Friday, May 18, 2012

ಸದ್ದಿಲ್ಲದೇ ಕುಬೇರನಾದನಲ್ಲ ಸೋನಿಯಾ ಅಳಿಯ..!



                                    ಗೆಳೆಯ ಪ್ರೇಮ್, facebookಲ್ಲಿ ಒಂದು ವಿಡಿಯೋ ಕಳಿಸಿದ್ರು. ಸೋನಿಯಾ ಗಾಂಧಿ ಅಳಿಯ, ಪ್ರಿಯಾಂಕಾ ಗಾಂಧಿ ಗಂಡ ರಾಬರ್ಟ್  ವದ್ರಾ ಅಲಿಯಾಸ್ ರಾಬರ್ಟ್ ವಡೇರಾ ಅಧೆಂಗೆ ಹತ್ತೇ ಹತ್ತು ವರ್ಷಗಳಲ್ಲಿ ಸಾವಿರಾರು ಕೋಟಿಯ ಒಡೆಯನಾಗಿಬಿಟ್ಟರು ಅನ್ನೋದನ್ನ ವಿವರಿಸುವ ವಿಡಿಯೋ ಅದು. ಅದನ್ನ ಭಾರತದಲ್ಲಿ ನಿಷೇಧಿಸಲಾಗಿದೆ. ಇಂಟರ್ನೆಟನಲ್ಲಿ ವಿಡಿಯೋಗಳ ಅತಿ ದೊಡ್ಡ ಗ್ಯಾಲರಿ ಅನ್ನಿಸಿಸಿಕೊಂಡಿರೋ youtube website ಕಳೆದ ವರ್ಷ ಒಟ್ಟು 12,426 ವಿಡಿಯೋಗಳನ್ನ ಭಾರತದಲ್ಲಿ ನಿಷೇಧಿಸಿದೆಯಂತೆ. ಅವುಗಳ ಪೈಕಿ 12,213 ವಿಡಿಯೋಗಳು ಸೋನಿಯಾ ಗಾಂಧಿಯ ವಿರುದ್ಧ ಇದ್ದವು ಅನ್ನೋ ಮಾಹಿತಿ ಇದೆ. ಅದೆಷ್ಟು ನಿಜಾನೋ ಗೊತ್ತಿಲ್ಲ. ಆದ್ರೆ, ಇದೇನ್ರೀ ಇದೂ ರಾಬರ್ಟ್ ವದ್ರಾ ಕಥೆ..? 1997ರ ತನಕ ಗುಜರಿ ವ್ಯಾಪಾರ ಮಾಡಿಕೊಂಡಿದ್ದ ಆ ಮನುಷ್ಯನನ್ನ ಇವತ್ತು ಭಾರತದ ಕಾರ್ಪೊರೇಟ್ ಜಗತ್ತು "ಅತಿ ವೇಗವಾಗಿ ಕೋಟ್ಯಾಧೀಶನಾದ ವ್ಯಾಪಾರಿ" ಅನ್ನುತ್ತಿದೆ. ಟಾಟಾಗಳು ಸಾವಿರ ಕೋಟಿಯ ಸರದಾರರಾಗಲು ನೂರು ವರ್ಷ ತಗೊಂಡರು. ಧೀರೂಬಾಯಿ ಅಂಬಾನಿಯವರದ್ದು ಅದೇನೇ ವೇಗದ ಬೆಳವಣಿಗೆ ಅಂದರೂ ಅದು ಐವತ್ತು ವರ್ಷಗಳ ಶ್ರಮ. ಆದರೆ, ರಾಬರ್ಟ್ ಇವತ್ತಿಗಾಗಲೇ ಎರಡು ಸಾವಿರದ ನೂರು ಕೋಟಿಗೆ ಬಾಳೋ ಮನುಷ್ಯ ಅನ್ನೋ ಅಂದಾಜು ಇದೆ. ಮದುವೆ ಅನ್ನೋದು ಒಬ್ಬ ಮನುಷ್ಯನ ನಸೀಬನ್ನ ಈ ಪರಿ ತೆರೆದುಬಿಡತ್ತಾ..?



                                                                   ಗುಜರಿ ಅಂಗಡಿಯವನು..!



                                   ಉತ್ತರ ಪ್ರದೇಶದ ಮುರಾದಾಬಾದ್ ನಲ್ಲಿ ಸಣ್ಣ ಪ್ರಮಾಣದಲ್ಲಿ ಹಿತ್ತಾಳೆ ಮತ್ತು ಕಟ್ಟಿಗೆಯ ಕರಕುಶಲ ವಸ್ತುಗಳ ವ್ಯಾಪಾರ ಮಾಡಿಕೊಂಡಿದ್ದ ರಾಜಿಂದರ್ ವದ್ರಾ ಮತ್ತು ಆತನ ಸ್ಕಾಟ್ಲ್ಯಾಂಡ್ ಮೂಲದ ಕ್ರಿಶ್ಚಿಯನ್ ಹೆಂಡತಿ ಮೌರೀನ್ ರ ಮೂರು ಮಕ್ಕಳ ಪೈಕಿ ಹಿರಿಯವನು ಈತ. ಕೆಲವು ಕಾಲ ರಾಬರ್ಟ್ ವದ್ರಾ ಗುಜರಿ ವಸ್ತುಗಳ wholesale ವ್ಯಾಪಾರ ಮಾಡಿಕೊಂಡಿದ್ದ, ಕೃತಕ ಆಭರಣಗಳ ರಫ್ತು ವ್ಯವಹಾರ ಮಾಡ್ತಿದ್ದ ಅಂತಾರೆ. ಆದರೆ 1997ರಲ್ಲಿ ಯಾರೋ ಫ್ರೆಂಡ್ ಮನೇಲಿ ಪ್ರಿಯಾಂಕಾ ಗಾಂಧಿ ಪರಿಚಯವಾಗಿ, ಅದು ಪ್ರೇಮ ಆಗಿ ಮುಂದೆ ಒಂದು ವರ್ಷದೊಳಗೆ ಮದುವೆ ಕೂಡ ಆಗೋದರೊಂದಿಗೆ ಇವನ ಖದರೇ ಬದಲಾಗಿಹೋಯಿತು.

                                                         ಸೋನಿಯಾ ತವರಿನಲ್ಲಿ ಅಂಗಡಿ ಇದೆ..!

                                   ಹಾಗೆ ನೋಡಿದರೆ ಈ ಮನುಷ್ಯ ಕಾರಣವಲ್ಲದ ಕಾರಣಗಳಿಗೆ ಸುದ್ದಿಯಾದದ್ದೇ ಹೆಚ್ಚು. ಮೊದಲ ಕಾರಣ, ರಾಬರ್ಟ್ ವದ್ರಾ ಈ ದೇಶದ ಅತ್ಯಂತ ಪ್ರಭಾವಶಾಲಿ ಕುಟುಂಬದ ಅಳಿಯ ಅನ್ನೋದು. ಅದನ್ನ ಹೊರತು ಪಡಿಸಿದರೆ fitness freak ಅನ್ನೋ ಕಾರಣಕ್ಕೆ, super bikeಗಳ ಖಯಾಲಿ ಇಟ್ಟುಕೊಂಡಿರೋನು ಅನ್ನೋದಕ್ಕೆ ಆವಾಗಾವಾಗ ಪತ್ರಿಕೆಗಳಲ್ಲಿ ಟಿ.ವಿಗಳಲ್ಲಿ ಕಾಣಿಸಿಕೊಳ್ತಿದ್ದ. ಆದರೆ, ಸದ್ದಿಲ್ಲದೇ ತನ್ನದೇ ಒಂದು ಬಿಸಿನೆಸ್ ಸಾಮ್ರಾಜ್ಯ ಸ್ಥಾಪಿಸಿಬಿಟ್ಟಿದ್ದ. ರಾಜಸ್ಥಾನ ಮತ್ತು ಹರಿಯಾಣಗಳಲ್ಲಿ ದೊಡ್ಡ ಮಟ್ಟದ ಭೂಮಿಗೆ ಒಡೆಯನಾಗಿದ್ದ. ರಾಬರ್ಟ್ ವದ್ರಾ ಭೂಮಿ ಖರೀದಿಸಿದ ರಾಜ್ಯಗಳಲ್ಲಿ ಕಾಂಗ್ರೆಸ್ ಸರಕಾರಗಳೇ ಇದ್ದುದ್ದನ್ನ ಕೇವಲ ಕಾಕತಾಳೀಯ ಅಂದ್ರೆ ಅನೇಕರು ನಗ್ತಾರೆ. ಈ ಮಧ್ಯೆ ಪಿತರಾರ್ಜಿತವಾಗಿ ಬಂದಿದ್ದ ಕೃತಕ ಆಭರಣಗಳು - ಕರಕುಶಲ ವಸ್ತುಗಳ ವ್ಯವಹಾರವನ್ನು  ಅರ್ಟಿಕ್ಸ್ ಅನ್ನೋ ಬ್ರಾಂಡನಡಿ ದೊಡ್ಡದಾಗಿ ಬೆಳೆಸಿದ ರಾಬರ್ಟ್ ವದ್ರಾ ಇಟಲಿಯಲ್ಲಿ ಮಾರಾಟ ಮಳಿಗೆ ತೆಗೆದ. ಅಲ್ಲಿ, ಭಾರತೀಯ ಮೂಲದ ಪ್ರಾಚ್ಯವಸ್ತುಗಳ ವ್ಯವಹಾರ ನಡೆಯತ್ತೆ. ಸೋನಿಯಾ ಗಾಂಧಿಯವರ ತಂಗಿ ಅನುಷ್ಕಾ ಮಾಯಿನೋ, "ಗಣಪತಿ" ಅನ್ನೋ ಹೆಸರಿನ ತನ್ನ ಮಳಿಗೆಗೆ ಕಳ್ಳದಾರಿಯಲ್ಲಿ ಭಾರತದ ಪ್ರಾಚ್ಯವಸ್ತುಗಳನ್ನ ತರಿಸಿಕೊಂಡು ಅವುಗಳನ್ನ ಲಂಡನ್ನಲ್ಲಿ ಕೋಟ್ಯಂತರ ಬೆಲೆಗೆ ಹರಾಜು ಹಾಕ್ತಾಳೆ ಅಂತ ಇತ್ತೀಚೆಗೆ ಜನತಾ ಪಕ್ಷದ ಅಧ್ಯಕ್ಷ ಸುಬ್ರಹ್ಮಣಿಯನ್ ಸ್ವಾಮಿ ಆರೋಪಿಸಿದ್ದರು. ರಾಬರ್ಟ್ ವದ್ರಾರ export ವ್ಯವಹಾರ ಸೋನಿಯಾ ಗಾಂಧಿಯವರ ಹುಟ್ಟು ದೇಶ ಇಟಲಿಯಲ್ಲಿ ಬೆಳೆದದ್ದು - ಅದೇ ರೀತಿಯ ವ್ಯವಹಾರದಲ್ಲಿ ಸೋನಿಯಾ ಮೇಡಂ ಸಹೋದರಿ ಕೂಡ ಕಾಣಿಸಿಕೊಂಡದ್ದು ಕಾಕತಾಳೀಯ ಅಂದರೂ ಜನ ನಗ್ತಾರೆ. ಇನ್ನು ಯಾವುದೇ ಭದ್ರತಾ ತಪಾಸಣೆ ಇಲ್ಲದೇ ವಿಮಾನ ಪ್ರಯಾಣ ಮಾಡಬಲ್ಲ ವಿ.ವಿ.ಐ.ಪಿಗಳ ಲಿಸ್ಟ್ ನಲ್ಲಿ ರಾಬರ್ಟ್ ವದ್ರಾರ ಹೆಸರನ್ನ ಸೇರಿಸಿ 2005ರ ಸಪ್ಟೆಂಬರ್ 26ರಂದು ಅಧಿಸೂಚನೆ ಹೊರಡಿಸಿತು ಕೇಂದ್ರ ಸರಕಾರ. ನಮ್ಮ ಭೂಸೇನೆ, ವಾಯು ದಳ, ನೌಕಾ ಪಡೆಯ ಮುಖ್ಯಸ್ಥರಿಗೆ ಇಲ್ಲದ ಈ ಸೌಲಭ್ಯವನ್ನ, ಸ್ವತಃ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಗೆ ಇಲ್ಲದ ಈ ಫೆಸಿಲಿಟಿಯನ್ನ ಯಾವುದೇ ಸಾಂವಿಧಾನಿಕ ಹುದ್ದೆಯಲ್ಲಿಲ್ಲದ ರಾಬರ್ಟ್ ವದ್ರಾಗೆ ಕೊಡೋದಕ್ಕೂ ಅವರ ಎಕ್ಸ್ ಪೋರ್ಟ್  ವ್ಯವಹಾರಕ್ಕೂ ಸಂಬಂಧ ಇತ್ತೆಂದು ತುಂಬ ಆರೋಪಗಳು ಕೇಳಿಬಂದವು. ಯಾಕೋ ಏನೋ ಅದು ಹಂಗ್ಹಂಗೇ ಮುಚ್ಚಿಹೋಯಿತು.

                                                   ಕಾಮನ್ವೆಲ್ತು - 2ಜಿ ತರಂಗಾಂತರವು..!

                                   ನಿಜಕ್ಕೂ ಜನ ರಾಬರ್ಟ್ ವದ್ರಾ ಕಡೆ ಹುಬ್ಬೇರಿಸಿ ನೋಡಿದ್ದು ಆತ ಭಾರತದ ಅತಿ ದೊಡ್ಡ ರಿಯಲ್ ಎಸ್ಟೇಟ್ ಕಂಪನಿ D.L.Fನ ಪಾಲುದಾರನಾದಾಗ. ನಂತರ D.L.Fಗೆ ಕಾಮನ್ ವೆಲ್ತ್ ಗೇಮ್ಗಳ ಕಾಮಗಾರಿಯಲ್ಲಿ ಭಾರೀ ಟೆಂಡರ್ ಗಳು ಸಿಕ್ಕವು, ಸುರೇಶ್ ಕಲ್ಮಾಡಿ ಅನೇಕ ನಿಯಮ ಗಾಳಿಗೆ ತೂರಿ ಆ ಕಂಪನಿಗೆ ಉಪಕಾರ ಮಾಡಿದರು. ಡಿ.ಎಲ್.ಎಫ್, ಸೋನಿಯಾ ಅಳಿಯನ ರಾಬರ್ಟ್ ವದ್ರಾ ಒಡೆತನದ ಕಂಪನಿಗಳಿಗೆ ಯಾವುದೇ ಭದ್ರತೆ ಇಲ್ಲದೇ ಕೋಟ್ಯಂತರ ರುಪಾಯಿ ಸಾಲ ಕೊಟ್ಟಿದೆ. ಇವತ್ತಿನ ವ್ಯವಹಾರಿಕ ಜಗತ್ತಿನಲ್ಲಿ ಭದ್ರತೆ ಇಲ್ಲದೇ ಪಡೆಯುವ ಸಾಲವನ್ನ ಲಂಚ ಅಂತಲೇ ಪರಿಗಣಿಸಲಾಗೋದು. ಹಾಗೆ ತಮ್ಮ ಕಲೈಂಜರ್ ಟಿ.ವಿಗೆ ಭದ್ರತೆ ಇಲ್ಲದ ಸಾಲಗಳನ್ನ ಪಡೆದ ಕಾರಣಕ್ಕೇ ಇವತ್ತು ಕನಿಮೋಳಿ ಕಂಬಿ ಎಣೆಸ್ತಿರೋದು. ಆದರೆ, ಕಾಮನ್ವಲ್ತ್ ಗೇಮ್ಸ್ ಹಗರಣದ ತನಿಖೆಗೆ ಮಾತ್ರ ರಾಬರ್ಟ್ ವದ್ರಾ ವ್ಯವಹಾರಗಳು ಒಳಪಡಲೇ ಇಲ್ಲ.
                                  ಯುನಿಟೆಕ್ ಅನ್ನೋ ರಿಯಲ್ ಎಸ್ಟೇಟ್ ಕಂಪನಿಯಲ್ಲಿ ರಾಬರ್ಟ್ ವದ್ರಾ ಶೇಕಡಾ 20 ರಷ್ಟು ಶೇರು ಕೊಂಡುಕೊಂಡರು. ನಂತರ ನೋಡಿದರೆ, ಮೊಬೈಲ್ ಕ್ಷೇತ್ರದಲ್ಲಿ ನಯಾಪೈಸೆ ಅನುಭವ ಇಲ್ಲದ ಆ ಕಂಪನಿಗೆ ಕೇವಲ 1658 ಕೋಟಿಗೆ 2ಜಿ ತರಂಗಾಂತರ ಕೊಡಲಾಯಿತು. ಕೆಲವೇ ತಿಂಗಳುಗಳ ನಂತರ ಯುನಿಟೆಕ್ ಕಂಪನಿ ಅದರ ಶೇ 67ರಷ್ಟನ್ನ ನಾರ್ವೆ ಮೂಲದ ಟೆಲಿನಾರ್ ಗೆ  ಮಾರಿದ್ದು ಅನಾಮತ್ತು 6,135 ಕೋಟಿಗೆ. ಟೆಲಿನಾರ್ ಕಂಪನಿಗೆ ಪಾಕಿಸ್ತಾನದಲ್ಲಿ ಸಂಶಯಾಸ್ಪದ ವ್ಯವಹಾರಗಳಿವೆ, ಅದು ಭಾರತಕ್ಕೆ ಪ್ರವೇಶಿಸುವುದರಿಂದ ರಾಷ್ಟ್ರದ ಭದ್ರತೆಗೆ ಧಕ್ಕೆ ಆಗಬಹುದು ಅಂತ ಗೃಹ ಇಲಾಖೆ ಹೇಳಿದರೂ ಸಹ ಆ ವ್ಯವಹಾರ ಸರಳವಾಗಿ ಮುಗಿದು ಹೋಯಿತು. ಈಗ 2ಜಿ ಹಗರಣದ ತನಿಖೆಯಲ್ಲಿ ಆ ವಿಷಯದ ಪ್ರಸ್ತಾಪವೇ ಇಲ್ಲ.

                                                         ಮನೆಅಳಿಯನ ಕಂಪನಿಗಳೆಷ್ಟು..?

                                  ರಾಬರ್ಟ್ ತನ್ನ ತಾಯಿಯನ್ನೇ ಪಾಲುದಾರಳನ್ನಾಗಿಸಿಕೊಂಡು ಆರಂಭಿಸಿದ ಸ್ಕೈ ಲೈಟ್ ಹಾಸ್ಪಿಟಾಲಿಟಿ ಪ್ರೈವೆಟ್ ಲಿಮಿಟೆಡ್ ಗೆ  ದಕ್ಷಿಣ ದೆಹಲಿಯ "ಹಿಲ್ಟನ್ ಗಾರ್ಡನ್ ಇನ್" ಪಂಚತಾರಾ ಹೊಟೆಲ್ ನಲ್ಲಿ ಪಾಲುದಾರಿಕೆ ಇದೆ. ಬ್ಲೂ ಬ್ರೀಜ್ ಟ್ರೇಡಿಂಗ್ ಪ್ರೈವೇಟ್ ಲಿಮಿಟೆಡ್ ಅನ್ನೋ ಹೆಸರಿನಲ್ಲಿ ಖಾಸಗಿ ವಿಮಾನಗಳನ್ನ ಬಾಡಿಗೆಗೆ ಕೊಡುವ ವ್ಯವಹಾರ ಶುರುಮಾಡಿದ್ದಾರೆ ರಾಬರ್ಟ್. ಜೊತೆಗೆ ತಮ್ಮ ಓಡಾಡಕ್ಕೆ ಎರಡು ಪ್ರತ್ಯೇಕ ವಿಮಾನಗಳನ್ನಿಟ್ಟುಕೊಂಡಿದ್ದಾರೆ. ಇನ್ನು ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ನಾತ್ ಇಂಡಿಯಾ ಐ.ಟಿ ಪಾರ್ಕ್ಸ್ ಪ್ರೈವೇಟ್ ಲಿಮಿಟೆಡ್, ರಿಯಲ್ ಅರ್ಥ್ ಎಸ್ಟೇಟ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಸ್ಕೈ ಲೈಟ್ ರಿಲಾಲಿಟಿ ಪ್ರೈವೇಟ್ ಲಿಮಿಟೆಡ್ ಅನ್ನೋ ಕಂಪನಿಗಳನ್ನಿಟ್ಟುಕೊಂಡಿದಾರೆ. ಹತ್ತು ವರ್ಷಗಳಲ್ಲಿ ಸಾವಿರ ಕೋಟಿಯ ಸರದಾರನಾಗದೇ ಇನ್ನೇನು..?

                                                                ಸಾಲು ಸಾಲು ಸಾವುಗಳು..!

                                  ಸೋನಿಯಾ ಗಾಂಧಿ ಅಳಿಯ ರಾತ್ರೋರಾತ್ರಿ ಕೋಟ್ಯಾಧೀಶನಾದ ವಿಷಯವೊಂದೇ ಅಲ್ಲ, ಆತನ ಮನೆಯಲ್ಲಾದ ಸಾವುಗಳು ಕೂಡ ಸಂಶಯಗಳನ್ನ ಹುಟ್ಟುಹಾಕ್ತವೆ. ರಾಬರ್ಟ್ ತಂದೆಗೆ ತಮ್ಮ ಮಗ ಪ್ರಿಯಾಂಕಾ ಗಾಂಧಿಯನ್ನ ಮದುವೆಯಾಗೋದು ಮೊದಲಿನಿಂದಲೂ ಇಷ್ಟ ಇರಲಿಲ್ಲ. ನಂತರ ಕೂಡ ಆ ಮನಸ್ತಾಪ ಹಾಗೆಯೇ ಉಳಿದು ಆ ಮನೆಯೇ ಒಡೆದು ಹೋಯಿತು. ರಾಬರ್ಟ್ ಜೊತೆಗೆ ಆತನ ತಾಯಿ ಮೌರೀನ್ ವಾದ್ರಾ ಬಂದರೆ, ತಂದೆ ರಾಜಿಂದರ್ ವಾದ್ರಾ, ಸಹೋದರ ರಿಚರಡ್  ವದ್ರಾ, ಸಹೋದರಿ ಮಿಷೆಲ್ ಪ್ರತ್ಯೇಕವಾಗಿ ಉಳಿದರು. ಮಿಷೆಲ್ 2001ರ ಎಪ್ರೀಲ್ ನಲ್ಲಿ ರಸ್ತೆ ಅಪಘಾತವೊಂದರಲ್ಲಿ ಮರಣ ಹೊಂದಿದಳು. ನಂತರ ರಾಬರ್ಟ್, "ತನ್ನ ತಂದೆ ಮತ್ತು ತಮ್ಮ ತನ್ನ ಹೆಸರನ್ನ ದುರುಪಯೋಗಪಡಿಸಿಕೊಂಡು ಹಣ ಪಡೆಯುತ್ತಿದ್ದಾರೆ, ಅವರಿಗ್ಯಾರೂ ಹಣ ಕೊಡಬೇಡಿ" ಅಂತ ಪತ್ರಿಕೆಗಳಲ್ಲಿ ಜಾಹೀರಾತು ಕೊಟ್ಟ. ಅದಕ್ಕೆ ಉತ್ತರವಾಗಿ ಅವನು ನನ್ನ ಮಗನೇ ಅಲ್ಲ ಅಂತ ರಾಜಿಂದರ್ ವದ್ರಾ ಪತ್ರಿಕಾ ಹೇಳಿಕೆ ನೀಡಿದರು. ಇದಾದ ಮೇಲೆ ರಾಬರ್ಟ್ ಸಹೋದರ ರಿಚರಡ್ ಸಪ್ಟೆಂಬರ್ 2003ರಲ್ಲಿ ಮುರಾದಾಬಾದ್ ನ ವಸಂತ್ ವಿಹಾರ್ ಪ್ರದೇಶದ ತನ್ನ ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸತ್ತು ಹೋದ. ಪೊಲೀಸರು ಅದನ್ನ ಹಾರ್ಟ್ ಅಟ್ಯಾಕ್ ಅಂದರು. ಆನಂತರ ಕೂಡ ಸೋನಿಯಾ ಗಾಂಧಿ ಅಳಿಯ ತನ್ನ ತಂದೆಯ ಜೊತೆಗಿನ ಸಂಬಂಧ ಸುಧಾರಿಸಿಕೊಳ್ಳಲಿಲ್ಲ. 2009ರ ಎಪ್ರೀಲ್ 3 ನೇ ತಾರೀಖಿನ ದಿನ ರಾಜಿಂದರ್ ವಾದ್ರಾ ಶವ ದೆಹಲಿಯ  ಯೂಸೂಫ್ ಸರಾಯ್ ಪ್ರದೇಶದ ಸಿಟಿ ಇನ್ ಹೊಟೇಲ್ ನ ರೂಮೊಂದರಲ್ಲಿ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಸಿಕ್ಕಿತ್ತು. ರಾಬರ್ಟ್ ನ ತಂಗಿ, ತಮ್ಮ ಮತ್ತು ತಂದೆಯ ಈ ಅನುಮಾನಾಸ್ಪದ ಸಾವುಗಳ ಬಗ್ಗೆ ಯಾರೂ ಪ್ರಶ್ನೆ ಎತ್ತಲಿಲ್ಲ.

                                                            ಫಾರಿನ್ ಗೆ ಹೋದದ್ದೆಷ್ಟು ಸಲ..?

                                 ರಾಬರ್ಟ್ ವದ್ರಾ ಒಬ್ಬರೇ ಏನು, ಗಾಂಧಿ ಕುಟುಂಬದ ಸದಸ್ಯರ ಬಗ್ಗೆ ಪ್ರಶ್ನೆ ಕೇಳೋದೇ ತಪ್ಪು ಅನ್ನೋ ಹಾಗಾಗಿದೆ. ಇತೀಚೆಗೆ ರಾಜಸ್ಥಾನದ ಕೈಲಾಶ್ ಕನ್ವರ್ ಅನ್ನೋರು ರಾಷ್ಟ್ರೀಯ ಸಲಹಾ ಸಮಿತಿಯ ಅಧ್ಯಕ್ಷೆ ಸೋನಿಯಾ ಗಾಂಧಿ ಕಳೆದ ಎರಡು ವರ್ಷಗಳಲ್ಲಿ  ಯಾವಾಗ್ಯಾವಾಗ - ಯಾವ ಕಾರಣಕ್ಕೆ ವಿದೇಶಕ್ಕೆ ಹೋಗಿದಾರೆ ಅನ್ನೋ ಮಾಹಿತಿ ಕೇಳಿ ಮಾಹಿತಿ ಹಕ್ಕು ಕಾಯ್ದೆಯಡಿ ವಿದೇಶಾಂಗ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನ ವಿದೇಶಾಂಗ ಇಲಾಖೆ ಸಾಗಹಾಕಿದ್ದು ಸಂಸದೀಯ ವ್ಯವಹಾರಗಳ ಇಲಾಖೆಗೆ. ಅಲ್ಲಿನವರು ಆ ಅರ್ಜಿಯನ್ನ ಅಂಕಿಸಂಖ್ಯೆ ಮತ್ತು ಕಾರ್ಯಕ್ರಮ ಜಾರಿ ಇಲಾಖೆಗೆ ಕೊಟ್ಟು ಕೈ ತೊಳೆದುಕೊಂಡರು. ಅಂಕಿಸಂಖ್ಯೆ ಇಲಾಖೆಯವರು ಅದನ್ನು ನೇರವಾಗಿ ರಾಷ್ಟ್ರೀಯ ಸಲಹಾ ಸಮಿತಿಗೇ ಕಳಿಸಿದರು. ರಾಷ್ಟ್ರೀಯ ಸಲಹಾ ಸಮಿತಿಯವರು ಆ ಆರ್.ಟಿ.ಐ ಅರ್ಜಿಯನ್ನು ಕಳಿಸಿದ್ದು ಪ್ರಧಾನ ಮಂತ್ರಿಗಳ ಕಾರ್ಯಾಲಯಕ್ಕೆ. ಕೊನೆಗೆ ಕೈಲಾಶ್ ಕನ್ವರ್ ಗೆ ಪ್ರಧಾನಿ ಕಾರ್ಯಾಲಯದಿಂದ ಬಂದ ಒಂದು ಸಾಲಿನ ಉತ್ತರ "ಸೋನಿಯಾ ಗಾಂಧಿಯವರ ವಿದೇಶ ಪ್ರವಾಸಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ" ಅನ್ನೋದು. ಕೇಂದ್ರ ಸರಕಾರದ ಲಗಾಮು ಹಿಡಿದು ಕುಳಿತ ಹೆಣ್ಣುಮಗಳು ಕದ್ದು - ಮುಚ್ಚಿ ಫಾರಿನ್ ಟೂರ್ ಗಳನ್ನ ಮಾಡ್ತಿರೋದ್ಯಾಕೆ ಅನ್ನೋದು ಅರ್ಥ ಆಗ್ತಿಲ್ಲ.
                                 ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶದ ಅತ್ಯಂತ ಪ್ರಭಾವಶಾಲಿ ಕುಟುಂಬದ ಮನೆ ಅಳಿಯ ವ್ಯವಹಾರಗಳ ಬಗ್ಗೆ ತಿಳಿದುಕೊಳ್ಳಬೇಕಾದ ಅಧಿಕಾರ ಜನರಿಗೆ ಇದೆ. ಇತ್ತೀಚೆಗೆ "ನಿಮ್ಮೆಲ್ಲಾ ವ್ಯವಹಾರಗಳನ್ನ ನಾವು ಗಮನಿಸುತ್ತಿದ್ದೇವೆ" ಅಂತ ಇನ್ ಕಮ್ ಟ್ಯಾಕ್ಸ್ ಡಿಪಾರ್ಟ್ಮೆಂಟು ಮಾಧ್ಯಮಗಳಲ್ಲಿ ಒಂದು ಜಾಹೀರಾತು ಕೊಟ್ಟಿತ್ತು. ನಮ್ಮದು ಬೇಕಿದ್ರೆ ಗಮನಿಸಿಕೊಂಡು ಏನಾದ್ರೂ ಮಾಡಿ, ರಾಬರ್ಟ್ ವದ್ರಾನ ವ್ಯವಹಾರಗಳನ್ನ ಗಮನಿಸೋದು ಯಾವಾಗ ಅನ್ನೋದು ಈಗಿನ ಪ್ರಶ್ನೆ.

Thursday, July 28, 2011

ತಾವೇ ತೋಡಿಕೊಂಡ ಗುಂಡಿಯಲ್ಲಿ ಅಸಹಾಯಕ ಯಡಿಯೂರಪ್ಪ..!

                               "ನಿಮ್ಮ ಫೈಲ್ ನೋಡಿದೆ, ಸೈನ್ ಮಾಡಿಟ್ಟಿರ್ತೀನಿ, ತಗೊಂಡ್ಹೋಗಿ" ಅಂದರು. ನನಗೆ ಒಂದು ಕ್ಷಣ ಏನೂ ಅರ್ಥ ಆಗಲಿಲ್ಲ. "ಯಾವ್ ಫೈಲು ಸಾರ್" ಅಂದೆ. "ಅದೇ, ಕೆ.ಆರ್ ಮಾರ್ಕೆಟ್ ಶಿಫ್ಟ್ ಮಾಡೋದು, ಗುಡ್ ಪ್ರಾಜೆಕ್ಟ್, ಸೈನ್ ಮಾಡಿಟ್ಟಿರ್ತೀನಿ ತಗೊಂಡ್ಹೋಗಿ" ಮತ್ತೆ ಅದೇ ಮಾತು. ನನಗೆ ಮತ್ತೆ ಕನ್ ಫ್ಯೂಷನ್ನು.  ಏನೊಂದೂ ತಿಳಿಯದೇ ಅವರ ಮುಖಾನೇ ನೋಡಿದೆ. ಅಷ್ಟರಲ್ಲಿ ಪಕ್ಕದಲ್ಲಿ ನಿಂತಿದ್ದ ಆಫೀಸರ್ ಒಬ್ರು ಅವರ ಕಿವೀಲಿ ಅದೇನೋ ಹೇಳಿದರು. ಕಿವಿ ಗಮನಿಸಿದೆ, ಮಷಿನ್ ಇಲ್ಲ. ಅದಿಲ್ಲದಿದ್ದರೆ ಆ ವಯ್ಯನಿಗೆ ಕೇಳಿಸೋದಿಲ್ಲ, ಕೂಗಿ ಹೇಳಬೇಕು. ಕೂಗಿ ಹೇಳೋದಕ್ಕೆ ಆ ಅಧಿಕಾರಿಗೆ ಮಜುಗರ, ಎರಡು ಮಾರು ದೂರದಲ್ಲಿ ಕುಳಿತಿದ್ದ ನನಗೆ ಕೇಳುವಷ್ಟು ಗಟ್ಟಿಯಾಗಿ ಪಿಸುಗುಟ್ಟಿದರು. ಅದನ್ನ ಕೇಳಿಸಿಕೊಂಡ ಆತ, "ಓಹೋ ಮಾರುಕಟ್ಟೆ ಸಚಿವ ಶಿವರಾಜ್ ತಂಗಡಗಿ ನೀವಲ್ಲವಾ..?" ಅಂದುಬಿಟ್ಟ. "ಅಲ್ಲ ಸಾರ್ ನಾನು ನರೇಂದ್ರಸ್ವಾಮಿ ಅಂತ, ಮಳವಳ್ಳಿ ಎಂ.ಎಲ್.ಎ, ಸೋಷಿಯಲ್ ವೆಲ್ಫೇರ್ ಮಿನಿಸ್ಟ್ರು" ಅಂತ ಹೇಳಿದವನೇ ಫೈಲ್ ಎತ್ತುಕೊಂಡು ಎದ್ದುಬಂದುಬಿಟ್ಟೆ ಸಾರ್, ನಂಗೆ ತುಂಬ ಅವಮಾನ ಆಗಿತ್ತು ಅಂದವರೇ ಎದುರಿಗಿದ್ದ ಗ್ಲಾಸ್ ಕೈಗೆತ್ತಿಕೊಂಡು ಒಂದು ಗುಟುಕು ಕುಡಿದರು. ಅವರ ಕಣ್ಣಲ್ಲಿ ನೀರಿದ್ದದ್ದು ಸ್ಪಷ್ಟವಾಗಿ ಕಾಣಿಸಿತ್ತು.
ನರೇಂದ್ರ ಸ್ವಾಮಿ

                 ಹಾಗೆ ಬಿಡದಿ ಸಮೀಪದ ಈಗಲ್ಟನ್ ರೆಸಾರ್ಟ್ ಹಿತ್ತಲಲ್ಲಿ ಲಾನ್ ಮೇಲೆ ಹಾಕಲಾಗಿದ್ದ ಟೇಬಲ್ ಎದುರು ಕುಳಿತು ಮಾತಾಡ್ತಿದ್ದವರು ಸಮಾಜಕಲ್ಯಾಣ ಸಚಿವ ನರೇಂದ್ರಸ್ವಾಮಿ. ಅಷ್ಟೊತ್ತಿಗಾಗಲೇ ಅವರ ಮಂತ್ರಿಗಿರಿ ಹೊರಟುಹೋಗಿ ಶಾಸಕ ಸ್ಥಾನ ಕೂಡ ಅಪಾಯದಲ್ಲಿತ್ತು. ಬಂಡಾಯ ಎದ್ದು ಗೋವಾಕ್ಕೆ ಹೋಗಿದ್ದ ಹದಿನೆಂಟು ಜನರ ಪೈಕಿ ಅವರೂ ಒಬ್ಬರು. ಸರ್ಕಾರ ಕೆಡವಬೇಕು ಅನ್ನೋ ಹಟಕ್ಕೆ ಬಿದ್ದಿದ್ದ ಅವರನ್ನ ಎಚ್.ಡಿ ಕುಮಾರಸ್ವಾಮಿ ಕರಕೊಂಡು ಬಂದಿದ್ದರು. ಅವರದೊಂದು ಇಂಟರ್ವ್ಯೂ ಮಾಡಬೇಕು ಅಂತ ಹಮೀದ್ ಪಾಳ್ಯ ಮತ್ತು ನಾನು ಆವತ್ತು ಸಂಜೆ ಹೋಗಿದ್ವಿ. ಇಂಟರ್ವ್ಯೂ ಮುಗಿಸಿ ಸುಮ್ಮನೆ ಲೋಕಾಭಿರಾಮವಾಗಿ ಮಾತಾಡ್ತಾ ಕುಳಿತಿದ್ದಾಗ, "ನಿಮಗೇನ್ ಕಡಿಮೆ ಆಗಿತ್ತು ಸಾರ್, ಮೊದಲ ಸಲ ಎಂ.ಎಲ್.ಎ ಆದಾಗಲೇ ಕ್ಯಾಬಿನೆಟ್ ಮಂತ್ರಿಗಿರಿ ಸಿಕ್ಕಿತ್ತು, ಗೂಟದ ಕಾರು, ಎಸ್ಕಾರ್ಟ್ ಗೆ ಪೊಲೀಸರು, ಸರಕಾರಿ ಬಂಗಲೆ, ಇಷ್ಟೆಲ್ಲಾ ಇದ್ರೂ ಯಾಕೆ ಬಂಡಾಯ ಎದ್ರಿ..?" ಅಂತ ಕೇಳಿದಾಗ ಅದೊಂದು ಇನ್ಸಿಡೆಂಟ್ ಹೇಳಿದರು ನರೇಂದ್ರಸ್ವಾಮಿ. ಸಂಪುಟ ರಚಿಸಿ ಒಂದೂವರೆ ವರ್ಷವಾಗಿದ್ದರೂ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮಾರುಕಟ್ಟೆ ಸಚಿವ ಶಿವರಾಜ್ ತಂಗಡಗಿ ಯಾರು - ಸಮಾಜ ಕಲ್ಯಾಣ ಸಚಿವ ನರೇಂದ್ರಸ್ವಾಮಿ ಯಾರು ಅನ್ನೋ ಕನ್ಫ್ಯೂಷನ್ನಿತ್ತು.
ಶಿವರಾಜ್ ತಂಗಡಗ

                of course, ಇದೊಂದೇ ಕಾರಣಕ್ಕೆ ಬಂಡಾಯವಾಗಿರಲಿಲ್ಲ. ಆವತ್ತು ಮೂರು ತಾಸು ಮಾತಾಡ್ತಾ ಕುಳಿತಿದ್ದ ನರೇಂದ್ರಸ್ವಾಮಿ ತುಂಬ ವಿಷಯ ಹೇಳಿದರು. ಕ್ಷೇತ್ರದ ಸಣ್ಣಪುಟ್ಟ ಕೆಲಸ ಮಾಡಿಸಿಕೊಳ್ಳೋದಕ್ಕೂ ಆಗ್ತಿದ್ದ ಕಷ್ಟಗಳು, ಸಿ.ಎಂ ಆಪ್ತ ಸಚಿವರ ಕಿರಿಕಿರಿಗಳು, ಟೆಂಡರ್ ವಿಷಯಗಳಲ್ಲಿ ಯಡಿಯೂರಪ್ಪನವರ ಕುಟುಂಬದವರ ಹಸ್ತಕ್ಷೇಪಗಳು, ಸಂಪುಟ ಸಭೆ ಕರೆದರೆ ಅಲ್ಲಿ ಪಕ್ಷೇತರರನ್ನ ನಡೆಸಿಕೊಳ್ತಿದ್ದ ರೀತಿ, ಆವಾಗಾವಾಗ ಆಗ್ತಿದ್ದ ಅವಮಾನಗಳು, ಹೀಗೆ. ಒಂದು ಸಲ ಅದ್ಯಾಕೋ ಅಟಲ್ ಬಿಹಾರಿ ವಾಜಪೇಯಿ ನೆನಪಾದರು. ಹದಿಮೂರು ಪಕ್ಷ ಕಟ್ಟಿಕೊಂಡು ಹೆಣಗಿದ ಆ ತಾತಯ್ಯ ಅದೆಷ್ಟು ಯಶಸ್ವಿಯಾಗಿ ಸರಕಾರ ತೂಗಿಸಿಕೊಂಡು ಹೋದರಲ್ಲ, ಆರು ಜನ ಪಕ್ಷೇತರ ಶಾಸಕರನ್ನ ಸಂಭಾಳಿಸೋದಕ್ಕಾಗಲಿಲ್ಲವಾ ಯಡಿಯೂರಪ್ಪನಿಗೆ ಅಂತ.
                Human resource management ಅನ್ನೋದು ಬರಿ corporate sectorಗೆ ಮಾತ್ರ ಅಂದವರಾರು..? ಅದು ರಾಜಕೀಯಕ್ಕೂ apply ಆಗತ್ತೆ, ಆಗಬೇಕು. ಅದೊಂದು ಯಡಿಯೂರಪ್ಪನವರಿಗೆ ಸರಿಯಾಗಿ ಬಂದುಬಿಟ್ಟಿದ್ದರೆ, ಮೂರು ವರ್ಷಗಳಲ್ಲಿ ಬಂದ ಮುಕ್ಕಾಲು ಭಾಗ ಸಮಸ್ಯೆಗಳು ಬರ್ತಾನೇ ಇರಲಿಲ್ಲ. (ರಣ ಹಸಿವು ಮತ್ತು ಮಕ್ಕಳ ಬಗೆಗಿನ ಧೃತರಾಷ್ಟ್ರ ಪ್ರೇಮ ಇರದೇ ಹೋಗಿದ್ದರೆ ಉಳಿದ ಕಾಲು ಭಾಗ ಸಮಸ್ಯೆಗಳೂ ಇರ್ತಿರಲಿಲ್ಲ..!) ಇದೆಲ್ಲ ನಮಗೆ - ನಿಮಗೆ ಸಿಲ್ಲಿ ವಿಷಯ ಅನ್ನಿಸಬಹುದು. ಆದ್ರೆ, ಒಬ್ಬ ಶಾಸಕನಿಗೆ, ಅದರಲ್ಲೂ ಕ್ಯಾಬಿನೆಟ್ ದರ್ಜೆ ಮಂತ್ರಿಗಲ್ಲ. ಅವರು ತಮ್ಮ ತಮ್ಮ ಕ್ಷೇತ್ರಗಳಿಗೆ ಹೋದರೆ ಮತದಾರರು ಹೆಗಲ ಮೇಲೆ ಹೊತ್ತುಕೊಂಡು ಕುಣೀತಾರೆ. ಅದೇ ಬೆಂಗಳೂರಿಗೆ ಬಂದು ಯಡಿಯೂರಪ್ಪನವರ ಎದುರಿಗೆ ನಿಂತರೆ "ನಿಮ್ಮ ಹೆಸರೇನು..?" ಅಂದುಬಿಡೋರು.
                ರಾಜಕಾರಣಿ ಬೇಸಿಕಲಿ ಒಬ್ಬ egoistic ಮನುಷ್ಯ. ಹೆಜ್ಜೆ - ಹೆಜ್ಜೆಗೂ, ಘಳಿಗೆ ಘಳಿಗೆಗೂ ಆತನ ego satisfy ಆಗ್ತಿರಬೇಕು. ಆತ ಎಲೆಕ್ಷನ್ ಗೆಲ್ಲೋದು ಕೂಡ ಆ ego satisfactionನ ಒಂದು ಭಾಗವೇ. ತಾನು ಆಡಳಿತ ಪಕ್ಷದವನು, ತನ್ನೊಬ್ಬನ ಬೆಂಬಲ ಕೂಡ ಈ ಸರಕಾರ ಭದ್ರವಾಗಿರೋದಕ್ಕೆ ಕಾರಣ ಅನ್ನೋ ಯೋಚನೆ ಕೂಡ ಅವನ ego ತಣ್ಣಗಾಗಿಸತ್ತೆ. ಅದು ಯಡಿಯೂರಪ್ಪನವರಿಗೆ ಗೊತ್ತೇ ಇರಲಿಲ್ಲ ಅಂತ ಅನ್ನಿಸೋದು ಭಿನ್ನಮತೀಯ ಶಾಸಕರನ್ನ ಮಾತಾಡಿಸಿದಾಗ. "ಸಹಿ ಮಾಡಿ ಅಂತ ಯಾವ್ದೋ ಫೈಲ್ ತಗೊಂಡು ಹೋದ್ರೆ ಪ್ಲಾಸ್ಟಿಕ್ ಚೇರ್ ಎತ್ತಿ ಹೊಡೆಯೋದಕ್ಕೆ ಬಂದುಬಿಟ್ರು" ಅಂತ ಇನ್ನೊಬ್ಬ ಶಾಸಕರು ಹೇಳಿದರು. "ಮನಸಿಗೆ ತುಂಬ ಬೇಜಾರಾಗಿ ಎಸ್ಕಾರ್ಟ್ ಜೀಪು, ಬೆಂಗಾವಲಿನ ಪೊಲೀಸರನ್ನ ಬಿಟ್ಟು ಒಬ್ಬನೇ ಹೋಗಿ ನನ್ನ ಮನೆದೇವರ ದೇವಸ್ಥಾನದ ಗರ್ಭ ಗುಡಿಯಲ್ಲಿ ಬಾಗಿಲು ಹಾಕಿಕೊಂಡು ಕುಂತು ಸಾಕು ಸಾಕಾಗೋ ತನಕ ಅತ್ತುಬಿಟ್ಟೆ" ಅಂತ ಹೇಳಿದವರು ಒಬ್ಬ ಸಚಿವ. ಅಂಥವರೆಲ್ಲ ಸೇರಿಕೊಂಡು ಯಡಿಯೂರಪ್ಪನಿಗೆ ಮರೆಯಲಾಗದ ಪಾಠ ಕಲಿಸ್ತೀವಿ ಅಂತ ಹೊರಟಾಗ ನಡೆದದ್ದೇ ಗೋವಾ ಬಂಡಾಯ.
                ಪರಿಸ್ಥಿತಿ ಎಲ್ಲಿಗೆ ಬಂದಿತ್ತೆಂದರೆ, ವಿರೋಧ ಪಕ್ಷದಲ್ಲಿ ಒತ್ತಟ್ಟಿಗಿರಲಿ, ಆಡಳಿತ ಪಕ್ಷದಲ್ಲೇ ಯಡಿಯೂರಪ್ಪನವರ ಸಿಟ್ಟಿನ ಬಗ್ಗೆ ಕಥೆಗಳು ಹುಟ್ಟಿಕೊಂಡುಬಿಟ್ಟಿದ್ದವು. ಯಾರೇ ಹೋದರೂ "ಸಾಹೇಬರ ಮೂಡ್ ಹೆಂಗಿದೆ" ಅಂತ ಮೊದಲೇ ಕೇಳೋರು. ಅದೊಂದು ಸಲ "ಇನ್ನು ಮುಂದೆ ನಾನು ಬದಲಾಗ್ತೀನಿ" ಅಂತ ಅಷ್ಟೂ ಚಾನೆಲ್ಲುಗಳ ಎದುರು ಮಾತಾಡಿದರಲ್ಲ, ಆವತ್ತೇ ಮನೆಗೆ ಹೋಗಿ ಗನ್ ಮ್ಯಾನ್ ಒಬ್ಬನ ಮೇಲೆ ಪೇಪರ್ ವೇಟ್ ಎಸೆದರಂತೆ. ಇದು ಯಡಿಯೂರಪ್ಪನವರ ಪತನಕ್ಕೆ ಕಾರಣವಾದ ಹಲವು ವಿಷಯಗಳಲ್ಲಿ ಒಂದು ಮಾತ್ರ. ಹೇಳ್ತಾ ಹೋದ್ರೆ ದೊಡ್ಡ ಪಟ್ಟಿ ಆಗತ್ತೆ. ಅದೊಂದು ಸಲ, ಇದೆಲ್ಲವನ್ನೂ ಸೇರಿಸಿ ಒಂದು ಪುಸ್ತಕ ಯಾಕೆ ಮಾಡಬಾರದು ಅಂತ ಯೋಚಿಸಿದ್ದೂ ಆಗಿತ್ತು. ಆದರೆ, ಆ ಯೋಚನೆಗೆ ದಿನ ತುಂಬೋ ಮೊದಲೇ ಗರ್ಭಪಾತವಾಗಿದ್ದು ಬೇರೆ ಮಾತು.
               ಇವತ್ತು, ಅವರ ರಾಜೀನಾಮೆ ಪ್ರಹಸನದ ಪ್ರತಿ ಬೆಳವಣಿಗೆಯನ್ನೂ ನೋಡ್ತಿದ್ದವನಿಗೆ ಇದೆಲ್ಲ ನೆನಪಾಯಿತು. ದಕ್ಷಿಣ ಭಾರತದಲ್ಲಿ ಮೊಟ್ಟಮೊದಲ ಸಲ ಬಿ.ಜೆ.ಪಿಯನ್ನ ಅಧಿಕಾರಕ್ಕೆ ತಂದ ಯಡಿಯೂರಪ್ಪನವರು ಹೇಗೆ ಮೂರು ವರ್ಷಗಳ ಕಾಲ ತಮ್ಮ ಗುಂಡಿಯನ್ನ ತಾವೇ ತೋಡಿಕೊಂಡರಲ್ಲ ಅಂತ ಯೋಚಿಸಿದರೆ ಆಶ್ಚರ್ಯ ಆಗತ್ತೆ. ಇವತ್ತು ಆ ಗುಂಡಿಯಲ್ಲಿ ಅವರೇ ಬಿದ್ದಿದಾರೆ. ಉಳಿದವರು ಮೇಲಿನಿಂದ ಮಣ್ಣು ಸುರಿಯದಿದ್ದರೆ ಅದು ಯಡಿಯೂರಪ್ಪನವರ ಪೂರ್ವ ಜನ್ಮದ ಪೂಜಾ ಫಲ

Tuesday, July 26, 2011

ಯುದ್ಧ ಅನ್ನೋ ಶಬ್ದ ಕಿವಿಗೆ ಬಿದ್ದರೆ ಸಾಕು...



                     ಹನ್ನೆರಡು ವರ್ಷಗಳ ಹಿಂದಿನ ಮಾತು... ಆಗಷ್ಟೇ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದು ಮುಗಿಸಿದ್ದೆ. ಕಾರ್ಗಿಲ್  ಯುದ್ಧ ಉತ್ತುಂಗದಲ್ಲಿದ್ದ ದಿನಗಳವು. ಪೇಪರ್ ತೆಗೆದರೂ ಅದೇ ಸುದ್ದಿ - ಟಿ.ವಿ ಹಾಕಿದರೂ ಅದೇ ಸುದ್ದಿ. ಮನೆಯಲ್ಲಿ ದೂರದರ್ಶನ್ ಮಾತ್ರ ಬರ್ತಿತ್ತು. ಆವತ್ತೊಂದು ಮಧ್ಯಾಹ್ನದ ಹೊತ್ತು ಊಟ ಮಾಡ್ತಾ ಟಿ.ವಿ ಹಾಕಿದರೆ, ಒಬ್ಬ ಮಧ್ಯವಯಸ್ಕ ಮಹಿಳೆ ಸ್ಪಷ್ಟ ಹಿಂದಿಯಲ್ಲಿ ಮಾತಾಡ್ತಾ, ತಮ್ಮ ಮಗ ಸೌರಭ್ ಐದನೇ ಕ್ಲಾಸಿನಲ್ಲಿ ಓದ್ತಿದ್ದಾಗ ನಡೆದ ಘಟನೆಯೊಂದನ್ನ ನೆನಪು ಮಾಡಿಕೊಳ್ತಿದ್ರು.
                    "ಒಂದು ಸಲ ನಾನು ಟಿ.ವಿ ನೋಡ್ತಾ ಕುಳಿತಿದ್ದೆ. ಅದರಲ್ಲಿ ಕಪಿಲ್ ದೇವ್ ತಾಯಿಯ ಇಂಟರ್ವ್ಯೂ ಬರ್ತಿತ್ತು. ಸೌರಭ್ ಪಕ್ಕದಲ್ಲೇ ಆಟ ಆಡ್ತಾ ಕುಂತಿದ್ದ. ನಾನು ಅವನನ್ನ ಕರೆದು, ನೋಡು ಸೌರಭ್ ಕಪಿಲ್ ದೇವ್ ಎಷ್ಟು ದೊಡ್ಡ ಮನುಷ್ಯ, ಅವನಿಂದಾಗಿ ಅವನ ತಾಯಿ ಕೂಡ ಟಿ.ವೀಲಿ ಬರ್ತಿದಾರೆ ಅಂದೆ. ಅದಕ್ಕೆ ಸೌರಭ್, ನೋಡ್ತಿರು ಅಮ್ಮಾ ನಾನು ಮುಂದೆ ಎಷ್ಟು ದೊಡ್ಡ ಮನುಷ್ಯ ಆಗ್ತೀನಿ ಅಂದ್ರೆ, ನನ್ನಿಂದಾಗಿ ನೀನು ಕೂಡ ಟಿ.ವೀಲಿ ಬರ್ತಿಯಾ, ಅಂದುಬಿಟ್ಟ. ಇವತ್ತು ಅವನಿಂದಾಗಿ ನಾನು ಟಿ.ವೀಲಿ ಬರ್ತಿದೀನಿ, ನೋಡೋದಕ್ಕೆ ಅವನೇ ಇಲ್ಲ" ಅನ್ನುವಷ್ಟರಲ್ಲಿ ಅವರಿಗೆ ದುಃಖ ತಡೆದುಕೊಳ್ಳೋದಕ್ಕಾಗಲಿಲ್ಲ. ಮಾತು ಗದ್ಗದ.
                     ಆಕೆ ಸೌರಭ್ ಕಾಲಿಯಾ ತಾಯಿ. ಸೋಲು ಅನ್ನೋ ಶಬ್ದ ಅವರ ಮಗನಿಗೆ ಹತ್ತಿರಕ್ಕೂ ಸುಳಿದಿರಲಿಲ್ಲ. ಬಿ.ಎಸ್.ಸಿ ಮುಗಿಸಿದವನು ಮಿಲಿಟರಿಗೆ ಸೇರಿಕೊಳ್ತೀನಿ ಅಂತ ಹೋದ. ಡೆಹರಾಡೂನ್ ಇಂಡಿಯನ್ ಮಿಲಿಟರಿ ಅಕ್ಯಾಡಮಿ ಕೈ ಬೀಸಿ ಕರೆಯಿತು. ಒಂದು ವರ್ಷ ತರಬೇತಿ ಮುಗಿಸಿದವನು ಜಾಟ್ ರೆಜಿಮೆಂಟಿನಲ್ಲಿ ಕ್ಯಾಪ್ಟನ್ ಆದ. ಮೊದಲನೇ ಪೋಸ್ಟಿಂಗೇ ಕಾರ್ಗಿಲ್ ಸೆಕ್ಟರ್ನ ಕಸ್ಕರ್ ಗೆ. ಜನವರಿ ತಿಂಗಳ ಎರಡನೇ ವಾರದಲ್ಲಿ ಸೌರಭ್ ಡ್ಯೂಟಿಗೆ ರಿಪೋರ್ಟ್ ಮಾಡಿಕೊಂಡಾಗ ಅಲ್ಲಿ ಕಟಿಕಟಿ ಚಳಿ. ಬೆಟ್ಟದ ಮೇಲೆ ಮಂಜು ಬೀಳೋದಕ್ಕೆ ಶುರುವಾದ ನಂತರ ಅಲ್ಲಿನ ಬಂಕರುಗಳಲ್ಲಿ ಗಡಿ ಕಾಯೋ ಸೈನಿಕರು ಕೆಳಗಿಳಿದು ಬಂದುಬಿಡ್ತಾರೆ. ಮತ್ತೆ ಬರ್ಫು ಕರಗಿದ ನಂತರ ಮೇಲೆ ಹತ್ತಿ ಹೋಗಿ ಬಂಕರ್ ಸೇರಿಕೊಂಡು ಗಡಿಯ ದಿಕ್ಕಿಗೆ ಬಂದೂಕು ನೆಟ್ಟುಕೊಂಡು ನಿಲ್ತಾರೆ. ಅದು ವರ್ಷಗಳಿಂದ ನಡೆದುಕೊಂಡು ಬಂದಿದ್ದ ಪದ್ಧತಿ. ಆ ಸಲ ಮೇ ಮಧ್ಯದಲ್ಲಿ ಮಂಜೆಲ್ಲ ಕರಗಿದ ಮೇಲೆ, ನಮ್ಮ ಬಂಕರುಗಳು ಸುಸ್ಥಿತಿಯಲ್ಲಿವೆಯಾ ಅಂತ ನೋಡಿಕೊಂಡು ಬರೋದಕ್ಕೆ ಒಂದು ಪೆಟ್ರೋಲಿಂಗ್ ಟೀಮ್ ಕಳಿಸಿದಾಗ ಅದರ ನೇತೃತ್ವ ವಹಿಸಿದವನು ಸೌರಭ್. ಅವನನ್ನೂ ಸೇರಿಸಿ ಆರು ಜನ ಇದ್ದರು.

                    ಬೆಟ್ಟ ಹತ್ತಿ ಹೋದ ಸೌರಭ್, ಇಲ್ಲಿ ಶತೃ ನೂರಾರು ಸಂಖ್ಯೆಯಲ್ಲಿ ಒಳಗೆ ನುಸುಳಿದಾನೆ ಅಂತ ವೈರ್ ಲೆಸ್ ಮೆಸೇಜ್ ಕೊಟ್ಟ. ತಾನು ಐದೇ ಐದು ಜನ ಸಿಪಾಯಿಗಳ ಸಮೇತ ಭಜರಂಗ್ ಪೋಸ್ಟ್ ಅಂತ ಕರೆಸಿಕೊಳ್ಳೋ ಬಂಕರಿನಲ್ಲಿ ಕಾಲೂರಿಕೊಂಡು ನಿಂತು ಶತೃವನ್ನ ಎದುರಿಸ್ತೀನಿ ಅಂತ ತಯಾರಾದ. ಅಷ್ಟೊತ್ತಿಗಾಗಲೇ ಆತನ ವೈರ್ ಲೆಸ್ ಸೆಟ್ ಕೆಟ್ಟು ಹೋಗಿ ಹೆಡ್ಕ್ವಾರ್ಟರ್ ಜೊತೆ ಸಂಪರ್ಕ ಇಲ್ಲದಂತಾಗಿತ್ತು. ಪರಿಸ್ಥಿತಿ ಹೇಗಿದೆ ಅಂತ ನೋಡಿಕೊಂಡು ಬರೋದಕ್ಕೆ ಇನ್ನೊಂದು ತಂಡ ಕಳೆಸಿದರೆ ಅವರ ಮೇಲೆ ಗುಂಡಿನ ಸುರಿಮಳೆ. ನೋಡ ನೋಡ್ತಿದ್ದಂತೆಯೇ ಕಾರ್ಗಿಲ್ ಯುದ್ಧಾನೇ ಶುರುವಾಗಿ ಹೋಗಿತ್ತು. ಭರ್ತಿ ಇಪ್ಪತ್ತೆರಡು ದಿನಗಳ ನಂತರ ಸೌರಭ್ ಕಾಲಿಯಾ ಮತ್ತು ಆತನ ಐವರು ಸಿಪಾಯಿಗಳ ಶವಗಳನ್ನ ಭಾರತಕ್ಕೆ ಕೊಟ್ಟಿತು ದುಷ್ಟ ಪಾಕಿಸ್ತಾನ. ಶವಗಳು ಗುರುತು ಹಿಡಿಯೋ ಸ್ಥಿತಿಯಲ್ಲಿರಲಿಲ್ಲ. ಅವರನ್ನ ಜೀವಂತವಾಗಿ ಸೆರೆಹಿಡಿದು ಚಿತ್ರಹಿಂಸೆ ಕೊಟ್ಟು ಸಾಯಿಸಲಾಗಿದೆ ಅಂತ postmortem report ಹೇಳಿತ್ತು. ಆ ಸೌರಭ್ ಕಾಲಿಯಾನ ತಾಯಿ ಆವತ್ತು "ನನ್ನ ಮಗ ನನಗೆ ಮಾತು ಕೊಟ್ಟಿದ್ದ, ತನ್ನಿಂದಾಗಿ ನಾನು ಟಿ.ವೀಲಿ ಬರ್ತೀನಿ ಅಂತ" ಅನ್ನೋ ಮಾತುಗಳನ್ನಾಡ್ತಿದ್ರೆ ಯಾಕೋ ಕೈಗೆತ್ತಿಕೊಂಡಿದ್ದ ತುತ್ತು ಹಂಗೇ ತಟ್ಟೆಯೊಳಕ್ಕೆ ಬಿದ್ದುಬಿಟ್ಟಿತ್ತು. ಅಷ್ಟಕ್ಕೇ ಊಟ ಬಿಟ್ಟು ಎದ್ದುಬಿಟ್ಟೆ.
                    ಧಾರವಾಡ ತಾಲೂಕಿನಲ್ಲಿ ಕೊಟಬಾಗಿ ಅಂತ ಒಂದು ಸಣ್ಣ ಹಳ್ಳಿ ಇದೆ, ಅಲ್ಲಿ ಕಲ್ಲಪ್ಪ ಪಾಗಾದ್ ಅನ್ನೋ ನನ್ನ ಪರಿಚಯದ ಸಿಪಾಯಿಯೊಬ್ಬ ಇದಾನೆ. ಆವತ್ತು ಗಡಿಯಲ್ಲಿ ಸೌರಭ್ ಮತ್ತು ಇತರ ಐವರ ಶವಗಳನ್ನ ಪಡೆದ ತಂಡದಲ್ಲಿ ಆತ ಕೂಡ ಇದ್ದ. ಯುದ್ಧ ಮುಗಿದು ಐದಾರು ತಿಂಗಳ ನಂತರ ಕಲ್ಲಪ್ಪ ರಜೆಗೆ ಬಂದಿದ್ದ. ಆವತ್ತೊಂದು ರಾತ್ರಿ ತೋಟದ ಮನೆಯ ಕಟ್ಟೆ ಮೇಲೆ ಮಾತಾಡ್ತಾ ಕುಳಿತಿದ್ದಾಗ ಆತ ಹೇಳಿದ್ದ. " ಆರೂ ಜನರ ಕಿವಿ ಕತ್ತರಿಸಿದ್ರು, ಇಕ್ಕಳ ಹಾಕಿ ಅಷ್ಟೂ ಹಲ್ಲು - ಉಗುರು ಕಿತ್ತಿದ್ರು, ಕಣ್ಣ ಗುಡ್ಡಿ ಮೀಟಿ ತೆಗೆದುಬಿಟ್ಟಿದ್ರು. ಅದರಲ್ಲೂ ಸೌರಭ್ ಗೆ, ಆತನ ಮರ್ಮಾಂಗ  ಕತ್ತರಿಸಿ ಅವನದೇ ಬಾಯಲ್ಲಿಟ್ಟು ಕಳಿಸಿದ್ದ ದುಶ್ಮನ್. ಹೆಣ ತಗೊಳ್ಳೋದಕ್ ಹೋದ ನಮ್ಮನ್ನ ನೋಡಿ ಅಪಹಾಸ್ಯ ಮಾಡಿ ನಕ್ಕರು. ಅವಡುಗಚ್ಚಿಕೊಂಡು ತಗೊಂಡು ಬಂದುಬಿಟ್ವಿ. ಆ ಸುದ್ದಿ ಸೈನ್ಯದ ತುಂಬ ಅದ್ಯಾವ ಪರಿ ಹರಡಿತೆಂದರೆ, ಹುಚ್ಚೆದ್ದು ನುಗ್ಗಿದ್ವಿ, ರಣಕೇಕೆ ಹಾಕಿಕೊಂಡು ಬೆಟ್ಟಹತ್ತಿ ಗುಂಡು ಹಾರಿಸಿದ್ವಿ, ಬಂಕರ್ ತಲುಪೋ ಹೊತ್ತಿಗೆ ಅಳಿದುಳಿದ ಶತೃಗಳು ಪಾಕಿಸ್ತಾನದ ದಿಕ್ಕಿಗೆ ಓಡಿ ಹೋಗಿರ್ತಿದ್ರು, ಉಳಿದವರ ಶವಗಳು ಅಲ್ಲೇ ಬಿದ್ದಿರ್ತಿದ್ವು, ಅವುಗಳ ನಡುವೆ ಗಾಯಗೊಂಡವರು ನರಳ್ತಾ ಮಲಗಿರ್ತಿದ್ರಲ್ಲ, ಅವರು ನಾವು ಹೋದ ಕೂಡಲೇ ಪ್ರಾಣ ಭಿಕ್ಷೆ ಬೇಡೋರು. ಮನೇಲಿ ವಯಸ್ಸಾದ ತಂದೆ - ತಾಯಿ ಇದಾರೆ, ಸಣ್ಣ - ಸಣ್ಣ ಮಕ್ಕಳಿದಾರೆ, ಹೆಂಡತಿ ಗರ್ಭಿಣಿ ಅನ್ನೋರು. ಅವರನ್ನ ನೋಡಿದ ಕೂಡಲೇ ಸೌರಭ್ ಕಾಲಿಯಾ ಮತ್ತು ಅವನ ಜೊತೆಗಿದ್ದ ಐದು ಜನ ಸೈನಿಕರು ನೆನಪಾಗಿಬಿಡ್ತಿದ್ರು. ಅವರಿಗಿರಲಿಲ್ಲವಾ ತಂದೆ - ತಾಯಿ, ಹೆಂಡತಿ ಮಕ್ಕಳು..? ಸಿಟ್ಟು ತಡೆಯೋದಕ್ಕಾಗ್ತಿರಲಿಲ್ಲ..." ಅಂತ ಇನ್ನೂ ಏನೇನೋ ಹೇಳಿದ್ದ ಕಲ್ಲಪ್ಪ. ಆವತ್ತು ನಾನು ಮೊಟ್ಟಮೊದಲ ಸಲ ಅವನ ಕಣ್ಣಿನಲ್ಲಿ ನೀರು ನೋಡಿದ್ದೆ. ಅನ ಕಣ್ಣು ಹಿಂದ್ಯಾವತ್ತೂ ಅಷ್ಟು ಕೆಂಪಗಾಗಿರಲಿಲ್ಲ...
                    ಹನ್ನೆರಡು ವರ್ಷಗಳಾಗಿ ಹೋದವು. ಇವತ್ತಿಗೂ ಕಾರ್ಗಿಲ್ ಅನ್ನೋ ಶಬ್ದ ಕಿವಿಗೆ ಬಿದ್ದರೆ ಸಾಕು, ಸೌರಭ್ ಕಾಲಿಯಾನ ತಾಯಿಯ ಮುಖ ಕಣ್ಣ ಮುಂದೆ ಬಂದಂತಾಗತ್ತೆ. ಯುದ್ಧ ಅನ್ನೋ ಶಬ್ದ ಕೇಳಿದರೆ ಸಾಕು, ನಿಗಿ ಕೆಂಡದಷ್ಟು ಕೆಂಪಗೆ ಕಣ್ಣು ಮಾಡಿಕೊಂಡು ಬಂದೂಕು ಹಿಡಿದ ಕಲ್ಲಪ್ಪ ಪಾಗಾದನ ಎದುರಿಗೆ ಪ್ರಾಣ ಭಿಕ್ಷೆ ಬೇಡ್ತಿರೋ ಪಾಕಿ ಸೈನಿಕ ನೆನಪಾಗ್ತಾನೆ. ಯಾಕೋ ಅವೆರಡು ಮುಖ ಮರೆಯೋದಕ್ಕೆ ಆಗ್ತಾನೇ ಇಲ್ಲ.

Tuesday, July 19, 2011

ಒಂದು ಬಾಂಬ್ ಬ್ಲಾಸ್ಟ್ ಸುತ್ತ ಎಷ್ಟೊಂದು ಅವಿವೇಕಗಳು..?

                         ಎಷ್ಟು ನೆಮ್ಮದಿಯಾಗಿತ್ತು ಮುಂಬೈ. ಹಿಂದ್ಯಾವತ್ತೂ ಇಲ್ಲಿ ಟೆರರಿಸ್ಟ್ ಅಟ್ಯಾಕೇ ಆಗಿಲ್ಲವೇನೋ - ಬಾಂಬುಗಳೇ ಸಿಡಿದಿಲ್ಲವೇನೋ ಅನ್ನೋ ಹಾಗೆ ಎಲ್ಲವನ್ನೂ ಮರೆತು ಮತ್ತೆ ಜನ normal lifeಗೆ ಯಾವತ್ತೋ ಮರಳಿದ್ದರು. ಅದೇ ಧಡಂ ಧಡಕಿಯ ಬದುಕು, ಅಪಾರ್ಟಮೆಂಟ್ ಜೀವನ, ಲೋಕಲ್ ಟ್ರೇನು, ಸಂಜೆಯ ಚಾಟ್ ಮಸಾಲ, ವೀಕೆಂಡ್ ಪಿಕ್ನಿಕ್ಕು ಅಂದುಕೊಂಡು ತಮ್ಮ ತಮ್ಮ ಬದುಕುಗಳನ್ನ ಹಳಿಗೆ ತಂದುಕೊಂಡಿದ್ದರು. ಈಗ ನೋಡಿದರೆ, ಮತ್ತೆ ಧಡಂ - ಧುಡುಂ...

                        ಇವತ್ತು ಬೇಕಿದ್ರೆ ಮುಂಬೈಗೆ ಹೋಗಿ ನೋಡಿ, ಇಲ್ಲಿ ಬಾಂಬು ಸಿಡಿದದ್ದೇ ಸುಳ್ಳೇನೋ ಅನ್ನಿಸುವಷ್ಟು ನೆಮ್ಮದಿಯಾಗಿ ಇರ್ತಾರೆ ಜನ. ಸಾಯೋರು ಸತ್ತರು. ಅವರ ಮನೆಗವರು ಮಣ್ಣು ಕೊಡ್ತಾರೆ. ಗಾಯಗೊಂಡು ಆಸ್ಪತ್ರೆ ಸೇರಿರೋರು ಗ್ಲುಕೋಸು ಏರಿಸಿಕೊಳ್ತಿದಾರೆ. ಅವರಿಗೆ ಅವರ ಮನೆ ಜನ ಇಡ್ಲಿ ಸಾಂಬಾರ್ ತಂದು ಕೊಡ್ತಾರೆ. ಸತ್ತವರಿಗೆ - ಸಾಯದೇ ಉಳಿದವರಿಗೆ ಸರ್ಕಾರ ಯೋಗ್ಯತೆಗನುಸಾರವಾಗಿ ಪರಿಹಾರ ಕೊಡತ್ತೆ. ಬ್ಲಾಸ್ಟ್ ಆದ ಜಾಗಕ್ಕೆ ಒಂದಷ್ಟು ಜನ ಮಂತ್ರಿ ಮಾಗಧರು - ಆಫೀಸರ್ಗಳು ಬಂದು ಹೋಗ್ತಾರೆ. ಟಿ.ವಿ ಚಾನೆಲ್ಲುಗಳವರು ಹೊಸಾ ಸುದ್ದಿ ಸಿಗೋ ತನಕ ಹೇಳಿದ್ದನ್ನೇ ಮತ್ತೆ ಮತ್ತೆ ಹೇಳ್ತಿರ್ತಾರೆ. ಆಗಿರೋ ಮೂರು ಬ್ಲಾಸ್ಟಿಗೆ ಮೂವತ್ತು angleನ ಸ್ಟೋರಿಗಳು. "ಕ್ಯಾ ಏ ಕಸಬ್ ಕೆ ಲಿಯೇ ಬರ್ತ್ ಡೇ ಗಿಫ್ಟ್ ಹೈ..? ಧಮಾಕೆ ಕೆ ಪೀಛೆ ಲಷ್ಕರೆ ತಯ್ಯಬಾ ಕಾ ಹಾಥ್, ಪೆಹಲೆ ಫೋನ್ ಕಿಯೆ ಥೆ ಆತಂಕವಾದಿ, ಸಿ.ಸಿ.ಟಿ.ವಿ ಮೆ ಆತಂಕವಾದಿಯೋಂಕಾ ಎಕ್ಸ್ಕ್ಲೂಸೀವ್ ದೃಶ್ಯ್... ಹೀಗೆ. ಕೈಯಲ್ಲಿ ರಿಮೋಟ್ ಹಿಡಿದು ಕುಂತ ಮುಂಬೈಕರ್ " ಸಾಲಾ ಏ ತೋ ರೋಜ್ ರೋಜ್ ಕಾ ನಾಟಕ್ ಹೈ " ಅಂತ ಚಾನಲ್ ಬದಲಿಸ್ತಾನೆ. ಮತ್ತೆ ಬೆಳಿಗ್ಗೆದ್ದು ಬುತ್ತಿ ಕಟಗೊಂಡು ಲೋಕಲ್ ಟ್ರೇನಿಗೆ ಓಡ್ತಾನೆ. ಈ ಊರಿನಲ್ಲಿ ಬಾಂಬ್ ಬ್ಲಾಸ್ಟ್ ಅನ್ನೋದು ಸತ್ತವರ - ಗಾಯಗೊಂಡವರ ಮನೆಗಳವರು, ಕೆಲವೇ ಕೆಲವು ಪೊಲೀಸರು ಮತ್ತು ನ್ಯೂಸ್ ಚಾನೆಲ್ಲುಳವರಿಗೆ ಮಾತ್ರ ಸಂಬಂಧಪಟ್ಟ ವಿಷಯ ಅಂತ ಉಳಿದವರು ನಿರ್ಧರಿಸಿರುವುದರಿಂದ, ಇಂಥ ಇನ್ನೂ ಹತ್ತು ಬ್ಲಾಸ್ಟುಗಳಾದರೂ ಪರಿಸ್ಥಿತಿ ಹೀಗೇ ಇರತ್ತೆ. and its a shame... ಇಂಥದ್ದೊಂದು ಶೇಮ್ ಏಕಾಏಕಿ ಆಗಿರೋದಲ್ಲ. ಇದಕ್ಕೆ ಹದಿನೇಳು ವರ್ಷಗಳ ಇತಿಹಾಸ ಇದೆ.
                        ಹದಿನೇಳು ವರ್ಷಗಳಾದವು ಅದೊಂದು ಸೀರಿಯಲ್ ಬಾಂಬ್ ಬ್ಲಾಸ್ಟ್ ನಡೆದು. ದಾವೂದ್ ತನ್ನ ಹುಡುಗರ ಜೊತೆ ಸೇರಿಕೊಂಡು ನಡೆಸಿದ ಹದಿಮೂರು ಸ್ಫೋಟಗಳಲ್ಲಿ 257 ಜನ ಸತ್ತರು. ಇವತ್ತಿನ ತನಕ ದಾವೂದ್ ಸಿಕ್ಕಿಲ್ಲ. ಆತನನ್ನ ನಮಗೆ ಕೊಡಿ ಅಂತ ಭಾರತ ಪಾಕಿಸ್ತಾನದ ಎದುರು ಮಂಡಿಯೂರಿ ಕುಂತು ಬೇಡಿಕೊಳ್ಳತ್ತೆ. ಕೊಡದಿದ್ರೆ ಅಮೇರಿಕಕ್ ಹೇಳ್ತೀನ್ ನೋಡೂ ಅಂತ ಹೆದರಿಸತ್ತೆ. ಪಾಕಿಸ್ತಾನಕ್ಕೆ "ದಾದ್ ನೈ ಫಿರಾದ್ ನೈ". ಆ ಕೇಸಿನಲ್ಲಿದ್ದ ಕಾಂಜಿ ಪೀಂಜಿಗಳಿಗೆಲ್ಲ ಶಿಕ್ಷೆ ಕೊಟ್ಟು ಮೀಸೆ ತಿರುವಿಕೊಳ್ಳತ್ತೆ ನಮ್ಮ ಸರಕಾರ. ಆ ಕಡೆ ಅಮೇರಿಕಾನ್ನ ನೋಡಿ. 2001 ರ ಸಪ್ಟೆಂಬರ್ 11 ಕ್ಕೆ ಡಬ್ಲು.ಟಿ.ಸಿ ಮೇಲೆ ಅಟ್ಯಾಕ್ ಆದದ್ದು. ಇದು ತಾಲಿಬಾನಿಗಳ ಜೊತೆ ಸೇರಿಕೊಂಡು ಅಲ್ ಖೈದಾದವರು ಮಾಡಿದ ಕೆಲಸ ಅಂತ ಒಂದು ಸಣ್ಣ ಸಂಶಯ ಬಂದದ್ದೇ ಬಂದದ್ದು. ಹದಿನೈದು ದಿನಗಳಲ್ಲಿ ದಂಡು ಕಟ್ಟಿಕೊಂಡು ಬಂದು ಬಿಟ್ಟರಲ್ಲ ಅಫಘಾನಿಸ್ತಾನದ ಮೇಲೆ. ಅಲ್ ಖೈದಾನ್ನ ಸತ್ಯಾನಾಶ ಮಾಡಿ ಹಾಕಿದ್ರು. ತಾಲೀಬಾನಿಗಳ ಸರ್ಕಾರ ಕಿತ್ಹಾಕಿ ತಮಗೆ ಬೇಕಾದ ನಾರ್ದನ್ ಅಲಯನ್ಸ್ ಸರ್ಕಾರ ಮಾಡಿದರು. ಕಳ್ಳಬಿದ್ದು ತಪ್ಪಿಸಿಕೊಂಡ ಬಿನ್ ಲಾಡೆನ್ ನನ್ನ ಪಾಕಿಸ್ತಾನದೊಳಕ್ಕೆ ಹೊಕ್ಕು ಹೊಡೆದು ಬಂದ್ರು. target accomplished. ನಾವು..? ದಾವೂದ್ ಬೇಕು, ಟೈಗರ್ ಮೆಮೋನ್ ಬೇಕು, ಛೋಟಾ ಶಕೀಲ್ ಬೇಕು ಅಂತ ಬೇಡಿಕೊಳ್ತಾನೇ ಇದೀವಿ.
                        ವರ್ಲ್ಡ್ ಟ್ರೇಡ್ ಸೆಂಟರಿನೊಳಕ್ಕೆ ವಿಮಾನಗಳು ನುಗ್ಗಿದ್ದೇ ಕೊನೆ. ಅಮೇರಿಕದಲ್ಲಿ ಮತ್ತೊಂದೇ ಒಂದು ಭಯೋತ್ಪಾದಕ ದಾಳಿ ಆಯ್ತಾ ನೋಡಿ. ಊಹ್ಞೂಂ... ಹಂಗಂತ ಉಗ್ರರಾರೂ ಅಲ್ಲಿ ಬಾಂಬ್ ಸಿಡಿಸೋ ಪ್ರಯತ್ನ ಮಾಡಲೇ ಇಲ್ಲ ಅಂತಲ್ಲ. ಅಪ್ಪಿ ತಪ್ಪಿ ಕೂಡ ಅವರು ಒಳಕ್ಕೆ ಬರದಂತೆ ತನ್ನ ಗಡಿಗಳನ್ನ ಬಂದೋಬಸ್ತು ಮಾಡ್ಕೊಂಡ್ತು ಆ ದೇಶ. ಇವತ್ತು ಯಾರಾದರೂ ವಿದೇಶಿ ಆ ದೇಶಕ್ಕೆ ಹೋಗೋದಕ್ಕೆ ವೀಸಾ ಕೇಳಿದರೆ ಆತನ ಜನ್ಮಾನೇ ಜಾಲಾಡಿ ಬಿಡ್ತಾರೆ. ಬಾಂಬು - ಬಂದೂಕು ಒತ್ತಟ್ಟಿಗಿರಲಿ, ಸೆಂಟ್ ಬಾಟಲ್ ಇಟ್ಕೊಂಡು ಅವರ ವಿಮಾನ ನಿಲ್ದಾಣದೊಳಕ್ ಹೋಗೋದಕ್ಕಾಗಲ್ಲ. ಅಷ್ಟೆಲ್ಲಾ ಮುನ್ನೆಚ್ಚರಿಕೆ ತಗೊಂಡು ಕೂಡ ಅಕಸ್ಮಾತ್ ವಿಮಾನ ಅಪಹರಣ ಆದ್ರೆ ಹಿಂದೆ ಮುಂದೆ ನೋಡದೇ ಹೊಡೆದುರುಳಿಸಬೇಕು ಅಂತ ಕಾನೂನು ಮಾಡ್ಕೊಂಡಿದಾರೆ.
                       ಅದಕ್ಕೇ ನಾವು ಇಚ್ಛಾ ಶಕ್ತಿ ಅನ್ನೋದು. ಅಫಘಾನಿಸ್ತಾನದಲ್ಲಿ, ಇರಾಕಿನಲ್ಲಿ ಅಮೇರಿಕದವರು ಮಾಡಿದ ಅನಾಹುತಗಳಿಗೆ ಸೇಡು ತೀರಿಸಿಕೊಳ್ತೀವಿ ಅಂತ ಅಲ್ಲಿನ ಜನರೇನಾದರೂ ಹೊರಟಿದ್ರೆ, ಅಮೇರಿಕದಲ್ಲಿ ದಿನಕ್ಕೊಂದು ಬಾಂಬ್ ಸಿಡೀತಿದ್ವು. ಈ ದೇಶ ಅದಕ್ಕೆ ಅವಕಾಶಾನೇ ಕೊಡಲಿಲ್ಲ. ಈ ಕಡೆ ನಮ್ಮಲ್ಲಿ ಮಾತ್ರ ಆರ್.ಎಸ್.ಎಸ್ ನವರು ಬಾಬರಿ ಮಸೀದಿ ಕೆಡವಿದ್ದಕ್ಕೇ ಮುಸ್ಲಿಂ ಸಂಘಟನೆಗಳು ಸೇಡುತೀರಿಸಿಕೊಳ್ಳೋದಕ್ಕೆ ಬಾಂಬ್ ಸಿಡಿಸಿದ್ವು, ಗುಜರಾತ್ನಲ್ಲಿ ನರೇಂದ್ರ ಮೋದಿ ಮುಸ್ಲಿಮರ ವಿರುದ್ಧ ಗಲಭೆ ಮಾಡಿಸಿದ್ದೇ ಈ ಎಲ್ಲಾ ಅನಾಹುತಗಳಿಗೆ ಕಾರಣ ಅಂತ ಮಾತಾಡೋ ದೀಡು ಪಂಡಿತರಿದ್ದಾರೆ. nonsense... ನರೇಂದ್ರ ಮೋದಿಯನ್ನ ಕೊಲ್ತೀನಿ ಅಂತ ಯಾರಾದರೂ ಉಗ್ರ ಹೇಳಿದರೆ ಅದಕ್ಕೆ ಲಾಜಿಕ್ ಇದೆ. ಆದರೆ, ಗುಜರಾತ್ ಗಲಭೆಗೆ ಮುಂಬೈ ಜನರ ಮೇಲೆ ಸೇಡು ತೀರಿಸಿಕೊಳ್ತೀನಿ ಅಂದ್ರೆ ಅದ್ಯಾವ ಲೆಕ್ಕಾಚಾರ..?
                      ಫೈನ್, ಇದು ಮುಸ್ಲಿಂರ ವಿರುದ್ಧ ನಡೆದ ದೌರ್ಜನ್ಯಕ್ಕೆ ಸೇಡು ಅಂತಾನೇ ಇಟ್ಕೊಳ್ಳಿ. ಆದರೆ, ಪಾಕಿಸ್ತಾನದಲ್ಯಾವ ಬಾಬರಿ ಮಸೀದಿ ಬಿದ್ದಿತ್ತು..? ಅಲ್ಯಾಕೆ ಬಾಂಬ್ ಸಿಡಿದವು..? ಬೆನಜಿರ್ ಭುಟ್ಟೋ ಏನು ನರೇಂದ್ರ ಮೋದಿಯಾ..? ಬಾಂಗ್ಲಾ ದೇಶದಲ್ಲಿ ಗುಜರಾತ್ ಗಲಭೆ ಆಗಿತ್ತಾ..? ಬೇಸಿಕಲಿ ಒಂದು ಮಾತು ಮಾತ್ರ ಸತ್ಯ. ಉಗ್ರರಿಗೆ ಹಾಕೋದಕ್ಕೆ ಬಾಂಬ್ ಬೇಕು - ಸಾಯೋದಕ್ ಜನ ಬೇಕು. ಅಂಥವರನ್ನ ಎದುರಿಸೋದಕ್ಕೆ ಒಂದು ಬೇರೆಯದೇ ಮನಸ್ಥಿತಿ ಬೇಕು. ಅದನ್ನ ನಮ್ಮ ನಾಯಕರುಗಳ್ಯಾವತ್ತೂ ತೋರಿಸಲಿಲ್ಲ ಅನ್ನೋದೇ ವಿಷಯ. ಅದಕ್ಕೇ 1993ರ ಮುಂಬೈ ಸೀರಿಯಲ್ ಬಾಂಬ್ ಬ್ಲಾಸ್ಟ್ ನಂತರ ಇಲ್ಲಿ ನಲವತ್ತೆರಡು ಬೇರೆ ಬೇರೆ ಟೆರಿಸ್ಟ್ ಅಟ್ಯಾಕ್ ಆಗಿವೆ. ಅವುಗಳಲ್ಲಿ ಮುಂಬೈಯೊಂದರಲ್ಲೇ ಐದು ದಾಳಿಗಳು. ಈ ದೇಶದಲ್ಲಿ ಏನು ಬೇಕಾದರೂ ಮಾಡಿ ಸೇಫ್ ಆಗಿ ಹೊರಗೆ ಹೋಗಿಬಿಡಬಹುದು ಅನ್ನಿಸಿಬಿಟ್ಟಿದೆಯೇನೋ ಟೆರರಿಸ್ಟುಗಳಿಗೆ. ವಿದೇಶಕ್ ಹೋದ್ರೆ, ವಾಪಸ್ ಕರಿಸಿಕೊಳ್ಳೋದಕ್ಕಂತೂ ಆಗಲ್ಲ. ಅಕಸ್ಮಾತ್ ಸಿಕ್ಕಿಬಿದ್ರೆ ಹಿಡಿದು ನೇಣಿಗೆ ಹಾಕಿಬಿಡ್ತಾರೆ ಅನ್ನೋ ಭಯಾನೂ ಇಲ್ಲ. ನಮ್ಮ ವಿಮಾನ ಒತ್ತೆ ಇಟ್ಕೊಂಡು ಬಿಡಿಸಿಕೊಂಡು ಹೋದ ಮೌಲಾನಾ ಮಸೂದ್ ಅಜರ್ ಈಗ ಪಾಕಿಸ್ತಾನದಲ್ಲಿ ಓಪನ್ ಆಗಿ ಓಡಾಡ್ಕೊಂಡಿದಾನೆ. ಇಲ್ಲಿನ ಜೈಲಿನಿಂದ ಹೊರಗೆ ಹೋದ ಈತ ಸುಮ್ಮನೆ ಕುಂತಿದ್ದರೆ ಆ ಮಾತು ಬೇರೆ. ತನ್ನ ಹುಡುಗರನ್ನ ಬಿಟ್ಟು ನಮ್ಮ ಪಾರ್ಲಿಮೆಂಟ್ ಮೇಲೆ ದಾಳಿ ಮಾಡಿಸಿದ. ಈ ದಾಳಿಯಲ್ಲಿ ಅರೆಸ್ಟ್ ಆದವನು ಅಫ್ಜಲ್ ಗುರು. ಆತನನ್ನ ಗಲ್ಲಿಗೆ ಹಾಕಬೇಕು ಅಂದರೆ, ಬೇಡ ಅಂತ ಹೇಳೋದಕ್ಕೆ ಕಾಶ್ಮೀರದಿಂದ ನಿಯೋಗ ಬರತ್ತೆ. ಅವನ್ನ ಬಿಡಿ. ಈ ಅಜ್ಮಲ್ ಕಸಬನ ಕಥೆ ಏನು..? ಇವನ ಜೊತೆಗೆ ಬಂದ ಇನ್ನೂ ಒಂಭತ್ತು ಜನ ಮತ್ತು ಈತ ಮುಂಬೈಯಲ್ಲಿ ಮಾಡಿದ ಅನಾಹುತವೇನು ಸಣ್ಣದಾ..?

                        ಅದೊಂದೇ ದಾಳಿಯಲ್ಲಿ ಸತ್ತವರು ಮುನ್ನೂರ ಹತ್ತು ಜನ. ಜೀವಂತವಾಗಿ ಸಿಕ್ಕಿಬಿದ್ದವನು ಇವನೊಬ್ಬನೇ. ನಂಬ್ತೀರೋ ಇಲ್ವೋ. ಈ ಒಬ್ಬ ಕಸಬ್ಗಾಗಿ ನಾವು ಪ್ರತಿ ತಿಂಗಳೂ ಮಾಡ್ತಿರೋ ಖರ್ಚು ಎರಡು ಕೋಟಿ ರುಪಾಯಿ. ಇವನ ಬೆಂಗಾವಲಿಗೆ ಒಂದು ಸಾವಿರ ಜನ ಪೊಲೀಸರಿದ್ದಾರೆ. ಆರ್ಥರ್ ರೋಡ್ ಜೈಲಿನಲ್ಲಿ ಟ್ರಕ್ ತುಂಬ ಆರ್.ಡಿ.ಎಕ್ಸ್ ನುಗ್ಗಿಸಿದರೂ ಅಲ್ಲಾಡದಂಥ ಒಂದು ಸೆಲ್ ಇವನಿಗಾಗಿ ಕಟ್ಟಲಾಗಿದೆ. ಒಂದು ವೇಳೆ ಆ ನರಹಂತಕನಿಗೆ ಅನಾರೋಗ್ಯವಾದರೆ ಟ್ರೀಟ್ಮೆಂಟ್ ಕೊಡೋದಕ್ಕೆ ಜೆ.ಜೆ ಆಸ್ಪತ್ರೆಯಲ್ಲೊಂದು ಸ್ಪೆಷಲ್ ವಾರ್ಡ್ ಕಟ್ಟಿಸಲಾಯ್ತು. ಆದ್ರೆ, ಅಲ್ಲಿಗ್ಯಾವತ್ತೂ ಈತ ಅಡ್ಮಿಟ್ ಆಗಲೇ ಇಲ್ಲ. ಬೇಕಾದರೆ ಡಾಕ್ಟರುಗಳನ್ನ ತಾನಿದ್ದಲ್ಲಿಗೇ ಕರೆಸಿಕೊಳ್ತಾನೆ. ವಿಚಾರಣೆಗೆ ಕಸಬ್ ಕೋರ್ಟಿಗೆ ಬರಬೇಕು ಅಂತಾನೂ ಇಲ್ಲ. ಕುಳಿತಲ್ಲಿಂದಲೇ ವಿಡಿಯೋ ಕಾನ್ಫರೆನ್ಸು. ಅದು ಕೂಡ ಅವನು ಮೂಡಿದ್ದರೆ ಬರಬಹುದು - ಇಲ್ಲದಿದ್ರೆ ಇಲ್ಲ. ಎಂಭತ್ತು ರುಪಾಯಿಯದೊಂದು ಗುಂಡಿನಲ್ಲಿ ಮುಗಿದುಹೋಗಬಹುದಾಗಿದ್ದ ಕೆಲಸಕ್ಕೆ ತಿಂಗಳಿಗೆರಡು ಕೋಟಿ ಖರ್ಚು. ಇಷ್ಟೆಲ್ಲಾ ಮಾಡಿ ಈ ಹುಡುಗನನ್ನ ಬದುಕಿಸಿಕೊಳ್ತಿರೋದ್ಯಾಕೆ ಅಂತ ಕೇಳಿದ್ರೆ, ಮುಂಬೈ ದಾಳಿಯಲ್ಲಿ ಪಾಕಿಸ್ತಾನದ ಕೈವಾಡ ಇದೆ ಅನ್ನೋದನ್ನ ಪ್ರೂವ್ ಮಾಡೋದಕ್ಕೆ ಅನ್ನೋ ಉತ್ತರ ಬರತ್ತೆ. ಅದನ್ನ ಪ್ರೂವ್ ಮಾಡೋದಕ್ಕೆ, ಕಸಬ್ ಮತ್ತು ಇತರ ಒಂಭತ್ತು ಜನರಿಗೆ ಪಾಕಿಸ್ತಾನದಲ್ಲಿ ಕುಂತೇ ಫೋನಿನಲ್ಲಿ ಗೈಡನ್ಸ್ ಕೊಡ್ತಿದ್ದ ಹ್ಯಾಂಡ್ಲರ್ಗಳ ವಾಯ್ಸ್ ಸ್ಯಾಂಪಲ್ ಬೇಕು. ಅದನ್ನ ಕೇಳಿದ್ರೆ, "ವಾಟ್ ನಾನ್ಸೆಸ್, ಅದಕ್ಕೆಲ್ಲ ನಮ್ಮ ಕಾನೂನಿನಲ್ಲಿ ಅವಕಾಶಾನೇ ಇಲ್ಲ" ಅಂತ ಒಂದೇ ಮಾತಿಗೆ ತಳ್ಳಿ ಹಾಕಿಬಿಟ್ತು ಪಾಕಿಸ್ತಾನ. ಈಗ ಇವನಿಗೆ ಗಲ್ಲು ಶಿಕ್ಷೆ ಆಗಬಾರದು ಅಂತ ವಾದಿಸೋ ಜನ ಕೂಡ ನಮ್ಮಲ್ಲಿದಾರೆ.
                        2008ರ ನವೆಂಬರ್ 26ರ ಟೆರರಿಸ್ಟ್ ಅಟ್ಯಾಕಿನಿಂದ ಭಾರತ ಪಾಠ ಕಲಿತಿಲ್ಲ. ಕಲಿತಿದ್ದರೆ ಇವತ್ತು ಈ ಘಟನೆ ಆಗ್ತಿರಲಿಲ್ಲ ಅಂತ ಮೊನ್ನೆ ಯಾರೋ ಟಿ.ವೀಲಿ ಹೇಳ್ತಿದ್ರು. ಅದಕ್ಕೂ ಇದಕ್ಕೂ ಸಂಬಂಧಾನೇ ಇಲ್ಲ. ಆ ದಾಳಿಯಿಂದ ಪಾಠ ಕಲಿತದ್ದಕ್ಕೇ ನಮ್ಮ ಕರಾವಳಿ ತೀರಗಳು ತಕ್ಕ ಮಟ್ಟಿಗೆ ಬಂದೋಬಸ್ತಾಗಿವೆ. ದೊಡ್ಡ - ದೊಡ್ಡ ಊರುಗಳಿಗೆ ಎನ್.ಎಸ್.ಜಿ ಥರದ ಟ್ರೂಪು ಕೊಡಲಾಗಿದೆ, ಆ ಊರುಗಳ ಇಂಪಾರ್ಟಂಟ್ ಜಾಗಗಳಲ್ಲಿ ಸೆಕ್ಯುರಿಟಿ ಹೆಚ್ಚಿಸಲಾಗಿದೆ. ಆದರೆ, ಅದ್ಯಾವುದರಿಂದಲೂ ಈ ಬಾಂಬ್ ಬ್ಲಾಸ್ಟುಗಳನ್ನ ತಡೆಯೋದಕ್ಕಾಗ್ತಿರಲಿಲ್ಲ. ಇಲ್ಲಿ ಉಪಯೋಗಕ್ಕೆ ಬರಬೇಕಾದದ್ದು 1993ರಲ್ಲೇ ಕಲಿತ ಪಾಠ. ಹೆಂಗೆ ನಮ್ಮವರೇ ಸೇರಿಕೊಂಡು ಬಾಂಬುಗಳನ್ನ ಮಾಡಿ ಕಾರಿಗೆ ತುಂಬಿ ಸದ್ದಿಲ್ಲದೇ ಜನಸಂದಣಿಯ ಜಾಗಗಳಲ್ಲಿ ನಿಲ್ಲಿಸಿ ಹೋಗಿಬಿಡ್ತಾರೆ ಅನ್ನೋದು ಹದಿನೇಳು ವರ್ಷಗಳ ಹಿಂದೇನೇ ಗೊತ್ತಾಗಿರೋ ವಿಷಯ. ಆದರೆ, ನಮ್ಮವರು ಹೊಸ ಪಾಠ ಕಲಿಯೋ ಭರದಲ್ಲಿ, ಕಲಿತ ಪಾಠಗಳನ್ನೆಲ್ಲ ಮರೆತು ಬಿಟ್ಟರೇನೋ ಅನ್ನಿಸತ್ತೆ.
                       of course, ಈ ವಿಷಯದಲ್ಲಿ ತುಂಬ ಬಾಲಿಶವಾಗಿ ಮಾತಾಡೋದು ಕೂಡ ಕಷ್ಟಾನೇ. ಒಂದೂ ಕಾಲು ಕೋಟಿ ಜನಸಂಖ್ಯೆ ಇರೋ ಮಹಾನಗರ ಅದು. ಇಲ್ಲಿ ಪ್ರತಿದಿನ ದಶದಿಕ್ಕುಗಳಿಂದಲೂ ಲಕ್ಷಾಂತರ ಜನ ಬರ್ತಾರೆ. ಬಂದಷ್ಟೇ ಸಂಖ್ಯೆಯಲ್ಲಿ ಹೊರಗೆ ಹೋಗ್ತಾರೆ. ಅವರ ಪೈಕಿ ಯಾವನು ಬಾಂಬು ತರ್ತಾನೆ - ಯಾವನು ಬಂದೂಕು ತರ್ತಾನೆ ಅಂತ ಹುಡುಕೋದು ಕಷ್ಟ. but, ದೇಶದಲ್ಲಿಲ್ಲದಂಥ ಪೊಲೀಸ್ ವ್ಯವಸ್ಥೆ ಮುಂಬೈಗಿದೆ. ಬೇಹುಗಾರಿಕೆ ವಿಷಯಕ್ಕೆ ಬಂದರೂ ಅವರದು ಎತ್ತಿದ ಕೈ. ಅಂಥದ್ದರಲ್ಲಿ, ಒಂದು ಪಕ್ಕಾ ಇಂಟೆಲಿಜೆನ್ಸ್ ವ್ಯವಸ್ಥೆಗೆ ಇಂಥ ವಿಷಯಗಳು ಗೊತ್ತಾಗಬೇಕು, ಅಮೇರಿಕದವರಿಗೆ ಗೊತ್ತಾಗ್ತವೆ ನೋಡಿ, ಹಾಗೆ. ಇಲ್ಲಿ ಕೂಡ ಒಂದು ಸಮಸ್ಯೆ ಇದೆ. ಮೊದಲಾದರೆ, ಭಯೋತ್ಪಾದಕ ಕೆಲಸಕ್ಕೆ ತುಂಬ ದೊಡ್ಡ ಮಟ್ಟದ ತಯಾರಿ ಬೇಕಾಗ್ತಿತ್ತು. ಅಲ್ಲೆಲ್ಲೋ ಪಾಕಿಸ್ತಾನದಲ್ಲಿ ಕುಂತವನು, ಅಲ್ಲಿಂದ ಜನರನ್ನ ಕಳಿಸಿ ಅವರಿಗೆ ಇಲ್ಲಿ ಬಾಂಬು - ಬಂದೂಕು, ಕಾರು, ದುಡ್ಡು, ಹುಡುಗರನ್ನ ಹೊಂದಿಸಿಕೊಟ್ಟು ಒಂದು ಕೆಲಸ ಮಾಡಿಸ್ತಿದ್ದ. ಒಂದು ಷಡ್ಯಂತ್ರದಲ್ಲಿ ಜಾಸ್ತಿ ಜನ ಭಾಗವಹಿಸಿದಷ್ಟೂ ಅದರ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಗೋ ಸಾಧ್ಯತೆಗಳು ಹೆಚ್ಚಾಗ್ತಾ ಹೋಗ್ತವೆ. ಆದರೆ ಈಗ ಹಾಗಲ್ಲ. ಎಲ್ಲೋ ರಿಮೋಟ್ ಜಾಗಗಳಲ್ಲಿ ಕುಳಿತವನು ಇಂಟರ್ನೆಟ್ ಮೂಲಕಾನೇ ಧರ್ಮಾಂಧತೆ ಬೆಳೆಸಿಕೊಂಡು ಬಿಡ್ತಾನೆ. ಅವನಿಗೆ ಬಾಂಬು ತಯಾರಿಸೋ ತರಬೇತಿ ಕೂಡ ಈ ಹಾಳು ಇಂಟರ್ನೆಟ್ಟೇ ಕೊಡತ್ತೆ. ಮೊದಲಾದರೆ ಆರ್.ಡಿ.ಎಕ್ಸು, ಅದಕ್ಕೊಂದು ಡಿಟೋನೇಟರು, ಒಂದು ಟೈಮರು ಅಂತ ನೂರು ತಲೆನೋವುಗಳಿದ್ದವು. ಈಗ ಅಮೋನಿಯಂ ನೈಟ್ರೇಟ್ನಲ್ಲೇ ಬಾಂಬು ತಯಾರಿಸೋದನ್ನ ಕಲಿತುಕೊಂಡಿದಾರೆ. ಯಾರೋ ಐದಾರು ಹುಡುಗರು ಸೇರಿಕೊಂಡು ತಾವುತಾವೇ ತಮ್ಮದೇ ದುಡ್ಡಿನಲ್ಲಿ ಬಾಂಬು ತಯಾರಿಸಿ ಸಿಡಿಸಿ ಹೋಗಿಬಿಡ್ತಾರೆ. ನಾಳೆ ದಿನ ಅವರು ಸಿಕ್ಕಿಬೀಳಬಹುದು, ಆ ಮಾತು ಬೇರೆ. ಆದರೆ, ಆ ಷಡ್ಯಂತರದ ವಾಸನೆ ಪೊಲೀಸರಿಗೆ ಸಿಗೋ ಚಾನ್ಸು ಕಡಿಮೆ. ಬೆಂಗಳೂರು ಸರಣಿ ಬಾಂಬ್ ಬ್ಲಾಸ್ಟ್ನಲ್ಲಿ ಆದದ್ದೂ ಅದೇ. ಚಿನ್ನಸ್ವಾಮಿ ಕ್ರೀಡಾಂಗಣ ಬಾಂಬ್ ಬ್ಲಾಸ್ಟ್ ಕೂಡ ಅಂಥದ್ದೇ ಕೆಲಸ ಅನ್ನೋದು ಇವತ್ತಲ್ಲ ನಾಳೆ ಗೊತ್ತಾಗತ್ತೆ.
                       ಆದರೆ, ಬಾಂಬು ಸಿಡಿದ ತಕ್ಷಣ ಲಷ್ಕರೆ ತಯ್ಯಬಾ ಕೆಲಸ ಅಂತ ಬ್ರೇಕಿಂಗ್ ನ್ಯೂಸ್ ಕೊಡೋದು ನಮ್ಮವರ ಹಳೇ ಚಾಳಿ. ಅದಕ್ಕೊಂದು ಕ್ವಶ್ಚನ್ ಮಾರ್ಕ್ ಹಾಕಿ, ಸೂತ್ರಗಳ ಹೇಳಿಕೆ ಅಂತ ಕೊಟ್ಟುಬಿಟ್ಟರೆ ಮುಗೀತು. ಬಾಂಬೆ ಬಾಂಬ್ ಬ್ಲಾಸ್ಟ್ನಲ್ಲೂ ಅದೇ ಆಗಿದ್ದು. ಇದರಲ್ಲಿ ಇಂಡಿಯನ್ ಮುಜಾಹಿದೀನ್ ಕೈವಾಡ ಇದೆ ಅಂದರೆ, ಅದನ್ನ ತಕ್ಕಮಟ್ಟಿಗೆ ಒಪ್ಪಿಕೊಳ್ಳಬಹುದು. ಸಿಮಿ ನಿಷೇಧ ಆದಾಗ ಅದರಲ್ಲಿದ್ದವರೇ ಆ ಸಂಘಟನೆ ಕಟ್ಕೊಂಡಿದಾರೆ. ಅದರ ಸ್ಥಾಪಕ ರಿಯಾಜ್ ಭಟ್ಕಳ್. ಅವನನ್ನ ನಾನೇ ಕರಾಚಿಯಲ್ಲಿ ಕೊಲ್ಲಿಸಿದೀನಿ ಅಂತ ಇತ್ತೀಚೆಗೆ ಛೋಟಾ ರಾಜನ್ ಹೇಳಿಕೊಂಡಿದ್ದ. ಆ ಮಾತಿರಲಿ. ಅದೆಷ್ಟು ಸತ್ಯಾನೋ ಗೊತ್ತಿಲ್ಲ. ಆದರೆ, ಇದರ ಹಿಂದೆ ಕೂಡ ಅದೇ ಸಂಘಟನೆ ಕೈವಾಡ ಇದೆ ಅನ್ನೋ ಸಂಶಯ ಪೊಲೀಸರಿಗಿಂತಲೂ ಮೊದಲು ಟಿ.ವಿ ಚಾನಲ್ಗಳವರಿಗೆ ಬಂದಿದೆ. ಪೊಲೀಸರು ಅದನ್ನ ಸೀರಿಯಸ್ಸಾಗಿ ತಗೊಂಡಿರೋ ಹಂಗಿದೆ.
                       ಇನ್ನು ಇದೊಂದು ಬಾಂಬ್ ಬ್ಲಾಸ್ಟ್ನ ತನಿಖೆ ಶುರುವಾಗತ್ತೆ. ಅದ್ಯಾವಾಗ ಮುಗಿಯತ್ತೋ ಯಾರಿಗೂ ಗೊತ್ತಾಗಲ್ಲ. ಇದರ ಆರೋಪಿಗಳನ್ನ ನಮಗೆ ಕೊಡಿ ಅಂತ ಮತ್ತೆ ನಮ್ಮ ಸರಕಾರ ಪಾಕಿಸ್ತಾನಕ್ಕೆ ಮನವಿ ಮಾಡಿಕೊಳ್ಳತ್ತೆ. ಅದು ಯಥಾ ಪ್ರಕಾರ ನಮ್ಮವರ ಮನವಿಯನ್ನ ಕಸದ ಬುಟ್ಟಿಗೆಸೆದು ಅಮೇರಿಕದ ಜೊತೆ ಸೇರಿಕೊಂಡು ಭಯೋತ್ಪಾದನೆ ವಿರುದ್ಧ ಸಮರದ ಭಾಷಣ ಮಾಡತ್ತೆ. ಇಲ್ಲಿ ಸಿಕ್ಕಿಬಿದ್ದಿರೋ ಆರೋಪಿಗಳಿಗಾಗಿ ಜೈಲುಗಳಲ್ಲಿ ಝೆಡ್ ಪ್ಲಸ್ ಸೆಕ್ಯುರಿಟಿ ಕೊಟ್ಟು, ವರ್ಷಗಟ್ಟಲೆ ಅವರ ವಿಚಾರಣೆ ನಡೆಸಿ ಕೊನೆಗೊಂದು ದಿನ ಗಲ್ಲು ಶಿಕ್ಷೆ ಕೊಟ್ಟರೆ, ನೇಣಿಗೆ ಹಾಕಬೇಡಿ ಅನ್ನೋ ಜನ ಹುಟ್ಟಿಕೊಳ್ತಾರೆ. ಅಷ್ಟೊತ್ತಿಗಾಗಲೆ ಮತ್ತಷ್ಟು ಬಾಂಬುಗಳು ಸಿಡಿದಿರುತ್ತವಾದ್ದರಿಂದ ಇದನ್ನೆಲ್ಲ ಜನ ಮರೆತೇ ಬಿಟ್ಟಿರ್ತಾರೆ. ಇದನ್ನೆಲ್ಲ ಹೊರತು ಪಡಿಸಿ ಮತ್ತೇನಾದರೂ ಆದರೆ, ಖಂಡಿತ ಬರೆದೇನು...

Tuesday, May 10, 2011

ಅಂಥ ಅಮೇರಿಕ ಕೂಡ ಅದೆಷ್ಟು ಹೆಣಗಿತು..?



                      ಮಹಾನ್ ಪ್ರಚಂಡ ಬಿನ್ ಲಾಡೆನ್ ಅಮೇರಿಕಾ ಅನ್ನೋ ಕಬ್ಬಿಣದ ಕೋಟೆಯೊಳಕ್ಕೆ ತನ್ನ ಹುಡುಗರನ್ನು ನುಸುಳಿಸಿ, ಅಲ್ಲೇ ಅವರಿಗೆ ವಿಮಾನ ಹಾರಿಸೋದನ್ನ ಕಲಿಸಿದ. ಅವರು ಅದೇ ಅಮೇರಿಕಾದ ನಾಗರಿಕ ವಿಮಾನಗಳೊಳಕ್ಕೆ ಹತ್ತಿ ಕುಳಿತು ಅವನ್ನ ಹೈಜಾಕ್ ಮಾಡಿ world trade centerನೊಳಕ್ಕೆ ನುಗ್ಗಿಸಿದರು. ಅಮೇರಿಕನ್ ಮಿಲಿಟರಿ ಹೆಡ್ ಕ್ವಾರ್ಟರ್, ಪೆಂಟಗಾನನ್ನ ಪುಡಿಗುಟ್ಟಿದರು. ಅವರದೇ ದೊಣ್ಣೆ - ಅವರದೇ ಅಂಡು. ಬಾಸುಂಡೆ ಬರುವಂತೆ ಬಾರಿಸಿದವನು ಲಾಡೆನ್. ಅಂಥದ್ದೊಂದು ಮರ್ಮಾಘಾತ ತಿಂದ ನಂತರ, ಈತನ ಹೆಣ ಹಾಕ್ತೀವಿ ಅಂತ ಹೊರಟಿತು ಅಮೇರಿಕ. ಅದು ಅಷ್ಟು ಈಸಿ ಆಗಿರಲಿಲ್ಲ.



                      2001ರಲ್ಲಿ ಡಬ್ಲು.ಟಿ.ಸಿ ಧರಾಶಾಹಿಯಾದಾಗ ಲಾಡೆನ್ ಅಫಘಾನಿಸ್ತಾನದಲ್ಲಿದ್ದ ಅನ್ನೋದರ ಬಗ್ಗೆ ಅಮೇರಿಕ ಸೇರಿದಂತೆ ಯಾರಿಗೂ ಸಂಶಯಗಳಿರಲಿಲ್ಲ. ಆ ಅಫಘಾನಿಸ್ತಾನವನ್ನು ಬುಡಮೇಲು ಮಾಡಿಯಾದರೂ ಆತನನ್ನ ಕೊಲ್ತೀನಿ ಅಂತ ಹೊರಟಿತು ಅಮೇರಿಕಾ. ಆ ದೇಶದ ಮಿಲಿಟರಿಯ ಆಯಕಟ್ಟಿನ ಜಾಗಗಳಲ್ಲಿ ಕುಳಿತವರಾರೂ, ಅಫಘಾನಿಸ್ತಾನ ಅನ್ನೋ ಈ ದುರ್ಗಮ ದೇಶದ ಇತಿಹಾಸ ಓದಿಕೊಂಡೇ ಇರಲಿಲ್ಲ. ಈ ದೇಶವನ್ನ ಇವತ್ತಿನ ತನಕ ಯಾವೊಬ್ಬ ದಂಡನಾಯಕನೂ ಇಡಿ ಇಡಿಯಾಗಿ ಗೆದ್ದಿಲ್ಲ, ಯಾವೊಬ್ಬ ಸಾಮ್ರಾಟನೂ ಪುಟ್ಟಾ ಪೂರ್ತಿಯಾಗಿ ಆಳಿಲ್ಲ. ಅಸಲಿಗೆ ಇದನ್ನು ಗೆಲ್ಲತ್ತೇವೆ ಅಂತ ಬಂದವರೆಲ್ಲ ಬಳಲಿ ಬೆಂಡೆದ್ದು ವಾಪಸ್ ಹೋಗಿದ್ದಾರೆ ಅಥವಾ ಇಲ್ಲಿನ ಅನಾಮಿಕ ಬೆಟ್ಟಗಳ ಕೊರಕಲಿನಲ್ಲಿ ಪ್ರಾಣ ಬಿಟ್ಟಿದ್ದಾರೆ. ಇಂಥಾ ದೇಶದಲ್ಲೆಲ್ಲೋ ಗುಹೆಗಳಲ್ಲಿದ್ದುಕೊಂಡು ಪ್ರಪಂಚದ ಮೂಲೆ ಮೂಲೆಗಳಲ್ಲಿ ಬಾಂಬು ಸಿಡಿಸುವಷ್ಟರ ಮಟ್ಟಿಗೆ ಬೆಳೆದು ನಿಂತಿದ್ದ ಲಾಡೆನ್ ನನ್ನ ಹಿಡಿದು, ಆತನ ಅಲ್ ಖೈದಾ ಸಂಘಟನೆಯನ್ನ ಹೂತುಹಾಕುತ್ತೇನೆ ಅಂತ ಅಮೇರಿಕಾ ತೊಡೆತಟ್ಟಿತ್ತು. ಇದಕ್ಕಿದ್ದ ಅತಿ ದೊಡ್ಡ ಧೈರ್ಯ ಅಂದ್ರೆ ತನ್ನ ಸೈನ್ಯ.
                      ಅಂಥ ದೊಡ್ಡ ಸೈನ್ಯ ಇಟ್ಟುಕೊಂಡು ಅಫಘಾನಿಸ್ತಾನದ ಮೇಲೆ ದಾಳಿ ನಡೆಸೋದಕ್ಕೆ ಹೊರಟ ಅಮೇರಿಕಾ, ಇದನ್ನು ಭಯೋತ್ಪಾದನೆಯ ವಿರುದ್ಧದ ಯುದ್ಧ ಅಂದಿತು. ಆದರೆ, ಅದು ಅಷ್ಟು ಈಸಿ ಆಗಿರಲಿಲ್ಲ. ಅವರಿಗೆ ಇಡೀ ಯುದ್ಧ operate ಮಾಡೋದಕ್ಕೆ ಅಫಘಾನಿಸ್ತಾನದ ಹತ್ತಿರದಲ್ಲೇ ಒಂದು ಮಿಲಿಟರಿ ನೆಲೆ ಬೇಕಾಗಿತ್ತು. ಸೈನಿಕರನ್ನ ತಂದಿಳಿಸೋದಕ್ಕೆ, ಮದ್ದು ಗುಂಡು ಸ್ಟೋರ್ ಮಾಡ್ಕೊಳ್ಳೋದಕ್ಕೆ, ವಿಮಾನಗಳಿಗೆ ಪೆಟ್ರೋಲ್ ತುಂಬಿಸೋದಕ್ಕೆ ಒಂದು ಶಾಂತ ಪ್ರದೇಶ ಬೇಕಾಗಿತ್ತು. ಅದೇ ಟೈಮಿಗೆ ಇಂಥದ್ದೇ ಆಫರ್ ಕೊಟ್ಟವರು ಪಾಕಿಸ್ತಾನದ ಸರ್ವಾಧಿಕಾರಿ ಪರ್ವೇಜ್ ಮುಷರಫ್. ಅಮೇರಿಕಾ ಥಟ್ಟಂತ ಮುಷರಫ್ ಆಫರ್ ಒಪ್ಪಿಕೊಂಡುಬಿಟ್ಟಿತ್ತು. ಅದು ಜಾಣತನ. ದಾಳಿ ಮಾಡಬೇಕಾಗಿದ್ದ ಅಫಘಾನಿಸ್ತಾನಕ್ಕೆ ಆದಷ್ಟು ಹತ್ತಿರದಲ್ಲೇ ಸೈನಿಕ ನೆಲೆ ಮಾಡಿಕೊಂಡರೆ, ಖರ್ಚು, ಟೈಮು ಎಲ್ಲಾ ಉಳಿಸಬಹುದು. ಒಟ್ಟಿನಲ್ಲಿ ಪಾಕಿಸ್ತಾನದಲ್ಲಿ ಸೈನಿಕ ನೆಲೆ ಮಾಡಿಕೊಂಡು ಅಫಘಾನಿಸ್ತಾನದ ಮೇಲೆ ಯುದ್ಧ ಮಾಡುವುದು ಅದ್ಭುತ war strategyಯಾಗಿತ್ತು. ಆಗಲೇ ಅಮೇರಿಕದ ಸೈನ್ಯ ಕರಾಚಿಯಲ್ಲಿ ಬಂದಿಳಿದದ್ದು.

                     ತಮಾಷೆ ಅಂದ್ರೆ, ಇದು ಅಫಘಾನಿಸ್ತಾನ ಅನ್ನೋ ಟೆರರಿಸ್ಟ್ ದೇಶದ ಮೇಲೆ, ಪಾಕಿಸ್ತಾನ ಅನ್ನೋ ಟೆರರಿಸ್ಟ್ ದೇಶದ ಸಹಾಯ ಪಡೆದು, ಅಮೇರಿಕಾ ಅನ್ನೋ ಟೆರರಿಸ್ಟ್ ದೇಶ ದಾಳಿಗೆ ಬಂದಂತಾಗಿತ್ತು. ಆದರೆ, ಅಲ್ಲಿಂದ ಅಫಘಾನಿಸ್ತಾನದ ದಿಕ್ಕಿಗೆ ಹೊರಟ ಅಮೇರಿಕಾದ ಮಿಲಿಟರಿ ಟ್ರಕ್ಕುಗಳ ಮೇಲೆ ಪಾಕಿಸ್ತಾನದಲ್ಲೇ ಬಾಂಬುಗಳು ಬಿದ್ದವು.
                    ಅಸಲಿಗೆ ಅಮೇರಿಕಾದೊಂದಿಗೆ ಕೂಡಿಕೆ ಮಾಡಿಕೊಂಡು ಅಫಘಾನಿಸ್ತಾನದ ಮೇಲೆ ಯುದ್ಧ ಮಾಡುವುದು ಜನರಲ್ ಪರ್ವೇಜ್ ಮುಷರಫ್ ಗೆ ಮಾತ್ರ ಬೇಕಿತ್ತು. ಪಾಕಿಸ್ತಾನದ ಜನಸಾಮನ್ಯರ ಪಾಲಿಗೆ ಅಫಘಾನಿಸ್ತಾನ ಕೂಡ ಒಂದು ಮುಸ್ಲಿಂ ದೇಶ. ಒಂದು ಮುಸ್ಲಿಂ ದೇಶದ ಮೇಲೆ ಕಾಫಿರ್ ಅಮೇರಿಕಾ ದಾಳಿ ಮಾಡೋದಕ್ಕೆ ಬಂದಿದ್ದು, ಅದಕ್ಕೆ ತನ್ನ ದೇಶದ ನೆಲ ಬಳಸಿಕೊಂಡಿದ್ದು ಪಾಕಿಸ್ತಾನಿಯರಿಗೆ ಆಗಿ ಬರಲಿಲ್ಲ. ಅಲ್ಲೇನು ಟೆರರಿಸ್ಟುಗಳಿಗೆ ಕೊರತೆಯೇ. ಅವರೇ ಅಮೇರಿಕದ ಮಿಲಿಟರಿ ಟ್ರಕ್ಕುಗಳನ್ನ ಬಾಂಬಿಟ್ಟು ಸಿಡಿಸೋದಕ್ಕೆ ಶುರು ಮಾಡಿದರು. ಅಫಘಾನಿಸ್ತಾನ ಮೇಲೆ ದಂಡೆತ್ತಿ ಬಂದವರು ಪಾಕಿಸ್ತಾನದಲ್ಲೇ ಶತೃವನ್ನೆದುರಿಸಬೇಕಾಗಿ ಬಂದಿತ್ತು. ಗಟ್ಟಿಯಾಗಿ ಕಾಲೂರಿಕೊಂಡು ನಿಂತವನು ಮಾತ್ರ ಆಕಾಶಕ್ಕೆ ಏಣಿ ಹಾಕಬಲ್ಲ ಅನ್ನೋದು ಕಾಮನ್ ಸೆನ್ಸ್. ಆದರೆ, ಬಹುಶಃ ಅಮೇರಿಕಕ್ಕದು ಅರ್ಥ ಆಗಿರಲೇ ಇಲ್ಲ. ಅಫಘಾನಿಸ್ತಾನವನ್ನು ಪುಡಿಗಟ್ಟೋದಕ್ಕೆ ಬಂದವರಿಗೆ ಪಾಕಿಸ್ತಾನದ ತಮ್ಮ ಸೈನಿಕ ನೆಲೆಯನ್ನ ಉಳಿಸಿಕೊಳ್ಳೋದೇ ಕಷ್ಟ ಅನ್ನೋ ಸ್ಥಿತಿ ಬಂದಿತ್ತು. ಅದನ್ನ ಹಂಗೂ ಹಿಂಗೂ ಸಂಭಾಳಿಸಿಕೊಂಡು ಅಫಘಾನಿಸ್ತಾನದೊಳಕ್ಕೆ ಹೆಜ್ಜೆ ಇಟ್ಟರೆ, ಅಮೇರಿಕದ ಸೈನಿಕರು ಅಲ್ ಖೈದಾ ದಾಳಿಗೆ ಅಲ್ಲ, ಅಲ್ಲಿನ ಬಿಸಿಲು, ಧೂಳು, ರಾತ್ರಿಯ ಛಳಿಗೆ ಪತರಗುಟ್ಟಿಹೋದರು.
                    ಸೈನಿಕ ಭಾಷೆಯಲ್ಲಿ ಅದಕ್ಕೆ hostile territory ಅಂತಾರೆ. ಅಮೇರಿಕದ ಸೈನಿಕರಿಗೆ ಅಫಘಾನಿಸ್ತಾನದೊಳಕ್ಕೆ ಕಾಲಿಡುವ ತನಕ ಇಂಥ ಪರಿಸರದಲ್ಲಿ ಯುದ್ಧ ಮಾಡಿದ ಅನುಭವ ಇರಲಿಲ್ಲ. of course, ಇಲ್ಲಿ ಪಡೆದ ಅನುಭವ ಇರಾಕ್ ಯುದ್ಧದಲ್ಲಿ ಸಹಾಯಕ್ಕೆ ಬಂತು, ಆ ಮಾತು ಬೇರೆ. ಇಲ್ಲಿನ ಆ ಬಿಸಿಲು, ಆ ಧೂಳಿನ ಬಿರುಗಾಳಿ, ಕಣ್ಣು ಹಾಯಿಸಿದಷ್ಟೂ ದೂರದ ಒಣ ಗುಡ್ಡಗಳು, ಒಂದಿಡೀ ತುಕಡಿಯನ್ನ ಒಳಗೆ ಮುಚ್ಚಿಕೊಳ್ಳಬಲ್ಲಂಥಾ ಕೊರಕಲುಗಳು, ಎಲ್ಲವೂ ಅವರಿಗೆ ಹೊಸತು. ಅಸಲಿಗೆ ಈ ಪ್ರದೇಶ ಮತ್ತು ಇದರಲ್ಲಿನ war strategyಯನ್ನ ಅಮೇರಿಕ ಅರ್ಥ ಮಾಡಿಕೊಳ್ಳಲಿಲ್ಲ.
           
                    ಒಂದು ಕಡೆಯಿಂದ ಒಳಗೆ ನುಗ್ಗಿ ಅಲ್ ಖಾಯದಾದವರ ಎದೆ ಸೀಳಿ ರಕ್ತ ಕುಡಿದು, ಬಿನ್ ಲಾಡೆನ್ನ ಹೆಡಮುರಿ ಕಟ್ಟಿಕೊಂಡು ವಾಪಸ್ ಬಂದುಬಿಡೋಣ ಅಂದುಕೊಂಡು ಇಲ್ಲಿಗೆ ಬಂದರು. ಆದರೆ, ಇಲ್ಲಿಗೆ ಬಂದಾಗ ಪರಿಸ್ಥಿತಿ ಬೇರೆಯದೇ ಇತ್ತು. ಮುಕ್ಕಾಲು ಅಫಘಾನಿಸ್ತಾನ ತಾಲಿಬಾನಿಗಳ ಹಿಡಿತದಲ್ಲಿತ್ತು. ಪೂರ್ತಿ ತಾಲಿಬಾನ್ ಬಿನ್ ಲಾಡೆನ್ನ ಹಿಡಿತದಲ್ಲಿತ್ತು..! ಇನ್ನು ತಾಲಿಬಾನಿಗಳ ವಿರುದ್ಧ northern allianceನ ಕೆಲವರು ಹೋರಾಡ್ತಿದ್ದರಾದರೂ ಅವರು ಇದ್ದೂ ಇಲ್ಲದಂತಿದ್ದರು. ಅವರನ್ನ ಬೆಂಬಲಿಸಿ ತನ್ನ ಕೆಲಸ ಸಾಧಿಸೋ ನಿರ್ಧಾರಕ್ಕೆ ಅಮೇರಿಕಾ ಬಂದಿತ್ತು. ಆದರೆ, ಅಲ್ಲಿ ಮುಖ್ಯವಾಗಿ ಬೇಕಾದದ್ದು ಬೇಹುಗಾರಿಕೆ ಮಾಹಿತಿ. ಯಾವ ತಾಲಿಬಾನಿ ನಾಯಕ ಎಲ್ಲೆಲ್ಲಿದಾನೆ, ಅವರು ಮಾಡಿಕೊಳ್ತಿರೋ ಯುದ್ಧ ತಯಾರಿ ಏನು, ಅವರ ಬಳಿ ಇರುವ ಆಯುಧಗಳು, ಸೈನಿಕರು, ಈ ಎಲ್ಲಾ ಮಾಹಿತಿಗಳು ಕರೆಕ್ಟಾಗಿ ಸಿಕ್ಕರೆ ಅರ್ಧ ಯುದ್ಧ ಗೆದ್ದಂತೆ. ಆದರೆ, ನೀವು ನಂಬ್ತೀರೋ ಇಲ್ಲವೋ. ಈ ಬೇಹುಗಾರಿಕೆ ಕೆಲಸವನ್ನ ಅಮೇರಿಕಾ out source ಮಾಡಿಬಿಟ್ಟಿತು..! ಯಸ್... ಸತ್ಯ ಅದು. ತನಗೆ ಬೇಕಾದ softwareಗಳನ್ನ ತಯಾರಿಸಿಕೊಡುವ ಕೆಲಸವನ್ನ ಇಲ್ಲಿ ನಮ್ಮಲ್ಲಿರೋ ಇನ್ಫೋಸಿಸ್, ವಿಪ್ರೋದಂಥ ಐ.ಟಿ ಕಂಪನಿಗಳಿಗೆ ಗುತ್ತಿಗೆ ಕೊಡೋದಿಲ್ವಾ, ಹಂಗೇ ಬೇಹುಗಾರಿಕೆ ಕೆಲಸವನ್ನ ಖಾಸಗಿ ಕಂಪನಿಗಳಿಗೆ ಗುತ್ತಿಗೆ ಕೊಟ್ಟುಬಿಟ್ಟಿತು. It was a blunder. ಅದಕ್ಕಿಂತ ದುರಂತ ಅಂದರೆ, ಕೆಲವು ಪ್ರಮುಖ ಯುದ್ಧಗಳನ್ನ ಕೂಡ ಗುತ್ತಿಗೆ ಕೊಟ್ಟಿದ್ದು. ತೋರಾಬೋರಾ ಪ್ರದೇಶದಲ್ಲಿ ಬಿನ್ ಲಾಡೆನ್ ಇದಾನೆ ಅನ್ನೋ ಮಾಹಿತಿ ಇವರಿಗಿತ್ತು. ಇವರು ಅದ್ಯಾರೋ ಜಲಾಲಾಬಾದ್ನ ಹಜರತ್ ಅಲಿ ಅನ್ನೋ ನಾರ್ದರ್ನ್ ಅಲಯನ್ಸ್ ಕಮಾಂಡರನ ಕರೆದು ಲೋಡುಗಟ್ಟಲೆ ದುಡ್ಡು ಬಂದೂಕು ಕೊಟ್ಟು, ತೋರಾಬೋರಾನ್ನ ಗೆದ್ದುಕೊಡು ಅಂದರು. ಅವನು ಗೆದ್ದೂ ಕೊಟ್ಟ. ಆದರೆ, ಹಜರತ್ ಅಲಿ ಇವರ ಹತ್ರ ದುಡ್ಡು ತಗೊಂಡಂಗೇ ಬಿನ್ ಲಾಡೆನ್ ಹತ್ರಾನೂ ದುಡ್ಡು ತಗೊಂಡು ಅವನನ್ನ ಸುರಕ್ಷಿತವಾಗಿ ಬಿಟ್ಟುಬಿಟ್ಟ ಅನ್ನೋದು ಅಮೇರಿಕದವರಿಗೆ ಗೊತ್ತಾಗೋವಷ್ಟರಲ್ಲಿ ತುಂಬ ತಡ ಆಗಿತ್ತು.
                     ಅಳಿದುಳಿದ ಸಹಚರರ ಜೊತೆ ವಜೀರಿಸ್ತಾನದ ಕೊರಕಲುಗಳನ್ನ ಸೇರಿಕೊಂಡ ಬಿನ್ ಲಾಡೆನ್. ಅಮೇರಿಕದ ಅನಾಹುತಕಾರಿ ಪ್ರಿಡೇಟರ್ ಡ್ರಾನ್ಗಳು ಅಲ್ಲಿ ಬಾಂಬ್ ಸುರಿದವು. at last, ಪ್ರಾಣ ಉಳಿಸಿಕೊಳ್ಳೋದಕ್ಕೆ ಹೆಣಗಾಡಿದ ಒಸಾಮಾ ಬಿನ್ ಲಾಡೆನ್ ಬಂದು ತಲುಪಿದ್ದು ಪಾಕಿಸ್ತಾನದ ಹೃದಯ ಭಾಗವಾದ ಅಬೂತಾಬಾದಗೆ. ಅಲ್ಲಿ ಆತನನ್ನ ಪತ್ತೆ ಹಚ್ಚೋದಕ್ಕೆ ಮಾತ್ರ ಹ್ಯೂಮನ್ ಇಂಟೆಲಿಜನ್ಸ್ ಸಹಾಯಕ್ಕೆ ಬಂತು. ಆ ನಂತರ ಹೆಂಗೆ ಅಮೇರಿಕ ಅವನ ಹೆಣ ಹಾಕಿತು ಅನ್ನೋದನ್ನ ತುಂಬ ಜನ ಹೇಳಿದಾರೆ. ಆ ಪ್ರಳಯಾಂತಕನ ಶವ ಅರಬ್ಬಿ ಸಮುದ್ರದ ಪಾಲಾಗಿರೋದು ಹೆಚ್ಚೂ ಕಡಿಮೆ ಕನ್ಫರ್ಮ್ ಆಗಿದೆ. ಅದೇನೇ ಇರಲಿ. ಅಮೇರಿಕದ ಪಾಲಿಗಿದು ಹತ್ತು ವರ್ಷಗಳ ಹೋರಾಟ. ಹತ್ತು ವರ್ಷಗಳ ನಂತರ ಕೂಡ ಪೂರ್ತಿ ಅಫಘಾನಿಸ್ತಾನ ಇವರ ಹಿಡಿತಕ್ಕೆ ಸಿಕ್ಕಿಲ್ಲ. ಅದು ಸಿಕ್ಕುವುದೂ ಇಲ್ಲ. ಅದನ್ನ ಅರ್ಥ ಮಾಡಿಕೊಂಡು ಅಮೇರಿಕಾ ವಾಪಸ್ ಬಂದರೆ ಜಾಣ ಅನ್ನಿಸಿಕೊಳ್ಳುತ್ತದೆ