Wednesday, September 8, 2010

ಕ್ರೈಂ ರಿಪೋರ್ಟರನ ಹಳವಂಡಗಳು...

                                       ಆಫೀಸಿನಲ್ಲೇ ಇದ್ದೆ. ಇಳಿಸಂಜೆ ಹೊತ್ತು. ಲ್ಯಾಂಡ್ ಲೈನ್ ಒಂದೇ ಸಮನೆ ಹೊಡೆದುಕೊಳ್ತಿತ್ತು. ಕೈಯಳತೆಯಲ್ಲೇ ಅದರ ರಿಸೀವರ್ ಇತ್ತು. ಆದರೂ ಅದನ್ನೆತ್ತಿಕೊಳ್ಳೋದೊಂದು ಹಿಂಸೆ. ಯಾರ್ಯಾರದೋ ಫೋನುಗಳು. ನಮ್ಮನೇಲಿ ಹಾವು ಬಂದಿದೆ, ಹಿಡಿಯೋದಕ್ಯಾರನ್ನಾದ್ರೂ ಕಳಿಸಿ, ಗರ್ಭಿಣಿಯರಿಗೆ ಯೋಗ ಕಲಿಸೋ ಪ್ರೋಗ್ರಾಂ ಬಂದಿತ್ತಲ್ಲ ಅದರ ಅಡ್ರೆಸ್ ಕೊಡಿ, ಚಿದಂಬರ ರಹಸ್ಯದಲ್ಲಿ ಒಂದು ದೇವಸ್ಥಾನ ತೋರ್ಸಿದ್ರಲ್ಲ, ಅದಕ್ಕೆ ಯಾವ ರೂಟ್ನಲ್ ಹೋದ್ರೆ ಹತ್ರ..? ಬರೀ ಇಂಥವೇ.
                                            ಫೊನ್ ಎತ್ತುವ ಪುಣ್ಯಾತ್ಮರಾರಾದರೂ ಹತ್ತಿರದಲ್ಲಿ ಇದಾರಾ ಅನ್ನೋಹಂಗೆ ತಲೆ ಎತ್ತಿ ನೋಡಿದೆ. ನನ್ನದೇ ಬ್ಯೂರೋದ ರಿಪೋರ್ಟರ್ ಒಬ್ಬ ಎದ್ದು ಬಂದ. ಇನ್ಯಾವುದೋ ಬೀಟ್ನಲ್ಲಿದ್ದ ಆತ ಕ್ರೈಂ ಬ್ಯೂರೊಗೆ ಬಂದು ಹದಿನೈದು ದಿನಗಳಷ್ಟೇ ಆಗಿದ್ವು. ಅಂಥವರಿಗಿನ್ನೂ ಆ ಲ್ಯಾಂಡ್ ಲೈನ್  ಕಾಲುಗಳನ್ನ ತುಂಬ ಸೀರಿಯಸ್ ಆಗಿ ಅಟೆಂಡ್ ಮಾಡುವ ಸಹನೆ ಇರತ್ತೆ. ಫೋನ್ ಎತ್ತಿಕೊಂಡ ಆತನಿಗೆ ಹತ್ತೇ ಸೆಕೆಂಡುಗಳಲ್ಲಿ ಮೈತುಂಬ ರೋಮಾಂಚನವಾಗಿತ್ತು. "ಹೌದಾ... ಎಲ್ಲಿ" ಅಂದ. ಮುಂದೆ ಆ ಕಡೆಯಿಂದ ಮಾತಾಡ್ತಿದ್ದವರು ಹೇಳುತ್ತಿದ್ದುದನ್ನ ಕೇಳಿಸಿಕೊಳ್ಳುವ ಸಹನೆ ಇರಲಿಲ್ಲ ಆತನಿಗೆ. "ಸರಿ... ಸರಿ... ನಾವೀಗ್ಲೇ ಇಲ್ಲಿಂದ ಹೊರಡ್ತೀವಿ, ಆನೇಕಲ್ ತನಕ ಬರೋದಕ್ಕೆ ಸ್ವಲ್ಪ ಲೇಟಾಗತ್ತೆ, ನಾವು ಬರೋ ತನಕ ಎತ್ತಬೇಡಿ" ಅಂದ. ಯಾವುದೋ ನವವಿವಾಹಿತೆ ನೇಣಿಗೆ ಬಿದ್ದಿರಬೇಕು ಅಂತ ನಾನು ಮನಸಿನಲ್ಲೇ ಅಂದುಕೊಳ್ಳುವುದಕ್ಕೂ, ಪಕ್ಕದಲ್ಲಿದ್ದ ಹಾಳೆಯೊಂದರಲ್ಲಿ ಫೋನ್ ಮಾಡಿದವರ ಮೊಬೈಲ್ ನಂಬರ್ ಗೀಚಿಕೊಂಡ ಆತ, ರಿಸೀವರನ್ನ ಕುಕ್ಕಿದಂತೆ ಕೆಳಗಿಡೋದಕ್ಕೂ ಸರಿ ಹೋಯಿತು. ಚಿದಂಬರ ರಹಸ್ಯವೊಂದನ್ನ ಹೇಳಬೇಕೇನೋ ಅನ್ನೋ ಹಾಗೆ ನನ್ನ ಮುಖದ ಹತ್ತಿರಕ್ಕೆ ಮುಖ ತಂದು ಆನೇಕಲ್ ಹತ್ರ ಒಂದು ಹಾಳು ಬಾವೀಲಿ ಮಗು ಮತ್ತು ಹಸು ಒಟ್ಟೊಟ್ಟಿಗೇ ಬಿದ್ದಿವೆಯಂತೆ, ಡಿ.ಎಸ್.ಎನ್.ಜಿ ( ಅದೇ ಛತ್ರಿ ಇರೋ ಲೈವ್ ಗಾಡಿ ) ಹಾಕಿದರೆ ಬೆಳತನಕ ಓಡಿಸಬಹುದು ಅಂದ. ಮಾತು ಮುಗಿಸುವಷ್ಟರಲ್ಲಿ ಕಾಲು ನೆಲದ ಮೇಲೆ ನಿಲ್ಲೋದೇ ಇಲ್ಲವೇನೋ ಅನ್ನೋವಷ್ಟು ರೋಮಾಂಚನ ಆತನಿಗೆ. ಗಾಬರಿಬಿದ್ದ ನಾನು, ಏನ್ ಎತ್ತಬೇಡಿ ಅಂದೆ ನೀನು ಅಂತ ಕೇಳಿದೆ. ಅದೇ ಮಗು ಮತ್ತು ಹಸೂನ್ನ. ನಾವು ಹೋಗೋವಷ್ಟರಲ್ಲಿ ಎತ್ತಿಬಿಟ್ರೆ ವಿಶ್ಯುವಲ್ ಮಿಸ್ ಆಗತ್ತೆ ಅಂದ. ಒಂದ್ ಸಲ ವಾಕರಿಕೆ ಬಂದು ಹೋಯಿತು. ಹಾಳೆಯಲ್ಲಿದ್ದ ಮೊಬೈಲ್ ನಂಬರನ್ನ ಕಿತ್ತುಕೊಂಡು ಚಕಚಕನೆ ಡಯಲ್ ಮಾಡಿದೆ. ಪುಣ್ಯಾತ್ಮ ಎರಡೇ ರಿಂಗಿಗೆ ಎತ್ತಿಕೊಂಡ. ನೀವು ಮೊದ್ಲು ಫೈರ್ ಬ್ರಿಗೇಡ್ಗೆ ಕಾಲ್ ಮಾಡಿ. ಮೊದ್ಲು ಮಗು ಇತ್ತಿ ನಂತರ, ಹಸು ಎತ್ತಿ. ಅಷ್ಟರಲ್ಲಿ ನಾವು ಬರ್ತೀವಿ ಅಂದೆ.

                                          ಪಕ್ಕದಲ್ಲಿ ಏನೂ ತಿಳಿಯದವನಂತೆ ನಿಂತಿದ್ದ ಕ್ರೈಂ ರಿಪೋರ್ಟರು, ನೀನೆಂಥಾ ಅನ್ ಪ್ರೊಫೆಷನಲ್ ಕಣಯ್ಯಾ ಅನ್ನೋ ಹಾಗೆ ನನ್ನೇ ನೋಡ್ತಿದ್ದ. ಬೇಗ ಹೊರಡು ಸ್ಟೋರಿ ಮಿಸ್ ಆಗತ್ತೆ ಅಂದೆ. ಡಿ.ಎಸ್.ಎನ್.ಜಿ..? ಒಂದೇ ಶಬ್ದದ ಪ್ರಶ್ನೆ ಆತಂದು. ಬೇಡ, ಅದು ತಲುಪೋವಷ್ಟರಲ್ಲಿ ಎಲ್ಲಾ ಮುಗಿದುಹೋಗಿರತ್ತೆ ಅಂದೆ. ನಿರಾಶನಾದ ಆತ ಕ್ಯಾಮೆರಾಮ್ಯಾನ್ನ ಕರೆದುಕೊಂಡು ಕೆಳಗಿಳಿದು ಹೋದ.

                                          ರಿಪೋರ್ಟರ್ ಅಲ್ಲಿಗೆ ತಲುಪುವಷ್ಟರಲ್ಲಿ ಜನ, ತಾವು ತಾವೇ ಸೇರಿಕೊಂಡು ಮಗು ಮತ್ತು ಹಸು ಎರಡನ್ನೂ ಮೇಲೆತ್ತಿದ್ದರು. ಆ ಸ್ಟೋರಿ ಅಂದುಕೊಂಡಂತೆ ಸಿಗಲಿಲ್ಲ. ಕತ್ತೆ ಬಾಲ - ಕುದುರೆ ಜುಟ್ಟು. ಆ ಹಾಳು ಬಾವಿಯೊಳಗೆ ಬಿದ್ದದ್ದು ಯಾರದೋ ಮನೆಯ ಮುದ್ದಿನ ಕೂಸಲ್ಲವಾ..? ನಾವು ಕ್ಯಾಮೆರಾ ತಗೊಂಡು ಬರೋ ತನಕ ಅದನ್ನ ಹಸುವಿನ ಜೊತೆ ಹಾಳು ಭಾವಿಯಲ್ಲಿ ಬಿಟ್ಟಿರಿ ಅನ್ನೋದು ಯಾವ ನ್ಯಾಯ..? ಒಂದು ಎಕ್ಸ್ ಕ್ಲೂಸೀವ್ ಕೊಡುವ ಹಪಹಪಿ, ರಿಪೋರ್ಟರ್ನಲ್ಲಿರುವ ಮಾನವೀಯತೆಯನ್ನ ಕೊಂದು ಬಿಡುತ್ತದಾ..? ಅರ್ಥ ಆಗ್ತಿಲ್ಲ

2 comments:

  1. ಹಾಯ್ ಅಜಿತ್
    ಮೂರೂ ಬರಹಗಳನ್ನು ಒಂದೇ ಕಂತಿನಲ್ಲಿ ಓದಿ ಮುಗಿಸಿದೆ. ಒಂದಕ್ಕೊಂದು ಭಿನ್ನ ವಿಷಯಳಾದ್ರೂ ಸರಾಗವಾಗಿ ಓದಿಸಿಕೊಳ್ಳತ್ತೆ.....ಮೂರನೇ ಬರಹ..ಕ್ರೈಂ ರಿಪೋರ್ಟರನ ಹಳವಂಡಗಳು...ತುಂಬಾ ಚನ್ನಾಗಿದೆ. ಇಂಥ ವಿಷಯದ ಬಗ್ಗೆ ಇನ್ನಷ್ಟು ಬರೀರಿ...ಬರೀಯೋ ಪ್ರೀತಿ ಹೀಗೆ ಇರಲಿ...
    ಪ್ರೀತಿಯಿಂದ
    ಹಾಲಸ್ವಾಮಿ..

    ReplyDelete