Thursday, July 28, 2011

ತಾವೇ ತೋಡಿಕೊಂಡ ಗುಂಡಿಯಲ್ಲಿ ಅಸಹಾಯಕ ಯಡಿಯೂರಪ್ಪ..!

                               "ನಿಮ್ಮ ಫೈಲ್ ನೋಡಿದೆ, ಸೈನ್ ಮಾಡಿಟ್ಟಿರ್ತೀನಿ, ತಗೊಂಡ್ಹೋಗಿ" ಅಂದರು. ನನಗೆ ಒಂದು ಕ್ಷಣ ಏನೂ ಅರ್ಥ ಆಗಲಿಲ್ಲ. "ಯಾವ್ ಫೈಲು ಸಾರ್" ಅಂದೆ. "ಅದೇ, ಕೆ.ಆರ್ ಮಾರ್ಕೆಟ್ ಶಿಫ್ಟ್ ಮಾಡೋದು, ಗುಡ್ ಪ್ರಾಜೆಕ್ಟ್, ಸೈನ್ ಮಾಡಿಟ್ಟಿರ್ತೀನಿ ತಗೊಂಡ್ಹೋಗಿ" ಮತ್ತೆ ಅದೇ ಮಾತು. ನನಗೆ ಮತ್ತೆ ಕನ್ ಫ್ಯೂಷನ್ನು.  ಏನೊಂದೂ ತಿಳಿಯದೇ ಅವರ ಮುಖಾನೇ ನೋಡಿದೆ. ಅಷ್ಟರಲ್ಲಿ ಪಕ್ಕದಲ್ಲಿ ನಿಂತಿದ್ದ ಆಫೀಸರ್ ಒಬ್ರು ಅವರ ಕಿವೀಲಿ ಅದೇನೋ ಹೇಳಿದರು. ಕಿವಿ ಗಮನಿಸಿದೆ, ಮಷಿನ್ ಇಲ್ಲ. ಅದಿಲ್ಲದಿದ್ದರೆ ಆ ವಯ್ಯನಿಗೆ ಕೇಳಿಸೋದಿಲ್ಲ, ಕೂಗಿ ಹೇಳಬೇಕು. ಕೂಗಿ ಹೇಳೋದಕ್ಕೆ ಆ ಅಧಿಕಾರಿಗೆ ಮಜುಗರ, ಎರಡು ಮಾರು ದೂರದಲ್ಲಿ ಕುಳಿತಿದ್ದ ನನಗೆ ಕೇಳುವಷ್ಟು ಗಟ್ಟಿಯಾಗಿ ಪಿಸುಗುಟ್ಟಿದರು. ಅದನ್ನ ಕೇಳಿಸಿಕೊಂಡ ಆತ, "ಓಹೋ ಮಾರುಕಟ್ಟೆ ಸಚಿವ ಶಿವರಾಜ್ ತಂಗಡಗಿ ನೀವಲ್ಲವಾ..?" ಅಂದುಬಿಟ್ಟ. "ಅಲ್ಲ ಸಾರ್ ನಾನು ನರೇಂದ್ರಸ್ವಾಮಿ ಅಂತ, ಮಳವಳ್ಳಿ ಎಂ.ಎಲ್.ಎ, ಸೋಷಿಯಲ್ ವೆಲ್ಫೇರ್ ಮಿನಿಸ್ಟ್ರು" ಅಂತ ಹೇಳಿದವನೇ ಫೈಲ್ ಎತ್ತುಕೊಂಡು ಎದ್ದುಬಂದುಬಿಟ್ಟೆ ಸಾರ್, ನಂಗೆ ತುಂಬ ಅವಮಾನ ಆಗಿತ್ತು ಅಂದವರೇ ಎದುರಿಗಿದ್ದ ಗ್ಲಾಸ್ ಕೈಗೆತ್ತಿಕೊಂಡು ಒಂದು ಗುಟುಕು ಕುಡಿದರು. ಅವರ ಕಣ್ಣಲ್ಲಿ ನೀರಿದ್ದದ್ದು ಸ್ಪಷ್ಟವಾಗಿ ಕಾಣಿಸಿತ್ತು.
ನರೇಂದ್ರ ಸ್ವಾಮಿ

                 ಹಾಗೆ ಬಿಡದಿ ಸಮೀಪದ ಈಗಲ್ಟನ್ ರೆಸಾರ್ಟ್ ಹಿತ್ತಲಲ್ಲಿ ಲಾನ್ ಮೇಲೆ ಹಾಕಲಾಗಿದ್ದ ಟೇಬಲ್ ಎದುರು ಕುಳಿತು ಮಾತಾಡ್ತಿದ್ದವರು ಸಮಾಜಕಲ್ಯಾಣ ಸಚಿವ ನರೇಂದ್ರಸ್ವಾಮಿ. ಅಷ್ಟೊತ್ತಿಗಾಗಲೇ ಅವರ ಮಂತ್ರಿಗಿರಿ ಹೊರಟುಹೋಗಿ ಶಾಸಕ ಸ್ಥಾನ ಕೂಡ ಅಪಾಯದಲ್ಲಿತ್ತು. ಬಂಡಾಯ ಎದ್ದು ಗೋವಾಕ್ಕೆ ಹೋಗಿದ್ದ ಹದಿನೆಂಟು ಜನರ ಪೈಕಿ ಅವರೂ ಒಬ್ಬರು. ಸರ್ಕಾರ ಕೆಡವಬೇಕು ಅನ್ನೋ ಹಟಕ್ಕೆ ಬಿದ್ದಿದ್ದ ಅವರನ್ನ ಎಚ್.ಡಿ ಕುಮಾರಸ್ವಾಮಿ ಕರಕೊಂಡು ಬಂದಿದ್ದರು. ಅವರದೊಂದು ಇಂಟರ್ವ್ಯೂ ಮಾಡಬೇಕು ಅಂತ ಹಮೀದ್ ಪಾಳ್ಯ ಮತ್ತು ನಾನು ಆವತ್ತು ಸಂಜೆ ಹೋಗಿದ್ವಿ. ಇಂಟರ್ವ್ಯೂ ಮುಗಿಸಿ ಸುಮ್ಮನೆ ಲೋಕಾಭಿರಾಮವಾಗಿ ಮಾತಾಡ್ತಾ ಕುಳಿತಿದ್ದಾಗ, "ನಿಮಗೇನ್ ಕಡಿಮೆ ಆಗಿತ್ತು ಸಾರ್, ಮೊದಲ ಸಲ ಎಂ.ಎಲ್.ಎ ಆದಾಗಲೇ ಕ್ಯಾಬಿನೆಟ್ ಮಂತ್ರಿಗಿರಿ ಸಿಕ್ಕಿತ್ತು, ಗೂಟದ ಕಾರು, ಎಸ್ಕಾರ್ಟ್ ಗೆ ಪೊಲೀಸರು, ಸರಕಾರಿ ಬಂಗಲೆ, ಇಷ್ಟೆಲ್ಲಾ ಇದ್ರೂ ಯಾಕೆ ಬಂಡಾಯ ಎದ್ರಿ..?" ಅಂತ ಕೇಳಿದಾಗ ಅದೊಂದು ಇನ್ಸಿಡೆಂಟ್ ಹೇಳಿದರು ನರೇಂದ್ರಸ್ವಾಮಿ. ಸಂಪುಟ ರಚಿಸಿ ಒಂದೂವರೆ ವರ್ಷವಾಗಿದ್ದರೂ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮಾರುಕಟ್ಟೆ ಸಚಿವ ಶಿವರಾಜ್ ತಂಗಡಗಿ ಯಾರು - ಸಮಾಜ ಕಲ್ಯಾಣ ಸಚಿವ ನರೇಂದ್ರಸ್ವಾಮಿ ಯಾರು ಅನ್ನೋ ಕನ್ಫ್ಯೂಷನ್ನಿತ್ತು.
ಶಿವರಾಜ್ ತಂಗಡಗ

                of course, ಇದೊಂದೇ ಕಾರಣಕ್ಕೆ ಬಂಡಾಯವಾಗಿರಲಿಲ್ಲ. ಆವತ್ತು ಮೂರು ತಾಸು ಮಾತಾಡ್ತಾ ಕುಳಿತಿದ್ದ ನರೇಂದ್ರಸ್ವಾಮಿ ತುಂಬ ವಿಷಯ ಹೇಳಿದರು. ಕ್ಷೇತ್ರದ ಸಣ್ಣಪುಟ್ಟ ಕೆಲಸ ಮಾಡಿಸಿಕೊಳ್ಳೋದಕ್ಕೂ ಆಗ್ತಿದ್ದ ಕಷ್ಟಗಳು, ಸಿ.ಎಂ ಆಪ್ತ ಸಚಿವರ ಕಿರಿಕಿರಿಗಳು, ಟೆಂಡರ್ ವಿಷಯಗಳಲ್ಲಿ ಯಡಿಯೂರಪ್ಪನವರ ಕುಟುಂಬದವರ ಹಸ್ತಕ್ಷೇಪಗಳು, ಸಂಪುಟ ಸಭೆ ಕರೆದರೆ ಅಲ್ಲಿ ಪಕ್ಷೇತರರನ್ನ ನಡೆಸಿಕೊಳ್ತಿದ್ದ ರೀತಿ, ಆವಾಗಾವಾಗ ಆಗ್ತಿದ್ದ ಅವಮಾನಗಳು, ಹೀಗೆ. ಒಂದು ಸಲ ಅದ್ಯಾಕೋ ಅಟಲ್ ಬಿಹಾರಿ ವಾಜಪೇಯಿ ನೆನಪಾದರು. ಹದಿಮೂರು ಪಕ್ಷ ಕಟ್ಟಿಕೊಂಡು ಹೆಣಗಿದ ಆ ತಾತಯ್ಯ ಅದೆಷ್ಟು ಯಶಸ್ವಿಯಾಗಿ ಸರಕಾರ ತೂಗಿಸಿಕೊಂಡು ಹೋದರಲ್ಲ, ಆರು ಜನ ಪಕ್ಷೇತರ ಶಾಸಕರನ್ನ ಸಂಭಾಳಿಸೋದಕ್ಕಾಗಲಿಲ್ಲವಾ ಯಡಿಯೂರಪ್ಪನಿಗೆ ಅಂತ.
                Human resource management ಅನ್ನೋದು ಬರಿ corporate sectorಗೆ ಮಾತ್ರ ಅಂದವರಾರು..? ಅದು ರಾಜಕೀಯಕ್ಕೂ apply ಆಗತ್ತೆ, ಆಗಬೇಕು. ಅದೊಂದು ಯಡಿಯೂರಪ್ಪನವರಿಗೆ ಸರಿಯಾಗಿ ಬಂದುಬಿಟ್ಟಿದ್ದರೆ, ಮೂರು ವರ್ಷಗಳಲ್ಲಿ ಬಂದ ಮುಕ್ಕಾಲು ಭಾಗ ಸಮಸ್ಯೆಗಳು ಬರ್ತಾನೇ ಇರಲಿಲ್ಲ. (ರಣ ಹಸಿವು ಮತ್ತು ಮಕ್ಕಳ ಬಗೆಗಿನ ಧೃತರಾಷ್ಟ್ರ ಪ್ರೇಮ ಇರದೇ ಹೋಗಿದ್ದರೆ ಉಳಿದ ಕಾಲು ಭಾಗ ಸಮಸ್ಯೆಗಳೂ ಇರ್ತಿರಲಿಲ್ಲ..!) ಇದೆಲ್ಲ ನಮಗೆ - ನಿಮಗೆ ಸಿಲ್ಲಿ ವಿಷಯ ಅನ್ನಿಸಬಹುದು. ಆದ್ರೆ, ಒಬ್ಬ ಶಾಸಕನಿಗೆ, ಅದರಲ್ಲೂ ಕ್ಯಾಬಿನೆಟ್ ದರ್ಜೆ ಮಂತ್ರಿಗಲ್ಲ. ಅವರು ತಮ್ಮ ತಮ್ಮ ಕ್ಷೇತ್ರಗಳಿಗೆ ಹೋದರೆ ಮತದಾರರು ಹೆಗಲ ಮೇಲೆ ಹೊತ್ತುಕೊಂಡು ಕುಣೀತಾರೆ. ಅದೇ ಬೆಂಗಳೂರಿಗೆ ಬಂದು ಯಡಿಯೂರಪ್ಪನವರ ಎದುರಿಗೆ ನಿಂತರೆ "ನಿಮ್ಮ ಹೆಸರೇನು..?" ಅಂದುಬಿಡೋರು.
                ರಾಜಕಾರಣಿ ಬೇಸಿಕಲಿ ಒಬ್ಬ egoistic ಮನುಷ್ಯ. ಹೆಜ್ಜೆ - ಹೆಜ್ಜೆಗೂ, ಘಳಿಗೆ ಘಳಿಗೆಗೂ ಆತನ ego satisfy ಆಗ್ತಿರಬೇಕು. ಆತ ಎಲೆಕ್ಷನ್ ಗೆಲ್ಲೋದು ಕೂಡ ಆ ego satisfactionನ ಒಂದು ಭಾಗವೇ. ತಾನು ಆಡಳಿತ ಪಕ್ಷದವನು, ತನ್ನೊಬ್ಬನ ಬೆಂಬಲ ಕೂಡ ಈ ಸರಕಾರ ಭದ್ರವಾಗಿರೋದಕ್ಕೆ ಕಾರಣ ಅನ್ನೋ ಯೋಚನೆ ಕೂಡ ಅವನ ego ತಣ್ಣಗಾಗಿಸತ್ತೆ. ಅದು ಯಡಿಯೂರಪ್ಪನವರಿಗೆ ಗೊತ್ತೇ ಇರಲಿಲ್ಲ ಅಂತ ಅನ್ನಿಸೋದು ಭಿನ್ನಮತೀಯ ಶಾಸಕರನ್ನ ಮಾತಾಡಿಸಿದಾಗ. "ಸಹಿ ಮಾಡಿ ಅಂತ ಯಾವ್ದೋ ಫೈಲ್ ತಗೊಂಡು ಹೋದ್ರೆ ಪ್ಲಾಸ್ಟಿಕ್ ಚೇರ್ ಎತ್ತಿ ಹೊಡೆಯೋದಕ್ಕೆ ಬಂದುಬಿಟ್ರು" ಅಂತ ಇನ್ನೊಬ್ಬ ಶಾಸಕರು ಹೇಳಿದರು. "ಮನಸಿಗೆ ತುಂಬ ಬೇಜಾರಾಗಿ ಎಸ್ಕಾರ್ಟ್ ಜೀಪು, ಬೆಂಗಾವಲಿನ ಪೊಲೀಸರನ್ನ ಬಿಟ್ಟು ಒಬ್ಬನೇ ಹೋಗಿ ನನ್ನ ಮನೆದೇವರ ದೇವಸ್ಥಾನದ ಗರ್ಭ ಗುಡಿಯಲ್ಲಿ ಬಾಗಿಲು ಹಾಕಿಕೊಂಡು ಕುಂತು ಸಾಕು ಸಾಕಾಗೋ ತನಕ ಅತ್ತುಬಿಟ್ಟೆ" ಅಂತ ಹೇಳಿದವರು ಒಬ್ಬ ಸಚಿವ. ಅಂಥವರೆಲ್ಲ ಸೇರಿಕೊಂಡು ಯಡಿಯೂರಪ್ಪನಿಗೆ ಮರೆಯಲಾಗದ ಪಾಠ ಕಲಿಸ್ತೀವಿ ಅಂತ ಹೊರಟಾಗ ನಡೆದದ್ದೇ ಗೋವಾ ಬಂಡಾಯ.
                ಪರಿಸ್ಥಿತಿ ಎಲ್ಲಿಗೆ ಬಂದಿತ್ತೆಂದರೆ, ವಿರೋಧ ಪಕ್ಷದಲ್ಲಿ ಒತ್ತಟ್ಟಿಗಿರಲಿ, ಆಡಳಿತ ಪಕ್ಷದಲ್ಲೇ ಯಡಿಯೂರಪ್ಪನವರ ಸಿಟ್ಟಿನ ಬಗ್ಗೆ ಕಥೆಗಳು ಹುಟ್ಟಿಕೊಂಡುಬಿಟ್ಟಿದ್ದವು. ಯಾರೇ ಹೋದರೂ "ಸಾಹೇಬರ ಮೂಡ್ ಹೆಂಗಿದೆ" ಅಂತ ಮೊದಲೇ ಕೇಳೋರು. ಅದೊಂದು ಸಲ "ಇನ್ನು ಮುಂದೆ ನಾನು ಬದಲಾಗ್ತೀನಿ" ಅಂತ ಅಷ್ಟೂ ಚಾನೆಲ್ಲುಗಳ ಎದುರು ಮಾತಾಡಿದರಲ್ಲ, ಆವತ್ತೇ ಮನೆಗೆ ಹೋಗಿ ಗನ್ ಮ್ಯಾನ್ ಒಬ್ಬನ ಮೇಲೆ ಪೇಪರ್ ವೇಟ್ ಎಸೆದರಂತೆ. ಇದು ಯಡಿಯೂರಪ್ಪನವರ ಪತನಕ್ಕೆ ಕಾರಣವಾದ ಹಲವು ವಿಷಯಗಳಲ್ಲಿ ಒಂದು ಮಾತ್ರ. ಹೇಳ್ತಾ ಹೋದ್ರೆ ದೊಡ್ಡ ಪಟ್ಟಿ ಆಗತ್ತೆ. ಅದೊಂದು ಸಲ, ಇದೆಲ್ಲವನ್ನೂ ಸೇರಿಸಿ ಒಂದು ಪುಸ್ತಕ ಯಾಕೆ ಮಾಡಬಾರದು ಅಂತ ಯೋಚಿಸಿದ್ದೂ ಆಗಿತ್ತು. ಆದರೆ, ಆ ಯೋಚನೆಗೆ ದಿನ ತುಂಬೋ ಮೊದಲೇ ಗರ್ಭಪಾತವಾಗಿದ್ದು ಬೇರೆ ಮಾತು.
               ಇವತ್ತು, ಅವರ ರಾಜೀನಾಮೆ ಪ್ರಹಸನದ ಪ್ರತಿ ಬೆಳವಣಿಗೆಯನ್ನೂ ನೋಡ್ತಿದ್ದವನಿಗೆ ಇದೆಲ್ಲ ನೆನಪಾಯಿತು. ದಕ್ಷಿಣ ಭಾರತದಲ್ಲಿ ಮೊಟ್ಟಮೊದಲ ಸಲ ಬಿ.ಜೆ.ಪಿಯನ್ನ ಅಧಿಕಾರಕ್ಕೆ ತಂದ ಯಡಿಯೂರಪ್ಪನವರು ಹೇಗೆ ಮೂರು ವರ್ಷಗಳ ಕಾಲ ತಮ್ಮ ಗುಂಡಿಯನ್ನ ತಾವೇ ತೋಡಿಕೊಂಡರಲ್ಲ ಅಂತ ಯೋಚಿಸಿದರೆ ಆಶ್ಚರ್ಯ ಆಗತ್ತೆ. ಇವತ್ತು ಆ ಗುಂಡಿಯಲ್ಲಿ ಅವರೇ ಬಿದ್ದಿದಾರೆ. ಉಳಿದವರು ಮೇಲಿನಿಂದ ಮಣ್ಣು ಸುರಿಯದಿದ್ದರೆ ಅದು ಯಡಿಯೂರಪ್ಪನವರ ಪೂರ್ವ ಜನ್ಮದ ಪೂಜಾ ಫಲ

Tuesday, July 26, 2011

ಯುದ್ಧ ಅನ್ನೋ ಶಬ್ದ ಕಿವಿಗೆ ಬಿದ್ದರೆ ಸಾಕು...



                     ಹನ್ನೆರಡು ವರ್ಷಗಳ ಹಿಂದಿನ ಮಾತು... ಆಗಷ್ಟೇ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದು ಮುಗಿಸಿದ್ದೆ. ಕಾರ್ಗಿಲ್  ಯುದ್ಧ ಉತ್ತುಂಗದಲ್ಲಿದ್ದ ದಿನಗಳವು. ಪೇಪರ್ ತೆಗೆದರೂ ಅದೇ ಸುದ್ದಿ - ಟಿ.ವಿ ಹಾಕಿದರೂ ಅದೇ ಸುದ್ದಿ. ಮನೆಯಲ್ಲಿ ದೂರದರ್ಶನ್ ಮಾತ್ರ ಬರ್ತಿತ್ತು. ಆವತ್ತೊಂದು ಮಧ್ಯಾಹ್ನದ ಹೊತ್ತು ಊಟ ಮಾಡ್ತಾ ಟಿ.ವಿ ಹಾಕಿದರೆ, ಒಬ್ಬ ಮಧ್ಯವಯಸ್ಕ ಮಹಿಳೆ ಸ್ಪಷ್ಟ ಹಿಂದಿಯಲ್ಲಿ ಮಾತಾಡ್ತಾ, ತಮ್ಮ ಮಗ ಸೌರಭ್ ಐದನೇ ಕ್ಲಾಸಿನಲ್ಲಿ ಓದ್ತಿದ್ದಾಗ ನಡೆದ ಘಟನೆಯೊಂದನ್ನ ನೆನಪು ಮಾಡಿಕೊಳ್ತಿದ್ರು.
                    "ಒಂದು ಸಲ ನಾನು ಟಿ.ವಿ ನೋಡ್ತಾ ಕುಳಿತಿದ್ದೆ. ಅದರಲ್ಲಿ ಕಪಿಲ್ ದೇವ್ ತಾಯಿಯ ಇಂಟರ್ವ್ಯೂ ಬರ್ತಿತ್ತು. ಸೌರಭ್ ಪಕ್ಕದಲ್ಲೇ ಆಟ ಆಡ್ತಾ ಕುಂತಿದ್ದ. ನಾನು ಅವನನ್ನ ಕರೆದು, ನೋಡು ಸೌರಭ್ ಕಪಿಲ್ ದೇವ್ ಎಷ್ಟು ದೊಡ್ಡ ಮನುಷ್ಯ, ಅವನಿಂದಾಗಿ ಅವನ ತಾಯಿ ಕೂಡ ಟಿ.ವೀಲಿ ಬರ್ತಿದಾರೆ ಅಂದೆ. ಅದಕ್ಕೆ ಸೌರಭ್, ನೋಡ್ತಿರು ಅಮ್ಮಾ ನಾನು ಮುಂದೆ ಎಷ್ಟು ದೊಡ್ಡ ಮನುಷ್ಯ ಆಗ್ತೀನಿ ಅಂದ್ರೆ, ನನ್ನಿಂದಾಗಿ ನೀನು ಕೂಡ ಟಿ.ವೀಲಿ ಬರ್ತಿಯಾ, ಅಂದುಬಿಟ್ಟ. ಇವತ್ತು ಅವನಿಂದಾಗಿ ನಾನು ಟಿ.ವೀಲಿ ಬರ್ತಿದೀನಿ, ನೋಡೋದಕ್ಕೆ ಅವನೇ ಇಲ್ಲ" ಅನ್ನುವಷ್ಟರಲ್ಲಿ ಅವರಿಗೆ ದುಃಖ ತಡೆದುಕೊಳ್ಳೋದಕ್ಕಾಗಲಿಲ್ಲ. ಮಾತು ಗದ್ಗದ.
                     ಆಕೆ ಸೌರಭ್ ಕಾಲಿಯಾ ತಾಯಿ. ಸೋಲು ಅನ್ನೋ ಶಬ್ದ ಅವರ ಮಗನಿಗೆ ಹತ್ತಿರಕ್ಕೂ ಸುಳಿದಿರಲಿಲ್ಲ. ಬಿ.ಎಸ್.ಸಿ ಮುಗಿಸಿದವನು ಮಿಲಿಟರಿಗೆ ಸೇರಿಕೊಳ್ತೀನಿ ಅಂತ ಹೋದ. ಡೆಹರಾಡೂನ್ ಇಂಡಿಯನ್ ಮಿಲಿಟರಿ ಅಕ್ಯಾಡಮಿ ಕೈ ಬೀಸಿ ಕರೆಯಿತು. ಒಂದು ವರ್ಷ ತರಬೇತಿ ಮುಗಿಸಿದವನು ಜಾಟ್ ರೆಜಿಮೆಂಟಿನಲ್ಲಿ ಕ್ಯಾಪ್ಟನ್ ಆದ. ಮೊದಲನೇ ಪೋಸ್ಟಿಂಗೇ ಕಾರ್ಗಿಲ್ ಸೆಕ್ಟರ್ನ ಕಸ್ಕರ್ ಗೆ. ಜನವರಿ ತಿಂಗಳ ಎರಡನೇ ವಾರದಲ್ಲಿ ಸೌರಭ್ ಡ್ಯೂಟಿಗೆ ರಿಪೋರ್ಟ್ ಮಾಡಿಕೊಂಡಾಗ ಅಲ್ಲಿ ಕಟಿಕಟಿ ಚಳಿ. ಬೆಟ್ಟದ ಮೇಲೆ ಮಂಜು ಬೀಳೋದಕ್ಕೆ ಶುರುವಾದ ನಂತರ ಅಲ್ಲಿನ ಬಂಕರುಗಳಲ್ಲಿ ಗಡಿ ಕಾಯೋ ಸೈನಿಕರು ಕೆಳಗಿಳಿದು ಬಂದುಬಿಡ್ತಾರೆ. ಮತ್ತೆ ಬರ್ಫು ಕರಗಿದ ನಂತರ ಮೇಲೆ ಹತ್ತಿ ಹೋಗಿ ಬಂಕರ್ ಸೇರಿಕೊಂಡು ಗಡಿಯ ದಿಕ್ಕಿಗೆ ಬಂದೂಕು ನೆಟ್ಟುಕೊಂಡು ನಿಲ್ತಾರೆ. ಅದು ವರ್ಷಗಳಿಂದ ನಡೆದುಕೊಂಡು ಬಂದಿದ್ದ ಪದ್ಧತಿ. ಆ ಸಲ ಮೇ ಮಧ್ಯದಲ್ಲಿ ಮಂಜೆಲ್ಲ ಕರಗಿದ ಮೇಲೆ, ನಮ್ಮ ಬಂಕರುಗಳು ಸುಸ್ಥಿತಿಯಲ್ಲಿವೆಯಾ ಅಂತ ನೋಡಿಕೊಂಡು ಬರೋದಕ್ಕೆ ಒಂದು ಪೆಟ್ರೋಲಿಂಗ್ ಟೀಮ್ ಕಳಿಸಿದಾಗ ಅದರ ನೇತೃತ್ವ ವಹಿಸಿದವನು ಸೌರಭ್. ಅವನನ್ನೂ ಸೇರಿಸಿ ಆರು ಜನ ಇದ್ದರು.

                    ಬೆಟ್ಟ ಹತ್ತಿ ಹೋದ ಸೌರಭ್, ಇಲ್ಲಿ ಶತೃ ನೂರಾರು ಸಂಖ್ಯೆಯಲ್ಲಿ ಒಳಗೆ ನುಸುಳಿದಾನೆ ಅಂತ ವೈರ್ ಲೆಸ್ ಮೆಸೇಜ್ ಕೊಟ್ಟ. ತಾನು ಐದೇ ಐದು ಜನ ಸಿಪಾಯಿಗಳ ಸಮೇತ ಭಜರಂಗ್ ಪೋಸ್ಟ್ ಅಂತ ಕರೆಸಿಕೊಳ್ಳೋ ಬಂಕರಿನಲ್ಲಿ ಕಾಲೂರಿಕೊಂಡು ನಿಂತು ಶತೃವನ್ನ ಎದುರಿಸ್ತೀನಿ ಅಂತ ತಯಾರಾದ. ಅಷ್ಟೊತ್ತಿಗಾಗಲೇ ಆತನ ವೈರ್ ಲೆಸ್ ಸೆಟ್ ಕೆಟ್ಟು ಹೋಗಿ ಹೆಡ್ಕ್ವಾರ್ಟರ್ ಜೊತೆ ಸಂಪರ್ಕ ಇಲ್ಲದಂತಾಗಿತ್ತು. ಪರಿಸ್ಥಿತಿ ಹೇಗಿದೆ ಅಂತ ನೋಡಿಕೊಂಡು ಬರೋದಕ್ಕೆ ಇನ್ನೊಂದು ತಂಡ ಕಳೆಸಿದರೆ ಅವರ ಮೇಲೆ ಗುಂಡಿನ ಸುರಿಮಳೆ. ನೋಡ ನೋಡ್ತಿದ್ದಂತೆಯೇ ಕಾರ್ಗಿಲ್ ಯುದ್ಧಾನೇ ಶುರುವಾಗಿ ಹೋಗಿತ್ತು. ಭರ್ತಿ ಇಪ್ಪತ್ತೆರಡು ದಿನಗಳ ನಂತರ ಸೌರಭ್ ಕಾಲಿಯಾ ಮತ್ತು ಆತನ ಐವರು ಸಿಪಾಯಿಗಳ ಶವಗಳನ್ನ ಭಾರತಕ್ಕೆ ಕೊಟ್ಟಿತು ದುಷ್ಟ ಪಾಕಿಸ್ತಾನ. ಶವಗಳು ಗುರುತು ಹಿಡಿಯೋ ಸ್ಥಿತಿಯಲ್ಲಿರಲಿಲ್ಲ. ಅವರನ್ನ ಜೀವಂತವಾಗಿ ಸೆರೆಹಿಡಿದು ಚಿತ್ರಹಿಂಸೆ ಕೊಟ್ಟು ಸಾಯಿಸಲಾಗಿದೆ ಅಂತ postmortem report ಹೇಳಿತ್ತು. ಆ ಸೌರಭ್ ಕಾಲಿಯಾನ ತಾಯಿ ಆವತ್ತು "ನನ್ನ ಮಗ ನನಗೆ ಮಾತು ಕೊಟ್ಟಿದ್ದ, ತನ್ನಿಂದಾಗಿ ನಾನು ಟಿ.ವೀಲಿ ಬರ್ತೀನಿ ಅಂತ" ಅನ್ನೋ ಮಾತುಗಳನ್ನಾಡ್ತಿದ್ರೆ ಯಾಕೋ ಕೈಗೆತ್ತಿಕೊಂಡಿದ್ದ ತುತ್ತು ಹಂಗೇ ತಟ್ಟೆಯೊಳಕ್ಕೆ ಬಿದ್ದುಬಿಟ್ಟಿತ್ತು. ಅಷ್ಟಕ್ಕೇ ಊಟ ಬಿಟ್ಟು ಎದ್ದುಬಿಟ್ಟೆ.
                    ಧಾರವಾಡ ತಾಲೂಕಿನಲ್ಲಿ ಕೊಟಬಾಗಿ ಅಂತ ಒಂದು ಸಣ್ಣ ಹಳ್ಳಿ ಇದೆ, ಅಲ್ಲಿ ಕಲ್ಲಪ್ಪ ಪಾಗಾದ್ ಅನ್ನೋ ನನ್ನ ಪರಿಚಯದ ಸಿಪಾಯಿಯೊಬ್ಬ ಇದಾನೆ. ಆವತ್ತು ಗಡಿಯಲ್ಲಿ ಸೌರಭ್ ಮತ್ತು ಇತರ ಐವರ ಶವಗಳನ್ನ ಪಡೆದ ತಂಡದಲ್ಲಿ ಆತ ಕೂಡ ಇದ್ದ. ಯುದ್ಧ ಮುಗಿದು ಐದಾರು ತಿಂಗಳ ನಂತರ ಕಲ್ಲಪ್ಪ ರಜೆಗೆ ಬಂದಿದ್ದ. ಆವತ್ತೊಂದು ರಾತ್ರಿ ತೋಟದ ಮನೆಯ ಕಟ್ಟೆ ಮೇಲೆ ಮಾತಾಡ್ತಾ ಕುಳಿತಿದ್ದಾಗ ಆತ ಹೇಳಿದ್ದ. " ಆರೂ ಜನರ ಕಿವಿ ಕತ್ತರಿಸಿದ್ರು, ಇಕ್ಕಳ ಹಾಕಿ ಅಷ್ಟೂ ಹಲ್ಲು - ಉಗುರು ಕಿತ್ತಿದ್ರು, ಕಣ್ಣ ಗುಡ್ಡಿ ಮೀಟಿ ತೆಗೆದುಬಿಟ್ಟಿದ್ರು. ಅದರಲ್ಲೂ ಸೌರಭ್ ಗೆ, ಆತನ ಮರ್ಮಾಂಗ  ಕತ್ತರಿಸಿ ಅವನದೇ ಬಾಯಲ್ಲಿಟ್ಟು ಕಳಿಸಿದ್ದ ದುಶ್ಮನ್. ಹೆಣ ತಗೊಳ್ಳೋದಕ್ ಹೋದ ನಮ್ಮನ್ನ ನೋಡಿ ಅಪಹಾಸ್ಯ ಮಾಡಿ ನಕ್ಕರು. ಅವಡುಗಚ್ಚಿಕೊಂಡು ತಗೊಂಡು ಬಂದುಬಿಟ್ವಿ. ಆ ಸುದ್ದಿ ಸೈನ್ಯದ ತುಂಬ ಅದ್ಯಾವ ಪರಿ ಹರಡಿತೆಂದರೆ, ಹುಚ್ಚೆದ್ದು ನುಗ್ಗಿದ್ವಿ, ರಣಕೇಕೆ ಹಾಕಿಕೊಂಡು ಬೆಟ್ಟಹತ್ತಿ ಗುಂಡು ಹಾರಿಸಿದ್ವಿ, ಬಂಕರ್ ತಲುಪೋ ಹೊತ್ತಿಗೆ ಅಳಿದುಳಿದ ಶತೃಗಳು ಪಾಕಿಸ್ತಾನದ ದಿಕ್ಕಿಗೆ ಓಡಿ ಹೋಗಿರ್ತಿದ್ರು, ಉಳಿದವರ ಶವಗಳು ಅಲ್ಲೇ ಬಿದ್ದಿರ್ತಿದ್ವು, ಅವುಗಳ ನಡುವೆ ಗಾಯಗೊಂಡವರು ನರಳ್ತಾ ಮಲಗಿರ್ತಿದ್ರಲ್ಲ, ಅವರು ನಾವು ಹೋದ ಕೂಡಲೇ ಪ್ರಾಣ ಭಿಕ್ಷೆ ಬೇಡೋರು. ಮನೇಲಿ ವಯಸ್ಸಾದ ತಂದೆ - ತಾಯಿ ಇದಾರೆ, ಸಣ್ಣ - ಸಣ್ಣ ಮಕ್ಕಳಿದಾರೆ, ಹೆಂಡತಿ ಗರ್ಭಿಣಿ ಅನ್ನೋರು. ಅವರನ್ನ ನೋಡಿದ ಕೂಡಲೇ ಸೌರಭ್ ಕಾಲಿಯಾ ಮತ್ತು ಅವನ ಜೊತೆಗಿದ್ದ ಐದು ಜನ ಸೈನಿಕರು ನೆನಪಾಗಿಬಿಡ್ತಿದ್ರು. ಅವರಿಗಿರಲಿಲ್ಲವಾ ತಂದೆ - ತಾಯಿ, ಹೆಂಡತಿ ಮಕ್ಕಳು..? ಸಿಟ್ಟು ತಡೆಯೋದಕ್ಕಾಗ್ತಿರಲಿಲ್ಲ..." ಅಂತ ಇನ್ನೂ ಏನೇನೋ ಹೇಳಿದ್ದ ಕಲ್ಲಪ್ಪ. ಆವತ್ತು ನಾನು ಮೊಟ್ಟಮೊದಲ ಸಲ ಅವನ ಕಣ್ಣಿನಲ್ಲಿ ನೀರು ನೋಡಿದ್ದೆ. ಅನ ಕಣ್ಣು ಹಿಂದ್ಯಾವತ್ತೂ ಅಷ್ಟು ಕೆಂಪಗಾಗಿರಲಿಲ್ಲ...
                    ಹನ್ನೆರಡು ವರ್ಷಗಳಾಗಿ ಹೋದವು. ಇವತ್ತಿಗೂ ಕಾರ್ಗಿಲ್ ಅನ್ನೋ ಶಬ್ದ ಕಿವಿಗೆ ಬಿದ್ದರೆ ಸಾಕು, ಸೌರಭ್ ಕಾಲಿಯಾನ ತಾಯಿಯ ಮುಖ ಕಣ್ಣ ಮುಂದೆ ಬಂದಂತಾಗತ್ತೆ. ಯುದ್ಧ ಅನ್ನೋ ಶಬ್ದ ಕೇಳಿದರೆ ಸಾಕು, ನಿಗಿ ಕೆಂಡದಷ್ಟು ಕೆಂಪಗೆ ಕಣ್ಣು ಮಾಡಿಕೊಂಡು ಬಂದೂಕು ಹಿಡಿದ ಕಲ್ಲಪ್ಪ ಪಾಗಾದನ ಎದುರಿಗೆ ಪ್ರಾಣ ಭಿಕ್ಷೆ ಬೇಡ್ತಿರೋ ಪಾಕಿ ಸೈನಿಕ ನೆನಪಾಗ್ತಾನೆ. ಯಾಕೋ ಅವೆರಡು ಮುಖ ಮರೆಯೋದಕ್ಕೆ ಆಗ್ತಾನೇ ಇಲ್ಲ.

Tuesday, July 19, 2011

ಒಂದು ಬಾಂಬ್ ಬ್ಲಾಸ್ಟ್ ಸುತ್ತ ಎಷ್ಟೊಂದು ಅವಿವೇಕಗಳು..?

                         ಎಷ್ಟು ನೆಮ್ಮದಿಯಾಗಿತ್ತು ಮುಂಬೈ. ಹಿಂದ್ಯಾವತ್ತೂ ಇಲ್ಲಿ ಟೆರರಿಸ್ಟ್ ಅಟ್ಯಾಕೇ ಆಗಿಲ್ಲವೇನೋ - ಬಾಂಬುಗಳೇ ಸಿಡಿದಿಲ್ಲವೇನೋ ಅನ್ನೋ ಹಾಗೆ ಎಲ್ಲವನ್ನೂ ಮರೆತು ಮತ್ತೆ ಜನ normal lifeಗೆ ಯಾವತ್ತೋ ಮರಳಿದ್ದರು. ಅದೇ ಧಡಂ ಧಡಕಿಯ ಬದುಕು, ಅಪಾರ್ಟಮೆಂಟ್ ಜೀವನ, ಲೋಕಲ್ ಟ್ರೇನು, ಸಂಜೆಯ ಚಾಟ್ ಮಸಾಲ, ವೀಕೆಂಡ್ ಪಿಕ್ನಿಕ್ಕು ಅಂದುಕೊಂಡು ತಮ್ಮ ತಮ್ಮ ಬದುಕುಗಳನ್ನ ಹಳಿಗೆ ತಂದುಕೊಂಡಿದ್ದರು. ಈಗ ನೋಡಿದರೆ, ಮತ್ತೆ ಧಡಂ - ಧುಡುಂ...

                        ಇವತ್ತು ಬೇಕಿದ್ರೆ ಮುಂಬೈಗೆ ಹೋಗಿ ನೋಡಿ, ಇಲ್ಲಿ ಬಾಂಬು ಸಿಡಿದದ್ದೇ ಸುಳ್ಳೇನೋ ಅನ್ನಿಸುವಷ್ಟು ನೆಮ್ಮದಿಯಾಗಿ ಇರ್ತಾರೆ ಜನ. ಸಾಯೋರು ಸತ್ತರು. ಅವರ ಮನೆಗವರು ಮಣ್ಣು ಕೊಡ್ತಾರೆ. ಗಾಯಗೊಂಡು ಆಸ್ಪತ್ರೆ ಸೇರಿರೋರು ಗ್ಲುಕೋಸು ಏರಿಸಿಕೊಳ್ತಿದಾರೆ. ಅವರಿಗೆ ಅವರ ಮನೆ ಜನ ಇಡ್ಲಿ ಸಾಂಬಾರ್ ತಂದು ಕೊಡ್ತಾರೆ. ಸತ್ತವರಿಗೆ - ಸಾಯದೇ ಉಳಿದವರಿಗೆ ಸರ್ಕಾರ ಯೋಗ್ಯತೆಗನುಸಾರವಾಗಿ ಪರಿಹಾರ ಕೊಡತ್ತೆ. ಬ್ಲಾಸ್ಟ್ ಆದ ಜಾಗಕ್ಕೆ ಒಂದಷ್ಟು ಜನ ಮಂತ್ರಿ ಮಾಗಧರು - ಆಫೀಸರ್ಗಳು ಬಂದು ಹೋಗ್ತಾರೆ. ಟಿ.ವಿ ಚಾನೆಲ್ಲುಗಳವರು ಹೊಸಾ ಸುದ್ದಿ ಸಿಗೋ ತನಕ ಹೇಳಿದ್ದನ್ನೇ ಮತ್ತೆ ಮತ್ತೆ ಹೇಳ್ತಿರ್ತಾರೆ. ಆಗಿರೋ ಮೂರು ಬ್ಲಾಸ್ಟಿಗೆ ಮೂವತ್ತು angleನ ಸ್ಟೋರಿಗಳು. "ಕ್ಯಾ ಏ ಕಸಬ್ ಕೆ ಲಿಯೇ ಬರ್ತ್ ಡೇ ಗಿಫ್ಟ್ ಹೈ..? ಧಮಾಕೆ ಕೆ ಪೀಛೆ ಲಷ್ಕರೆ ತಯ್ಯಬಾ ಕಾ ಹಾಥ್, ಪೆಹಲೆ ಫೋನ್ ಕಿಯೆ ಥೆ ಆತಂಕವಾದಿ, ಸಿ.ಸಿ.ಟಿ.ವಿ ಮೆ ಆತಂಕವಾದಿಯೋಂಕಾ ಎಕ್ಸ್ಕ್ಲೂಸೀವ್ ದೃಶ್ಯ್... ಹೀಗೆ. ಕೈಯಲ್ಲಿ ರಿಮೋಟ್ ಹಿಡಿದು ಕುಂತ ಮುಂಬೈಕರ್ " ಸಾಲಾ ಏ ತೋ ರೋಜ್ ರೋಜ್ ಕಾ ನಾಟಕ್ ಹೈ " ಅಂತ ಚಾನಲ್ ಬದಲಿಸ್ತಾನೆ. ಮತ್ತೆ ಬೆಳಿಗ್ಗೆದ್ದು ಬುತ್ತಿ ಕಟಗೊಂಡು ಲೋಕಲ್ ಟ್ರೇನಿಗೆ ಓಡ್ತಾನೆ. ಈ ಊರಿನಲ್ಲಿ ಬಾಂಬ್ ಬ್ಲಾಸ್ಟ್ ಅನ್ನೋದು ಸತ್ತವರ - ಗಾಯಗೊಂಡವರ ಮನೆಗಳವರು, ಕೆಲವೇ ಕೆಲವು ಪೊಲೀಸರು ಮತ್ತು ನ್ಯೂಸ್ ಚಾನೆಲ್ಲುಳವರಿಗೆ ಮಾತ್ರ ಸಂಬಂಧಪಟ್ಟ ವಿಷಯ ಅಂತ ಉಳಿದವರು ನಿರ್ಧರಿಸಿರುವುದರಿಂದ, ಇಂಥ ಇನ್ನೂ ಹತ್ತು ಬ್ಲಾಸ್ಟುಗಳಾದರೂ ಪರಿಸ್ಥಿತಿ ಹೀಗೇ ಇರತ್ತೆ. and its a shame... ಇಂಥದ್ದೊಂದು ಶೇಮ್ ಏಕಾಏಕಿ ಆಗಿರೋದಲ್ಲ. ಇದಕ್ಕೆ ಹದಿನೇಳು ವರ್ಷಗಳ ಇತಿಹಾಸ ಇದೆ.
                        ಹದಿನೇಳು ವರ್ಷಗಳಾದವು ಅದೊಂದು ಸೀರಿಯಲ್ ಬಾಂಬ್ ಬ್ಲಾಸ್ಟ್ ನಡೆದು. ದಾವೂದ್ ತನ್ನ ಹುಡುಗರ ಜೊತೆ ಸೇರಿಕೊಂಡು ನಡೆಸಿದ ಹದಿಮೂರು ಸ್ಫೋಟಗಳಲ್ಲಿ 257 ಜನ ಸತ್ತರು. ಇವತ್ತಿನ ತನಕ ದಾವೂದ್ ಸಿಕ್ಕಿಲ್ಲ. ಆತನನ್ನ ನಮಗೆ ಕೊಡಿ ಅಂತ ಭಾರತ ಪಾಕಿಸ್ತಾನದ ಎದುರು ಮಂಡಿಯೂರಿ ಕುಂತು ಬೇಡಿಕೊಳ್ಳತ್ತೆ. ಕೊಡದಿದ್ರೆ ಅಮೇರಿಕಕ್ ಹೇಳ್ತೀನ್ ನೋಡೂ ಅಂತ ಹೆದರಿಸತ್ತೆ. ಪಾಕಿಸ್ತಾನಕ್ಕೆ "ದಾದ್ ನೈ ಫಿರಾದ್ ನೈ". ಆ ಕೇಸಿನಲ್ಲಿದ್ದ ಕಾಂಜಿ ಪೀಂಜಿಗಳಿಗೆಲ್ಲ ಶಿಕ್ಷೆ ಕೊಟ್ಟು ಮೀಸೆ ತಿರುವಿಕೊಳ್ಳತ್ತೆ ನಮ್ಮ ಸರಕಾರ. ಆ ಕಡೆ ಅಮೇರಿಕಾನ್ನ ನೋಡಿ. 2001 ರ ಸಪ್ಟೆಂಬರ್ 11 ಕ್ಕೆ ಡಬ್ಲು.ಟಿ.ಸಿ ಮೇಲೆ ಅಟ್ಯಾಕ್ ಆದದ್ದು. ಇದು ತಾಲಿಬಾನಿಗಳ ಜೊತೆ ಸೇರಿಕೊಂಡು ಅಲ್ ಖೈದಾದವರು ಮಾಡಿದ ಕೆಲಸ ಅಂತ ಒಂದು ಸಣ್ಣ ಸಂಶಯ ಬಂದದ್ದೇ ಬಂದದ್ದು. ಹದಿನೈದು ದಿನಗಳಲ್ಲಿ ದಂಡು ಕಟ್ಟಿಕೊಂಡು ಬಂದು ಬಿಟ್ಟರಲ್ಲ ಅಫಘಾನಿಸ್ತಾನದ ಮೇಲೆ. ಅಲ್ ಖೈದಾನ್ನ ಸತ್ಯಾನಾಶ ಮಾಡಿ ಹಾಕಿದ್ರು. ತಾಲೀಬಾನಿಗಳ ಸರ್ಕಾರ ಕಿತ್ಹಾಕಿ ತಮಗೆ ಬೇಕಾದ ನಾರ್ದನ್ ಅಲಯನ್ಸ್ ಸರ್ಕಾರ ಮಾಡಿದರು. ಕಳ್ಳಬಿದ್ದು ತಪ್ಪಿಸಿಕೊಂಡ ಬಿನ್ ಲಾಡೆನ್ ನನ್ನ ಪಾಕಿಸ್ತಾನದೊಳಕ್ಕೆ ಹೊಕ್ಕು ಹೊಡೆದು ಬಂದ್ರು. target accomplished. ನಾವು..? ದಾವೂದ್ ಬೇಕು, ಟೈಗರ್ ಮೆಮೋನ್ ಬೇಕು, ಛೋಟಾ ಶಕೀಲ್ ಬೇಕು ಅಂತ ಬೇಡಿಕೊಳ್ತಾನೇ ಇದೀವಿ.
                        ವರ್ಲ್ಡ್ ಟ್ರೇಡ್ ಸೆಂಟರಿನೊಳಕ್ಕೆ ವಿಮಾನಗಳು ನುಗ್ಗಿದ್ದೇ ಕೊನೆ. ಅಮೇರಿಕದಲ್ಲಿ ಮತ್ತೊಂದೇ ಒಂದು ಭಯೋತ್ಪಾದಕ ದಾಳಿ ಆಯ್ತಾ ನೋಡಿ. ಊಹ್ಞೂಂ... ಹಂಗಂತ ಉಗ್ರರಾರೂ ಅಲ್ಲಿ ಬಾಂಬ್ ಸಿಡಿಸೋ ಪ್ರಯತ್ನ ಮಾಡಲೇ ಇಲ್ಲ ಅಂತಲ್ಲ. ಅಪ್ಪಿ ತಪ್ಪಿ ಕೂಡ ಅವರು ಒಳಕ್ಕೆ ಬರದಂತೆ ತನ್ನ ಗಡಿಗಳನ್ನ ಬಂದೋಬಸ್ತು ಮಾಡ್ಕೊಂಡ್ತು ಆ ದೇಶ. ಇವತ್ತು ಯಾರಾದರೂ ವಿದೇಶಿ ಆ ದೇಶಕ್ಕೆ ಹೋಗೋದಕ್ಕೆ ವೀಸಾ ಕೇಳಿದರೆ ಆತನ ಜನ್ಮಾನೇ ಜಾಲಾಡಿ ಬಿಡ್ತಾರೆ. ಬಾಂಬು - ಬಂದೂಕು ಒತ್ತಟ್ಟಿಗಿರಲಿ, ಸೆಂಟ್ ಬಾಟಲ್ ಇಟ್ಕೊಂಡು ಅವರ ವಿಮಾನ ನಿಲ್ದಾಣದೊಳಕ್ ಹೋಗೋದಕ್ಕಾಗಲ್ಲ. ಅಷ್ಟೆಲ್ಲಾ ಮುನ್ನೆಚ್ಚರಿಕೆ ತಗೊಂಡು ಕೂಡ ಅಕಸ್ಮಾತ್ ವಿಮಾನ ಅಪಹರಣ ಆದ್ರೆ ಹಿಂದೆ ಮುಂದೆ ನೋಡದೇ ಹೊಡೆದುರುಳಿಸಬೇಕು ಅಂತ ಕಾನೂನು ಮಾಡ್ಕೊಂಡಿದಾರೆ.
                       ಅದಕ್ಕೇ ನಾವು ಇಚ್ಛಾ ಶಕ್ತಿ ಅನ್ನೋದು. ಅಫಘಾನಿಸ್ತಾನದಲ್ಲಿ, ಇರಾಕಿನಲ್ಲಿ ಅಮೇರಿಕದವರು ಮಾಡಿದ ಅನಾಹುತಗಳಿಗೆ ಸೇಡು ತೀರಿಸಿಕೊಳ್ತೀವಿ ಅಂತ ಅಲ್ಲಿನ ಜನರೇನಾದರೂ ಹೊರಟಿದ್ರೆ, ಅಮೇರಿಕದಲ್ಲಿ ದಿನಕ್ಕೊಂದು ಬಾಂಬ್ ಸಿಡೀತಿದ್ವು. ಈ ದೇಶ ಅದಕ್ಕೆ ಅವಕಾಶಾನೇ ಕೊಡಲಿಲ್ಲ. ಈ ಕಡೆ ನಮ್ಮಲ್ಲಿ ಮಾತ್ರ ಆರ್.ಎಸ್.ಎಸ್ ನವರು ಬಾಬರಿ ಮಸೀದಿ ಕೆಡವಿದ್ದಕ್ಕೇ ಮುಸ್ಲಿಂ ಸಂಘಟನೆಗಳು ಸೇಡುತೀರಿಸಿಕೊಳ್ಳೋದಕ್ಕೆ ಬಾಂಬ್ ಸಿಡಿಸಿದ್ವು, ಗುಜರಾತ್ನಲ್ಲಿ ನರೇಂದ್ರ ಮೋದಿ ಮುಸ್ಲಿಮರ ವಿರುದ್ಧ ಗಲಭೆ ಮಾಡಿಸಿದ್ದೇ ಈ ಎಲ್ಲಾ ಅನಾಹುತಗಳಿಗೆ ಕಾರಣ ಅಂತ ಮಾತಾಡೋ ದೀಡು ಪಂಡಿತರಿದ್ದಾರೆ. nonsense... ನರೇಂದ್ರ ಮೋದಿಯನ್ನ ಕೊಲ್ತೀನಿ ಅಂತ ಯಾರಾದರೂ ಉಗ್ರ ಹೇಳಿದರೆ ಅದಕ್ಕೆ ಲಾಜಿಕ್ ಇದೆ. ಆದರೆ, ಗುಜರಾತ್ ಗಲಭೆಗೆ ಮುಂಬೈ ಜನರ ಮೇಲೆ ಸೇಡು ತೀರಿಸಿಕೊಳ್ತೀನಿ ಅಂದ್ರೆ ಅದ್ಯಾವ ಲೆಕ್ಕಾಚಾರ..?
                      ಫೈನ್, ಇದು ಮುಸ್ಲಿಂರ ವಿರುದ್ಧ ನಡೆದ ದೌರ್ಜನ್ಯಕ್ಕೆ ಸೇಡು ಅಂತಾನೇ ಇಟ್ಕೊಳ್ಳಿ. ಆದರೆ, ಪಾಕಿಸ್ತಾನದಲ್ಯಾವ ಬಾಬರಿ ಮಸೀದಿ ಬಿದ್ದಿತ್ತು..? ಅಲ್ಯಾಕೆ ಬಾಂಬ್ ಸಿಡಿದವು..? ಬೆನಜಿರ್ ಭುಟ್ಟೋ ಏನು ನರೇಂದ್ರ ಮೋದಿಯಾ..? ಬಾಂಗ್ಲಾ ದೇಶದಲ್ಲಿ ಗುಜರಾತ್ ಗಲಭೆ ಆಗಿತ್ತಾ..? ಬೇಸಿಕಲಿ ಒಂದು ಮಾತು ಮಾತ್ರ ಸತ್ಯ. ಉಗ್ರರಿಗೆ ಹಾಕೋದಕ್ಕೆ ಬಾಂಬ್ ಬೇಕು - ಸಾಯೋದಕ್ ಜನ ಬೇಕು. ಅಂಥವರನ್ನ ಎದುರಿಸೋದಕ್ಕೆ ಒಂದು ಬೇರೆಯದೇ ಮನಸ್ಥಿತಿ ಬೇಕು. ಅದನ್ನ ನಮ್ಮ ನಾಯಕರುಗಳ್ಯಾವತ್ತೂ ತೋರಿಸಲಿಲ್ಲ ಅನ್ನೋದೇ ವಿಷಯ. ಅದಕ್ಕೇ 1993ರ ಮುಂಬೈ ಸೀರಿಯಲ್ ಬಾಂಬ್ ಬ್ಲಾಸ್ಟ್ ನಂತರ ಇಲ್ಲಿ ನಲವತ್ತೆರಡು ಬೇರೆ ಬೇರೆ ಟೆರಿಸ್ಟ್ ಅಟ್ಯಾಕ್ ಆಗಿವೆ. ಅವುಗಳಲ್ಲಿ ಮುಂಬೈಯೊಂದರಲ್ಲೇ ಐದು ದಾಳಿಗಳು. ಈ ದೇಶದಲ್ಲಿ ಏನು ಬೇಕಾದರೂ ಮಾಡಿ ಸೇಫ್ ಆಗಿ ಹೊರಗೆ ಹೋಗಿಬಿಡಬಹುದು ಅನ್ನಿಸಿಬಿಟ್ಟಿದೆಯೇನೋ ಟೆರರಿಸ್ಟುಗಳಿಗೆ. ವಿದೇಶಕ್ ಹೋದ್ರೆ, ವಾಪಸ್ ಕರಿಸಿಕೊಳ್ಳೋದಕ್ಕಂತೂ ಆಗಲ್ಲ. ಅಕಸ್ಮಾತ್ ಸಿಕ್ಕಿಬಿದ್ರೆ ಹಿಡಿದು ನೇಣಿಗೆ ಹಾಕಿಬಿಡ್ತಾರೆ ಅನ್ನೋ ಭಯಾನೂ ಇಲ್ಲ. ನಮ್ಮ ವಿಮಾನ ಒತ್ತೆ ಇಟ್ಕೊಂಡು ಬಿಡಿಸಿಕೊಂಡು ಹೋದ ಮೌಲಾನಾ ಮಸೂದ್ ಅಜರ್ ಈಗ ಪಾಕಿಸ್ತಾನದಲ್ಲಿ ಓಪನ್ ಆಗಿ ಓಡಾಡ್ಕೊಂಡಿದಾನೆ. ಇಲ್ಲಿನ ಜೈಲಿನಿಂದ ಹೊರಗೆ ಹೋದ ಈತ ಸುಮ್ಮನೆ ಕುಂತಿದ್ದರೆ ಆ ಮಾತು ಬೇರೆ. ತನ್ನ ಹುಡುಗರನ್ನ ಬಿಟ್ಟು ನಮ್ಮ ಪಾರ್ಲಿಮೆಂಟ್ ಮೇಲೆ ದಾಳಿ ಮಾಡಿಸಿದ. ಈ ದಾಳಿಯಲ್ಲಿ ಅರೆಸ್ಟ್ ಆದವನು ಅಫ್ಜಲ್ ಗುರು. ಆತನನ್ನ ಗಲ್ಲಿಗೆ ಹಾಕಬೇಕು ಅಂದರೆ, ಬೇಡ ಅಂತ ಹೇಳೋದಕ್ಕೆ ಕಾಶ್ಮೀರದಿಂದ ನಿಯೋಗ ಬರತ್ತೆ. ಅವನ್ನ ಬಿಡಿ. ಈ ಅಜ್ಮಲ್ ಕಸಬನ ಕಥೆ ಏನು..? ಇವನ ಜೊತೆಗೆ ಬಂದ ಇನ್ನೂ ಒಂಭತ್ತು ಜನ ಮತ್ತು ಈತ ಮುಂಬೈಯಲ್ಲಿ ಮಾಡಿದ ಅನಾಹುತವೇನು ಸಣ್ಣದಾ..?

                        ಅದೊಂದೇ ದಾಳಿಯಲ್ಲಿ ಸತ್ತವರು ಮುನ್ನೂರ ಹತ್ತು ಜನ. ಜೀವಂತವಾಗಿ ಸಿಕ್ಕಿಬಿದ್ದವನು ಇವನೊಬ್ಬನೇ. ನಂಬ್ತೀರೋ ಇಲ್ವೋ. ಈ ಒಬ್ಬ ಕಸಬ್ಗಾಗಿ ನಾವು ಪ್ರತಿ ತಿಂಗಳೂ ಮಾಡ್ತಿರೋ ಖರ್ಚು ಎರಡು ಕೋಟಿ ರುಪಾಯಿ. ಇವನ ಬೆಂಗಾವಲಿಗೆ ಒಂದು ಸಾವಿರ ಜನ ಪೊಲೀಸರಿದ್ದಾರೆ. ಆರ್ಥರ್ ರೋಡ್ ಜೈಲಿನಲ್ಲಿ ಟ್ರಕ್ ತುಂಬ ಆರ್.ಡಿ.ಎಕ್ಸ್ ನುಗ್ಗಿಸಿದರೂ ಅಲ್ಲಾಡದಂಥ ಒಂದು ಸೆಲ್ ಇವನಿಗಾಗಿ ಕಟ್ಟಲಾಗಿದೆ. ಒಂದು ವೇಳೆ ಆ ನರಹಂತಕನಿಗೆ ಅನಾರೋಗ್ಯವಾದರೆ ಟ್ರೀಟ್ಮೆಂಟ್ ಕೊಡೋದಕ್ಕೆ ಜೆ.ಜೆ ಆಸ್ಪತ್ರೆಯಲ್ಲೊಂದು ಸ್ಪೆಷಲ್ ವಾರ್ಡ್ ಕಟ್ಟಿಸಲಾಯ್ತು. ಆದ್ರೆ, ಅಲ್ಲಿಗ್ಯಾವತ್ತೂ ಈತ ಅಡ್ಮಿಟ್ ಆಗಲೇ ಇಲ್ಲ. ಬೇಕಾದರೆ ಡಾಕ್ಟರುಗಳನ್ನ ತಾನಿದ್ದಲ್ಲಿಗೇ ಕರೆಸಿಕೊಳ್ತಾನೆ. ವಿಚಾರಣೆಗೆ ಕಸಬ್ ಕೋರ್ಟಿಗೆ ಬರಬೇಕು ಅಂತಾನೂ ಇಲ್ಲ. ಕುಳಿತಲ್ಲಿಂದಲೇ ವಿಡಿಯೋ ಕಾನ್ಫರೆನ್ಸು. ಅದು ಕೂಡ ಅವನು ಮೂಡಿದ್ದರೆ ಬರಬಹುದು - ಇಲ್ಲದಿದ್ರೆ ಇಲ್ಲ. ಎಂಭತ್ತು ರುಪಾಯಿಯದೊಂದು ಗುಂಡಿನಲ್ಲಿ ಮುಗಿದುಹೋಗಬಹುದಾಗಿದ್ದ ಕೆಲಸಕ್ಕೆ ತಿಂಗಳಿಗೆರಡು ಕೋಟಿ ಖರ್ಚು. ಇಷ್ಟೆಲ್ಲಾ ಮಾಡಿ ಈ ಹುಡುಗನನ್ನ ಬದುಕಿಸಿಕೊಳ್ತಿರೋದ್ಯಾಕೆ ಅಂತ ಕೇಳಿದ್ರೆ, ಮುಂಬೈ ದಾಳಿಯಲ್ಲಿ ಪಾಕಿಸ್ತಾನದ ಕೈವಾಡ ಇದೆ ಅನ್ನೋದನ್ನ ಪ್ರೂವ್ ಮಾಡೋದಕ್ಕೆ ಅನ್ನೋ ಉತ್ತರ ಬರತ್ತೆ. ಅದನ್ನ ಪ್ರೂವ್ ಮಾಡೋದಕ್ಕೆ, ಕಸಬ್ ಮತ್ತು ಇತರ ಒಂಭತ್ತು ಜನರಿಗೆ ಪಾಕಿಸ್ತಾನದಲ್ಲಿ ಕುಂತೇ ಫೋನಿನಲ್ಲಿ ಗೈಡನ್ಸ್ ಕೊಡ್ತಿದ್ದ ಹ್ಯಾಂಡ್ಲರ್ಗಳ ವಾಯ್ಸ್ ಸ್ಯಾಂಪಲ್ ಬೇಕು. ಅದನ್ನ ಕೇಳಿದ್ರೆ, "ವಾಟ್ ನಾನ್ಸೆಸ್, ಅದಕ್ಕೆಲ್ಲ ನಮ್ಮ ಕಾನೂನಿನಲ್ಲಿ ಅವಕಾಶಾನೇ ಇಲ್ಲ" ಅಂತ ಒಂದೇ ಮಾತಿಗೆ ತಳ್ಳಿ ಹಾಕಿಬಿಟ್ತು ಪಾಕಿಸ್ತಾನ. ಈಗ ಇವನಿಗೆ ಗಲ್ಲು ಶಿಕ್ಷೆ ಆಗಬಾರದು ಅಂತ ವಾದಿಸೋ ಜನ ಕೂಡ ನಮ್ಮಲ್ಲಿದಾರೆ.
                        2008ರ ನವೆಂಬರ್ 26ರ ಟೆರರಿಸ್ಟ್ ಅಟ್ಯಾಕಿನಿಂದ ಭಾರತ ಪಾಠ ಕಲಿತಿಲ್ಲ. ಕಲಿತಿದ್ದರೆ ಇವತ್ತು ಈ ಘಟನೆ ಆಗ್ತಿರಲಿಲ್ಲ ಅಂತ ಮೊನ್ನೆ ಯಾರೋ ಟಿ.ವೀಲಿ ಹೇಳ್ತಿದ್ರು. ಅದಕ್ಕೂ ಇದಕ್ಕೂ ಸಂಬಂಧಾನೇ ಇಲ್ಲ. ಆ ದಾಳಿಯಿಂದ ಪಾಠ ಕಲಿತದ್ದಕ್ಕೇ ನಮ್ಮ ಕರಾವಳಿ ತೀರಗಳು ತಕ್ಕ ಮಟ್ಟಿಗೆ ಬಂದೋಬಸ್ತಾಗಿವೆ. ದೊಡ್ಡ - ದೊಡ್ಡ ಊರುಗಳಿಗೆ ಎನ್.ಎಸ್.ಜಿ ಥರದ ಟ್ರೂಪು ಕೊಡಲಾಗಿದೆ, ಆ ಊರುಗಳ ಇಂಪಾರ್ಟಂಟ್ ಜಾಗಗಳಲ್ಲಿ ಸೆಕ್ಯುರಿಟಿ ಹೆಚ್ಚಿಸಲಾಗಿದೆ. ಆದರೆ, ಅದ್ಯಾವುದರಿಂದಲೂ ಈ ಬಾಂಬ್ ಬ್ಲಾಸ್ಟುಗಳನ್ನ ತಡೆಯೋದಕ್ಕಾಗ್ತಿರಲಿಲ್ಲ. ಇಲ್ಲಿ ಉಪಯೋಗಕ್ಕೆ ಬರಬೇಕಾದದ್ದು 1993ರಲ್ಲೇ ಕಲಿತ ಪಾಠ. ಹೆಂಗೆ ನಮ್ಮವರೇ ಸೇರಿಕೊಂಡು ಬಾಂಬುಗಳನ್ನ ಮಾಡಿ ಕಾರಿಗೆ ತುಂಬಿ ಸದ್ದಿಲ್ಲದೇ ಜನಸಂದಣಿಯ ಜಾಗಗಳಲ್ಲಿ ನಿಲ್ಲಿಸಿ ಹೋಗಿಬಿಡ್ತಾರೆ ಅನ್ನೋದು ಹದಿನೇಳು ವರ್ಷಗಳ ಹಿಂದೇನೇ ಗೊತ್ತಾಗಿರೋ ವಿಷಯ. ಆದರೆ, ನಮ್ಮವರು ಹೊಸ ಪಾಠ ಕಲಿಯೋ ಭರದಲ್ಲಿ, ಕಲಿತ ಪಾಠಗಳನ್ನೆಲ್ಲ ಮರೆತು ಬಿಟ್ಟರೇನೋ ಅನ್ನಿಸತ್ತೆ.
                       of course, ಈ ವಿಷಯದಲ್ಲಿ ತುಂಬ ಬಾಲಿಶವಾಗಿ ಮಾತಾಡೋದು ಕೂಡ ಕಷ್ಟಾನೇ. ಒಂದೂ ಕಾಲು ಕೋಟಿ ಜನಸಂಖ್ಯೆ ಇರೋ ಮಹಾನಗರ ಅದು. ಇಲ್ಲಿ ಪ್ರತಿದಿನ ದಶದಿಕ್ಕುಗಳಿಂದಲೂ ಲಕ್ಷಾಂತರ ಜನ ಬರ್ತಾರೆ. ಬಂದಷ್ಟೇ ಸಂಖ್ಯೆಯಲ್ಲಿ ಹೊರಗೆ ಹೋಗ್ತಾರೆ. ಅವರ ಪೈಕಿ ಯಾವನು ಬಾಂಬು ತರ್ತಾನೆ - ಯಾವನು ಬಂದೂಕು ತರ್ತಾನೆ ಅಂತ ಹುಡುಕೋದು ಕಷ್ಟ. but, ದೇಶದಲ್ಲಿಲ್ಲದಂಥ ಪೊಲೀಸ್ ವ್ಯವಸ್ಥೆ ಮುಂಬೈಗಿದೆ. ಬೇಹುಗಾರಿಕೆ ವಿಷಯಕ್ಕೆ ಬಂದರೂ ಅವರದು ಎತ್ತಿದ ಕೈ. ಅಂಥದ್ದರಲ್ಲಿ, ಒಂದು ಪಕ್ಕಾ ಇಂಟೆಲಿಜೆನ್ಸ್ ವ್ಯವಸ್ಥೆಗೆ ಇಂಥ ವಿಷಯಗಳು ಗೊತ್ತಾಗಬೇಕು, ಅಮೇರಿಕದವರಿಗೆ ಗೊತ್ತಾಗ್ತವೆ ನೋಡಿ, ಹಾಗೆ. ಇಲ್ಲಿ ಕೂಡ ಒಂದು ಸಮಸ್ಯೆ ಇದೆ. ಮೊದಲಾದರೆ, ಭಯೋತ್ಪಾದಕ ಕೆಲಸಕ್ಕೆ ತುಂಬ ದೊಡ್ಡ ಮಟ್ಟದ ತಯಾರಿ ಬೇಕಾಗ್ತಿತ್ತು. ಅಲ್ಲೆಲ್ಲೋ ಪಾಕಿಸ್ತಾನದಲ್ಲಿ ಕುಂತವನು, ಅಲ್ಲಿಂದ ಜನರನ್ನ ಕಳಿಸಿ ಅವರಿಗೆ ಇಲ್ಲಿ ಬಾಂಬು - ಬಂದೂಕು, ಕಾರು, ದುಡ್ಡು, ಹುಡುಗರನ್ನ ಹೊಂದಿಸಿಕೊಟ್ಟು ಒಂದು ಕೆಲಸ ಮಾಡಿಸ್ತಿದ್ದ. ಒಂದು ಷಡ್ಯಂತ್ರದಲ್ಲಿ ಜಾಸ್ತಿ ಜನ ಭಾಗವಹಿಸಿದಷ್ಟೂ ಅದರ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಗೋ ಸಾಧ್ಯತೆಗಳು ಹೆಚ್ಚಾಗ್ತಾ ಹೋಗ್ತವೆ. ಆದರೆ ಈಗ ಹಾಗಲ್ಲ. ಎಲ್ಲೋ ರಿಮೋಟ್ ಜಾಗಗಳಲ್ಲಿ ಕುಳಿತವನು ಇಂಟರ್ನೆಟ್ ಮೂಲಕಾನೇ ಧರ್ಮಾಂಧತೆ ಬೆಳೆಸಿಕೊಂಡು ಬಿಡ್ತಾನೆ. ಅವನಿಗೆ ಬಾಂಬು ತಯಾರಿಸೋ ತರಬೇತಿ ಕೂಡ ಈ ಹಾಳು ಇಂಟರ್ನೆಟ್ಟೇ ಕೊಡತ್ತೆ. ಮೊದಲಾದರೆ ಆರ್.ಡಿ.ಎಕ್ಸು, ಅದಕ್ಕೊಂದು ಡಿಟೋನೇಟರು, ಒಂದು ಟೈಮರು ಅಂತ ನೂರು ತಲೆನೋವುಗಳಿದ್ದವು. ಈಗ ಅಮೋನಿಯಂ ನೈಟ್ರೇಟ್ನಲ್ಲೇ ಬಾಂಬು ತಯಾರಿಸೋದನ್ನ ಕಲಿತುಕೊಂಡಿದಾರೆ. ಯಾರೋ ಐದಾರು ಹುಡುಗರು ಸೇರಿಕೊಂಡು ತಾವುತಾವೇ ತಮ್ಮದೇ ದುಡ್ಡಿನಲ್ಲಿ ಬಾಂಬು ತಯಾರಿಸಿ ಸಿಡಿಸಿ ಹೋಗಿಬಿಡ್ತಾರೆ. ನಾಳೆ ದಿನ ಅವರು ಸಿಕ್ಕಿಬೀಳಬಹುದು, ಆ ಮಾತು ಬೇರೆ. ಆದರೆ, ಆ ಷಡ್ಯಂತರದ ವಾಸನೆ ಪೊಲೀಸರಿಗೆ ಸಿಗೋ ಚಾನ್ಸು ಕಡಿಮೆ. ಬೆಂಗಳೂರು ಸರಣಿ ಬಾಂಬ್ ಬ್ಲಾಸ್ಟ್ನಲ್ಲಿ ಆದದ್ದೂ ಅದೇ. ಚಿನ್ನಸ್ವಾಮಿ ಕ್ರೀಡಾಂಗಣ ಬಾಂಬ್ ಬ್ಲಾಸ್ಟ್ ಕೂಡ ಅಂಥದ್ದೇ ಕೆಲಸ ಅನ್ನೋದು ಇವತ್ತಲ್ಲ ನಾಳೆ ಗೊತ್ತಾಗತ್ತೆ.
                       ಆದರೆ, ಬಾಂಬು ಸಿಡಿದ ತಕ್ಷಣ ಲಷ್ಕರೆ ತಯ್ಯಬಾ ಕೆಲಸ ಅಂತ ಬ್ರೇಕಿಂಗ್ ನ್ಯೂಸ್ ಕೊಡೋದು ನಮ್ಮವರ ಹಳೇ ಚಾಳಿ. ಅದಕ್ಕೊಂದು ಕ್ವಶ್ಚನ್ ಮಾರ್ಕ್ ಹಾಕಿ, ಸೂತ್ರಗಳ ಹೇಳಿಕೆ ಅಂತ ಕೊಟ್ಟುಬಿಟ್ಟರೆ ಮುಗೀತು. ಬಾಂಬೆ ಬಾಂಬ್ ಬ್ಲಾಸ್ಟ್ನಲ್ಲೂ ಅದೇ ಆಗಿದ್ದು. ಇದರಲ್ಲಿ ಇಂಡಿಯನ್ ಮುಜಾಹಿದೀನ್ ಕೈವಾಡ ಇದೆ ಅಂದರೆ, ಅದನ್ನ ತಕ್ಕಮಟ್ಟಿಗೆ ಒಪ್ಪಿಕೊಳ್ಳಬಹುದು. ಸಿಮಿ ನಿಷೇಧ ಆದಾಗ ಅದರಲ್ಲಿದ್ದವರೇ ಆ ಸಂಘಟನೆ ಕಟ್ಕೊಂಡಿದಾರೆ. ಅದರ ಸ್ಥಾಪಕ ರಿಯಾಜ್ ಭಟ್ಕಳ್. ಅವನನ್ನ ನಾನೇ ಕರಾಚಿಯಲ್ಲಿ ಕೊಲ್ಲಿಸಿದೀನಿ ಅಂತ ಇತ್ತೀಚೆಗೆ ಛೋಟಾ ರಾಜನ್ ಹೇಳಿಕೊಂಡಿದ್ದ. ಆ ಮಾತಿರಲಿ. ಅದೆಷ್ಟು ಸತ್ಯಾನೋ ಗೊತ್ತಿಲ್ಲ. ಆದರೆ, ಇದರ ಹಿಂದೆ ಕೂಡ ಅದೇ ಸಂಘಟನೆ ಕೈವಾಡ ಇದೆ ಅನ್ನೋ ಸಂಶಯ ಪೊಲೀಸರಿಗಿಂತಲೂ ಮೊದಲು ಟಿ.ವಿ ಚಾನಲ್ಗಳವರಿಗೆ ಬಂದಿದೆ. ಪೊಲೀಸರು ಅದನ್ನ ಸೀರಿಯಸ್ಸಾಗಿ ತಗೊಂಡಿರೋ ಹಂಗಿದೆ.
                       ಇನ್ನು ಇದೊಂದು ಬಾಂಬ್ ಬ್ಲಾಸ್ಟ್ನ ತನಿಖೆ ಶುರುವಾಗತ್ತೆ. ಅದ್ಯಾವಾಗ ಮುಗಿಯತ್ತೋ ಯಾರಿಗೂ ಗೊತ್ತಾಗಲ್ಲ. ಇದರ ಆರೋಪಿಗಳನ್ನ ನಮಗೆ ಕೊಡಿ ಅಂತ ಮತ್ತೆ ನಮ್ಮ ಸರಕಾರ ಪಾಕಿಸ್ತಾನಕ್ಕೆ ಮನವಿ ಮಾಡಿಕೊಳ್ಳತ್ತೆ. ಅದು ಯಥಾ ಪ್ರಕಾರ ನಮ್ಮವರ ಮನವಿಯನ್ನ ಕಸದ ಬುಟ್ಟಿಗೆಸೆದು ಅಮೇರಿಕದ ಜೊತೆ ಸೇರಿಕೊಂಡು ಭಯೋತ್ಪಾದನೆ ವಿರುದ್ಧ ಸಮರದ ಭಾಷಣ ಮಾಡತ್ತೆ. ಇಲ್ಲಿ ಸಿಕ್ಕಿಬಿದ್ದಿರೋ ಆರೋಪಿಗಳಿಗಾಗಿ ಜೈಲುಗಳಲ್ಲಿ ಝೆಡ್ ಪ್ಲಸ್ ಸೆಕ್ಯುರಿಟಿ ಕೊಟ್ಟು, ವರ್ಷಗಟ್ಟಲೆ ಅವರ ವಿಚಾರಣೆ ನಡೆಸಿ ಕೊನೆಗೊಂದು ದಿನ ಗಲ್ಲು ಶಿಕ್ಷೆ ಕೊಟ್ಟರೆ, ನೇಣಿಗೆ ಹಾಕಬೇಡಿ ಅನ್ನೋ ಜನ ಹುಟ್ಟಿಕೊಳ್ತಾರೆ. ಅಷ್ಟೊತ್ತಿಗಾಗಲೆ ಮತ್ತಷ್ಟು ಬಾಂಬುಗಳು ಸಿಡಿದಿರುತ್ತವಾದ್ದರಿಂದ ಇದನ್ನೆಲ್ಲ ಜನ ಮರೆತೇ ಬಿಟ್ಟಿರ್ತಾರೆ. ಇದನ್ನೆಲ್ಲ ಹೊರತು ಪಡಿಸಿ ಮತ್ತೇನಾದರೂ ಆದರೆ, ಖಂಡಿತ ಬರೆದೇನು...