Tuesday, March 15, 2011

ಸರ್ವನಾಶದ ಘಳಿಗೆಯಲ್ಲೂ ಕರುಳು ಚುರ್ರೆನ್ನದಿದ್ದರೆ...

                      ಅದ್ಯಾಕೋ, ಇದೊಂದು ಡಾಕ್ಯುಮೆಂಟರಿ ತುಂಬ ಮನಸು ಕಲಕಿಬಿಟ್ಟಿತು. "If you don't want to be Nero's guests, then resist" ಅಂತ ಹೆಸರು. "ನಿಮಗೆ ನೀರೋನ ಅತಿಥಿಗಳಾಗಲು ಇಷ್ಟವಿಲ್ಲದಿದ್ದರೆ, ವಿರೋಧಿಸಿ" ಅನ್ನೋದು ಅದರ ಕೆಟ್ಟ ಕನ್ನಡ ಟ್ರಾನ್ಸ್ಲೇಷನ್ನು. ರೈತರ ಆತ್ಮಹತ್ಯೆಗಳ ಬಗ್ಗೆ ಇದೆ. ಹಿಂದೂ ಪತ್ರಿಕೆಯ ರೂರಲ್ ಅಫೇರ್ಸ್ ಎಡಿಟರ್ ಪಿ ಸಾಯಿನಾಥರನ್ನ ಮುಂದಿಟ್ಟುಕೊಂಡು ದೀಪಾ ಭಾಟಿಯಾ ಇದನ್ನ ಮಾಡಿದಾರೆ. ಒಬ್ಬ ಟಿ.ವಿ ಪತ್ರಕರ್ತನಾಗಿ ನನಗೆ ಇದರ ನರೇಷನ್ನು ಅದ್ಭುತ ಅನ್ನಿಸಿತು. ಒಂದೇ ಒಂದು ಸಾಲಿನ ಸ್ಕ್ರಿಪ್ಟ್ ಬರೆಯದೇ ಇಡೀ ಕಥೇನ ಇಷ್ಟು ಚನ್ನಾಗಿ ಹೇಳಬಹುದಾ..? straight to the viewers heart..? ಅದು ನನಗೆ ಈ ಹೊತ್ತಿನ ತನಕ ಆಶ್ಚರ್ಯ. ಡಾಕ್ಯುಮೆಂಟರಿಯನ್ನ ಎಡಿಟ್ ಮಾಡಿದ ರೀತಿ amazing. ಕ್ಯಾಮೆರಾ ಕೆಲಸದ ಬಗ್ಗೆ ದೂಸರಾ ಮಾತೇ ಇಲ್ಲ. ಡಾಕ್ಯುಮೆಂಟರಿ ಮುಗಿಯುವ ರೀತಿ ಇದೆಯಲ್ಲ, ಅದು mind blowing. ಇದಕ್ಕಿಂತ ಚನ್ನಾಗಿರುವ screen playನ ನಾನು ಇದುವರೆಗಂತೂ ನೋಡಿಲ್ಲ. ಇವೆಲ್ಲ, ನನ್ನೊಳಗಿನ ಪತ್ರಕರ್ತನ observationಗಳಾದವು.
                      ಆದರೆ ಒಳಗೊಬ್ಬ ಮನುಷ್ಯನಿದಾನಲ್ಲ..? ಅವನು ಕಂಡಿದ್ದನ್ನ ಏನು ಅಂತ ಹೇಳಲಿ..? "If you don't want..." ನನ್ನನ್ನ ಈ ಪರಿ ಹಿಡಿದಿಟ್ಟಿದ್ದು, ನಾನು ಕೂಡ ಇದರಲ್ಲಿ ಬರುವಂಥಾ ದಟ್ಟ ದರಿದ್ರ ಹಳ್ಳಿಗಳ ಪೈಕಿ ಒಂದರಲ್ಲಿ ಹುಟ್ಟಿ ಬೆಳೆದೆ ಅನ್ನೋ ಕಾರಣಕ್ಕಾ..? ನನ್ನ ಅಪ್ಪ ಕೂಡ, ಸಾಕಷ್ಟು ಜಮೀನಿದ್ದರೂ, ಅದರಲ್ಲಿ ಹರಿಸಿದ ಬೆವರಿಗೆ ಬೆಲೆ ಸಿಗದೇ ಕಂಗಾಲಾಗಿದ್ದ ಅಂತಾನಾ..? ಮೈತುಂಬ ಸಾಲ ಮಾಡಿಕೊಂಡು, ಬೆಳೆ ಕೈಕೊಟ್ಟು, ಬಂದಷ್ಟು ಬೆಳೆಗೆ ನೆಟ್ಟಗೆ ಬೆಲೆ ಕೂಡ ಸಿಗದೇ ಕಂಗಾಲಾಗಿ ಓಡಾಡ್ತಿದ್ದ ನನ್ನ ಹಳ್ಳಿಯ ರೈತರು, ಇನ್ನೂ ಯಾಕೆ ನೇಣು ಹಾಕಿಕೊಂಡಿಲ್ಲ ಅಂತ ಆಶ್ಚರ್ಯ ಪಡ್ತಿದ್ದೆ ಅನ್ನೋ ಕಾರಣಕ್ಕಾ ಅಥವಾ ಇದರಲ್ಲಿ ಬರುವ ಹಲವು ರೈತರಂತೆ ನನ್ನ ಸ್ವಂತ ದೊಡ್ಡಪ್ಪ ಕೂಡ ವಿಷ ಕುಡಿದು ಸತ್ತು ಹೋಗಿದ್ದ ಮತ್ತು ಆತನ ಚಿತೆಗೆ ನಾನೇ ಬೆಂಕಿ ಇಟ್ಟಿದ್ದೆ ಅನ್ನೋ ಕಾರಣಕ್ಕಾ, ಸ್ಪಷ್ಟವಾಗಿ ಗೊತ್ತಿಲ್ಲ. ಆದರೆ ಒಂದು ಮಾತಂತೂ ಸತ್ಯ. ರೈತರ ಆತ್ಮಹತ್ಯೆಗಳಿಗೂ ನಮಗೂ ಸಂಬಂಧವೇ ಇಲ್ಲ ಅಂತ ತಮ್ಮಷ್ಟಕ್ಕೆ ತಾವು ಎಲೆಕ್ಟ್ರಾನಿಕ್ ಸಿಟಿಯ ಸಾಫ್ಟವೇರ್ ಆಫೀಸುಗಳಲ್ಲಿ ಕುಳಿತು ಅಮೇರಿಕಕ್ಕೆ ಜೀತ ಮಾಡುವವರಿಗೆ, ಸೆನ್ಸೆಕ್ಸು, ಅಂಡರ್ ಪಾಸು, ಫ್ಲೈ ಓವರು, ಮೆಟ್ರೋ ಟ್ರೇನು, ಇಂಟರ್ನ್ಯಾಷನಲ್ ಏರ್ಪೋರ್ಟುಗಳನ್ನೇ ಅಭಿವೃದ್ಧಿ ಅಂದುಕೊಂಡಿರುವವರಿಗೆ, ಗ್ಲೋಬಲ್ ರಿಸೆಷನ್ನಿಗಿಂತ ದೊಡ್ಡ ಸಂಕಟ ಜಗತ್ತಿಗೆ ಬಂದೇ ಇಲ್ಲ ಅಂತ ನಂಬಿಕೊಂಡವರಿಗೆ ಮತ್ತು ಯಾರಿಗೂ ಬೇಡವಾದ ಸುದ್ದಿಯನ್ನ ಮೊದಲ ಬ್ರೇಕ್ ಮಾಡಿ ಖಾಲಿ - ಪೀಲಿ ಸಂಭ್ರಮ ಪಡುವ ನಮಗೆ, ರೈತರ ಆತ್ಮಹತ್ಯೆಗಳು ಅಂದ್ರೆ ಅದ್ಯಾರೋ ಹಳ್ಳೀ ಜನರ ಪರ್ಸನಲ್ ಪ್ರಾಬ್ಲಮ್ ಅಂತ ಅನ್ನಿಸುವುದಿದೆಯಲ್ಲ, ಅದಕ್ಕಿಂತ ದುರಂತ ಇಲ್ಲ. ಆ ದುರಂತವನ್ನೇ ಈ ಡಾಕ್ಯುಮೆಂಟರಿ ಎಳೆಎಳೆಯಾಗಿ ಬಿಡಿಸಿಡ್ತಾ ಹೋಗತ್ತೆ.
                       ಸ್ವಲ್ಪ ದೊಡ್ಡದಿದೆ, ಪುರುಸೊತ್ತಿದ್ರೆ ಮಾತ್ರ ನೋಡಿ. ಇದನ್ನ ನೋಡಿದ ಮೇಲೂ ಯಾವುದಾದರೂ ರೈತ ಸಾಲಬಾಧೆ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡ ಅನ್ನೋ ಸುದ್ದಿ ಕೇಳಿದಾಗ ಹೃದಯಕ್ಕೆ ಕೊಕ್ಕೆ ಹಾಕಿ ಎಳೆದ ಅನುಭವ ಆಗದಿದ್ರೆ, ಆತನ ಸಾವಿಗೆ ಎಲ್ಲೋ ಒಂದು ಕಡೆ ನಾವು ಕೂಡ ಪರೋಕ್ಷ ಕಾರಣ ಅಂತ ಅನ್ನಿಸದಿದ್ದರೆ, ಪೂರ್ ಫಾರ್ಮರ್ ಅಂತ ಲೊಚಗುಟ್ಟಿ ಚಾನಲ್ ಚೇಂಜ್ ಮಾಡಿದ್ರೆ, ಪೇಪರ್ ಮಡಚಿಟ್ಟು ಎದ್ದುಬಿಟ್ಟರೆ, I really feel sorry for you...

                                            0-0-0-0-0-0-0-0-0-0-0-0-0-0-0

                       ತುಂಬ ಹಿಂದೆ ರೋಮ್ ಸಾಮ್ರಾಜ್ಯವನ್ನ ನೀರೊ ದೊರೆ ಆಳ್ತಿದ್ದ. ಚಿಂತೆ ಇಲ್ಲದವನಿಗೆ ಸಂತೇಲೂ ನಿದ್ದೆ ಅನ್ನೋ ಅರ್ಥದಲ್ಲಿ, ರೋಮ್ ನಗರ ಹೊತ್ತಿ ಉರೀತಿದ್ದಾಗ ನೀರೊ ದೊರೆ ಪಿಟೀಲು ಬಾರಿಸ್ತಿದ್ನಂತೆ ಅನ್ನೋ ಗಾದೆ ಮಾತಿದೆಯಲ್ಲ..? ಅದರಲ್ಲಿನ ನೀರೊ ಇವನೇ. ಹಾಗೆ ರೋಮ್ ಹೊತ್ತಿ ಉರೀತಿದ್ದಾಗ, ಇವನಿಗೆ ತನ್ನ ಇಮೇಜ್ ಏನಾಗಿಬಿಡತ್ತೋ ಅನ್ನೋ ಚಿಂತೆ ಶುರುವಾಯಿತು. ಆವಾಗ ಆತ, ತನ್ನ ಸಾಮ್ರಾಜ್ಯದ ಪ್ರಭಾವಿಗಳಿಗೆ, ಬುದ್ಧಿವಂತರಿಗೆ, ಗಣ್ಯರಿಗೆ ತನ್ನ ಅರಮನೆಯ ಉದ್ಯಾನದಲ್ಲಿ ಒಂದು ಪಾರ್ಟಿ ಕೊಡ್ತಾನೆ. ರೋಮ್ ಸಾಮ್ರಾಜ್ಯದ ಇತಿಹಾಸದಲ್ಲೇ ಯಾರೂ ಕೊಟ್ಟಿರದಂಥಾ ಪಾರ್ಟಿ ಅದು. ಆ ಪಾರ್ಟಿಗೂ ಭಾರತದ ರೈತರ ಆತ್ಮಹತ್ಯೆಗಳಿಗೂ ಇರುವ ಒಂದು common factorನ ಸಣ್ಣ ಎಳೆ ಇಟ್ಟುಕೊಂಡು ಮಾತು ಶುರುಮಾಡ್ತಾರೆ ಸಾಯಿನಾಥ್. ಆ ಎಳೆ ಅರ್ಥ ಆಗಬೇಕಾದರೆ, ಇದನ್ನ ನೀವು ಪೂರ್ತಿ ನೋಡಬೇಕು. ನನಗೆ, ನೀರೋನ ಬಗ್ಗೆ ಬೇಸರ ಇಲ್ಲ. ಆದರೆ, ಆತ ಕೊಟ್ಟ ಪಾರ್ಟಿಗೆ ಬಂದಿದ್ದ ಗಣ್ಯರು, ಬುದ್ಧಿ ಜೀವಿಗಳು, ಬರಹಗಾರರು ಮತ್ತು ಸೆಲೆಬ್ರಿಟಿಗಳ ಬಗ್ಗೆ ಯೋಚಿಸುತ್ತೇನೆ ಅಂತ ಸಾಯಿನಾಥ್ ಯಾಕೆ ಹೇಳ್ತಾರೆ ಅನ್ನೋದು ಆವಾಗಲೇ ಅರ್ಥ ಆಗೋದು...






                       ಸಾಯಿನಾಥ್, ಸ್ವತಃ ದಿ ಹಿಂದೂ ಪತ್ರಿಕೆಯ ಗ್ರಾಮೀಣ ವಿದ್ಯಮಾನಗಳ ಸಂಪಾದಕರಾದರೂ, ಒಟ್ಟಾರೆ ಮಾಧ್ಯಮದ ಸೋಗಲಾಡಿತನದ ಬಗ್ಗೆ ಮಾತಾಡೋದಕ್ಕೆ ಹಿಂದೆ - ಮುಂದೆ ನೋಡುವುದಿಲ್ಲ.
                        ಜಗತ್ತಿನಲ್ಲೇ, ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಾಧ್ಯಮ ನಮ್ಮ ದೇಶದ್ದು. ಇದು ರಾಜಕೀಯದ ಕಪಿಮುಷ್ಠಿಯಲ್ಲಿಲ್ಲ ( ಈ ಮಾತು ಇವತ್ತಿಗೆ ಅದೆಷ್ಟು ಸತ್ಯವೋ..! ) ಆದರೆ, ಲಾಭ ಅನ್ನೋ ಕಬ್ಬಿಣದ ಕೋಳ ಮಾಧ್ಯಮವನ್ನ ಅಲ್ಲಾಡೋದಕ್ಕೂ ಆಗದಂತೆ ಕಟ್ಟಿ ಹಾಕಿದೆ. ನಮ್ಮಲ್ಲಿ ಫ್ಯಾಷನ್ ವರದಿಗಾರರಿದ್ದಾರೆ, ಗ್ಲಾಮರ್, ಸೊಸೈಟಿ, ಪೇಜ್ ಥ್ರೀ, ಎಲ್ಲದಕ್ಕೂ ವಿಶೇಷ ವರದಿಗಾರರಿದ್ದಾರೆ. ಆದರೆ, ಯಾವ ನ್ಯೂಸ್ ಚಾನೆಲ್ - ಯಾವ ಪತ್ರಿಕೆ ಬಡತನದ ವರದಿ ಮಾಡೋದಕ್ಕೆ ರಿಪೋರ್ಟರನ್ನ ಇಟ್ಟುಕೊಂಡಿದೆ..?
                       ಈ ಸಲದ ಲ್ಯಾಕ್ಮೆ ಫ್ಯಾಷನ್ ವೀಕ್ ಮುಂಬೈಯಲ್ಲಿ ನಡೀತು. ಬೇರೆ ಬೇರೆ ಟಿ.ವಿ ಚಾನೆಲ್, ಪತ್ರಿಕೆಗಳಿಂದ ಐನೂರ ಹನ್ನೆರಡು ಜನ ಪತ್ರಕರ್ತರು ಅದನ್ನ ವರದಿ ಮಾಡೋದಕ್ಕೆ ಬಂದಿದ್ರು. ಅದರಲ್ಲಿ ಮಾಡೆಲ್ಗಳು ಹತ್ತಿ ಬಟ್ಟೆ ಹಾಕಿಕೊಂಡು ರಾಂಪ್ ಮೇಲೆ ನಡೆದರು. ಆದರೆ, ದುರಂತ ನೋಡಿ. ಅವರು ಹಾಕಿಕೊಂಡ ಡಿಸೈನರ್ ಬಟ್ಟೆಗಳಿಗೆ ಹತ್ತಿ ಬೆಳೆದು ಕೊಟ್ಟ ರೈತರು ಅದೇ ಮಹಾರಾಷ್ಟ್ರದ ವಿದರ್ಭದಲ್ಲಿದ್ದರು. ಅವರು ಸಾಲದ ಹೊಡೆತ ತಾಳಲಾರದೇ ದಿನಕ್ಕೆ ಆರರಿಂದ ಎಂಟು ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಅದನ್ನ ವರದಿ ಮಾಡೋದಕ್ಕೆ ಒಬ್ಬೇ ಒಬ್ಬ ಪತ್ರಕರ್ತ ಹಳ್ಳಿಗೆ ಹೋಗಲಿಲ್ಲ.



ಆತ್ಮಹತ್ಯೆ ಮಾಡಿಕೊಂಡಿರುವ ರೈತನ ಮನೆ. ಅಂಗಳದಲ್ಲಿ ಹೆಂಡತಿ ಬದುಕಿನ ಅಷ್ಟೂ ಭರವಸೆಗಳು ಮುಗಿದುಹೋದವಳಂತೆ ಕುಳಿತಿದ್ದಾಳೆ. ಪಕ್ಕದಲ್ಲಿ ಮಗ. ತಂದೆಯ ಅಂಗಿ ಹಾಕಿಕೊಂಡು ಕುಳಿತಿದ್ದಾನೆ. ಅವನಿಗೆ ತನ್ನ ಅಪ್ಪನ ಆತ್ಮಹತ್ಯೆಯ ಕಾರಣಗಳನ್ನ ಹೇಳಿ ಹೇಳಿ ಸಾಕಾಗಿಹೋಗಿದೆ. ಅವನ ಹೆಗಲ ಮೇಲೆ ಮನೆಯ ಜವಾಬ್ದಾರಿ ಬಿದ್ದಿದೆ. ಅದನ್ನ ಹೊರಲಾರದಷ್ಟು ಎಳಸು ಆತ. ಅಪ್ಪ ವಿಷ ಕುಡಿದು ಸತ್ತು ಹೋದ ಮೇಲೆ ಆ ಹುಡುಗ ಜವಾಬ್ದಾರಿಯುತ ಗಂಡಸಾಗಬೇಕು. ಆತನ ಕಣ್ಣುಗಳಲ್ಲಿ ಆ ಭಯ.
                          ಐದೂವರೆ ವರ್ಷಗಳ ಕಾಲ ನಿರಂತರವಾಗಿ ರೈತರ ಆತ್ಮಹತ್ಯೆಗಳ ವರದಿ ಮಾಡಿದ ಸಾಯಿನಾಥ್ ಇಂಥ ಅವೆಷ್ಟು ಹುಡುಗರ ಕಣ್ಣುಗಳಲ್ಲಿನ ಬೇಗುದಿ ನೋಡಿದರೋ.



ಟೈಮ್ಸಾಫ್ ಇಂಡಿಯಾದ ಸಂಪಾದಕೀಯ ಪುಟದಲ್ಲಿ ರಾಹುಲ್ ಬಜಾಜ್ ಒಂದು ಲೇಖನ ಬರೆದಿದ್ರು. "ಸರಕಾರಕ್ಕೆ ನಿಜವಾಗಿಯೂ ಬಡವರನ್ನ ಉದ್ಧಾರ ಮಾಡುವ ಮನಸಿದ್ರೆ, ಮೊದಲು ಶ್ರೀಮಂತರಿಗೆ ಸಹಾಯ ಮಾಡಬೇಕು" ಅನ್ನೋದು ಅದರ ಸಾರಾಂಶ. ಬಡತನ ನಿವಾರಣೆಗೆ ತೆಗೆದುಕೊಳ್ಳಲಾಗ್ತಿರುವ ಕ್ರಮಗಳೆಲ್ಲ ಬೊಗಳೆ, ಬಡವರಿಗೆ ಸಹಾಯ ಮಾಡುವ ಹಳೇ ಯೋಜನೆಗಳೆಲ್ಲ ಅವಿವೇಕಿತನಗಳು. ಅವೆಲ್ಲ ವಿಫಲವಾಗಿವೆ. ಅದಕ್ಕೆ, ನಮ್ಮ ಸಮಾಜದಲ್ಲಿರುವ ಶ್ರೀಮಂತರನ್ನು ಇನ್ನಷ್ಟು ಶ್ರೀಮಂತರನ್ನಾಗಿಸಿ. ಟೇಬಲ್ ತನ್ನ ಶಕ್ತಿ ಮೀರಿ ತುಂಬಿ ಹೋದಾಗ ಅದರಿಂದ ಏನಾದರೂ ಕೆಳಗೆ ಬೀಳಲೇ ಬೇಕಲ್ಲ. ಅದು ಬಡವರಗೆ ಸಿಗುತ್ತದೆ ಅಂತಾರೆ ರಾಹುಲ್ ಬಜಾಜ್. ಇಂಥವರಿಂದ ರೈತರ ಆತ್ಮಹತ್ಯೆ ಬಗ್ಗೆ ವರದಿ ನಿರೀಕ್ಷೆ ಮಾಡೋದಕ್ಕಿಂತ ದೊಡ್ಡ ದಡ್ಡತನ ಇದೆಯಾ..?



ಮುಂಬೈನಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ. ಅಲ್ಲಿ ಇಪ್ಪತ್ತನಾಲ್ಕು ಗಂಟೆಯೂ ವಿದ್ಯುತ್ ಸರಬರಾಜು. ಅದನ್ನ ಹೊರತು ಪಡಿಸಿ ಮಹಾರಾಷ್ಟ್ರದ ಉಳಿದ ಕೆಲವು ದೊಡ್ಡ ಊರುಗಳಲ್ಲಿ ಎರಡು ತಾಸು ಲೋಡ್ ಶೆಡ್ಡಿಂಗ್ ಇದೆ. ಇನ್ನು ಹಳ್ಳಿಗಳಲ್ಲಿ ಎಂಟು ತಾಸು ಲೋಡ್ ಶೆಡ್ಡಿಂಗ್. ಆದರೆ, ಭಾರತದಲ್ಲೇ ಮೊಟ್ಟಮೊದಲ ಸಲ ವಿದರ್ಭದ ನಾಲ್ಕು ಜಿಲ್ಲೆಗಳಲ್ಲಿ ಶವಾಗಾರ ಮತ್ತು ಪೋಸ್ಟ್ ಮಾರ್ಟಂ ಸೆಂಟರ್ ಗಳಿಗೆ ದಿನದ ಇಪ್ಪತ್ತನಾಲ್ಕೂ ಗಂಟೆ ವಿದ್ಯುತ್ ಸರಬರಾಜು ಮಾಡುತ್ತಿದೆ ಸರಕಾರ. ಅಲ್ಲಿ ಹಗಲೂ ರಾತ್ರಿ ಕೆಲಸ ನಡೆಯುತ್ತಿದೆ. ಇಲ್ಲದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಶವಗಳ ಪೋಸ್ಟ್ ಮಾರ್ಟಂ ಮಾಡುವುದು ಕಷ್ಟವಾಗಿಬಿಡುತ್ತದೆ.



ಹದಿನೈದು ವರ್ಷಗಳಿಂದ ಭಾರತದಲ್ಲಿ ತೀವ್ರವಾಗಿ ಬೆಳೆಯುತ್ತಿರುವುದು ಏನು..? ಐ.ಟಿ..? ಊಹ್ಞೂಂ. ಸಾಫ್ಟ್ ವೇರ್..? ಅಲ್ಲ. ಅಸಮಾನತೆ. ಬ್ರಿಟಿಷ್ ವಸಾಹತುಷಾಹಿ ಆಡಳಿತದ ನಂತರ ಮೊಟ್ಟಮೊದಲ ಸಲ ಈ ಸ್ಥಿತಿ ಬಂದಿರೋದು. ಹಸಿವಿನಿಂದ ಜನ ಸಾಯುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಆರು ರಾಜ್ಯ ಸರಕಾರಗಳನ್ನ ತರಾಟೆಗೆ ತೆಗೆದುಕೊಂಡಿದೆ. 1943ರ ಬಂಗಾಲ ಬರಗಾಲದ ನಂತರ ಇಂಥ ಸ್ಥಿತಿ ಬಂದಿರುವುದು ಇದೇ ಮೊದಲು. ಇಲ್ಲಿ ಜನ ಹಸಿವಿನಿಂದ ಸಾಯ್ತಿದ್ರೆ, ನಮ್ಮ ಸರಕಾರ ಐದು ರುಪಾಯಿ ನಲವತ್ತೈದು ಪೈಸೆ ಪ್ರತಿ ಕೆ.ಜಿ ಬೆಲೆಗೆ ಎರಡು ಕೋಟಿ ಟನ್ ಆಹಾರ ಧಾನ್ಯ ರಫ್ತು ಮಾಡಿದೆ. ಭಾರತದ ಬಡವರಿಗಾದರೆ ಅದನ್ನೇ ಆರು ರುಪಾಯಿ ನಲವತ್ತು ಪೈಸೆಗೆ ಕೆ.ಜಿಯಂತೆ ಮಾರಲಾಗುತ್ತಿತ್ತು. ಹೋಗಲಿ, ಆಹಾರ ಧಾನ್ಯ ರಫ್ತು ಮಾಡಿರುವುದಾದರೂ ಯಾರಿಗೆ..? ಯುರೋಪಿನ ಹಸುಗಳಿಗೆ. ಯುರೋಪಿನ ಹಸುಗಳು ಜಗತ್ತಿನಲ್ಲೇ ಅತಿ ಹೆಚ್ಚು ಆಹಾರ ಭದ್ರತೆಹೊಂದಿರುವ ಜೀವಿಗಳು. ಅವುಗಳ ಆಹಾರಕ್ಕಾಗಿ ಪ್ರತಿದಿನ 2.7 ಡಾಲರ್ ಖರ್ಚು ಮಾಡಲಾಗತ್ತೆ.
                       ವಿದರ್ಭದ ರೈತ ಪರ ಹೋರಾಟಗಾರ ವಿಜಯ್ ಝಾವಂಡಿಯಾರನ್ನ ಅದ್ಯಾರೋ ಪತ್ರಕರ್ತ ಕೇಳಿದನಂತೆ, ಭಾರತದ ರೈತರ ಅತಿ ದೊಡ್ಡ ಕನಸು ಯಾವುದು ಅಂತ. ಅದಕ್ಕೆ ಝಾವಂಡಿಯಾ ಕೊಟ್ಟ ಮಾರ್ಮಿಕ ಉತ್ತರ, "ಮುಂದಿನ ಜನ್ಮ ಅಂತಿದ್ದರೆ, ಯುರೋಪಿನಲ್ಲಿ ಹಸುವಾಗಿ ಹುಟ್ಟುವುದು."
                                         ನಿದ್ದೆಯಿಂದೆದ್ದ ಮಗು ಅಮ್ಮನನ್ನ ಕೇಳಿತು,
                                         ಅಮ್ಮಾ ಹಸಿವು, ರೊಟ್ಟಿ ಕೊಡು.

                                         ಕಣ್ತುಂಬ ನೀರು ತುಂಬಿಕೊಂಡ ಅಮ್ಮ,
                                         ಮುಳುಗುತ್ತಿದ್ದ ಸೂರ್ಯನನ್ನ ತೋರಿಸದಳು.

                                         ಹಾಗಾದರೆ, ಆ ರೊಟ್ಟಿ ತಾ.
                                         ನಾನು ನಿನ್ನೆ ರಾತ್ರಿಯಿಂದ ಏನೂ ತಿಂದಿಲ್ಲ, ಮಗುವಿನ ಹಟ.
      
                                         ಸುಡುತ್ತಿರುವ ರೊಟ್ಟಿ ತಣ್ಣಗಾಗಲಿ ಇರು ಮಗು, ಅದು ಬಿಸಿ ಇದೆ.
                                         ಈಗಲೇ ತಿಂದರೆ ಬಾಯಿ ಸುಟ್ಟೀತು, ಅಮ್ಮನ ಸಮಾಧಾನ.

                                         ದಿನದ ವ್ಯವಹಾರ ಮುಗಿಸಿದ ಸೂರ್ಯ
                                         ಬೆಟ್ಟಗಳಾಚೆ ಮುಳುಗಿ ಮರೆಯಾದ.
  
                                         ರೊಟ್ಟಿಯ ನಿರೀಕ್ಷೆಯಲ್ಲಿದ್ದ ಮಗು,
                                         ಹಸಿದ ಹೊಟ್ಟೆಯಲ್ಲೇ ಮತ್ತೆ ನಿದ್ದೆಗೆ ಜಾರಿತು.

                                                                    ಕವಿ - ದಿ. ಕೃಷ್ಣ ಕಲಂಬ್
                                                                           (ಆತ್ಮಹತ್ಯೆಗೆ ಶರಣಾದ ವಿದರ್ಭದ ರೈತ)




ಸಾಯಿನಾಥ್ ಮನೆಗೆ ಫಿನ್ಲೆಂಡಿನಿಂದ ಒಬ್ಬ ಬಂದಿರ್ತಾನೆ. ಅವನಿಗಿವರು ಕಾಫಿ ಮಾಡಿ ಕೊಡ್ತಿದಾರೆ. ಅವನು ತೆಪ್ಪಗೆ ಕಾಫಿ ಕುಡಕೊಂಡು ವಾಪಸ್ ಹೋಗೋದ್ ಬಿಟ್ಟು, ಕ್ಯಾಲಿಫೋರ್ನಿಯಾದಲ್ಲಿ ಸಿಗುವಷ್ಟು ಒಳ್ಳೇ ಕಾಫಿ ನಿಮ್ಮಲ್ಲೂ ಸಿಗತ್ತಾ ಅಂತ ಕೇಳಿಬಿಟ್ಟ.  ಎಲ್ಲಿತ್ತೋ ಇವರಿಗೆ ಸಿಟ್ಟು...



ಒಂದು ಸಲ ಮುಂಬೈ ಷೇರ್ ಮಾರ್ಕೆಟ್ ಏಕಾಏಕಿ ಕುಸಿದು ಹೋಯಿತು. ತಕ್ಷಣ ಸ್ವತಃ ಹಣಕಾಸು ಮಂತ್ರಿಯೇ ದೆಹಲಿಯಿಂದ ಎರಡೇ ತಾಸುಗಳಲ್ಲಿ ವಿಶೇಷ ವಿಮಾನದಲ್ಲಿ ಹೊರಟು ಬಂದರು. ಕಂಗಾಲಾಗಿದ್ದ ಕೋಟ್ಯಾಧೀಶರಿಗೆ ಸಮಾಧಾನ ಹೇಳಿ, ಷೇರು ಮಾರುಕಟ್ಟೆ ಚೇತರಿಸೋದಕ್ಕೆ ಬೇಕಾದ ಕ್ರಮ ಕೈಗೊಂಡರು. ಆದರೆ, ವಿದರ್ಭಕ್ಕೆ.? ಸರಕಾರಿ ಅಂಕಿ ಅಂಶಗಳ ಪ್ರಕಾರ ನಲವತ್ತು ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿರುವ ವಿದರ್ಭಕ್ಕೆ ಸಂಬಂಧಪಟ್ಟವರು ಭೇಟಿ ಕೊಟ್ಟು ರೈತರ ಆತ್ಮಹತ್ಯೆ ತಡೆಗಟ್ಟುವ ಯೋಜನೆ ಜಾರಿ ಮಾಡುವುದಕ್ಕೆ ತೆಗೆದುಕೊಂಡಿದ್ದು..?  ಹತ್ತು ವರ್ಷ..! ಅದೇ ಮಹಾರಾಷ್ಟ್ರದ ರಾಜಧಾನಿ ಮುಂಬೈನ ದಲಾಲ್ ಸ್ಟ್ರೀಟ್ನಲ್ಲಿರುವ ಷೇರ್ ಮಾರ್ಕೆಟ್ - ಅದೇ ಮಹಾರಾಷ್ಟ್ರದ ವಿದರ್ಭ. ಈ ಸರಕಾರ ಯಾರ ಪರವಾಗಿದೆ ಅನ್ನೋದನ್ನ ತಿಳಿದುಕೊಳ್ಳೋದಕ್ಕೆ ಇದಕ್ಕಿಂತ ಉದಾಹರಣೆ ಬೇಕಾ..?
                      ಕಡಿಮೆ ಬಡ್ಡಿಗೆ ಎಂಟು ಸಾವಿರ ಸಾಲ ಸಿಗಲಿಲ್ಲ ಅನ್ನೋ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ ರೈತನ ಬಗ್ಗೆ ವರದಿ ಬರೆದು ಮನೆಗೆ ಬಂದರೆ, ಅಲ್ಲೊಂದು ಪತ್ರ ಇತ್ತು. ನನ್ನ ಬ್ಯಾಂಕಿನ ಪತ್ರ. ನಿಮಗೆ, ಆರು ಪರ್ಸೆಂಟ್ ಬಡ್ಡಿಗೆ ಮರ್ಸಿಡೀಸ್ ಬೆಂಝ್ ಕಾರು ಕೊಳ್ಳೋದಕ್ಕೆ ಸಾಲ ಕೊಡ್ತೀವಿ, ಜಾಮೀನುದಾರರ ಅವಶ್ಯಕತೆ ಇಲ್ಲ ಅಂತಿತ್ತು ಅದರಲ್ಲಿ. ಇದು ಯಾವ ಸೀಮೆ ನ್ಯಾಯ..?
                                                                                       ಪಿ ಸಾಯಿನಾಥ್



ನೀರೋ ಕೊಟ್ಟ ಪಾರ್ಟಿ ಅದ್ಭುತವಾಗಿತ್ತು. ಆದರೆ ಒಂದೇ ಸಮಸ್ಯೆ. ಅಷ್ಟು ದೊಡ್ಡ ಗಾರ್ಡನ್ನಿಗೆ ಬೆಳಕು ಎಲ್ಲಿಂದ ತರೋದು ಅಂತ. ಆಗ ಆ ಮಹಾರಾಜ ಒಂದು ಐಡಿಯಾ ಮಾಡಿದ. ಜೈಲಿನಲ್ಲಿ ಖೈದಿಗಳನ್ನ ಒಬ್ಬೊಬ್ಬರನ್ನಾಗಿ ಕರೆಸಿ ಬೆಂಕಿ ಹಚ್ಚಿಸಿದ. ಅವರು ಧಗಧಗನೇ ಹೊತ್ತಿ ಉರೀತಿದ್ರೆ ಗಾರ್ಡನ್ ತುಂಬ ಬೆಳಕು.
                     ನನಗೆ ನೀರೋ ಮಹಾರಾಜನ ಬಗ್ಗೆ ಬೇಜಾರಿಲ್ಲ. ಬೇಜಾರಿರೋದು ಆ ಪಾರ್ಟಿಗೆ ಬಂದಿದ್ದ ಗಣ್ಯರ ಬಗ್ಗೆ. ಅವರು ಸಮಾಜದಲ್ಲಿ ಪ್ರತಿಷ್ಠಿತರೆನ್ನಿಸಿಕೊಂಡಿದ್ದವರು. ಶ್ರೀಮಂತರು, ಬರಹಗಾರರು, ಬುದ್ಧಿ ಜೀವಿಗಳು, ಸೆಲೆಬ್ರಿಟಿಗಳು. ಅಲ್ಲಿ, ತಮ್ಮಂತಹ ಮನುಷ್ಯನೊಬ್ಬ ಬೆಂಕಿಯ ಧಗೆಯಲ್ಲಿ ಬೆಂದು ಹೋಗ್ತಿದ್ರೆ, ಇವರು ಆ ಬೆಳಕಿನಲ್ಲಿ ಒಂದೊಂದೇ ಗುಟುಕು ವೈನ್ ಕುಡಿದರಲ್ಲ, ಒಂದೊಂದೇ ತುತ್ತು ಊಟ ಮಾಡಿದರಲ್ಲ, ದ್ರಾಕ್ಷಿ ಹಣ್ಣನ್ನ ಒಂದೊಂದಾಗಿ ಬಾಯಿಗೆ ಹಾಕಿಕೊಂಡು ಚಪ್ಪರಿಸಿಕೊಂಡು ತಿಂದರಲ್ಲ. ಅವರು ಅದಿನ್ನೆಂಥವರಿರಬೇಕು.
                     ಐದೂವರೆ ವರ್ಷಗಳ ಕಾಲ ರೈತರ ಆತ್ಮಹತ್ಯೆಗಳ ಬಗ್ಗೆ ವರದಿ ಮಾಡಿ - ಮಾಡಿ, ನನಗೆ ನೀರೋನ ಅತಿಥಿಗಳ್ಯಾರು ಅನ್ನೋದು ಅರ್ಥ ಆಗಿದೆ. ಈಗ ಅದು ನಿಮಗೆ ಕೂಡ ಅರ್ಥ ಆಗಿರಬಹುದು.



Mahatma Gandhi who was the most prolific journalists India has ever produced, said, "recall the face of the weakest and the poorest  person you have met and ask yourself, how the action you contemplate will place him in a greater control of his life." I will give the same principle to journalism.

                                                                                                * P Sainath



Friday, March 11, 2011

ಯಾವನು ಅದೇನ್ ಕಿತ್ಕೊತಾನೆ ಅನ್ನೋ ಗಾಂಚಾಲಿ...


                                          ಸುಮ್ಮನೆ ಕಲ್ಪಿಸಿಕೊಳ್ಳಿ. ಒಬ್ಬ ವ್ಯಕ್ತಿಯನ್ನ ಆತ ಕಳ್ಳ ಅನ್ನೋ ಸಂಶಯದ ಮೇಲೆ ಪೊಲೀಸರು ವಶಕ್ಕೆ ತೆಗೆದುಕೊಂಡು ಸ್ಟೇಷನಗೆ  ಕರೆತಂದಿದ್ದಾರೆ. ಆತನನ್ನ ಎದುರಿಗೆ ಕೂಡಿಸಿಕೊಂಡು, "ನೀನು ಕಳ್ಳತನ ಮಾಡಿದ್ದು ನಿಜವಾ" ಅಂತ ಪೇದೆ ಕೇಳ್ತಾನೆ. ಅದಕ್ಕವನು, "ಆ ಆರೋಪದ ಬಗ್ಗೆ ಈಗ ನಾನು ಯಾವುದೇ ಪ್ರತಿಕ್ರಿಯೆ ನೀಡಲು ಇಷ್ಟಪಡುವುದಿಲ್ಲ" ಅಂದರೆ, ಬೆನ್ನಕೆಳಗೆರಡು ಲಾಠಿ ಏಟು ಬೀಳಬೇಕು ತಾನೆ..? ಬಿದ್ದೇ ಬೀಳತ್ವೆ. ಯಾಕಂದ್ರೆ ಆತನ ಮೇಲಿರುವುದು ಆಫ್ಟರಾಲ್, ಒಂದಷ್ಟು ಲಕ್ಷ ಕಳ್ಳತನದ ಆರೋಪ. ಆದರೆ, ಒಬ್ಬ ದೊಡ್ಡ ಮನುಷ್ಯನ ಮೇಲೆ ಇಪ್ಪತ್ತೈದು ಮೂವತ್ತು ಕೋಟಿಯ ಅಪರಾತಪರಾ ಆರೋಪ ಬಂದಾಗ, ಆತ ಹೀಗೆ ಹೇಳಿದರೆ..? ಇಲ್ಲಿ ಆಗಿರುವುದೂ ಅದೇ.                                        
                                         "ಕುಮಾರಸ್ವಾಮಿ ಮಾಡಿರುವ ಆರೋಪಗಳ ಬಗ್ಗೆ ಈಗ ನಾನು ಯಾವುದೇ ಪ್ರತಿಕ್ರಿಯೆ ನೀಡಲು ಇಷ್ಟಪಡುವುದಿಲ್ಲ." ಇದು ಸಿ.ಎಂ ಯಡಿಯೂರಪ್ಪನವರ ಒಂದು ಸಾಲಿನ ಪ್ರತಿಕ್ರಿಯೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಥಾನುಗಟ್ಟಲೆ ದಾಖಲೆಗಳನ್ನ ಹಿಡಕೊಂಡು ಕುಳಿತು, ಮುಖ್ಯಮಂತ್ರಿಗಳು ಕಂಡ ಕಂಡವರಿಗೆ ಅಕ್ರಮವಾಗಿ ಉಪಕಾರ ಮಾಡಿಕೊಟ್ಟು ಅದಕ್ಕೆ ಪ್ರತಿಯಾಗಿ ತಮ್ಮ ಮಕ್ಕಳ ಶಿಕ್ಷಣ ಸಂಸ್ಥೆಗೆ ಕೋಟಿಗಟ್ಟಲೆ ದೇಣಿಗೆ ಪಡೆದಿದ್ದಾರೆ ಅಂತ ಗಂಭೀರ ಆರೋಪ ಮಾಡಿದ್ರು. ಅದಕ್ಕೇನ್ ಹೇಳ್ತೀರಿ ಅಂತ ಪತ್ರಕರ್ತರು ಹೋಗಿ ಕೇಳಿದರೆ, ಹತ್ತಾರು ಕ್ಯಾಮೆರಾಗಳೆದುರಿಗೇ  ಯಡಿಯೂರಪ್ಪನವರು, "ಅದಕ್ಕೆಲ್ಲ ಈಗ ನಾನು ಪ್ರತಿಕ್ರಿಯೆ ನೀಡಲು ಇಷ್ಟ ಪಡುವುದಿಲ್ಲ" ಅಂದು ಸರಸರನೇ ನಡೆದುಹೋಗಿಬಿಟ್ಟರು. ಅರೆ ಇಸ್ಕಿ, ಈಗ ನಾನು ಪ್ರತಿಕ್ರಿಯೆ ನೀಡಲು ಇಷ್ಟ ಪಡುವುದಿಲ್ಲ ಅಂದರೆ ಏನರ್ಥ..? ಈಗ ನನಗೆ ಮೂಡಿಲ್ಲ, ಮೂಡು ಬಂದಾಗ ಮಾತಾಡ್ತೀನಿ, ಅಲ್ಲೀ ತನಕ ಅದುಮಿಕೊಂಡಿರಿ ಅಂತಾನಾ..? ನಾನು ಮುಖ್ಯಮಂತ್ರಿ ಕಣ್ರೀ, ಏನಾದ್ರೂ ಮಾಡ್ಕೋತೀನಿ, ಅದನ್ನೆಲ್ಲ ಕೇಳೋಕ್ ನೀವ್ಯಾರು ಅಂತಾನಾ..? ಗಾಂಚಾಲಿ ಅಂದ್ರೆ ಇದೇ ಅಲ್ಲವಾ..?


                                          ನಿಮ್ಮ ಮೇಲೆ ಬಂದಿರುವ ಆರೋಪಗಳ ಬಗ್ಗೆ ಏನ್ ಹೇಳ್ತೀರಿ ಅಂತ ಕೇಳೋದಕ್ಕೆ ಹೋದ ಯಾವ ಪತ್ರಕರ್ತರಿಗೂ, ಹಲಾಲುಕೋರ ಕೆಲಸ ಮುಚ್ಚಿಕೊಳ್ಳುವುದಕ್ಕೆ ಮುಖ್ಯಮಂತ್ರಿಯ ಮಕ್ಕಳ ಟ್ರಸ್ಟ್ ಗೆ  ದೇಣಿಗೆ ಕೊಟ್ಟ ಕಂಪನಿ ಜೊತೆಗಾಗಲಿ, ಟ್ರಸ್ಟ್ ಜೊತೆಗಾಗಲಿ, ಕುಮಾರಸ್ವಾಮಿ ಜೊತೆಗಾಗಲಿ, ಸ್ವತಃ ಮುಖ್ಯಮಂತ್ರಿ ಜೊತೆಗಾಗಲಿ, ಸ್ನೇಹ ಸಂಬಂಧವೂ ಇಲ್ಲ - ರಾಗ ದ್ವೇಷಗಳೂ ಇಲ್ಲ. ತಮ್ಮ ಓಟು ಪಡೆದು ವಿಧಾನಸೌಧದ ಮೂರನೇ ಮಹಡಿಯಲ್ಲಿನ ಸಿಂಹಾಸನ ಏರಿರುವ ಮನುಷ್ಯ ಅಲ್ಲಿ ಕುಳಿತು ಅದೇನ್ ಕಡಿದು ಕಟ್ಟೆ ಹಾಕ್ತಿದಾನೆ ಅಂತ ತಿಳಿದುಕೊಳ್ಳೋ ಅಧಿಕಾರ ರಾಜ್ಯದ ಪ್ರತಿಯೊಬ್ಬರಿಗೂ ಇದೆ. ಆ ವಿಷಯವನ್ನ ಅವರಿಗೆ ತಿಳಿಸುವ ಮೀಡಿಯೇಟರ್ ಆಗಿ ಕೆಲಸ ಮಾಡೋರು ಪತ್ರಕರ್ತರು. ಅವರೆದುರಿಗೆ ಎಡಸೊಕ್ಕಿನ ಮಾತಾಡಿ ಹೊರಟುಹೋದವರು ಯಡಿಯೂರಪ್ಪ.
                                         ಈ ಎಡಸೊಕ್ಕು ಅವರೊಬ್ಬರದು ಮಾತ್ರ ಅಲ್ಲ. ಇತ್ತೀಚೆಗೆ ಅವರ ರಾಜಕೀಯ ಕಾರ್ಯದರ್ಶಿ  ಬಿ.ಜೆ ಪುಟ್ಟಸ್ವಾಮಿಯವರೊಂದು ಪ್ರೆಸ್ ಮೀಟ್ ಮಾಡಿ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ತಮ್ಮ ಅತ್ತೆ ಮತ್ತು ಇನ್ನೊಬ್ಬ ಸಂಬಂಧಿಗೆ ಅಕ್ರಮವಾಗಿ ಬಿ.ಡಿ.ಎ ಸೈಟ್ ಕೊಟ್ಟಿದ್ದಾರೆ ಅಂತ ಆರೋಪ ಮಾಡಿ ದಾಖಲೆ ಕೊಟ್ಟರು. ಇದರ ಬಗ್ಗೆ ಏನ್ ಹೇಳ್ತೀರಿ ಅಂತ ಕುಮಾರಸ್ವಾಮಿಯವರ ಹತ್ರ ಹೋದ್ರೆ, "ಅವನ್ಯಾರೋ ಪುಟ್ಟಸ್ವಾಮಿ ಹೇಳಿದ್ದಕ್ಕೆಲ್ಲ ರಿಯಾಕ್ಟ್ ಮಾಡಕಾಗತ್ತಾ ಬ್ರದರ್, ಬಿಟ್ಟಾಕಿ ಅದನ್ನ, ಮತ್ತೇನ್ ಸಮಾಚಾರ..?" ಅಂತ, ಅದು ಮಾತಾಡಬೇಕಾದ ವಿಷಯವೇ ಅಲ್ಲ ಅನ್ನೋಹಾಗೆ ಮಾತು ಬದಲಿಸಿಬಿಟ್ಟರು. ಇಲ್ಲಿ ಅವನ್ಯಾರೋ ಪುಟ್ಟಸ್ವಾಮಿ ಮುಖ್ಯ ಅಲ್ಲ. ಇನ್ಯಾರೋ ವೆಂಕ, ಸೀನ, ನಾಣಿ ಆರೋಪ ಮಾಡಿದ್ರೂ ಅದಕ್ಕೆ ಉತ್ತರ ಕೊಡಬೇಕಾದದ್ದು ಕುಮಾರಸ್ವಾಮಿಯವರ ಜವಾಬ್ದಾರಿ ಅಲ್ಲವಾ..? ಪಾತಿವೃತ್ಯದ ಬಗ್ಗೆ ಪ್ರವಚನ ಕೇಳೋದಕ್ಕೆ ಬಂದ ಜನ, ಪ್ರವಚನ ಮಾಡುತ್ತಿರುವವಳು ಎಷ್ಟರ ಮಟ್ಟಿಗೆ ಶೀಲವಂತೆ ಅಂತ ತಿಳಿದುಕೊಳ್ಳಬಾರದಾ..? ಒಂದು ಆರೋಪ ಅಂತ ಬಂದಾಗ, ಅದಕ್ಕಿರುವ ದಾಖಲೆಗಳಿಗೆ, ವ್ಯಾಪಕತೆಗೆ ಬೆಲೆ ಬರಬೇಕೇ ಹೊರತು, ಆರೋಪ ಮಾಡಿದವರಾರು ಅನ್ನೋದಕ್ಕಲ್ಲ.

 
                                        ಇದಕ್ಕೆಲ್ಲ ಕಾರಣ, ನಾವು ಮತದಾರರಿಗೆ ಆನ್ಸರೇಬಲ್ ಅಲ್ಲ ಅನ್ನೋ ರಾಜಕಾರಣಿಗಳ ಉದ್ಧಟತನ. ಕುಮಾರಸ್ವಾಮಿಯವರ ಮೇಲೆ ಬಂದಿರುವ ಆರೋಪಗಳ ಬಗ್ಗೆ ಅಬ್ಬಬ್ಬಾ ಅಂದರೆ, ದೇವೇಗೌಡರು ಕೇಳಬಹುದು. ಅದು, ಅವರ ಫ್ಯಾಮಿಲಿ ಮ್ಯಾಟರ್ ಆಗಿಬಿಡತ್ತೆ. ಯಡಿಯೂರಪ್ಪನವರು ತಮ್ಮ ಮೇಲೆ ಬಂದಿರುವ ಆರೋಪಗಳಿಗೆ ಬಿ.ಜೆ.ಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಸ್ಪಷ್ಟೀಕರಣ ಕೊಡ್ತಾರೆ. ಬಿ.ಜೆ.ಪಿ ಹೈಕಮಾಂಡಿಗೆ  ಯಾವಾಗಲೂ ಕ್ಲೀನ್ ಚಿಟ್ ಕೊಡೋ ಅವಸರ. ಅವರ ನಡುವೆ ಅದೇನು ವ್ಯವಹಾರವೋ ಯಾರಿಗೆ ಗೊತ್ತು..? ಒಟ್ಟಿನಲ್ಲಿ, ಓಟ್ ಹಾಕಿದವರು ಲೆಕ್ಕಕ್ಕೇ ಬರಲ್ಲ. ಅವರು after all ಮತದಾರರು. ಹಂಗಾದಾಗಲೇ, "ನಾನು ಯಾವುದೇ ಪ್ರತಿಕ್ರಿಯೆ ನೀಡಲು ಇಷ್ಟಪಡುವುದಿಲ್ಲ" ಅನ್ನೋ ಹೇಳಿಕೆಗಳು ಬರೋದು. ಆ ಹೇಳಿಕೆಯ ನಂತರ " ಪ್ರತಿಕ್ರಿಯೆ ನೀಡಲು ಮುಖ್ಯಮಂತ್ರಿ ನಿರಾಕರಣೆ " ಅನ್ನೋ ಬ್ರೇಕಿಂಗ್ ನ್ಯೂಸ್ ಬೇರೆ. ಸಣ್ಣಪುಟ್ಟ ಕಳ್ಳರಾದರೆ, ಲಾಠಿ ಏಟು ಬೀಳತ್ವೆ. ಈ ಹಗಲುದರೋಡೆಕೋರರಿಗೆ ಜೈಕಾರ, ಭೋಪರಾಕುಗಳು. ಇದಕ್ಕಿಂತ ದುರಂತ ಇದೆಯಾ..?

Wednesday, March 9, 2011

ಬೈಕ್ ಹತ್ತಿಕೊಂಡು ದೇಶ ಸುತ್ತೋ ಸುಖ...



Four wheels move the body,
Two wheels move the soul..!

we four in chitradurga...

                    ನಾಲ್ಕು ಗಾಲಿಗಳು ದೇಹವನ್ನ ಮುನ್ನಡೆಸಿದರೆ, ಎರಡು ಗಾಲಿಗಳು ಆತ್ಮವನ್ನ ಮುನ್ನಡೆಸುತ್ತವೆ. ಹುಚ್ಚಿಗೆ ಬಿದ್ದು ಬೈಕ್ ಓಡಿಸೋರ ಪಾಲಿಗೆ ಘೋಷ ವಾಕ್ಯದಂತಿರುವ ಸಾಲುಗಳಿವು. ನಮ್ಮದೂ ಅಂಥವರದ್ದೇ ಒಂದು ಗುಂಪು. ಎಲ್ಲ ಸೇರಿದರೆ ಸುಮಾರು ಇನ್ನೂರ ಹತ್ತು ಜನ ಇದ್ದೇವೆ. Royal Indians Enfield Owners Club ಅಂತ ಹೆಸರು. ಎಲ್ಲರೂ, ಬುಲೆಟ್ ಅಂತಲೇ ಗುರುತಿಸಿಕೊಳ್ಳುವ ರಾಯಲ್ ಎನ್ಫೀಲ್ಡ್ ಕಂಪನಿಯ ಬೈಕ್ ಗಳ  ಹೆಮ್ಮೆಯ ಮಾಲೀಕರು. ಬುಲೆಟ್ ಬೆನ್ನ ಮೇಲೆ ಕುಳಿತು ದೇಶ ಸುತ್ತೋದರಲ್ಲೇ ಸುಖ, ಸಂತೋಷ ಮತ್ತು ಥ್ರಿಲ್ಲು ಕಂಡುಕೊಂಡವರು. ಕಾರಿನಲ್ಲಿ ಪ್ರವಾಸಕ್ಕೆ ಹೊರಡೋರನ್ನ, ತಿಂಗಳುಗಳ ಮೊದಲೇ ಟ್ರೇನ್ ಟಿಕೆಟ್ ಬುಕ್ ಮಾಡಿಸೋರನ್ನ, ವಿಮಾನದ ಬ್ಯುಸಿನೆಸ್ ಕ್ಲಾಸ್ ಸೀಟಿನಲ್ಲಿ ಬೆಚ್ಚಗೆ ಮಲಗಿಕೊಂಡು ಪ್ರಯಾಣ ಮಾಡೋರನ್ನ ಆಡಿಕೊಂಡು ನಗೋರು. ವೀಕೆಂಡು ಬಂದರೆ ಸಾಕು, ಬೈಕ್ ಹತ್ತಿಕೊಂಡು ಊರು ಬಿಡೋರು. ಯಾರ್ಯರ್ದು  ಯಾವ್ಯಾವ ಊರೊ, ಯಾವ ಜಾತಿಯೋ, ಏನು ಕೆಲಸವೋ... ಬೈಕಿಂಗ್ ಅನ್ನೋ ಹುಚ್ಚನ್ನು ಹೋಲ್ ಸೇಲಾಗಿ  ಅಂಟಿಸಿಕೊಂಡವರು. www.royalindians.com ಎಂಬ ವೆಬ್ಸೈಟ್  ನಮ್ಮ ಕ್ಲಬ್ಬಿನ ಪಾಲಿಗೆ ಚರಾಸ್ತಿ ಮತ್ತು ಸ್ಥಿರಾಸ್ಥಿ. ಉಳಿದಂತೆ, ಕ್ಲಬ್ಬಿನ ಪ್ರತಿ ಸದಸ್ಯನನ್ನ ಮಾತಾಡಿಸಿ ನೋಡಿದರೂ, ಲಾಂಗ್ ರೈಡಿಂಗ್ನ ಥ್ರಿಲ್ಲಿಂಗ್ ಅನುಭವಗಳ ಕಂತೆ ಬಿಚ್ಚಿಡುತ್ತಾನೆ. ಹಾಗೆ ಮಾಸಿ ಹೋಗದ ನೆನಪಾಗಿ ಉಳಿದುಹೋಗಿರುವುದು ಇತ್ತೀಚೆಗೆ ನಡೆಸಿದ ಗೋವಾ ರೈಡ್.
                     ಈ ರಾಯಲ್ ಎನ್ಫೀಲ್ಡ್ ಕಂಪನಿಯವರು ಪ್ರತಿ ವರ್ಷ ರೈಡರ್ ಮೇನಿಯಾ ಅಂತ ಮಾಡ್ತಾರೆ. ಹುಚ್ಚಿಗೆ ಬಿದ್ದು ಬುಲೆಟ್ ಓಡಿಸೋರನ್ನ ಒಂದು ಕಡೆ ಸೇರಿಸುವ ಮೂರು ದಿನಗಳ ಜಾತ್ರೆ ಅದು. ಭಾರತದ ಮೂಲೆ ಮೂಲೆಗಳಿಂದ ಹುಡುಗರು - ಹುಡುಗೀರು ತಮ್ಮ ತಮ್ಮ ಬುಲೆಟ್ ಗಳಲ್ಲಿ ಅಲ್ಲಿಗೆ ಬರ್ತಾರೆ.  ಯಾವ ಕಡೆಯಿಂದ ಲೆಕ್ಕ ಹಾಕಿದರೂ ಐದಾರು ನೂರು ಜನರಿಗೆ ಕಡಿಮೆ ಇರಲ್ಲ. ಮೂರು ವರ್ಷಗಳಿಂದ ರೈಡರ್ ಮೇನಿಯಾ ಪಣಜಿಯ ಅಂಜುನಾ ಬೀಚ್ ಹತ್ತಿರ ಇರುವ  ಹಿಲ್ ಟಾಪ್ ಹೊಟೇಲ್ನಲ್ಲಿ ನಡೀತಿದೆ. ಈ ಸಲ ಕೂಡ ಅಲ್ಲೇ ಫಿಕ್ಸ್ ಆಗಿತ್ತು. ಲಾಂಗ್ ರೈಡ್ ಮಾಡೋದಕ್ಕೆ ರೈಡರ್ ಮೇನಿಯಾಕ್ಕಿಂತ ನೆಪ ಬೇಕಾ..? ಅನಾಮತ್ತು ಇಪ್ಪತ್ತನಾಲ್ಕು ಜನ ತಯಾರಾದ್ವಿ. ಆದರೆ, ಎಲ್ಲರಿಗೂ ಒಂದೇ ಸಲಕ್ಕೆ ರಜೆ ಸಿಗಬೇಕಲ್ಲ. ಮೂರು ತಂಡಗಳಲ್ಲಿ ಹೋಗೋ ನಿರ್ಧಾರ ಆಯ್ತು. ಮೊದಲ ತಂಡದಲ್ಲಿ ನನ್ನನ್ನೂ ಸೇರಿಸಿ ನಾಲ್ಕು ಜನ ನಸುಕಿನ ಜಾವ ಬೆಂಗಳೂರು, ಚಿತ್ರದುರ್ಗ, ಶಿವಮೊಗ್ಗ, ಹೊನ್ನಾವರ, ಕಾರವಾರ ಮೂಲಕ ಹೊರಟರೆ, ಅದರ ಮಾರನೇ ದಿನ ಅದೇ ರೂಟ್ನಲ್ಲಿ ಎಂಟು ಬುಲೆಟ್ ಗಳು ಹೊರಟವು. ಆವತ್ತೇ ರಾತ್ರಿ, ಹನ್ನೆರಡು ಬುಲೆಟ್ಗಳಲ್ಲಿ ದಾವಣಗೆರೆ, ಹುಬ್ಬಳ್ಳಿ, ಕಾರವಾರ ಮಾರ್ಗವಾಗಿ ಹೊರಟದ್ದು ಮುಉರನೆಯ ತಂಡ.  ಹೆಚ್ಚೂ ಕಡಿಮೆ ಏಳುನೂರ ಐವತ್ತು ಕಿಲೋಮೀಟಾರ್ ಗಳ  ರೈಡ್ ಅದು. ಒಂದೇ ಏಟಿಗೆ ಮುಗಿಸಬೇಕು. ಎಂಥಾ ಪಳಗಿದ ಲಾಂಗ್ ರೈಡರ್ ಆದರೂ, ಅದೊಂದು ಚಾಲೆಂಜೇ. ನಮ್ಮ ಪಾಲಿಗೆ ಇಪ್ಪತ್ತೆರಡು ತಾಸುಗಳ ಸಾಹಸ. ಕಲ್ಲಂಗೋಟ್ ಬೀಚ್ ಸೆರಗಿನಲ್ಲಿರೋ ಕಿಸ್ಮತ್ ಮಹಲ್ ಲಾಡ್ಜ್ ತಲುಪಿ ಅದೊಂದು ಸುಸ್ತನ್ನ ಒಂದು ದಿವ್ಯವಾದ ನಿದ್ದೆಯೊಂದಿಗೆ ಕಳೆದುಕೊಂಡು, ರೈಡರ್ ಮೇನಿಯಾ ನಡೀತಿದ್ದ ಹಿಲ್ ಟಾಪ್ ಹೊಟೇಲಿಗೆ ಹೋದರೆ, ಅಲ್ಲಿತ್ತು ಬೈಕಿಂಗ ನ  ಬಣ್ಣದ ಲೋಕ.

the Grand Entry...

                    ದೂರದಿಂದಲೇ ಕೇಳಿಸುವ ಬುಲೆಟ್ನ ಗುಟುರು. ಹತ್ತಿರ ಹೋದರೆ, ಕಣ್ಣು ಹಾಯಿಸಿದಷ್ಟು ದೂರ ಆ ದೈತ್ಯ ಬೈಕುಗಳು.  ಪ್ರತಿಯೊಬ್ಬರೂ ಕಾರ ಹುಣ್ಣಿಮೆಗೆ ರೈತರು ತಮ್ಮ ತಮ್ಮ ಹೋರಿಗಳನ್ನು ಸಿಂಗರಿಸಿಕೊಂಡು ತಂದಂತೆ ತಮ್ಮ ತಮ್ಮ ಬುಲೆಟ್ಗಳನ್ನ ಸಿಂಗರಿಸಿಕೊಂಡು ತಂದಿರ್ತಾರೆ. ಅವರ ಮಧ್ಯೆ, ಬುಲೆಟ್ ಓಡಿಸುವ ಹುಡುಗಿಯರ ಬಿನ್ನಾಣ, ಆಂಟಿಯರ ವಯ್ಯಾರಗಳು, ಭಾರತಕ್ಕೆ ಬಂದು ಬುಲೆಟ್ ಖರೀದಿಸಿ ದೇಶ ಸುತ್ತುವ ಪ್ಹಾರಿನರುಗಳ  ಸಂಭ್ರಮಗಳು. ಒಳಗೆ ಹೆಜ್ಜೆಯಿಟ್ಟರೆ, ಒಂದು ಕಡೆ ರಾಯಲ್ ಎನ್ಫೀಲ್ಡ್ ನ  ಲಾಂಛನ ಮೈಮೇಲೆ ಮೂಡಿಸಿಕೊಂಡಿರುವ ಟಿ ಶರ್ಟು, ಲೈಟರ್, ಬಿಯರ್  ಮಗ್ಗಳು, ಬುಲೆಟ್ ನ  ಇತಿಹಾಸ ತಿಳಿಸುವ ಪುಸ್ತಕಗಳ ಅಂಗಡಿ. ಹಾಗೇ ಎಡಕ್ಕೆ ತಿರುಗಿ ಒಳಗೆ ಹೋದರೆ, ಬೈಕ್ ಮೇಲೆ ಜಗತ್ತು ಸುತ್ತಿದವರು ಮಾಡಿರುವ ಡಾಕ್ಯುಮೆಂಟರಿಗಳ ಪ್ರದರ್ಶನ. ಮುಂದೆ, ಲಾಂಗ್ ರೈಡಿಂಗಿಗೆ  ಬೇಕಾದ ವಸ್ತುಗಳು, ಬೈಕಿನ ಸಿಂಗಾರದ ಸಾಮಾನುಗಳ ಅಂಗಡಿಗಳು. ಅದರ ಪಕ್ಕದಲ್ಲೇ, ಮಾಡಿಫೈಡ್ ಬುಲೆಟ್ ಗಳ ಜಗತ್ತು. ಒಂದು ಇನ್ನೊಂದರಂತಿಲ್ಲ, ಇನ್ನೊಂದು ಮತ್ತೊಂದರಂತಿಲ್ಲ. ಅವುಗಳಲ್ಲಿ ಅತ್ಯುತ್ತಮವಾದದ್ದು ಯಾವುದು ಅನ್ನೋದೇ ಒಂದು ಸ್ಪರ್ಧೆ. ಬೈಕ್ ಮಾಡಿಫೈ ಮಾಡೋದನ್ನೇ ವೃತ್ತಿಯಾಗಿಸಿಕೊಂಡವರು ಅಲ್ಲಿ ತಮ್ಮ ತಮ್ಮ ಬೈಕುಗಳ ಸಮೇತ ಬಂದಿರ್ತಾರೆ. ಇದನ್ನೆಲ್ಲ ನೋಡುತ್ತ ಓಡಾಡ್ತಿರುವಾಗ ಹಿನ್ನೆಲೆಯಲ್ಲಿ ಭೋರ್ಗರೆಯುವ ಸಂಗೀತ. ಹೊಟ್ಟೆಗೆ ಬೇಕು ಬೇಡಾದ ತಿಂಡಿ ತಿನಿಸುಗಳು. ಗೋವಾದ ರಣರಣ ಬಿಸಿಲಿಗೆ ಹತ್ತು ರುಪಾಯಿಗೊಂದು ಬಿಯರ್ ಮಾರುವ ಆಫರ್ ಇಟ್ಟ ವಿಜಯ್ ಮಲ್ಯರ ಧಾರಾಳತನವೂ ಸೇರಿಕೊಂಡು ಅಲ್ಲೊಂದು ಹೊಸ ಲೋಕವನ್ನೇ ಸೃಷ್ಠಿಸಿಬಿಟ್ಟಿದ್ದವು.

test riding a modified bull..!
                   ಅವೆಲ್ಲದರ ನಡುವೆ, ಬುಲ್ ರೈಡರುಗಳಿಗಾಗಿ  ನಡೆಯುವ ಸ್ಫರ್ಧೆಗಳನಂತೂ  ಮಿಸ್ ಮಾಡಿಕೊಳ್ಳುವಂತೆಯೇ ಇಲ್ಲ. ಗುಡ್ಡದ ಏರಿಳಿಕೆಯನ್ನೇ ದಾರಿ ಅಂತ ಘೋಷಿಸಿ ಅದರಲ್ಲಿ ರೇಸ್ ಇಡ್ತಾರೆ. ಅದಕ್ಕೆ dirt track ಅಂತ ಹೆಸರು. ಇನ್ನು ಆ ದಾರಿಯಲ್ಲಿ ಕಲ್ಲು, ಟೈರು, ಹುಲ್ಲಿನ ಮೆದೆ ಇಟ್ಟು ಅದರ ಮೇಲೆ ಬೈಕ್ ಓಡಿಸಿದರೆ ಅದು ಟ್ರಯಲ್ಸ್. ಅವುಗಳಿಗಾಗಿ ಪುಣೆಯ ರೋಡ್ ಶೇಕರ್ಸ್  ಕ್ಲಬ್ನವರು ತಿಂಗಳುಗಟ್ಟಲೆ ತಯಾರಿ ಮಾಡಿಕೊಂಡು ಬಂದಿರ್ತಾರೆ . ಇನ್ನು, ಅದರಲ್ಲೆಲ್ಲಾ ಭಾಗವಹಿಸಿ, ತಮ್ಮನ್ನೂ - ತಮ್ಮ ಬೈಕುಗಳನ್ನು ಹೈರಾಣು ಮಾಡಿಕೊಳ್ಳಲಾರೆವು ಅನ್ನುವಂಥವರಿಗೆ ಬಿಯರ್ ಕುಡಿಯೋ ಸ್ಫರ್ಧೆ, ಪಂಜಾ, ಸ್ಲೋ ರೇಸಿಂಗ್ನಂಥ ಡೀಸೆಂಟ್ ಕಾಂಪಿಟೇಷನ್ನುಗಳು. ಇವೆಲ್ಲದರ ಮಧ್ಯೆ, ರೈಡರ್ ಮೇನಿಯಾಕ್ಕೆ ಬಂದಿರುವ ಅಷ್ಟೂ ಜನ ಒಂದೇ ಸಲಕ್ಕೆ ಒಂದು ರೌಂಡ್ ಪಣಜಿ ಕಡೆ ಹೋಗಿ ಬರ್ತಾರೆ. ಆರು ನೂರು ಬುಲೆಟ್ಗಳು ಸಾಲಾಗಿ ರೋಡಿಗಿಳಿದರೆ ಹೆಂಗಿರತ್ತೆ ಅನ್ನೋದು ನಿಮ್ಮ ಊಹೆಗೆ ಬಿಟ್ಟ ವಿಚಾರ.
                   ರೈಡರ್ ಮೇನಿಯಾ ಅನ್ನೋದು ತುಂಬ ಜನರಿಗೆ ಗೋವಾ ಸುತ್ತೋದಕ್ಕೊಂದು ನೆಪ. ನಾವು ಕೂಡ ಟೈಮು ಸಿಕ್ಕಾಗಲೆಲ್ಲ ನಮ್ಮ ನಮ್ಮ ಬೈಕ್ ಹತ್ತಿಕೊಂಡು ಹೊರಟು ಬಿಡ್ತಿದ್ವಿ. ಎಲ್ಲೆಲ್ಲಿಗೆ ಹೋಗ್ತೀವೋ ಅಲ್ಲಲ್ಲಿ, ಅಲ್ಲಿನ ಸ್ಪೆಷಲ್ ತಿಂಡಿ ತಿನಿಸು ಸವಿಯಬೇಕು. ಹೋದಲ್ಲೆಲ್ಲಾ ಮಸಾಲೆ ದೋಸೆ, ಇಡ್ಲಿ ವಡೆ ಹುಡುಕಿಕೊಂಡು ಅಲೆದರೆ ಅದು ದಡ್ಡತನ. ಅದರಲ್ಲೂ ಗೋವಾಕ್ಕೆ ಹೋದಾಗ, ಸಮುದ್ರ ತೀರದಲ್ಲಿ ಶಾಕ್ ಅಂತ ಕರೆಸಿಕೊಳ್ಳೋ ತೆಂಗಿನ ಗರಿಕೆಯ ಹೊಟೇಲುಗಳಲ್ಲಿ ಸೀ ಫುಡ್ ಸವಿಸೋ ಸಂತೋಷಾನೇ ಬೇರೆ. ನಾವು ಹೋದಾಗ, ಹುಣ್ಣಿಮೆ ಬೇರೆ. ಬೆಳದಿಂಗಳಿನಲ್ಲಿ, ಸಮುದ್ರದ ಅಲೆಗಳು ಕಾಲಿಗೆ ತಾಕುವಂಥ ಜಾಗದಲ್ಲಿ ಹೊಟೇಲಿನವರು ಟೇಬಲ್ಲು ಚೇರು ಹಾಕಿ ಕೊಟ್ಟು, ಟೇಬಲ್ ಮೇಲೊಂದು ಕ್ಯಾಂಡಲ್ ಹಚ್ಚಿಟ್ಟು ಕೊಡ್ತಾರೆ. ದೂರದಲ್ಲಿ, ಹಾಡೋರು ಹಾಡ್ತಿರ್ತಾರೆ-ಕುಣಿಯೋರು ಕುಣೀತಿರ್ತಾರೆ.  ಇಲ್ಲಿ, ಅದೆಲ್ಲದರ ಹಿನ್ನೆಲೆಯಲ್ಲಿ ಸಮುದ್ರದ ಭೋರ್ಗರೆತ ಕೇಳಿಸಿಕೊಳ್ಳುತ್ತಾ ಕುಳಿತು, ಒಂದೊಂದೇ ತುತ್ತು ಊಟ ಮಾಡುವುದರಲ್ಲಿ ಎಂಥಾ ಸುಖವಿದೆ..? ಗೋವಾಕ್ಕೆ ತಮ್ಮ ಹೆಂಡತಿಯರನ್ನು ಕರೆತಂದಿದ್ದ ನಾಲ್ಕು ಜನ ರೈಡರ್ಗಳು ದೂರದಲ್ಲಿ ಟೇಬಲ್ ಹಾಕಿಸಿಕೊಂಡು ಕುಳಿತು ಒಬ್ಬರ ಕೈಮೇಲೊಬ್ಬರು ಬೆರಳಿನಿಂದಲೇ ರಂಗೋಲಿ ಬಿಡಿಸುತ್ತಿದ್ದರು. ಕೆಲವರು ಬೆಂಗಳೂರಿಗೆ ಫೋನ್ ಮಾಡಿ "ಮಿಸ್ ಯೂ" ಅಂತ ಪಿಸುಗುಡುತ್ತಿದ್ದರು. ಇನ್ನು ಒಬ್ಬಂಟಿಯಾಗಿರುವ ಗುಂಡರಗೋವಿಗಳು, ವಿರಹದ ಹಿತ ಅನುಭವಿಸೋದಕ್ಕಾದರೂ ಸಂಗಾತಿ ಇರಬೇಕಿತ್ತು ಅಂತ ಹಳಹಳಿಸುತ್ತಾ ತಣ್ಣನೆಯ ಬಿಯರ್ ಹೀರುತ್ತಿದ್ದರು. ಒಟ್ಟಿನಲ್ಲಿ ರೋಮ್ಯಾಂಟಿಕ್ ಅನ್ನೋ ಶಬ್ದಕ್ಕೆ ಅನ್ವರ್ಥದಂಥ ಜಾಗ ಅದು. ಅಲ್ಲಿ ಎಲ್ಲರಿಗೂ ಇನ್ನೊಬ್ಬರ ಪ್ರೈವಸಿ ಗೌರವಿಸುವುದು ಗೊತ್ತು. ಏಕಾಂತಕ್ಕೆ ಭಂಗ ತರುವ ಪೀಪಿಂಗ್ ಟಾಮ್ಗಳಿಲ್ಲ, ಸೀಟಿ ಊದಿಕೊಂಡು ಬರುವ ಪೊಲೀಸರು, ಚಿಪ್ಸ್ ಮಾರೋ ಹುಡುಗರು, ಕಣಿ ಹೇಳೋರು... ಊಹ್ಞೂಂ... ಅಲ್ಲಿ ನೀವುಂಟು, ಭೋರ್ಗರೆಯುವ ಸಮುದ್ರವುಂಟು. ನೀವು ಗೋವಾಕ್ಕೆ ಹೋದ್ರೆ, ಏನು ಮಿಸ್ ಮಾಡಿಕೊಂಡ್ರೂ, ಅದೊಂದು ಕ್ಯಾಂಡಲ್ ಲೈಟ್ ಡಿನ್ನರ್ ಮಿಸ್ ಮಾಡ್ಕೋಬೇಡಿ.
                    ಹಾಗೆ ಕ್ಯಾಂಡಲ್ ಲೈಟ್ ಡಿನ್ನರ್ ಬಿಟ್ಟರೆ, ಗೋವಾದಲ್ಲಿ ಅನುಭವಿಸಬಹುದಾದ ಮತ್ತೊಂದು ಮೋಜು ವಾಟರ್ ಸ್ಪೋರ್ತ್ಸನದು. ನಾಲ್ಕೈದು ನೂರಕ್ಕೆಲ್ಲ, ಐದು ಗೇಮ್ಗಳ ಪ್ಯಾಕೇಜು. ಅದರಲ್ಲೂ ಸ್ಪೀಡ್ನ ಹುಚ್ಚಿರೋರು ಏಳುನೂರು ಸಿ.ಸಿ ಎಂಜಿನ್ನಿನ ಮೋಟರ್ ಬೋಟ್ನಲ್ಲಿ ಹೋಗಿ ಬರಬೇಕು. ಅದ್ಭುತ ಅದು. ಹಾಗೆ ರೈಡರ್ ಮೇನಿಯಾ - ಗೋವಾದಲ್ಲಿನ ಸುತ್ತಾಟದಲ್ಲಿ ನಾಲ್ಕು ದಿನಗಳು ಕಳೆದದ್ದು ಗೊತ್ತೇ ಆಗಲಿಲ್ಲ. ಐದನೇ ದಿನ ನಸುಕಿನಲ್ಲೆದ್ದು ಎಲ್ಲರೂ ಮತ್ತೆ ಬೆಂಗಳೂರ ದಿಕ್ಕಿಗೆ ಬುಲೆಟ್ ತಿರುಗಿಸಿದ್ವಿ. ರೈಡರ್ ಮೇನಿಯಾಕ್ಕೆ ಹುಬ್ಬಳ್ಳಿಯಿಂದ ಬಂದಿದ್ದ ಹುಡುಗರು, ರಾಮನಗರ, ಗಣೇಶಗುಡಿ, ಹುಬ್ಬಳ್ಳಿ ಮೂಲಕ ಬೆಂಗಳೂರಿಗೆ ತಲುಪುವ ಹಾದಿ ತುಂಬ ಚನ್ನಾಗಿದೆ ಅಂದಿದ್ದರು. ಅದು, ಒಂದೈವತ್ ಕಿಲೋಮೀಟರ್ ಜಾಸ್ತಿ ಆದರೂ, ಅದೇ ರೂಟ್ನಲ್ಲಿ ಹೋಗೋದಕ್ಕೆ ಒಮ್ಮತದ ನಿರ್ಧಾರವಾಯಿತು. ಅಣಶಿ ಅಭಯಾರಣ್ಯದ ಹಚ್ಚ ಹಸುರಿನ ಕಾಡು ಹಾದಿ. ಬೈಕ್ನಲ್ಲಿ ಹಾವು ಹೊರಳಾಡಿದಂತೆ ಘಾಟ್ ಸೆಕ್ಷನ್ನ ಹತ್ತಿ ಇಳಿಯೋ ಮೋಜೇ ಬೇರೆ. ಐದೂ ಮುಕ್ಕಾಲಿಗೆ ಹೊರಟವರು, ಹನ್ನೊಂದೂವರೆಗೆ ಹುಬ್ಬಳ್ಳಿ. ಅಲ್ಲಿ, ತಿಂಡಿ ಮುಗಿಸಿ ಒಂದು ಗಂಟೆ ರೆಸ್ಟ್ ಮಾಡಿ ಹೊರಟರೆ ನಾನ್ನೂರು ಕಿಲೋಮೀಟರ್ ಕೆನ್ನೆನುಣುಪಿನ ಚತುಷ್ಪಥ ಹೆದ್ದಾರಿ. ದಾರಿಯಲ್ಲೊಂದು ಬೈಕ್ ಪಂಕ್ಚರ್ ಆಯಿತು, ಒಂದು ಬೈಕಿನ ಫೂಟ್ ರೆಸ್ಟ್ ಮುರಿದು ಸ್ವಲ್ಪ ತೊಂದರೆ ಆಯಿತು ಅನ್ನೋದು ಬಿಟ್ಟರೆ, ಹುಬ್ಬಳ್ಳಿಯಿಂದ ಬೆಂಗಳೂರು ಕೇವಲ ಏಳು ತಾಸಿನ ಹಾದಿ. ನೆಲಮಂಗಲ ಟೋಲ್ ಗೇಟ್ ಬಳಿ ನಿಂತು, ಒಂದು ಲಾಂಗ್ ರೈಡ್ನ ಯಶಸ್ವಿಯಾಗಿ ಮಾಡಿ ಮುಗಿಸಿದ ಸಂಭ್ರಮ ಹಂಚಿಕೊಂಡೆವು.

cruising through jungles..!
                     ಅಲ್ಲಿಂದ ಮುಂದೆ, ನಮ್ಮ ನಮ್ಮ ಮನೆ. ಒಂದು ಗಡದ್ದು ನಿದ್ರೆ ಮಾಡಿ ಎದ್ದರೆ, ಯಥಾ ಪ್ರಕಾರ ನೌಕರಿಗಳು, ವ್ಯವಹಾರಗಳು, ಜೀವನದ ಇತರ ಜಂಜಡಗಳು. ಗೋವಾ ರೈಡ್ ನ ನಂತರ ಶ್ರೀಶೈಲಂ ಮತ್ತು ಕೆಮ್ಮಣ್ಣುಗುಂಡಿಯ ಎರಡು ರೈಡ್ಗಳಾಗಿವೆ. ಸಧ್ಯಕ್ಕೆ, ಎಲ್ಲರೂ ತಯಾರಾಗ್ತಿರೋದು ಜೂನ್ನಲ್ಲಿನ ಲಾಂಗ್ ರೈಡ್ಗೆ. ಅದು, ಬುಲೆಟ್ ಬೆನ್ನ ಮೇಲೆ ಕುಳಿತು ಹಿಮಾಲಯ ಹತ್ತಿ ಬರುವ ಹುರುಪು. ಲೇಹ್ - ಲದಾಕ್ಗೆ ಹೋಗಿ ಬರುವುದು ಪ್ರತಿಯೊಬ್ಬ ಲಾಂಗ್ ರೈಡರ್ ನ  ಜೀವಮಾನದ ಕನಸು. ಆ ಕನಸು ಈಗ ಮನಸಿನಲ್ಲಿ ಮೊಳಕೆಯೊಡೆದಿದೆ.