Tuesday, July 19, 2011

ಒಂದು ಬಾಂಬ್ ಬ್ಲಾಸ್ಟ್ ಸುತ್ತ ಎಷ್ಟೊಂದು ಅವಿವೇಕಗಳು..?

                         ಎಷ್ಟು ನೆಮ್ಮದಿಯಾಗಿತ್ತು ಮುಂಬೈ. ಹಿಂದ್ಯಾವತ್ತೂ ಇಲ್ಲಿ ಟೆರರಿಸ್ಟ್ ಅಟ್ಯಾಕೇ ಆಗಿಲ್ಲವೇನೋ - ಬಾಂಬುಗಳೇ ಸಿಡಿದಿಲ್ಲವೇನೋ ಅನ್ನೋ ಹಾಗೆ ಎಲ್ಲವನ್ನೂ ಮರೆತು ಮತ್ತೆ ಜನ normal lifeಗೆ ಯಾವತ್ತೋ ಮರಳಿದ್ದರು. ಅದೇ ಧಡಂ ಧಡಕಿಯ ಬದುಕು, ಅಪಾರ್ಟಮೆಂಟ್ ಜೀವನ, ಲೋಕಲ್ ಟ್ರೇನು, ಸಂಜೆಯ ಚಾಟ್ ಮಸಾಲ, ವೀಕೆಂಡ್ ಪಿಕ್ನಿಕ್ಕು ಅಂದುಕೊಂಡು ತಮ್ಮ ತಮ್ಮ ಬದುಕುಗಳನ್ನ ಹಳಿಗೆ ತಂದುಕೊಂಡಿದ್ದರು. ಈಗ ನೋಡಿದರೆ, ಮತ್ತೆ ಧಡಂ - ಧುಡುಂ...

                        ಇವತ್ತು ಬೇಕಿದ್ರೆ ಮುಂಬೈಗೆ ಹೋಗಿ ನೋಡಿ, ಇಲ್ಲಿ ಬಾಂಬು ಸಿಡಿದದ್ದೇ ಸುಳ್ಳೇನೋ ಅನ್ನಿಸುವಷ್ಟು ನೆಮ್ಮದಿಯಾಗಿ ಇರ್ತಾರೆ ಜನ. ಸಾಯೋರು ಸತ್ತರು. ಅವರ ಮನೆಗವರು ಮಣ್ಣು ಕೊಡ್ತಾರೆ. ಗಾಯಗೊಂಡು ಆಸ್ಪತ್ರೆ ಸೇರಿರೋರು ಗ್ಲುಕೋಸು ಏರಿಸಿಕೊಳ್ತಿದಾರೆ. ಅವರಿಗೆ ಅವರ ಮನೆ ಜನ ಇಡ್ಲಿ ಸಾಂಬಾರ್ ತಂದು ಕೊಡ್ತಾರೆ. ಸತ್ತವರಿಗೆ - ಸಾಯದೇ ಉಳಿದವರಿಗೆ ಸರ್ಕಾರ ಯೋಗ್ಯತೆಗನುಸಾರವಾಗಿ ಪರಿಹಾರ ಕೊಡತ್ತೆ. ಬ್ಲಾಸ್ಟ್ ಆದ ಜಾಗಕ್ಕೆ ಒಂದಷ್ಟು ಜನ ಮಂತ್ರಿ ಮಾಗಧರು - ಆಫೀಸರ್ಗಳು ಬಂದು ಹೋಗ್ತಾರೆ. ಟಿ.ವಿ ಚಾನೆಲ್ಲುಗಳವರು ಹೊಸಾ ಸುದ್ದಿ ಸಿಗೋ ತನಕ ಹೇಳಿದ್ದನ್ನೇ ಮತ್ತೆ ಮತ್ತೆ ಹೇಳ್ತಿರ್ತಾರೆ. ಆಗಿರೋ ಮೂರು ಬ್ಲಾಸ್ಟಿಗೆ ಮೂವತ್ತು angleನ ಸ್ಟೋರಿಗಳು. "ಕ್ಯಾ ಏ ಕಸಬ್ ಕೆ ಲಿಯೇ ಬರ್ತ್ ಡೇ ಗಿಫ್ಟ್ ಹೈ..? ಧಮಾಕೆ ಕೆ ಪೀಛೆ ಲಷ್ಕರೆ ತಯ್ಯಬಾ ಕಾ ಹಾಥ್, ಪೆಹಲೆ ಫೋನ್ ಕಿಯೆ ಥೆ ಆತಂಕವಾದಿ, ಸಿ.ಸಿ.ಟಿ.ವಿ ಮೆ ಆತಂಕವಾದಿಯೋಂಕಾ ಎಕ್ಸ್ಕ್ಲೂಸೀವ್ ದೃಶ್ಯ್... ಹೀಗೆ. ಕೈಯಲ್ಲಿ ರಿಮೋಟ್ ಹಿಡಿದು ಕುಂತ ಮುಂಬೈಕರ್ " ಸಾಲಾ ಏ ತೋ ರೋಜ್ ರೋಜ್ ಕಾ ನಾಟಕ್ ಹೈ " ಅಂತ ಚಾನಲ್ ಬದಲಿಸ್ತಾನೆ. ಮತ್ತೆ ಬೆಳಿಗ್ಗೆದ್ದು ಬುತ್ತಿ ಕಟಗೊಂಡು ಲೋಕಲ್ ಟ್ರೇನಿಗೆ ಓಡ್ತಾನೆ. ಈ ಊರಿನಲ್ಲಿ ಬಾಂಬ್ ಬ್ಲಾಸ್ಟ್ ಅನ್ನೋದು ಸತ್ತವರ - ಗಾಯಗೊಂಡವರ ಮನೆಗಳವರು, ಕೆಲವೇ ಕೆಲವು ಪೊಲೀಸರು ಮತ್ತು ನ್ಯೂಸ್ ಚಾನೆಲ್ಲುಳವರಿಗೆ ಮಾತ್ರ ಸಂಬಂಧಪಟ್ಟ ವಿಷಯ ಅಂತ ಉಳಿದವರು ನಿರ್ಧರಿಸಿರುವುದರಿಂದ, ಇಂಥ ಇನ್ನೂ ಹತ್ತು ಬ್ಲಾಸ್ಟುಗಳಾದರೂ ಪರಿಸ್ಥಿತಿ ಹೀಗೇ ಇರತ್ತೆ. and its a shame... ಇಂಥದ್ದೊಂದು ಶೇಮ್ ಏಕಾಏಕಿ ಆಗಿರೋದಲ್ಲ. ಇದಕ್ಕೆ ಹದಿನೇಳು ವರ್ಷಗಳ ಇತಿಹಾಸ ಇದೆ.
                        ಹದಿನೇಳು ವರ್ಷಗಳಾದವು ಅದೊಂದು ಸೀರಿಯಲ್ ಬಾಂಬ್ ಬ್ಲಾಸ್ಟ್ ನಡೆದು. ದಾವೂದ್ ತನ್ನ ಹುಡುಗರ ಜೊತೆ ಸೇರಿಕೊಂಡು ನಡೆಸಿದ ಹದಿಮೂರು ಸ್ಫೋಟಗಳಲ್ಲಿ 257 ಜನ ಸತ್ತರು. ಇವತ್ತಿನ ತನಕ ದಾವೂದ್ ಸಿಕ್ಕಿಲ್ಲ. ಆತನನ್ನ ನಮಗೆ ಕೊಡಿ ಅಂತ ಭಾರತ ಪಾಕಿಸ್ತಾನದ ಎದುರು ಮಂಡಿಯೂರಿ ಕುಂತು ಬೇಡಿಕೊಳ್ಳತ್ತೆ. ಕೊಡದಿದ್ರೆ ಅಮೇರಿಕಕ್ ಹೇಳ್ತೀನ್ ನೋಡೂ ಅಂತ ಹೆದರಿಸತ್ತೆ. ಪಾಕಿಸ್ತಾನಕ್ಕೆ "ದಾದ್ ನೈ ಫಿರಾದ್ ನೈ". ಆ ಕೇಸಿನಲ್ಲಿದ್ದ ಕಾಂಜಿ ಪೀಂಜಿಗಳಿಗೆಲ್ಲ ಶಿಕ್ಷೆ ಕೊಟ್ಟು ಮೀಸೆ ತಿರುವಿಕೊಳ್ಳತ್ತೆ ನಮ್ಮ ಸರಕಾರ. ಆ ಕಡೆ ಅಮೇರಿಕಾನ್ನ ನೋಡಿ. 2001 ರ ಸಪ್ಟೆಂಬರ್ 11 ಕ್ಕೆ ಡಬ್ಲು.ಟಿ.ಸಿ ಮೇಲೆ ಅಟ್ಯಾಕ್ ಆದದ್ದು. ಇದು ತಾಲಿಬಾನಿಗಳ ಜೊತೆ ಸೇರಿಕೊಂಡು ಅಲ್ ಖೈದಾದವರು ಮಾಡಿದ ಕೆಲಸ ಅಂತ ಒಂದು ಸಣ್ಣ ಸಂಶಯ ಬಂದದ್ದೇ ಬಂದದ್ದು. ಹದಿನೈದು ದಿನಗಳಲ್ಲಿ ದಂಡು ಕಟ್ಟಿಕೊಂಡು ಬಂದು ಬಿಟ್ಟರಲ್ಲ ಅಫಘಾನಿಸ್ತಾನದ ಮೇಲೆ. ಅಲ್ ಖೈದಾನ್ನ ಸತ್ಯಾನಾಶ ಮಾಡಿ ಹಾಕಿದ್ರು. ತಾಲೀಬಾನಿಗಳ ಸರ್ಕಾರ ಕಿತ್ಹಾಕಿ ತಮಗೆ ಬೇಕಾದ ನಾರ್ದನ್ ಅಲಯನ್ಸ್ ಸರ್ಕಾರ ಮಾಡಿದರು. ಕಳ್ಳಬಿದ್ದು ತಪ್ಪಿಸಿಕೊಂಡ ಬಿನ್ ಲಾಡೆನ್ ನನ್ನ ಪಾಕಿಸ್ತಾನದೊಳಕ್ಕೆ ಹೊಕ್ಕು ಹೊಡೆದು ಬಂದ್ರು. target accomplished. ನಾವು..? ದಾವೂದ್ ಬೇಕು, ಟೈಗರ್ ಮೆಮೋನ್ ಬೇಕು, ಛೋಟಾ ಶಕೀಲ್ ಬೇಕು ಅಂತ ಬೇಡಿಕೊಳ್ತಾನೇ ಇದೀವಿ.
                        ವರ್ಲ್ಡ್ ಟ್ರೇಡ್ ಸೆಂಟರಿನೊಳಕ್ಕೆ ವಿಮಾನಗಳು ನುಗ್ಗಿದ್ದೇ ಕೊನೆ. ಅಮೇರಿಕದಲ್ಲಿ ಮತ್ತೊಂದೇ ಒಂದು ಭಯೋತ್ಪಾದಕ ದಾಳಿ ಆಯ್ತಾ ನೋಡಿ. ಊಹ್ಞೂಂ... ಹಂಗಂತ ಉಗ್ರರಾರೂ ಅಲ್ಲಿ ಬಾಂಬ್ ಸಿಡಿಸೋ ಪ್ರಯತ್ನ ಮಾಡಲೇ ಇಲ್ಲ ಅಂತಲ್ಲ. ಅಪ್ಪಿ ತಪ್ಪಿ ಕೂಡ ಅವರು ಒಳಕ್ಕೆ ಬರದಂತೆ ತನ್ನ ಗಡಿಗಳನ್ನ ಬಂದೋಬಸ್ತು ಮಾಡ್ಕೊಂಡ್ತು ಆ ದೇಶ. ಇವತ್ತು ಯಾರಾದರೂ ವಿದೇಶಿ ಆ ದೇಶಕ್ಕೆ ಹೋಗೋದಕ್ಕೆ ವೀಸಾ ಕೇಳಿದರೆ ಆತನ ಜನ್ಮಾನೇ ಜಾಲಾಡಿ ಬಿಡ್ತಾರೆ. ಬಾಂಬು - ಬಂದೂಕು ಒತ್ತಟ್ಟಿಗಿರಲಿ, ಸೆಂಟ್ ಬಾಟಲ್ ಇಟ್ಕೊಂಡು ಅವರ ವಿಮಾನ ನಿಲ್ದಾಣದೊಳಕ್ ಹೋಗೋದಕ್ಕಾಗಲ್ಲ. ಅಷ್ಟೆಲ್ಲಾ ಮುನ್ನೆಚ್ಚರಿಕೆ ತಗೊಂಡು ಕೂಡ ಅಕಸ್ಮಾತ್ ವಿಮಾನ ಅಪಹರಣ ಆದ್ರೆ ಹಿಂದೆ ಮುಂದೆ ನೋಡದೇ ಹೊಡೆದುರುಳಿಸಬೇಕು ಅಂತ ಕಾನೂನು ಮಾಡ್ಕೊಂಡಿದಾರೆ.
                       ಅದಕ್ಕೇ ನಾವು ಇಚ್ಛಾ ಶಕ್ತಿ ಅನ್ನೋದು. ಅಫಘಾನಿಸ್ತಾನದಲ್ಲಿ, ಇರಾಕಿನಲ್ಲಿ ಅಮೇರಿಕದವರು ಮಾಡಿದ ಅನಾಹುತಗಳಿಗೆ ಸೇಡು ತೀರಿಸಿಕೊಳ್ತೀವಿ ಅಂತ ಅಲ್ಲಿನ ಜನರೇನಾದರೂ ಹೊರಟಿದ್ರೆ, ಅಮೇರಿಕದಲ್ಲಿ ದಿನಕ್ಕೊಂದು ಬಾಂಬ್ ಸಿಡೀತಿದ್ವು. ಈ ದೇಶ ಅದಕ್ಕೆ ಅವಕಾಶಾನೇ ಕೊಡಲಿಲ್ಲ. ಈ ಕಡೆ ನಮ್ಮಲ್ಲಿ ಮಾತ್ರ ಆರ್.ಎಸ್.ಎಸ್ ನವರು ಬಾಬರಿ ಮಸೀದಿ ಕೆಡವಿದ್ದಕ್ಕೇ ಮುಸ್ಲಿಂ ಸಂಘಟನೆಗಳು ಸೇಡುತೀರಿಸಿಕೊಳ್ಳೋದಕ್ಕೆ ಬಾಂಬ್ ಸಿಡಿಸಿದ್ವು, ಗುಜರಾತ್ನಲ್ಲಿ ನರೇಂದ್ರ ಮೋದಿ ಮುಸ್ಲಿಮರ ವಿರುದ್ಧ ಗಲಭೆ ಮಾಡಿಸಿದ್ದೇ ಈ ಎಲ್ಲಾ ಅನಾಹುತಗಳಿಗೆ ಕಾರಣ ಅಂತ ಮಾತಾಡೋ ದೀಡು ಪಂಡಿತರಿದ್ದಾರೆ. nonsense... ನರೇಂದ್ರ ಮೋದಿಯನ್ನ ಕೊಲ್ತೀನಿ ಅಂತ ಯಾರಾದರೂ ಉಗ್ರ ಹೇಳಿದರೆ ಅದಕ್ಕೆ ಲಾಜಿಕ್ ಇದೆ. ಆದರೆ, ಗುಜರಾತ್ ಗಲಭೆಗೆ ಮುಂಬೈ ಜನರ ಮೇಲೆ ಸೇಡು ತೀರಿಸಿಕೊಳ್ತೀನಿ ಅಂದ್ರೆ ಅದ್ಯಾವ ಲೆಕ್ಕಾಚಾರ..?
                      ಫೈನ್, ಇದು ಮುಸ್ಲಿಂರ ವಿರುದ್ಧ ನಡೆದ ದೌರ್ಜನ್ಯಕ್ಕೆ ಸೇಡು ಅಂತಾನೇ ಇಟ್ಕೊಳ್ಳಿ. ಆದರೆ, ಪಾಕಿಸ್ತಾನದಲ್ಯಾವ ಬಾಬರಿ ಮಸೀದಿ ಬಿದ್ದಿತ್ತು..? ಅಲ್ಯಾಕೆ ಬಾಂಬ್ ಸಿಡಿದವು..? ಬೆನಜಿರ್ ಭುಟ್ಟೋ ಏನು ನರೇಂದ್ರ ಮೋದಿಯಾ..? ಬಾಂಗ್ಲಾ ದೇಶದಲ್ಲಿ ಗುಜರಾತ್ ಗಲಭೆ ಆಗಿತ್ತಾ..? ಬೇಸಿಕಲಿ ಒಂದು ಮಾತು ಮಾತ್ರ ಸತ್ಯ. ಉಗ್ರರಿಗೆ ಹಾಕೋದಕ್ಕೆ ಬಾಂಬ್ ಬೇಕು - ಸಾಯೋದಕ್ ಜನ ಬೇಕು. ಅಂಥವರನ್ನ ಎದುರಿಸೋದಕ್ಕೆ ಒಂದು ಬೇರೆಯದೇ ಮನಸ್ಥಿತಿ ಬೇಕು. ಅದನ್ನ ನಮ್ಮ ನಾಯಕರುಗಳ್ಯಾವತ್ತೂ ತೋರಿಸಲಿಲ್ಲ ಅನ್ನೋದೇ ವಿಷಯ. ಅದಕ್ಕೇ 1993ರ ಮುಂಬೈ ಸೀರಿಯಲ್ ಬಾಂಬ್ ಬ್ಲಾಸ್ಟ್ ನಂತರ ಇಲ್ಲಿ ನಲವತ್ತೆರಡು ಬೇರೆ ಬೇರೆ ಟೆರಿಸ್ಟ್ ಅಟ್ಯಾಕ್ ಆಗಿವೆ. ಅವುಗಳಲ್ಲಿ ಮುಂಬೈಯೊಂದರಲ್ಲೇ ಐದು ದಾಳಿಗಳು. ಈ ದೇಶದಲ್ಲಿ ಏನು ಬೇಕಾದರೂ ಮಾಡಿ ಸೇಫ್ ಆಗಿ ಹೊರಗೆ ಹೋಗಿಬಿಡಬಹುದು ಅನ್ನಿಸಿಬಿಟ್ಟಿದೆಯೇನೋ ಟೆರರಿಸ್ಟುಗಳಿಗೆ. ವಿದೇಶಕ್ ಹೋದ್ರೆ, ವಾಪಸ್ ಕರಿಸಿಕೊಳ್ಳೋದಕ್ಕಂತೂ ಆಗಲ್ಲ. ಅಕಸ್ಮಾತ್ ಸಿಕ್ಕಿಬಿದ್ರೆ ಹಿಡಿದು ನೇಣಿಗೆ ಹಾಕಿಬಿಡ್ತಾರೆ ಅನ್ನೋ ಭಯಾನೂ ಇಲ್ಲ. ನಮ್ಮ ವಿಮಾನ ಒತ್ತೆ ಇಟ್ಕೊಂಡು ಬಿಡಿಸಿಕೊಂಡು ಹೋದ ಮೌಲಾನಾ ಮಸೂದ್ ಅಜರ್ ಈಗ ಪಾಕಿಸ್ತಾನದಲ್ಲಿ ಓಪನ್ ಆಗಿ ಓಡಾಡ್ಕೊಂಡಿದಾನೆ. ಇಲ್ಲಿನ ಜೈಲಿನಿಂದ ಹೊರಗೆ ಹೋದ ಈತ ಸುಮ್ಮನೆ ಕುಂತಿದ್ದರೆ ಆ ಮಾತು ಬೇರೆ. ತನ್ನ ಹುಡುಗರನ್ನ ಬಿಟ್ಟು ನಮ್ಮ ಪಾರ್ಲಿಮೆಂಟ್ ಮೇಲೆ ದಾಳಿ ಮಾಡಿಸಿದ. ಈ ದಾಳಿಯಲ್ಲಿ ಅರೆಸ್ಟ್ ಆದವನು ಅಫ್ಜಲ್ ಗುರು. ಆತನನ್ನ ಗಲ್ಲಿಗೆ ಹಾಕಬೇಕು ಅಂದರೆ, ಬೇಡ ಅಂತ ಹೇಳೋದಕ್ಕೆ ಕಾಶ್ಮೀರದಿಂದ ನಿಯೋಗ ಬರತ್ತೆ. ಅವನ್ನ ಬಿಡಿ. ಈ ಅಜ್ಮಲ್ ಕಸಬನ ಕಥೆ ಏನು..? ಇವನ ಜೊತೆಗೆ ಬಂದ ಇನ್ನೂ ಒಂಭತ್ತು ಜನ ಮತ್ತು ಈತ ಮುಂಬೈಯಲ್ಲಿ ಮಾಡಿದ ಅನಾಹುತವೇನು ಸಣ್ಣದಾ..?

                        ಅದೊಂದೇ ದಾಳಿಯಲ್ಲಿ ಸತ್ತವರು ಮುನ್ನೂರ ಹತ್ತು ಜನ. ಜೀವಂತವಾಗಿ ಸಿಕ್ಕಿಬಿದ್ದವನು ಇವನೊಬ್ಬನೇ. ನಂಬ್ತೀರೋ ಇಲ್ವೋ. ಈ ಒಬ್ಬ ಕಸಬ್ಗಾಗಿ ನಾವು ಪ್ರತಿ ತಿಂಗಳೂ ಮಾಡ್ತಿರೋ ಖರ್ಚು ಎರಡು ಕೋಟಿ ರುಪಾಯಿ. ಇವನ ಬೆಂಗಾವಲಿಗೆ ಒಂದು ಸಾವಿರ ಜನ ಪೊಲೀಸರಿದ್ದಾರೆ. ಆರ್ಥರ್ ರೋಡ್ ಜೈಲಿನಲ್ಲಿ ಟ್ರಕ್ ತುಂಬ ಆರ್.ಡಿ.ಎಕ್ಸ್ ನುಗ್ಗಿಸಿದರೂ ಅಲ್ಲಾಡದಂಥ ಒಂದು ಸೆಲ್ ಇವನಿಗಾಗಿ ಕಟ್ಟಲಾಗಿದೆ. ಒಂದು ವೇಳೆ ಆ ನರಹಂತಕನಿಗೆ ಅನಾರೋಗ್ಯವಾದರೆ ಟ್ರೀಟ್ಮೆಂಟ್ ಕೊಡೋದಕ್ಕೆ ಜೆ.ಜೆ ಆಸ್ಪತ್ರೆಯಲ್ಲೊಂದು ಸ್ಪೆಷಲ್ ವಾರ್ಡ್ ಕಟ್ಟಿಸಲಾಯ್ತು. ಆದ್ರೆ, ಅಲ್ಲಿಗ್ಯಾವತ್ತೂ ಈತ ಅಡ್ಮಿಟ್ ಆಗಲೇ ಇಲ್ಲ. ಬೇಕಾದರೆ ಡಾಕ್ಟರುಗಳನ್ನ ತಾನಿದ್ದಲ್ಲಿಗೇ ಕರೆಸಿಕೊಳ್ತಾನೆ. ವಿಚಾರಣೆಗೆ ಕಸಬ್ ಕೋರ್ಟಿಗೆ ಬರಬೇಕು ಅಂತಾನೂ ಇಲ್ಲ. ಕುಳಿತಲ್ಲಿಂದಲೇ ವಿಡಿಯೋ ಕಾನ್ಫರೆನ್ಸು. ಅದು ಕೂಡ ಅವನು ಮೂಡಿದ್ದರೆ ಬರಬಹುದು - ಇಲ್ಲದಿದ್ರೆ ಇಲ್ಲ. ಎಂಭತ್ತು ರುಪಾಯಿಯದೊಂದು ಗುಂಡಿನಲ್ಲಿ ಮುಗಿದುಹೋಗಬಹುದಾಗಿದ್ದ ಕೆಲಸಕ್ಕೆ ತಿಂಗಳಿಗೆರಡು ಕೋಟಿ ಖರ್ಚು. ಇಷ್ಟೆಲ್ಲಾ ಮಾಡಿ ಈ ಹುಡುಗನನ್ನ ಬದುಕಿಸಿಕೊಳ್ತಿರೋದ್ಯಾಕೆ ಅಂತ ಕೇಳಿದ್ರೆ, ಮುಂಬೈ ದಾಳಿಯಲ್ಲಿ ಪಾಕಿಸ್ತಾನದ ಕೈವಾಡ ಇದೆ ಅನ್ನೋದನ್ನ ಪ್ರೂವ್ ಮಾಡೋದಕ್ಕೆ ಅನ್ನೋ ಉತ್ತರ ಬರತ್ತೆ. ಅದನ್ನ ಪ್ರೂವ್ ಮಾಡೋದಕ್ಕೆ, ಕಸಬ್ ಮತ್ತು ಇತರ ಒಂಭತ್ತು ಜನರಿಗೆ ಪಾಕಿಸ್ತಾನದಲ್ಲಿ ಕುಂತೇ ಫೋನಿನಲ್ಲಿ ಗೈಡನ್ಸ್ ಕೊಡ್ತಿದ್ದ ಹ್ಯಾಂಡ್ಲರ್ಗಳ ವಾಯ್ಸ್ ಸ್ಯಾಂಪಲ್ ಬೇಕು. ಅದನ್ನ ಕೇಳಿದ್ರೆ, "ವಾಟ್ ನಾನ್ಸೆಸ್, ಅದಕ್ಕೆಲ್ಲ ನಮ್ಮ ಕಾನೂನಿನಲ್ಲಿ ಅವಕಾಶಾನೇ ಇಲ್ಲ" ಅಂತ ಒಂದೇ ಮಾತಿಗೆ ತಳ್ಳಿ ಹಾಕಿಬಿಟ್ತು ಪಾಕಿಸ್ತಾನ. ಈಗ ಇವನಿಗೆ ಗಲ್ಲು ಶಿಕ್ಷೆ ಆಗಬಾರದು ಅಂತ ವಾದಿಸೋ ಜನ ಕೂಡ ನಮ್ಮಲ್ಲಿದಾರೆ.
                        2008ರ ನವೆಂಬರ್ 26ರ ಟೆರರಿಸ್ಟ್ ಅಟ್ಯಾಕಿನಿಂದ ಭಾರತ ಪಾಠ ಕಲಿತಿಲ್ಲ. ಕಲಿತಿದ್ದರೆ ಇವತ್ತು ಈ ಘಟನೆ ಆಗ್ತಿರಲಿಲ್ಲ ಅಂತ ಮೊನ್ನೆ ಯಾರೋ ಟಿ.ವೀಲಿ ಹೇಳ್ತಿದ್ರು. ಅದಕ್ಕೂ ಇದಕ್ಕೂ ಸಂಬಂಧಾನೇ ಇಲ್ಲ. ಆ ದಾಳಿಯಿಂದ ಪಾಠ ಕಲಿತದ್ದಕ್ಕೇ ನಮ್ಮ ಕರಾವಳಿ ತೀರಗಳು ತಕ್ಕ ಮಟ್ಟಿಗೆ ಬಂದೋಬಸ್ತಾಗಿವೆ. ದೊಡ್ಡ - ದೊಡ್ಡ ಊರುಗಳಿಗೆ ಎನ್.ಎಸ್.ಜಿ ಥರದ ಟ್ರೂಪು ಕೊಡಲಾಗಿದೆ, ಆ ಊರುಗಳ ಇಂಪಾರ್ಟಂಟ್ ಜಾಗಗಳಲ್ಲಿ ಸೆಕ್ಯುರಿಟಿ ಹೆಚ್ಚಿಸಲಾಗಿದೆ. ಆದರೆ, ಅದ್ಯಾವುದರಿಂದಲೂ ಈ ಬಾಂಬ್ ಬ್ಲಾಸ್ಟುಗಳನ್ನ ತಡೆಯೋದಕ್ಕಾಗ್ತಿರಲಿಲ್ಲ. ಇಲ್ಲಿ ಉಪಯೋಗಕ್ಕೆ ಬರಬೇಕಾದದ್ದು 1993ರಲ್ಲೇ ಕಲಿತ ಪಾಠ. ಹೆಂಗೆ ನಮ್ಮವರೇ ಸೇರಿಕೊಂಡು ಬಾಂಬುಗಳನ್ನ ಮಾಡಿ ಕಾರಿಗೆ ತುಂಬಿ ಸದ್ದಿಲ್ಲದೇ ಜನಸಂದಣಿಯ ಜಾಗಗಳಲ್ಲಿ ನಿಲ್ಲಿಸಿ ಹೋಗಿಬಿಡ್ತಾರೆ ಅನ್ನೋದು ಹದಿನೇಳು ವರ್ಷಗಳ ಹಿಂದೇನೇ ಗೊತ್ತಾಗಿರೋ ವಿಷಯ. ಆದರೆ, ನಮ್ಮವರು ಹೊಸ ಪಾಠ ಕಲಿಯೋ ಭರದಲ್ಲಿ, ಕಲಿತ ಪಾಠಗಳನ್ನೆಲ್ಲ ಮರೆತು ಬಿಟ್ಟರೇನೋ ಅನ್ನಿಸತ್ತೆ.
                       of course, ಈ ವಿಷಯದಲ್ಲಿ ತುಂಬ ಬಾಲಿಶವಾಗಿ ಮಾತಾಡೋದು ಕೂಡ ಕಷ್ಟಾನೇ. ಒಂದೂ ಕಾಲು ಕೋಟಿ ಜನಸಂಖ್ಯೆ ಇರೋ ಮಹಾನಗರ ಅದು. ಇಲ್ಲಿ ಪ್ರತಿದಿನ ದಶದಿಕ್ಕುಗಳಿಂದಲೂ ಲಕ್ಷಾಂತರ ಜನ ಬರ್ತಾರೆ. ಬಂದಷ್ಟೇ ಸಂಖ್ಯೆಯಲ್ಲಿ ಹೊರಗೆ ಹೋಗ್ತಾರೆ. ಅವರ ಪೈಕಿ ಯಾವನು ಬಾಂಬು ತರ್ತಾನೆ - ಯಾವನು ಬಂದೂಕು ತರ್ತಾನೆ ಅಂತ ಹುಡುಕೋದು ಕಷ್ಟ. but, ದೇಶದಲ್ಲಿಲ್ಲದಂಥ ಪೊಲೀಸ್ ವ್ಯವಸ್ಥೆ ಮುಂಬೈಗಿದೆ. ಬೇಹುಗಾರಿಕೆ ವಿಷಯಕ್ಕೆ ಬಂದರೂ ಅವರದು ಎತ್ತಿದ ಕೈ. ಅಂಥದ್ದರಲ್ಲಿ, ಒಂದು ಪಕ್ಕಾ ಇಂಟೆಲಿಜೆನ್ಸ್ ವ್ಯವಸ್ಥೆಗೆ ಇಂಥ ವಿಷಯಗಳು ಗೊತ್ತಾಗಬೇಕು, ಅಮೇರಿಕದವರಿಗೆ ಗೊತ್ತಾಗ್ತವೆ ನೋಡಿ, ಹಾಗೆ. ಇಲ್ಲಿ ಕೂಡ ಒಂದು ಸಮಸ್ಯೆ ಇದೆ. ಮೊದಲಾದರೆ, ಭಯೋತ್ಪಾದಕ ಕೆಲಸಕ್ಕೆ ತುಂಬ ದೊಡ್ಡ ಮಟ್ಟದ ತಯಾರಿ ಬೇಕಾಗ್ತಿತ್ತು. ಅಲ್ಲೆಲ್ಲೋ ಪಾಕಿಸ್ತಾನದಲ್ಲಿ ಕುಂತವನು, ಅಲ್ಲಿಂದ ಜನರನ್ನ ಕಳಿಸಿ ಅವರಿಗೆ ಇಲ್ಲಿ ಬಾಂಬು - ಬಂದೂಕು, ಕಾರು, ದುಡ್ಡು, ಹುಡುಗರನ್ನ ಹೊಂದಿಸಿಕೊಟ್ಟು ಒಂದು ಕೆಲಸ ಮಾಡಿಸ್ತಿದ್ದ. ಒಂದು ಷಡ್ಯಂತ್ರದಲ್ಲಿ ಜಾಸ್ತಿ ಜನ ಭಾಗವಹಿಸಿದಷ್ಟೂ ಅದರ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಗೋ ಸಾಧ್ಯತೆಗಳು ಹೆಚ್ಚಾಗ್ತಾ ಹೋಗ್ತವೆ. ಆದರೆ ಈಗ ಹಾಗಲ್ಲ. ಎಲ್ಲೋ ರಿಮೋಟ್ ಜಾಗಗಳಲ್ಲಿ ಕುಳಿತವನು ಇಂಟರ್ನೆಟ್ ಮೂಲಕಾನೇ ಧರ್ಮಾಂಧತೆ ಬೆಳೆಸಿಕೊಂಡು ಬಿಡ್ತಾನೆ. ಅವನಿಗೆ ಬಾಂಬು ತಯಾರಿಸೋ ತರಬೇತಿ ಕೂಡ ಈ ಹಾಳು ಇಂಟರ್ನೆಟ್ಟೇ ಕೊಡತ್ತೆ. ಮೊದಲಾದರೆ ಆರ್.ಡಿ.ಎಕ್ಸು, ಅದಕ್ಕೊಂದು ಡಿಟೋನೇಟರು, ಒಂದು ಟೈಮರು ಅಂತ ನೂರು ತಲೆನೋವುಗಳಿದ್ದವು. ಈಗ ಅಮೋನಿಯಂ ನೈಟ್ರೇಟ್ನಲ್ಲೇ ಬಾಂಬು ತಯಾರಿಸೋದನ್ನ ಕಲಿತುಕೊಂಡಿದಾರೆ. ಯಾರೋ ಐದಾರು ಹುಡುಗರು ಸೇರಿಕೊಂಡು ತಾವುತಾವೇ ತಮ್ಮದೇ ದುಡ್ಡಿನಲ್ಲಿ ಬಾಂಬು ತಯಾರಿಸಿ ಸಿಡಿಸಿ ಹೋಗಿಬಿಡ್ತಾರೆ. ನಾಳೆ ದಿನ ಅವರು ಸಿಕ್ಕಿಬೀಳಬಹುದು, ಆ ಮಾತು ಬೇರೆ. ಆದರೆ, ಆ ಷಡ್ಯಂತರದ ವಾಸನೆ ಪೊಲೀಸರಿಗೆ ಸಿಗೋ ಚಾನ್ಸು ಕಡಿಮೆ. ಬೆಂಗಳೂರು ಸರಣಿ ಬಾಂಬ್ ಬ್ಲಾಸ್ಟ್ನಲ್ಲಿ ಆದದ್ದೂ ಅದೇ. ಚಿನ್ನಸ್ವಾಮಿ ಕ್ರೀಡಾಂಗಣ ಬಾಂಬ್ ಬ್ಲಾಸ್ಟ್ ಕೂಡ ಅಂಥದ್ದೇ ಕೆಲಸ ಅನ್ನೋದು ಇವತ್ತಲ್ಲ ನಾಳೆ ಗೊತ್ತಾಗತ್ತೆ.
                       ಆದರೆ, ಬಾಂಬು ಸಿಡಿದ ತಕ್ಷಣ ಲಷ್ಕರೆ ತಯ್ಯಬಾ ಕೆಲಸ ಅಂತ ಬ್ರೇಕಿಂಗ್ ನ್ಯೂಸ್ ಕೊಡೋದು ನಮ್ಮವರ ಹಳೇ ಚಾಳಿ. ಅದಕ್ಕೊಂದು ಕ್ವಶ್ಚನ್ ಮಾರ್ಕ್ ಹಾಕಿ, ಸೂತ್ರಗಳ ಹೇಳಿಕೆ ಅಂತ ಕೊಟ್ಟುಬಿಟ್ಟರೆ ಮುಗೀತು. ಬಾಂಬೆ ಬಾಂಬ್ ಬ್ಲಾಸ್ಟ್ನಲ್ಲೂ ಅದೇ ಆಗಿದ್ದು. ಇದರಲ್ಲಿ ಇಂಡಿಯನ್ ಮುಜಾಹಿದೀನ್ ಕೈವಾಡ ಇದೆ ಅಂದರೆ, ಅದನ್ನ ತಕ್ಕಮಟ್ಟಿಗೆ ಒಪ್ಪಿಕೊಳ್ಳಬಹುದು. ಸಿಮಿ ನಿಷೇಧ ಆದಾಗ ಅದರಲ್ಲಿದ್ದವರೇ ಆ ಸಂಘಟನೆ ಕಟ್ಕೊಂಡಿದಾರೆ. ಅದರ ಸ್ಥಾಪಕ ರಿಯಾಜ್ ಭಟ್ಕಳ್. ಅವನನ್ನ ನಾನೇ ಕರಾಚಿಯಲ್ಲಿ ಕೊಲ್ಲಿಸಿದೀನಿ ಅಂತ ಇತ್ತೀಚೆಗೆ ಛೋಟಾ ರಾಜನ್ ಹೇಳಿಕೊಂಡಿದ್ದ. ಆ ಮಾತಿರಲಿ. ಅದೆಷ್ಟು ಸತ್ಯಾನೋ ಗೊತ್ತಿಲ್ಲ. ಆದರೆ, ಇದರ ಹಿಂದೆ ಕೂಡ ಅದೇ ಸಂಘಟನೆ ಕೈವಾಡ ಇದೆ ಅನ್ನೋ ಸಂಶಯ ಪೊಲೀಸರಿಗಿಂತಲೂ ಮೊದಲು ಟಿ.ವಿ ಚಾನಲ್ಗಳವರಿಗೆ ಬಂದಿದೆ. ಪೊಲೀಸರು ಅದನ್ನ ಸೀರಿಯಸ್ಸಾಗಿ ತಗೊಂಡಿರೋ ಹಂಗಿದೆ.
                       ಇನ್ನು ಇದೊಂದು ಬಾಂಬ್ ಬ್ಲಾಸ್ಟ್ನ ತನಿಖೆ ಶುರುವಾಗತ್ತೆ. ಅದ್ಯಾವಾಗ ಮುಗಿಯತ್ತೋ ಯಾರಿಗೂ ಗೊತ್ತಾಗಲ್ಲ. ಇದರ ಆರೋಪಿಗಳನ್ನ ನಮಗೆ ಕೊಡಿ ಅಂತ ಮತ್ತೆ ನಮ್ಮ ಸರಕಾರ ಪಾಕಿಸ್ತಾನಕ್ಕೆ ಮನವಿ ಮಾಡಿಕೊಳ್ಳತ್ತೆ. ಅದು ಯಥಾ ಪ್ರಕಾರ ನಮ್ಮವರ ಮನವಿಯನ್ನ ಕಸದ ಬುಟ್ಟಿಗೆಸೆದು ಅಮೇರಿಕದ ಜೊತೆ ಸೇರಿಕೊಂಡು ಭಯೋತ್ಪಾದನೆ ವಿರುದ್ಧ ಸಮರದ ಭಾಷಣ ಮಾಡತ್ತೆ. ಇಲ್ಲಿ ಸಿಕ್ಕಿಬಿದ್ದಿರೋ ಆರೋಪಿಗಳಿಗಾಗಿ ಜೈಲುಗಳಲ್ಲಿ ಝೆಡ್ ಪ್ಲಸ್ ಸೆಕ್ಯುರಿಟಿ ಕೊಟ್ಟು, ವರ್ಷಗಟ್ಟಲೆ ಅವರ ವಿಚಾರಣೆ ನಡೆಸಿ ಕೊನೆಗೊಂದು ದಿನ ಗಲ್ಲು ಶಿಕ್ಷೆ ಕೊಟ್ಟರೆ, ನೇಣಿಗೆ ಹಾಕಬೇಡಿ ಅನ್ನೋ ಜನ ಹುಟ್ಟಿಕೊಳ್ತಾರೆ. ಅಷ್ಟೊತ್ತಿಗಾಗಲೆ ಮತ್ತಷ್ಟು ಬಾಂಬುಗಳು ಸಿಡಿದಿರುತ್ತವಾದ್ದರಿಂದ ಇದನ್ನೆಲ್ಲ ಜನ ಮರೆತೇ ಬಿಟ್ಟಿರ್ತಾರೆ. ಇದನ್ನೆಲ್ಲ ಹೊರತು ಪಡಿಸಿ ಮತ್ತೇನಾದರೂ ಆದರೆ, ಖಂಡಿತ ಬರೆದೇನು...

No comments:

Post a Comment