರನ್ನ ಕಿತ್ತುಕೊಂಡು ಚಕಚಕನೆ ಡಯಲ್ ಮಾಡಿದೆ. ಪುಣ್ಯಾತ್ಮ ಎರಡೇ ರಿಂಗಿಗೆ ಎತ್ತಿಕೊಂಡ. ನೀವು ಮೊದ್ಲು ಫೈರ್ ಬ್ರಿಗೇಡ್ಗೆ ಕಾಲ್ ಮಾಡಿ. ಮೊದ್ಲು ಮಗು ಇತ್ತಿ ನಂತರ, ಹಸು ಎತ್ತಿ. ಅಷ್ಟರಲ್ಲಿ ನಾವು ಬರ್ತೀವಿ ಅಂದೆ.

                                          ಪಕ್ಕದಲ್ಲಿ ಏನೂ ತಿಳಿಯದವನಂತೆ ನಿಂತಿದ್ದ ಕ್ರೈಂ ರಿಪೋರ್ಟರು, ನೀನೆಂಥಾ ಅನ್ ಪ್ರೊಫೆಷನಲ್ ಕಣಯ್ಯಾ ಅನ್ನೋ ಹಾಗೆ ನನ್ನೇ ನೋಡ್ತಿದ್ದ. ಬೇಗ ಹೊರಡು ಸ್ಟೋರಿ ಮಿಸ್ ಆಗತ್ತೆ ಅಂದೆ. ಡಿ.ಎಸ್.ಎನ್.ಜಿ..? ಒಂದೇ ಶಬ್ದದ ಪ್ರಶ್ನೆ ಆತಂದು. ಬೇಡ, ಅದು ತಲುಪೋವಷ್ಟರಲ್ಲಿ ಎಲ್ಲಾ ಮುಗಿದುಹೋಗಿರತ್ತೆ ಅಂದೆ. ನಿರಾಶನಾದ ಆತ ಕ್ಯಾಮೆರಾಮ್ಯಾನ್ನ ಕರೆದುಕೊಂಡು ಕೆಳಗಿಳಿದು ಹೋದ.

                                          ರಿಪೋರ್ಟರ್ ಅಲ್ಲಿಗೆ ತಲುಪುವಷ್ಟರಲ್ಲಿ ಜನ, ತಾವು ತಾವೇ ಸೇರಿಕೊಂಡು ಮಗು ಮತ್ತು ಹಸು ಎರಡನ್ನೂ ಮೇಲೆತ್ತಿದ್ದರು. ಆ ಸ್ಟೋರಿ ಅಂದುಕೊಂಡಂತೆ ಸಿಗಲಿಲ್ಲ. ಕತ್ತೆ ಬಾಲ - ಕುದುರೆ ಜುಟ್ಟು. ಆ ಹಾಳು ಬಾವಿಯೊಳಗೆ ಬಿದ್ದದ್ದು ಯಾರದೋ ಮನೆಯ ಮುದ್ದಿನ ಕೂಸಲ್ಲವಾ..? ನಾವು ಕ್ಯಾಮೆರಾ ತಗೊಂಡು ಬರೋ ತನಕ ಅದನ್ನ ಹಸುವಿನ ಜೊತೆ ಹಾಳು ಭಾವಿಯಲ್ಲಿ ಬಿಟ್ಟಿರಿ ಅನ್ನೋದು ಯಾವ ನ್ಯಾಯ..? ಒಂದು ಎಕ್ಸ್ ಕ್ಲೂಸೀವ್ ಕೊಡುವ ಹಪಹಪಿ, ರಿಪೋರ್ಟರ್ನಲ್ಲಿರುವ ಮಾನವೀಯತೆಯನ್ನ ಕೊಂದು ಬಿಡುತ್ತದಾ..? ಅರ್ಥ ಆಗ್ತಿಲ್ಲ