Friday, March 11, 2011

ಯಾವನು ಅದೇನ್ ಕಿತ್ಕೊತಾನೆ ಅನ್ನೋ ಗಾಂಚಾಲಿ...


                                          ಸುಮ್ಮನೆ ಕಲ್ಪಿಸಿಕೊಳ್ಳಿ. ಒಬ್ಬ ವ್ಯಕ್ತಿಯನ್ನ ಆತ ಕಳ್ಳ ಅನ್ನೋ ಸಂಶಯದ ಮೇಲೆ ಪೊಲೀಸರು ವಶಕ್ಕೆ ತೆಗೆದುಕೊಂಡು ಸ್ಟೇಷನಗೆ  ಕರೆತಂದಿದ್ದಾರೆ. ಆತನನ್ನ ಎದುರಿಗೆ ಕೂಡಿಸಿಕೊಂಡು, "ನೀನು ಕಳ್ಳತನ ಮಾಡಿದ್ದು ನಿಜವಾ" ಅಂತ ಪೇದೆ ಕೇಳ್ತಾನೆ. ಅದಕ್ಕವನು, "ಆ ಆರೋಪದ ಬಗ್ಗೆ ಈಗ ನಾನು ಯಾವುದೇ ಪ್ರತಿಕ್ರಿಯೆ ನೀಡಲು ಇಷ್ಟಪಡುವುದಿಲ್ಲ" ಅಂದರೆ, ಬೆನ್ನಕೆಳಗೆರಡು ಲಾಠಿ ಏಟು ಬೀಳಬೇಕು ತಾನೆ..? ಬಿದ್ದೇ ಬೀಳತ್ವೆ. ಯಾಕಂದ್ರೆ ಆತನ ಮೇಲಿರುವುದು ಆಫ್ಟರಾಲ್, ಒಂದಷ್ಟು ಲಕ್ಷ ಕಳ್ಳತನದ ಆರೋಪ. ಆದರೆ, ಒಬ್ಬ ದೊಡ್ಡ ಮನುಷ್ಯನ ಮೇಲೆ ಇಪ್ಪತ್ತೈದು ಮೂವತ್ತು ಕೋಟಿಯ ಅಪರಾತಪರಾ ಆರೋಪ ಬಂದಾಗ, ಆತ ಹೀಗೆ ಹೇಳಿದರೆ..? ಇಲ್ಲಿ ಆಗಿರುವುದೂ ಅದೇ.                                        
                                         "ಕುಮಾರಸ್ವಾಮಿ ಮಾಡಿರುವ ಆರೋಪಗಳ ಬಗ್ಗೆ ಈಗ ನಾನು ಯಾವುದೇ ಪ್ರತಿಕ್ರಿಯೆ ನೀಡಲು ಇಷ್ಟಪಡುವುದಿಲ್ಲ." ಇದು ಸಿ.ಎಂ ಯಡಿಯೂರಪ್ಪನವರ ಒಂದು ಸಾಲಿನ ಪ್ರತಿಕ್ರಿಯೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಥಾನುಗಟ್ಟಲೆ ದಾಖಲೆಗಳನ್ನ ಹಿಡಕೊಂಡು ಕುಳಿತು, ಮುಖ್ಯಮಂತ್ರಿಗಳು ಕಂಡ ಕಂಡವರಿಗೆ ಅಕ್ರಮವಾಗಿ ಉಪಕಾರ ಮಾಡಿಕೊಟ್ಟು ಅದಕ್ಕೆ ಪ್ರತಿಯಾಗಿ ತಮ್ಮ ಮಕ್ಕಳ ಶಿಕ್ಷಣ ಸಂಸ್ಥೆಗೆ ಕೋಟಿಗಟ್ಟಲೆ ದೇಣಿಗೆ ಪಡೆದಿದ್ದಾರೆ ಅಂತ ಗಂಭೀರ ಆರೋಪ ಮಾಡಿದ್ರು. ಅದಕ್ಕೇನ್ ಹೇಳ್ತೀರಿ ಅಂತ ಪತ್ರಕರ್ತರು ಹೋಗಿ ಕೇಳಿದರೆ, ಹತ್ತಾರು ಕ್ಯಾಮೆರಾಗಳೆದುರಿಗೇ  ಯಡಿಯೂರಪ್ಪನವರು, "ಅದಕ್ಕೆಲ್ಲ ಈಗ ನಾನು ಪ್ರತಿಕ್ರಿಯೆ ನೀಡಲು ಇಷ್ಟ ಪಡುವುದಿಲ್ಲ" ಅಂದು ಸರಸರನೇ ನಡೆದುಹೋಗಿಬಿಟ್ಟರು. ಅರೆ ಇಸ್ಕಿ, ಈಗ ನಾನು ಪ್ರತಿಕ್ರಿಯೆ ನೀಡಲು ಇಷ್ಟ ಪಡುವುದಿಲ್ಲ ಅಂದರೆ ಏನರ್ಥ..? ಈಗ ನನಗೆ ಮೂಡಿಲ್ಲ, ಮೂಡು ಬಂದಾಗ ಮಾತಾಡ್ತೀನಿ, ಅಲ್ಲೀ ತನಕ ಅದುಮಿಕೊಂಡಿರಿ ಅಂತಾನಾ..? ನಾನು ಮುಖ್ಯಮಂತ್ರಿ ಕಣ್ರೀ, ಏನಾದ್ರೂ ಮಾಡ್ಕೋತೀನಿ, ಅದನ್ನೆಲ್ಲ ಕೇಳೋಕ್ ನೀವ್ಯಾರು ಅಂತಾನಾ..? ಗಾಂಚಾಲಿ ಅಂದ್ರೆ ಇದೇ ಅಲ್ಲವಾ..?


                                          ನಿಮ್ಮ ಮೇಲೆ ಬಂದಿರುವ ಆರೋಪಗಳ ಬಗ್ಗೆ ಏನ್ ಹೇಳ್ತೀರಿ ಅಂತ ಕೇಳೋದಕ್ಕೆ ಹೋದ ಯಾವ ಪತ್ರಕರ್ತರಿಗೂ, ಹಲಾಲುಕೋರ ಕೆಲಸ ಮುಚ್ಚಿಕೊಳ್ಳುವುದಕ್ಕೆ ಮುಖ್ಯಮಂತ್ರಿಯ ಮಕ್ಕಳ ಟ್ರಸ್ಟ್ ಗೆ  ದೇಣಿಗೆ ಕೊಟ್ಟ ಕಂಪನಿ ಜೊತೆಗಾಗಲಿ, ಟ್ರಸ್ಟ್ ಜೊತೆಗಾಗಲಿ, ಕುಮಾರಸ್ವಾಮಿ ಜೊತೆಗಾಗಲಿ, ಸ್ವತಃ ಮುಖ್ಯಮಂತ್ರಿ ಜೊತೆಗಾಗಲಿ, ಸ್ನೇಹ ಸಂಬಂಧವೂ ಇಲ್ಲ - ರಾಗ ದ್ವೇಷಗಳೂ ಇಲ್ಲ. ತಮ್ಮ ಓಟು ಪಡೆದು ವಿಧಾನಸೌಧದ ಮೂರನೇ ಮಹಡಿಯಲ್ಲಿನ ಸಿಂಹಾಸನ ಏರಿರುವ ಮನುಷ್ಯ ಅಲ್ಲಿ ಕುಳಿತು ಅದೇನ್ ಕಡಿದು ಕಟ್ಟೆ ಹಾಕ್ತಿದಾನೆ ಅಂತ ತಿಳಿದುಕೊಳ್ಳೋ ಅಧಿಕಾರ ರಾಜ್ಯದ ಪ್ರತಿಯೊಬ್ಬರಿಗೂ ಇದೆ. ಆ ವಿಷಯವನ್ನ ಅವರಿಗೆ ತಿಳಿಸುವ ಮೀಡಿಯೇಟರ್ ಆಗಿ ಕೆಲಸ ಮಾಡೋರು ಪತ್ರಕರ್ತರು. ಅವರೆದುರಿಗೆ ಎಡಸೊಕ್ಕಿನ ಮಾತಾಡಿ ಹೊರಟುಹೋದವರು ಯಡಿಯೂರಪ್ಪ.
                                         ಈ ಎಡಸೊಕ್ಕು ಅವರೊಬ್ಬರದು ಮಾತ್ರ ಅಲ್ಲ. ಇತ್ತೀಚೆಗೆ ಅವರ ರಾಜಕೀಯ ಕಾರ್ಯದರ್ಶಿ  ಬಿ.ಜೆ ಪುಟ್ಟಸ್ವಾಮಿಯವರೊಂದು ಪ್ರೆಸ್ ಮೀಟ್ ಮಾಡಿ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ತಮ್ಮ ಅತ್ತೆ ಮತ್ತು ಇನ್ನೊಬ್ಬ ಸಂಬಂಧಿಗೆ ಅಕ್ರಮವಾಗಿ ಬಿ.ಡಿ.ಎ ಸೈಟ್ ಕೊಟ್ಟಿದ್ದಾರೆ ಅಂತ ಆರೋಪ ಮಾಡಿ ದಾಖಲೆ ಕೊಟ್ಟರು. ಇದರ ಬಗ್ಗೆ ಏನ್ ಹೇಳ್ತೀರಿ ಅಂತ ಕುಮಾರಸ್ವಾಮಿಯವರ ಹತ್ರ ಹೋದ್ರೆ, "ಅವನ್ಯಾರೋ ಪುಟ್ಟಸ್ವಾಮಿ ಹೇಳಿದ್ದಕ್ಕೆಲ್ಲ ರಿಯಾಕ್ಟ್ ಮಾಡಕಾಗತ್ತಾ ಬ್ರದರ್, ಬಿಟ್ಟಾಕಿ ಅದನ್ನ, ಮತ್ತೇನ್ ಸಮಾಚಾರ..?" ಅಂತ, ಅದು ಮಾತಾಡಬೇಕಾದ ವಿಷಯವೇ ಅಲ್ಲ ಅನ್ನೋಹಾಗೆ ಮಾತು ಬದಲಿಸಿಬಿಟ್ಟರು. ಇಲ್ಲಿ ಅವನ್ಯಾರೋ ಪುಟ್ಟಸ್ವಾಮಿ ಮುಖ್ಯ ಅಲ್ಲ. ಇನ್ಯಾರೋ ವೆಂಕ, ಸೀನ, ನಾಣಿ ಆರೋಪ ಮಾಡಿದ್ರೂ ಅದಕ್ಕೆ ಉತ್ತರ ಕೊಡಬೇಕಾದದ್ದು ಕುಮಾರಸ್ವಾಮಿಯವರ ಜವಾಬ್ದಾರಿ ಅಲ್ಲವಾ..? ಪಾತಿವೃತ್ಯದ ಬಗ್ಗೆ ಪ್ರವಚನ ಕೇಳೋದಕ್ಕೆ ಬಂದ ಜನ, ಪ್ರವಚನ ಮಾಡುತ್ತಿರುವವಳು ಎಷ್ಟರ ಮಟ್ಟಿಗೆ ಶೀಲವಂತೆ ಅಂತ ತಿಳಿದುಕೊಳ್ಳಬಾರದಾ..? ಒಂದು ಆರೋಪ ಅಂತ ಬಂದಾಗ, ಅದಕ್ಕಿರುವ ದಾಖಲೆಗಳಿಗೆ, ವ್ಯಾಪಕತೆಗೆ ಬೆಲೆ ಬರಬೇಕೇ ಹೊರತು, ಆರೋಪ ಮಾಡಿದವರಾರು ಅನ್ನೋದಕ್ಕಲ್ಲ.

 
                                        ಇದಕ್ಕೆಲ್ಲ ಕಾರಣ, ನಾವು ಮತದಾರರಿಗೆ ಆನ್ಸರೇಬಲ್ ಅಲ್ಲ ಅನ್ನೋ ರಾಜಕಾರಣಿಗಳ ಉದ್ಧಟತನ. ಕುಮಾರಸ್ವಾಮಿಯವರ ಮೇಲೆ ಬಂದಿರುವ ಆರೋಪಗಳ ಬಗ್ಗೆ ಅಬ್ಬಬ್ಬಾ ಅಂದರೆ, ದೇವೇಗೌಡರು ಕೇಳಬಹುದು. ಅದು, ಅವರ ಫ್ಯಾಮಿಲಿ ಮ್ಯಾಟರ್ ಆಗಿಬಿಡತ್ತೆ. ಯಡಿಯೂರಪ್ಪನವರು ತಮ್ಮ ಮೇಲೆ ಬಂದಿರುವ ಆರೋಪಗಳಿಗೆ ಬಿ.ಜೆ.ಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಸ್ಪಷ್ಟೀಕರಣ ಕೊಡ್ತಾರೆ. ಬಿ.ಜೆ.ಪಿ ಹೈಕಮಾಂಡಿಗೆ  ಯಾವಾಗಲೂ ಕ್ಲೀನ್ ಚಿಟ್ ಕೊಡೋ ಅವಸರ. ಅವರ ನಡುವೆ ಅದೇನು ವ್ಯವಹಾರವೋ ಯಾರಿಗೆ ಗೊತ್ತು..? ಒಟ್ಟಿನಲ್ಲಿ, ಓಟ್ ಹಾಕಿದವರು ಲೆಕ್ಕಕ್ಕೇ ಬರಲ್ಲ. ಅವರು after all ಮತದಾರರು. ಹಂಗಾದಾಗಲೇ, "ನಾನು ಯಾವುದೇ ಪ್ರತಿಕ್ರಿಯೆ ನೀಡಲು ಇಷ್ಟಪಡುವುದಿಲ್ಲ" ಅನ್ನೋ ಹೇಳಿಕೆಗಳು ಬರೋದು. ಆ ಹೇಳಿಕೆಯ ನಂತರ " ಪ್ರತಿಕ್ರಿಯೆ ನೀಡಲು ಮುಖ್ಯಮಂತ್ರಿ ನಿರಾಕರಣೆ " ಅನ್ನೋ ಬ್ರೇಕಿಂಗ್ ನ್ಯೂಸ್ ಬೇರೆ. ಸಣ್ಣಪುಟ್ಟ ಕಳ್ಳರಾದರೆ, ಲಾಠಿ ಏಟು ಬೀಳತ್ವೆ. ಈ ಹಗಲುದರೋಡೆಕೋರರಿಗೆ ಜೈಕಾರ, ಭೋಪರಾಕುಗಳು. ಇದಕ್ಕಿಂತ ದುರಂತ ಇದೆಯಾ..?

3 comments: